Advertisement

ಹುಬ್ಬಳ್ಳಿಯಲ್ಲಿ ಯಥಾಸ್ಥಿತಿ; ಉಳಿದೆಡೆ ವಿನಾಯಿತಿ

10:55 AM Apr 30, 2020 | Suhan S |

ಧಾರವಾಡ: ಹುಬ್ಬಳ್ಳಿಯಲ್ಲಿ ನಿರ್ಬಂಧ ಮುಂದುವರಿಯಲಿದ್ದು, ಧಾರವಾಡದಲ್ಲಿ ವಾರದಲ್ಲಿ ನಾಲ್ಕು ದಿನಗಳ ಕಾಲ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಉಳಿದ ತಾಲೂಕು ಕೇಂದ್ರಗಳು, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ವ್ಯಾಪಾರ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ಲಾಕ್‌ಡೌನ್‌ ವಿನಾಯಿತಿಗಳ ಕುರಿತು ಜಿಲ್ಲೆಯ ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯು ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೆ ಬಂದಿದೆ. ಹೀಗಾಗಿ ಹುಬ್ಬಳ್ಳಿ ಶಹರ ಹೊರತುಪಡಿಸಿ ಧಾರವಾಡ ನಗರದಲ್ಲಿ ಕೆಲವು ಷರತ್ತುಗಳೊಂದಿಗೆ ಹಾಗೂ ಜಿಲ್ಲೆಯಾದ್ಯಂತ ಅಗತ್ಯ ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಸೂಕ್ತ ಆರೋಗ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಇದರ ಸದುಪಯೋಗ ಪಡೆಯಬೇಕು ಎಂದರು.

ಧಾರವಾಡದಲ್ಲಿ ಪ್ರಾರಂಭದಲ್ಲಿ ಕಾಣಿಸಿಕೊಂಡಿದ್ದ ಒಂದು ಕೋವಿಡ್‌ ಪ್ರಕರಣ ಗುಣಮುಖವಾಗಿದೆ. ಕಂಟೇನ್‌ ಮೆಂಟ್‌ ಪ್ರದೇಶವನ್ನೂ ನಿರ್ಬಂಧಗಳಿಂದ ಮುಕ್ತಗೊಳಿಸಲಾಗಿದೆ. ಈ ಕಾರಣಕ್ಕಾಗಿ ಧಾರವಾಡ ನಗರದಲ್ಲಿ ಮಾತ್ರ ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರ ದಿನಗಳಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಅಂಗಡಿ ಮತ್ತು ಮುಂಗಟ್ಟುಗಳ ಕಾಯ್ದೆ (ಶಾಪ್ಸ್‌ ಮತ್ತು ಎಸ್ಟಾಬ್ಲಿಷ್‌ಮೆಂಟ್‌ ಆ್ಯಕ್ಟ್) ಪ್ರಕಾರ ನೋಂದಣಿಯಾಗಿರುವ ಕೃಷಿ ಮತ್ತು ಕೈಗಾರಿಕೆ ಪೂರಕವಾಗಿರುವ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕುಂದಗೋಳ, ನವಲಗುಂದ, ಅಣ್ಣಿಗೇರಿ, ಕಲಘಟಗಿ ಹಾಗೂ ಅಳ್ನಾವರ ತಾಲೂಕು ಕೇಂದ್ರಗಳು ಹಾಗೂ ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಪ್ರಕರಣಗಳು ಇಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚಿಸಿರುವ ನಿಯಮಗಳನುಸಾರ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಮುಕ್ತವಾಗಿ ಎಂದಿನಂತೆ ವ್ಯಾಪಾರ, ವಹಿವಾಟುಗಳನ್ನು ನಡೆಸಬಹುದು ಎಂದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ಡಿಸಿ ದೀಪಾ ಚೋಳನ್‌ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್‌, ಜಿಪಂ ಸಿಇಓ ಡಾ|ಬಿ.ಸಿ.ಸತೀಶ, ಮಹಾನಗರಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Advertisement

ಪೂರ್ವಾನುಮತಿಯೊಂದಿಗೆ ಕಾಮಗಾರಿ ಪುನಾರಂಭ :  ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಗ್ರಾಮಿಣ ಕುಡಿಯುವ ನೀರು, ಸಣ್ಣ ನೀರಾವರಿ, ನರೇಗಾ ಯೋಜನೆಗಳು ಹಾಗೂ ಕಳೆದ ಸಾಲಿನಲ್ಲಿ ಅನುಮೋದಿಸಲ್ಪಟ್ಟಿರುವ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಎಲ್ಲಾ ಚಾಲ್ತಿ ಕಾಮಗಾರಿಗಳನ್ನು ಮುಂದುವರಿಸಬಹುದು. ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್‌ ಪ್ರದೇಶ ಹೊರತುಪಡಿಸಿ ಪಾಲಿಕೆಯ ಅಪೆಂಡಿಕ್ಸ್‌-ಇ, 14ನೇ ಹಣಕಾಸು ಯೋಜನೆಯಡಿ ಕೈಗೊಳ್ಳಬಹುದಾದ ಎಲ್ಲಾ ಅಭಿವೃದ್ಧಿ ಕಾಮಗಾರಿಯನ್ನು ಪೂರ್ವಾನುಮತಿಯೊಂದಿಗೆ ಕೈಗೊಳ್ಳಬಹುದಾಗಿದೆ ಎಂದು ಶೆಟ್ಟರ ಹೇಳಿದರು.

ಕೈಗಾರಿಕಾ ಚಟುವಟಿಕೆಗಳಿಗೂ ಅವಕಾಶ : ಅಗತ್ಯ ವಸ್ತುಗಳಡಿ ಬರುವ ಎಲ್ಲಾ ಕೈಗಾರಿಕಾ ಚಟುವಟಿಕೆಗಳನ್ನು ಹುಬ್ಬಳ್ಳಿ ನಗರ ಹೊರತುಪಡಿಸಿ ಅವಳಿನಗರದ ಹೊರವಲಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸಬಹುದು. ಉದ್ಯಮ ಸಂಸ್ಥೆಗಳ ಮಾಲೀಕರು ಶೇ.50 ಕಾರ್ಮಿಕರನ್ನು ಬಳಸಿಕೊಂಡು ಮಾಸ್ಕ್, ಸ್ಯಾನಿಟೈಸರ್‌ ಹಾಗೂ ಸಾಮಾಜಿಕ ಅಂತರದ ನಿಯಮಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಕೈಗಾರಿಕಾ ಚಟುವಟಿಕೆಗಳಲ್ಲಿ ನಿಯಮಗಳ ಪಾಲನೆ ಬಗ್ಗೆ ನಿಗಾ ವಹಿಸಬೇಕು ಎಂದು ಸಚಿವರು ಸೂಚಿಸಿದರು.

ನಿರ್ಬಂಧ ಯಥಾಸ್ಥಿತಿ ಮುಂದುವರಿಕೆ :  ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ನಿರ್ಣಯಿಸಿದಂತೆ ಧಾರವಾಡ ಜಿಲ್ಲೆಯನ್ನು ಕಿತ್ತಳೆ ವಲಯದಲ್ಲಿ ಬರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲನೆ ನಡೆಸಿ ಲಾಕ್‌ಡೌನ್‌ ವಿನಾಯಿತಿಗಳ ಬಗ್ಗೆ ನಿರ್ಧರಿಸಲು ಸೂಚಿಸಲಾಗಿದೆ. ಹುಬ್ಬಳ್ಳಿ ಶಹರದಲ್ಲಿ ಮಾತ್ರ ಕೋವಿಡ್‌ ಸಕ್ರಿಯ ಪ್ರಕರಣಗಳು ಇವೆ. ಹುಬ್ಬಳ್ಳಿ ಶಹರದಲ್ಲಿ ಪ್ರಸ್ತುತ ಇರುವ ಎಲ್ಲಾ ನಿರ್ಬಂಧಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಏನೇನು ವಿನಾಯಿತಿ? (ಹುಬ್ಬಳ್ಳಿ ಹೊರತುಪಡಿಸಿ) : ಸ್ಟೇಷನರಿ ಮತ್ತು ಬುಕ್‌ಸ್ಟಾಲ್‌, ಎಲೆಕ್ಟ್ರಿಕಲ್‌ ರಿಪೇರಿ, ಪ್ಲಬಿಂಗ್‌, ಪೇಂಟ್‌, ನಿರ್ಮಾಣ ಕಾಮಗಾರಿಗೆ ಸಂಬಂ ಧಿಸಿದ ಅಂಗಡಿಗಳು, ಮರಳು, ಇಟ್ಟಿಗೆ, ಸಿಮೆಂಟ್‌, ಕಬ್ಬಿಣ ಮೊದಲಾದ ನಿರ್ಮಾಣ ಕಾಮಗಾರಿಗಳ ವಹಿವಾಟುಗಳು. ರಿಪೇರಿ ಮತ್ತು ಸರ್ವೀಸ್‌ ಸೆಂಟರ್‌ಗಳು, ಟೈಲ್ಸ್‌ ಅಂಗಡಿಗಳು, ಜೆರಾಕ್ಸ್‌ ಮತ್ತು ಪ್ರಿಂಟಿಂಗ್‌, ಅಪ್ಟಿಕಲ್ಸ್‌, ಅಕ್ಕಿ, ಹಿಟ್ಟು, ಅಡುಗೆ ಎಣ್ಣೆ ಮಿಲ್‌ಗ‌ಳು ಮತ್ತು ಅಂಗಡಿಗಳು, ಟೈರ್‌ ಮತ್ತು ಟ್ಯೂಬ್‌ ಅಂಗಡಿಗಳು, ಮಿನರಲ್‌ ವಾಟರ್‌ ಮಾರಾಟ ಅಂಗಡಿಗಳು, ಮೊಬೈಲ್‌ ರಿಪೇರಿ ಅಂಗಡಿಗಳು, ಆಹಾರ ಪಾರ್ಸಲ್‌ ಮತ್ತು ಹೋಂ ಡೆಲಿವರಿಗೆ ಅನುಮತಿ, ಗ್ಯಾಸ್‌ ಮತ್ತು ಸ್ಟೌವ್‌ ರಿಪೇರಿ, ಪ್ರತ್ಯೇಕವಾಗಿರುವ ಕಿರಾಣಿ ಅಂಗಡಿಗಳು, ನೀರು ಮತ್ತು ನೈರ್ಮಲ್ಯದ ಕಾಮಗಾರಿಗಳಿಗೆ ಸಂಬಂಧಿಸಿದ ಅಂಗಡಿಗಳು.

ಯಾವುದಕ್ಕೆ ನಿರ್ಬಂಧ? (ಜಿಲ್ಲಾದ್ಯಂತ) : ಶಿಕ್ಷಣ ತರಬೇತಿ-ಕೋಚಿಂಗ್‌ ಕ್ಲಾಸ್‌ಗಳು, ಆಟೋರಿಕ್ಷಾ, ಸೈಕಲ್‌ ರಿûಾ ಸೇರಿದಂತೆ ಟ್ಯಾಕ್ಸಿ, ಕ್ಯಾಬ್‌ ಸೇವೆಗಳು, ಸಿನಿಮಾ ಟಾಕಿಸ್‌, ಮಾಲ್‌, ಶಾಪಿಂಗ್‌ ಕಾಂಪ್ಲೆಕ್ಸ್‌, ಜಿಮ್‌, ನ್ಪೋರ್ಟ್ಸ್ ಕಾಂಪ್ಲೆಕ್ಸ್‌, ಈಜುಗೊಳ, ಮನರಂಜನಾ ಪಾರ್ಕ್‌, ಥಿಯೇಟರ್‌, ಬಾರ್‌ಗಳು, ಸಭಾಂಗಣಗಳಲ್ಲಿ

ಚಟುವಟಿಕೆಗಳು, ಎಲ್ಲ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಎಲ್ಲ ಧರ್ಮಗಳ ಪ್ರಾರ್ಥನಾ ಮಂದಿರಗಳಲ್ಲಿ ಗುಂಪು ಸೇರುವಿಕೆ, ಎಲ್ಲ ಮಾರ್ಕೆಟ್‌ ಕಾಂಪ್ಲೆಕ್ಸ್‌ಗಳು, ಮಲ್ಟಿ ಬ್ರ್ಯಾಂಡ್‌ ಹಾಗೂ ಸಿಂಗಲ್‌ ಬ್ರ್ಯಾಂಡ್‌ ಗಳ ಮಾಲ್‌ಗ‌ಳು.

ಸಾರ್ವಜನಿಕರಲ್ಲಿ ಸಚಿವರ ಮನವಿ :  ಸರ್ಕಾರದ ಸೂಚನೆಯಂತೆ ಜಿಲ್ಲೆಯ ಪರಿಸ್ಥಿತಿ ಅವಲೋಕಿಸಿ ಹಲವಾರು ವಿನಾಯಿತಿ ನೀಡಲಾಗಿದೆ. ಮುಂಗಾರು ಪ್ರಾರಂಭವಾಗುವುದರಿಂದ ಕೃಷಿ ಮತ್ತು ಪೂರಕ ಚಟುವಟಿಕೆಗಳು, ಆಸ್ಪತ್ರೆ, ಕಟ್ಟಡ ನಿರ್ಮಾಣ ಕಾರ್ಯ ಸೇರಿದಂತೆ ವಿವಿಧ ಕಾರಣಗಳಿಗಾಗಿ ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ಬರುವ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಜನ, ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಪೊಲೀಸರೊಂದಿಗೆ ಸಂಯಮದಿಂದ ವರ್ತಿಸಿ ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

ಮದ್ಯ ನಿಷೇಧ; ಹೀಗೆ ಮುಂದುವರಿದ್ರೆ ಸಾಕು! :  ಲಾಕ್‌ಡೌನ್‌ ಅವಧಿಯಲ್ಲಿ ಮಾಡಿರುವ ಮದ್ಯ ಮಾರಾಟ ನಿಷೇಧವು ಭಗವಂತನ ದಯೆಯಿಂದ ಹೀಗೆ ಮುಂದುವರಿದರೆ ಸಾಕು. ಇದರಿಂದ ಸಾಕಷ್ಟು ಕುಟುಂಬ ನೆಮ್ಮದಿಯ ಜೀವನ ನಡೆಸಬಹುದು ಎಂದು ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು. ಡಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಸಚಿವರು ಉತ್ತರಿಸುವಾಗ ಕಲಘಟಗಿ ಶಾಸಕರು ಈ ರೀತಿ ಮನವಿ ಮಾಡಿದರು. ಲಾಕ್‌ಡೌನ್‌ ತೆರವು ಬಳಿಕವೂ ಮದ್ಯ ಮಾರಾಟ ಬಂದ್‌ ಮಾಡಿದರೆ ಸೂಕ್ತವಾಗುತ್ತದೆ ಎಂದ ಶಾಸಕರ ಮಾತಿಗೆ ಸ್ಥಳದಲ್ಲಿದ್ದ ಉಳಿದ ಶಾಸಕರು ಹಾಗೂ ಅಧಿಕಾರಿಗಳು ನಸು ನಕ್ಕರು. ಇದಕ್ಕೆ ನಸು ನಗುತ್ತಲೇ ನಯವಾಗಿ ಉತ್ತರಿಸಿದ ಸಚಿವ ಜಗದೀಶ ಶೆಟ್ಟರ, ಮದ್ಯ ಮಾರಾಟ ಸಂಪೂರ್ಣ ಬಂದ್‌ ಮಾಡಿದರೆ ಸರ್ಕಾರಕ್ಕೆ 20 ಸಾವಿರ ಕೋಟಿ ನಷ್ಟವಾಗುತ್ತದೆಯಲ್ಲ ಎಂದರು. ಈ ಉತ್ತರಕ್ಕೆ ಎಲ್ಲರೂ ನಸು ನಕ್ಕು ಸುಮ್ಮನಾದರು.

ಲಾಕ್‌ಡೌನ್‌ ಜಾರಿಯಾದಾಗಿನಿಂದ ನಿರ್ಬಂಧಿಸಿರುವ ಸಾರ್ವಜನಿಕ ಸಾರಿಗೆ ಸೌಲಭ್ಯ ಇರುವುದಿಲ್ಲ. ಪಬ್‌, ಬಾರ್‌, ರೆಸ್ಟೋರೆಂಟ್‌, ಮಾಲ್‌, ಶಾಪಿಂಗ್‌ ಕಾಂಪ್ಲೆಕ್ಸ್‌, ಸಿನಿಮಾ ಮಂದಿರ, ಕಲ್ಯಾಣ ಮಂಟಪ, ಧಾರ್ಮಿಕ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅವಕಾಶವಿಲ್ಲ. ಹೋಟೆಲ್‌ಗ‌ಳ ಮೂಲಕ ಪಾರ್ಸೆಲ್‌ ವಿತರಿಸಲು ಮಾತ್ರ ಅವಕಾಶವಿದೆ. – ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next