Advertisement

ಮಿಶ್ರ ಬೆಳೆ; ಸಮ್ಮಿಶ್ರ ಆದಾಯ,ಫ‌ಲ ಕೊಟ್ಟ ಪಪ್ಪಾಯಿ,ಧನ ತಂದ ದಾಳಿಂಬೆ

06:00 AM Jul 24, 2017 | Harsha Rao |

ಬರ ಪರಿಸ್ಥಿತಿ, ಒಣ ಭೂಮಿಯ ಕೆಲವೇ ಭಾಗಗಳಿಗೆ ಲಭ್ಯವಿರುವ ಕಾಲುವೆ ನೀರು, ಅಂತರ್ಜಲ ಕೊರತೆ… ಇಂಥವೇ ಕಾರಣಗಳಿಂದ ಏಕಬೆಳೆಯನ್ನು ಅವಲಂಬಿಸಿದ ರೈತರಲ್ಲಿ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಯಾದಗಿರಿ ಜಿಲ್ಲೆ ಸುರಪುರದಲ್ಲಿ ತೋಟಗಾರಿಕೆ ನಡೆಸುತ್ತ ಅದರಲ್ಲಿ ಸಫಲರಾಗಿ ಸಾಧನೆ ಮಾಡುತ್ತಿದ್ದಾರೆ ಬಳ್ಳಾರಿ ಮೂಲದ ರೆಕ್ಕಲ ವೆಂಕಟರೆಡ್ಡಿ. ಪಪ್ಪಾಯಿ, ದಾಳಿಂಬೆ ಬೆಳೆದು ಹೊರರಾಜ್ಯಗಳಿಗೆ ರಫ್ತು ಮಾಡುತ್ತಿರುವ ಹೆಗ್ಗಳಿಕೆ ಇವರದು. 

Advertisement

30 ವರ್ಷಗಳ ಹಿಂದೆ ಸುರಪುರಕ್ಕೆ ಬಂದು ಜೀವನಾಧಾರಕ್ಕೆಂದು ಮಂಡಕ್ಕಿ ಭಟ್ಟಿ ತೆರೆದರು ರೆಡ್ಡಿ. ಆನಂತರದಲ್ಲಿ ಇವರ ಲಕ್ಷé ಹೊರಳಿದ್ದು ತೋಟಗಾರಿಕೆಯತ್ತ. 2010-11ರಲ್ಲಿ ಸಮೀಪದ ಕವಡಿಮಟ್ಟಿ ಗ್ರಾಮದಲ್ಲಿ 25 ಎಕರೆ ಭೂಮಿ ಖರೀದಿಸಿದರು. ಅದೋ ಜಾಲಿ ಮುಳ್ಳಿನಿಂದ ಕೂಡಿದ್ದ ಭೂಮಿ. ಅದನ್ನು ಕೃಷಿಯೋಗ್ಯವನ್ನಾಗಿಸುವುದು ಸವಾಲೇ ಆಗಿತ್ತು.  ಈ ಭೂಮಿಯನ್ನು ಸಮತಟ್ಟು ಮಾಡುವುದಕ್ಕೇ ಒಂದು ವರ್ಷ ಹಿಡಿಯಿತು. ಇದರೊಂದಿಗೆ 20 ಹೆಕ್ಟೇರ್‌ ಭೂಮಿಯನ್ನೂ ಲೀಸ್‌ಗೆ ಪಡೆದು ತೋಟಗಾರಿಕೆಗೆ ಇಳಿದರು ರೆಡ್ಡಿ. ಅವರ ಕೃಷಿಯ ವಿಶೇಷತೆ ಎಂದರೆ ವಿಶಾಲ ಭೂಮಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವುದು. 

25 ಎಕರೆ ವಿಸ್ತಾರದ ಭೂಮಿಯಲ್ಲಿ ತೋಟಗಾರಿಕೆ ಕೃಷಿ ಮಾಡುವ ಖರ್ಚು ಹಾಗೂ ಶ್ರಮದ ವಿಷಯದಿಂದ ಸವಾಲೇ ಆಗಿತ್ತು. ಎಕರೆಗೆ 1ರಿಂದ 1.50 ಲಕ್ಷ ರೂ. ವೆಚ್ಚ ಮಾಡಿ  25 ಎಕರೆ ಜಮೀನನ್ನು ಕೃಷಿ ಯೋಗ್ಯ ಭೂಮಿನ್ನಾಗಿಸಿದರು. ಕೆರೆ ನಿರ್ಮಾಣಕ್ಕೆ 30 ರಿಂದ 40 ಲಕ್ಷ ರೂ. ವ್ಯಯಿಸಿದರು. 

ದಾಳಿಂಬೆಯನ್ನೇ ಪ್ರಮುಖ ಬೆಳೆ ಎಂದುಕೊಂಡಿದ್ದ ಇವರಿಗೆ ಕೇವಲ ಅದನ್ನೊಂದೇ ಆಧರಿಸಿದರೆ ಫಸಲು ಬಂದು ಆದಾಯ ಕೈಸೇರಲು 2ರಿಂದ 3 ವರ್ಷ ಹಿಡಿಯುತ್ತದೆ. ಇದಕ್ಕೆ ಹೆಚ್ಚಿನ ಬಂಡವಾಳವೂ ಅಗತ್ಯ. ಆದ್ದರಿಂದ ಕಡಿಮೆ ಅವಧಿಯಲ್ಲಿ ಫಲ ಕೊಡುವ, ಕಡಿಮೆ ಖರ್ಚು ಬಯಸುವ ಪಪ್ಪಾಯಿಯನ್ನು  ಏಕೆ ಬೆಳೆಯಬಾರದು ಎನ್ನುವ ವಿಚಾರ ಬಂತು. ಅದನ್ನು ಕಾರ್ಯರೂಪಕ್ಕಿಳಿಸಿಯೇಬಿಟ್ಟರು.  ಪಪ್ಪಾಯಿ, ಸುಮಾರು 7 ರಿಂದ 9 ತಿಂಗಳಲ್ಲಿ  ಕಟಾವಿಗೆ ಬರುತ್ತದೆ. ಇದರಿಂದ ತಕ್ಕಮಟ್ಟಿಗೆ ನಿಧಾನವಾಗಿ ಹಣವೂ ಕೈಸೇರುತ್ತದೆ ಎಂಬ ಲೆಕ್ಕಾಚಾರ ಅವರದಾಗಿತ್ತು. ಅದು ನಿಜವೂ ಆಯಿತೆನ್ನಿ. ಪಪ್ಪಾಯಿಯಿಂದ ಎಕರೆಗೆ 1.50 ಲಕ್ಷ ರೂ ನಿಂದ 2.50 ಲಕ್ಷ ರೂ. ಆದಾಯ ಕೈಗೆ ಬಂತು. 
ದಾಳಿಂಬೆ ಗಿಡಗಳ ಮಧ್ಯೆ ಪಪ್ಪಾಯಿ ಬೆಳೆಯುವುದರಿಂದ ಲಾಭವೂ ಇದೆ. ಪಪ್ಪಾಯಿಯಿಂದ ದಾಳಿಂಬೆ ಬೆಳೆಗೆ ನೆರಳು ಸಿಗುತ್ತದೆ.  ಅಲ್ಲದೇ ರೋಗಗಳಿಂದ ಮುಕ್ತಿಯೂ ದೊರೆಯುತ್ತದೆ. 

ಬಿಸಿಲುನಾಡಿನಲ್ಲಿ ಸಾಹಸ
ಯಾದಗಿರಿ ಜಿಲ್ಲೆ ಮೊದಲೇ ಬಿಸಿಲುನಾಡು. ಇಲ್ಲಿ ಮಳೆ ಅತಿ ಕಡಿಮೆ. ಸಾಮಾನ್ಯವಾಗಿ 30ರಿಂದ 40 ಡಿಗ್ರಿಯಷ್ಟು ತಾಪಮಾನ. ಇದು ದಾಳಿಂಬೆ ಬೆಳೆಗೆ ಪೂರಕ ಹವಾಮಾನ. 9 ಅಡಿ ಅಗಲ 8 ಅಡಿ ಉದ್ದ ಅಂತರದಲ್ಲಿ ಒಂದೊಂದು ದಾಳಿಂಬೆ ಸಸಿ ನೆಟ್ಟು,  ಇದರ ಮಧ್ಯದಲ್ಲಿ ಒಂದು ಪಪ್ಪಾಯಿ ಗಿಡವನ್ನು ನೆಟ್ಟಿದ್ದಾರೆ.  ಒಂದು ಎಕರೆಗೆ ಸುಮಾರು 605 ದಾಳಿಂಬೆ ಸಸಿ, 605 ಪಪ್ಪಾಯಿ ಗಿಡವನ್ನು ನಾಟಿ ಮಾಡಲಾಗಿದೆ.  ದಾಳಿಂಬೆ ಗಿಡಗಳನ್ನು ಮಹಾರಾಷ್ಟ್ರದ ಜಲಗಾಂವ್‌ ಜೈನ್‌ ಕೃಷಿ ಕಲ್ಚರ್‌ ಕಂಪನಿಯಿಂದ 36 ರೂ.ಗೆ ಒಂದರಂತೆ ತರಲಾಗಿದೆ. ಪಪ್ಪಾಯಿ ಸಸಿಯನ್ನು ಒಂದು ಗಿಡಕ್ಕೆ 9 ರೂ. ನಂತೆ ಸೊಲ್ಲಾಪುರ ಸಮೀಪದ ಬೋಡಕಿ ಗ್ರಾಮದಿಂದ ತರಿಸಲಾಗಿದೆ. ಪಪ್ಪಾಯಿ ಗಿಡಗಳಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನವೂ ದೊರೆತಿದೆ. 

Advertisement

ದಾಳಿಂಬೆ ಹಾಗೂ ಪಪ್ಪಾಯಿ ಗಿಡಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಗಿಡಗಳಿಗೆ ಶೇ. 90 ರಷ್ಟು ಸಗಣಿ ಗೊಬ್ಬರ, ಶೇ. 10ರಷ್ಟು ರಾಸಾಯನಿಕ ಗೊಬ್ಬರ ಬಳಸಲಾಗುತ್ತದೆ.  

ವಿಶಾಲ ಕೆರೆ
25 ಎಕರೆ ಪ್ರದೇಶದಲ್ಲಿ 13 ರಿಂದ 16 ಕೊಳವೆ ಬಾವಿ ನಿರ್ಮಿಸಲಾಗಿದೆ. ಇವುಗಳಿಂದ ನೀರೆತ್ತಿ ಒಂದು ಎಕರೆ ಜಾಗದಲ್ಲಿ ವಿಶಾಲವಾಗಿ ನಿರ್ಮಿಸಿರುವ ಕೆರೆಗೆ ಹಾಯಿಸಲಾಗುತ್ತದೆ. ಕೆರೆಯೂ 25 ಅಡಿ ಆಳವಿದೆ. ಕೆರೆಯ ಏರಿಯ ಸುತ್ತಲೂ ಬಾಳೆ ಗಿಡಗಳನ್ನು ಹಾಕಿದ್ದಾರೆ.  ಬೆಳೆಗಳಿಗೆ ನೀರೊದಗಿಸಲು 8ರಿಂದ 10 ಮೋಟಾರ್‌ಗಳನ್ನು ಅಳವಡಿಸಿದ್ದಾರೆ. ಈ ಮೋಟಾರ್‌ಗಳಿಂದ ಹನಿ ನೀರಾವರಿ ಪದ್ಧತಿಯ ಮೂಲಕ ನೀರು ಹಾಯಿಸಲಾಗುತ್ತದೆ.  ಕೆರೆಯಿಂದ  ವರ್ಷವಿಡೀ ನೀರು ದೊರೆಯುತ್ತದೆ ಎಂತಹ ಬೇಸಿಗೆಯಲ್ಲೂ ನೀರು ಬತ್ತಿರುವ ಉದಾಹರಣೆಯಿಲ್ಲ. 

32 ಅಡಿಗೊಂದು ಲಾಕ್‌
ಪಪ್ಪಾಯಿ ಹಾಗೂ ದಾಳಿಂಬೆ ಗಿಡಗಳಿಗೆ ಔಷಧ ಸಿಂಪಡಿಸಲು ಇಸ್ರೇಲ್‌ ಮಾದರಿ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಸುಮಾರು 32 ಅಡಿಗೆ ಒಂದು ಔಷಧ ಸಿಂಪಡಿಸುವ ಪಾಯಿಂಟ್‌ ಲಾಕ್‌ ಹಾಕಲಾಗಿದೆ.  ಸುಮಾರು 22 ಕಡೆ ಇಂಥ ಲಾಕ್‌ಗಳನ್ನು ಅಳವಡಿಸಿದ್ದು, ಯಂತ್ರದ ಮೂಲಕ ಇದನ್ನು    ನಿರ್ವಹಿಸಲಾಗುತ್ತದೆ. ಸಿಂಟೆಕ್ಸ್‌ ಟ್ಯಾಂಕ್‌ನಲ್ಲಿ ಔಷಧ ಮಿಶ್ರಣ ಮಾಡಿ, ತೋಟದ ಯಾವ ಭಾಗಕ್ಕೆ ಬೇಕೋ ಆ ಭಾಗಕ್ಕೆ ಮಾತ್ರ  ಔಷಧ ಸಿಂಪಡಿಸುವ ಯಂತ್ರ ಕೂರಿಸಿ ಸಿಂಪಡಿಸಲಾಗುತ್ತದೆ. ಒಂದು ಮಡಿಗೆ ಎರಡು ನಿಮಿಷ ನಿಗದಿ ಮಾಡಲಾಗಿರುತ್ತದೆ. ಒಂದು ದಿನಕ್ಕೆ 20 ಎಕರೆಗೆ ಔಷಧ ಸಿಂಪಡಿಸಬಹುದು.

ಫಸಲು ಕಟಾವ್‌
ಕಟಾವಿಗೆ ಬಂದ ಸಮಯದಲ್ಲಿ ಹಣ್ಣುಗಳನ್ನು ಕಟಾವು ಮಾಡದಿದ್ದರೆ ಪಕ್ಕದ ಕಾಯಿಗಳಿಗೆ ಫಂಗಸ್‌ ಆಗುವ ಸಾಧ್ಯತೆ ಇರುತ್ತದೆ. ಕಟಾವು ಮಾಡಿದ ಹಣ್ಣುಗಳನ್ನು ಗಾತ್ರಗಳಗಳಿಗೆ ಅನುಸಾರವಾಗಿ ಬಾಕ್ಸ್‌ಗಳಲ್ಲಿ ಪ್ಯಾಕ್‌ ಮಾಡುತ್ತಾರೆ. ಕರ್ನಾಟಕವಷ್ಟೇ ಅಲ್ಲದೆ, ಹೊರ ರಾಜ್ಯಗಳ ವ್ಯಾಪಾರಸ್ಥರೂ ಸ್ಥಳಕ್ಕೇ ಆಗಮಿಸಿ ಕೊಂಡೊಯ್ಯುತ್ತಾರೆ. ಬೆಂಗಳೂರು ಹಾಗೂ ನೆರೆ ರಾಜ್ಯಗಳ ರಾಜಧಾನಿಗಳಿಗೆ ಹೆಚ್ಚು ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಕಳೆದ ಎರಡು ವರ್ಷಗಳಿಂದ ಉತ್ತಮ ಆದಾಯ ಲಭ್ಯವಾಗಿದೆ.  ದಾಳಿಂಬೆಗೆ ಎಕರೆಗೆ  4ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೂ ಲಾಭ ದೊರೆತಿದೆ. ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದರೆ  ಆದಾಯವೂ ಅಧಿಕ ಎನ್ನುತ್ತಾರೆ ವೆಂಕಟ ರೆಡ್ಡಿ.

– ನಾಗರಾಜ ಡಿ. ನ್ಯಾಮತಿ

Advertisement

Udayavani is now on Telegram. Click here to join our channel and stay updated with the latest news.

Next