Advertisement

ವಿಜಯಪುರ : ಕೋವಿಡ್ ಲಕ್ಷಣ ರಹಿತ ಮಕ್ಕಳಿಗೆ ‘ಮಿಸ್ಸಿ’ ಕಾಟ

09:14 PM Jun 09, 2021 | Team Udayavani |

ವಿಜಯಪುರ : ಮಕ್ಕಳಲ್ಲಿ ಕೋವಿಡ್ ಪ್ರಕರಣಗಳ ಹಠಾತ್ ಹೆಚ್ಚಳ ಇಲ್ಲದಿದ್ದರೂ, ಎಂ.ಐ.ಎಸ್.-ಸಿ (ಮಿಸ್ಸಿ) ರೋಗ ಲಕ್ಷಣ ಇರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಿದರಿ ಆಸ್ಪತ್ರೆ ಒಂದರಲ್ಲೇ ಈಗಾಗಲೇ ಈ ರೋಗ ಲಕ್ಷಣ ಇರುವ 14 ಮಕ್ಕಳು ದಾಖಲಾಗಿದ್ದು, ಒಂದು ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

Advertisement

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಚಿಕ್ಕಮಕ್ಕಳ ತಜ್ಞವೈದ್ಯ-ಅಶ್ವಿನಿ ಬಿದರಿ ಆಸ್ಪತ್ರೆಯ ಮುಖ್ಯಸ್ಥ ಡಾ.ಎಲ್.ಎಚ್.ಬಿದರಿ ಅವರು, ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಮಾರಕ ರೋಗ ವೇಗವಾಗಿ ಹರಡುತ್ತಿರುವುದು ಕಳವಳಕಾರಿ ಸಂಗತಿ. ಆದಾಗ್ಯೂ ಸದರಿ ರೋಗಕ್ಕೆ ಅಗತ್ಯ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಲಕ್ಷಣ ರಹಿತ ಕೋವಿಡ್ ಸೋಂಕಿನ ಮಕ್ಕಳು ಅತಿಸಾರ, ಅಧಿಕ ಜ್ವರ, ಡೆಂಗ್ಯೂ ರೋಗ ಲಕ್ಷಣಗಳೊಂದಿಗೆ ಬಂದ ನಂತರ ತೀವ್ರ ಮಿಸ್ಸಿ ಲಕ್ಷಣಗಳು ಕಂಡುಬರುತ್ತಿರುವುದು ಆತಂಕಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಎಂ.ಐ.ಎಸ್.-ಸಿ (ಮಿಸ್ಸಿ) ರೋಗದ ಸಮಸ್ಯೆ ಚಿಕ್ಕಮಕ್ಕಳನ್ನು ಕಾಡುತ್ತಿದೆ. ಈ ವರೆಗೆ ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿದ್ದು, 8-18 ವರ್ಷದೊಳಗಿನ ಮಕ್ಕಳಲ್ಲಿ ಮಿಸ್ಸಿ ರೋಗ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ನಮ್ಮ ಆಸ್ಪತ್ರೆಯಲ್ಲಿ ಇಂಥ ರೋಗಪೀಡಿತ ಮಕ್ಕಳನ್ನು ದಾಖಲಿಸಿಕೊಂಡು, ಅತ್ಯುತ್ತಮ ಚಿಕಿತ್ಸೆ ನೀಡಿದ್ದರಿಂದ ಗುಣಮುಖರಾಗಿದ್ದಾರೆ. ಇವರಲ್ಲಿ ಶೇ.70 ರಷ್ಟು ಹೃದಯದ ರಕ್ತನಾಳಗಳ ಹಿಗ್ಗುವಿಕೆ ಮತ್ತು  ಕಡಿಮೆ ರಕ್ತದೊತ್ತಡ ಮತ್ತು ಕಳಪೆ ಹೃದಯ ಸ್ನಾಯುವಿನ ಅಶಕ್ತತೆಯ ಲಕ್ಷಣಗಳನ್ನು ಹೊಂದಿದ್ದಾಗಿ ವಿವರಿಸಿದ್ದಾರೆ.

ಮಿಸ್ಸಿ ರೋಗದಿಂದ ಬಳಲುತ್ತಿದ್ದ ಮಕ್ಕಳು ಕವಾಸಾಕಿ ಕಾಯಿಲೆಯಂತೆ ಹೃದಯ ರಕ್ತನಾಳಗಳ ಹಿಗ್ಗುವಿಕೆಯ ಹೊರತಾಗಿ ಕಳಪೆ ಹೃದಯದ ಕ್ರಿಯೆ ಮತ್ತು ಶಾಕ್‍ನ್ನು ಸಹ ಹೊಂದಿದ್ದರು. ಇದು ಕವಾಸಾಕಿ ಕಾಯಿಲೆಯಲ್ಲಿ ವಿರಳವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಶ್ವಿನಿ ಆಸ್ಪತ್ರೆಯಲ್ಲಿ 17 ನವಜಾತ ಶಿಶುಗಳು ಮಿಸ್ಸಿ ಲಕ್ಷಣಗಳನ್ನು ಹೊಂದಿದ್ದು, ಅದರಲ್ಲಿ 16 ಸುಧಾರಿಸಿದ್ದು 1 ಮರಣ ಹೊಂದಿದೆ. ಈ ಶಿಶುಗಳಿಗೆ ಆಘಾತದ ಲಕ್ಷಣಗಳು, ಹೃದಯದ ಕಳಪೆ ಕ್ರಿಯೆ ಮತ್ತು ಕೆಲವರಿಗೆ ನ್ಯುಮೋನಿಯಾ ಇತ್ತು. ಈ ಶಿಶುಗಳು ಸ್ಟಿರಾಯ್ಡ್, ಐವಿಐಜಿ, ಹೆಫಾರಿನ್ ಮತ್ತು ವೆಂಟಿಲೇಟರ್ ಕೇರ್‍ಗೆ ಪ್ರತಿಕ್ರಿಯಿಸಿದವು. ಹೃದಯದ ರಕ್ತನಾಳಗಳ ಹಿಗ್ಗುವಿಕೆ ಮತ್ತು ಹೃದಯದ ಕಳಪೆ ಕಾರ್ಯ ಪತ್ತೆ ಹಚ್ಚಲು, ಶಾಕ್ ಮತ್ತು ವೆಂಟಿಲೇಟರ್ ಆರೈಕೆಗೆ ಚಿಕಿತ್ಸೆ ನೀಡಲು ಅಗತ್ಯವಾದ ಮತ್ತು ನಿರ್ಣಾಯಕ ಆರೈಕೆ ತಂಡ, ಹೃದಯ ರೋಗ ತಜ್ಞರ ಬ್ಯಾಕಪ್‍ನೊಂದಿಗೆ 24*7 ಎಕೋಕಾರ್ಡಿಯೋಗ್ರಾಫಿ ಸೌಲಭ್ಯದ ಅಗತ್ಯವಿದೆ ಎಂದು ವಿವರಿಸಿದ್ದಾರೆ.

Advertisement

ಸಿಆರ್‍ಪಿ, ಫೆರಿಟಿನ್, ಎಲ್ಡಿಹೆಚ್ ಮತ್ತು ಡಿ-ಡೈಮರ್‍ನಂತಹ ಉರಿಯೂತದ ಗುರುತು ಮೌಲ್ಯಮಾಪನಕ್ಕೆ ಆಸ್ಪತ್ರೆಗೆ ಪ್ರಯೋಗಾಲಯದ ಅಗತ್ಯವಿದೆ. ಸದರ ಮಕ್ಕಳಿಗೆ ಐವಿಐಜಿ (ಪ್ರತಿ ಕೆಜಿಗೆ 2 ಗ್ರಾಂ) ಅಗತ್ಯವಿರುತ್ತದೆ. ಇದು ಮಗುವಿನ ತೂಕವನ್ನು ಅವಲಂಬಿಸಿ 50 ಸಾವಿರ ರೂ. 1 ಲಕ್ಷ ರೂ. ವರೆಗೆ ವೈದ್ಯಕೀಯ ಆರ್ಥಿಕ ವೆಚ್ಚವಾಗುತ್ತದೆ ಎಂದೂ ಹೇಳಿದ್ದಾರೆ.

ಹೆಚ್ಚಿನ ಮಕ್ಕಳು ಬಡ ಸಾಮಾಜಿಕ-ಆರ್ಥಿಕ ಹಿನ್ನೆಲೆ ಮತ್ತು ಅಪೌಷ್ಟಿಕತೆಯಿಂದ ಬಂದಿದ್ದು,  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗಿದೆ. ಐವಿಐಜಿ ಮತ್ತು ಕ್ರಿಟಿಕಲ್ ಕೇರ್‍ಗಾಗಿ ಸುವರ್ಣ ಆರೋಗ್ಯ ಸೇವಾ ಟ್ರಸ್ಟ್ ಅಡಿಯಲ್ಲಿ ಪ್ರತ್ಯೇಕ ಪ್ಯಾಕೇಜ್ ಅಳವಡಿಸಿ ಎ.ಬಿ.ಎ.ಆರ್.ಕೆ.-ಬಿಪಿಎಲ್ ಕಾರ್ಡ ಹೊಂದಿರುವ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವ್ಯವಸ್ಥೆ ಆಗಬೇಕಾಗಿದೆ ಎಂದು ಡಾ.ಬಿದರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next