Advertisement

ಮಕ್ಕಳೇ ಪರೀಕ್ಷೆಗೆ ಸಿದ್ದತೆ ಹೇಗೆ ನಡೆಯುತ್ತಿದೆ? SSLC ಮಕ್ಕಳಿಗೆ ಫೋನ್ ಮಾಡಿದ ಸಚಿವರು

09:03 PM Apr 20, 2020 | keerthan |

ಬೆಂಗಳೂರು: ಕೋವಿಡ್-19 ಲಾಕ್‍ ಡೌನ್ ಘೋಷಣೆಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಮುಂದೂಡಿರುವುದರಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ರಾಜ್ಯದ ನಾನಾ ಭಾಗದ ಮಕ್ಕಳೊಂದಿಗೆ ತಾವೇ ದೂರವಾಣಿ ಕರೆ ಮಾತನಾಡಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದರು.

Advertisement

ಸೋಮವಾರ ಬೆಳಗ್ಗೆ ತಮ್ಮ ಕಚೇರಿಯಿಂದ ತಾವೇ ಫೋನ್‍ನಲ್ಲಿ ಸಂಪರ್ಕಿಸಿ, ಮಕ್ಕಳ ಪರೀಕ್ಷಾ ಸಿದ್ಧತೆ, ಆರೋಗ್ಯ ಕುರಿತು ವಿಚಾರಿಸಿದರಲ್ಲದೇ ಶಿಕ್ಷಣ ಇಲಾಖೆ ವತಿಯಿಂದ ದೂರದರ್ಶನ ಮತ್ತು ಆಕಾಶವಾಣಿ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪೂರ್ವ ಸಿದ್ಧತೆಗೆ ಮಾರ್ಗದರ್ಶಿ ತರಗತಿಗಳನ್ನು ಇಷ್ಟರಲ್ಲಿಯೇ ಬಿತ್ತರಿಸಲಾಗುವುದಿದ್ದು, ಇದನ್ನು ಅದನ್ನು ಅನುಸರಿಸಬೇಕೆಂದು ಸಲಹೆ ನೀಡಿದರು.

ಪರೀಕ್ಷೆ ಮುಂದಕ್ಕೆ ಹೋಗಿದ್ದರಿಂದ ಮಕ್ಕಳು ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದರು. ಇಲಾಖೆಯ ಆಯುಕ್ತರ ಹಂತದಿಂದ ಹಿಡಿದು ನಿರ್ದೇಶಕರು, ಉಪನಿರ್ದೇಶಕರು, ಬಿಇಒ, ಕ್ಲಸ್ಟರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಂತದವರೆಗೂ ಎಲ್ಲರೂ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಸಮರೋಪಾದಿಯಲ್ಲಿ ಮಾಡಬೇಕು ಎಂದು ಸೂಚನೆ ನೀಡಿದ್ದರು. ಅದರ ಭಾಗವಾಗಿ ಇಂದು ತಾವೇ ಮಕ್ಕಳೊಂದಿಗೆ ಮಾತನಾಡಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು ವಿಶೇಷವಾಗಿತ್ತು.

ಬಳ್ಳಾರಿಯ ಲಿಟ್ಲ್ ಫ್ಲವರ್ ಶಾಲೆಯ ಸಹನಾ, ಛತ್ರಪತಿ ಶಿವಾಜಿ ಶಾಲೆಯ ಬಸವರಾಜ್, ಕೊಪ್ಪಳದ ಸರ್ಕಾರಿ ಪ್ರೌಢಶಾಲೆಯ ರವಿಕುಮಾರ್, ರಾಯಚೂರಿನ ವಿಶಾಲ್ ಮತ್ತು ಮಧುಕುಮಾರಿ ಅವರನ್ನು ತಾವೇ ಫೋನ್ ಮಾಡಿದ ಸಚಿವರು, ಏನಪ್ಪಾ, ಏನಮ್ಮಾ ಹೇಗೆ ಓದ್ತಾ ಇದ್ದೀರಿ, ಏನ್ ಓದ್ತಾ ಇದೀರಿ, ಪರೀಕ್ಷೆಗೆ ರೆಡಿ ಇದ್ದೀರಾ, ಸ್ಟಡಿ ಹಾಲಿಡೇಸ್ ಹೇಗೆ ಕಳೆಯುತ್ತಿದ್ದೀರಿ, ಮಾಸ್ಕ್ ಹಾಕಿಕೊಂಡಿದ್ದೀರಾ, ಪರೀಕ್ಷೆಗೆ ಸಜ್ಜಾಗಿದ್ದೀರಾ ಎಂದು ಪ್ರಶ್ನಿಸಿ ಮಕ್ಕಳಿಂದ ಅಭಿಪ್ರಾಯಗಳನ್ನು ಪಡೆದುಕೊಂಡರು.

ಲಾಕ್‍ಡೌನ್ ಮುಗಿಯುತ್ತಿದ್ದಂತೆ ಪರೀಕ್ಷೆ ಆರಂಭವಾಗುತ್ತೇ, ನೀವು ಯಾವ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಸಚಿವರು ಮಕ್ಕಳಿಗೆ ಹೇಳಿದರು. ಆ ಕಡೆಯಿಂದ ಮಕ್ಕಳೂ ಸಹ ಸಚಿವರಿಗೆ ಪ್ರಶ್ನೆ ಕೇಳಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಂಡರು.

Advertisement

ಕಲ್ಬುರ್ಗಿಯ ಮಲ್ಲಿಕಾರ್ಜುನ, ಸಹನಾ, ಬೆಂಗಳೂರಿನ ಸಿರಿ ಶಾಲೆಯ ಧನಲಕ್ಷ್ಮಿ, ವಾಣಿ ಸ್ಕೂಲ್‍ನ ಹರ್ಷಿತಾ, ಹೋಲಿ ಏಂಜಲ್ಸ್‌ ಶಾಲೆಯ ಅಮೋಘ, ಶಿವಮೊಗ್ಗದ ಆದಿ ಚುಂಚನಗಿರಿ ಶಾಲೆಯ ಎನ್. ಎಸ್. ಶ್ರದ್ಧಾ ಒಡೆಯರಪುರ… ಹೀಗೆ ರಾಜ್ಯದ ವಿವಿಧ ಭಾಗಗಳ 10ನೇ ತರಗತಿ ಮಕ್ಕಳನ್ನು ಸಚಿವರು, ಇವತ್ತು ಎನ್ ಓದಿದೆ, ಊಟ ತಿಂಡಿ ಚೆನ್ನಾಗಿ ಮಾಡು, ತಂದೆ ತಾಯಿಗೆ ಒಳ್ಳೆ ಹೆಸರು ತೆಗೆದುಕೊಂಡು ಬಾ, ಹಳೆ ಪ್ರಶ್ನೆ ಪತ್ರಿಕೆಗಳ ರಿವಿಜನ್ ಮಾಡು, ಯಾವ ವಿಷಯ ಇಷ್ಟ, ಯಾವುದು ಕಷ್ಟ ಎಂದು ವಿಚಾರಿಸಿದರಲ್ಲದೇ, ನಾನು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವಾಗಲೇ ಇಂತಹ ಲಾಕ್‍ಡೌನ್ ಪರಿಸ್ಥಿತಿ ಬಂತಲ್ಲ ಎಂದು ಬೇಸರಿಸಿಕೊಳ್ಳಬೇಡ ಎಂದು ಹೇಳಿ ಧೈರ್ಯ ತುಂಬಿದರು. ಸಚಿವರೊಂದಿಗೆ ಮಾತನಾಡಿದ ಮಕ್ಕಳು ಆ ಕಡೆಯಿಂದ ಸಂತೋಷದಿಂದ ಫುಳಕಗೊಂಡರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಬೇಕಾ, ಬೇಡವೇ ಎಂದು ಪ್ರತಿಯೊಬ್ಬ ಮಕ್ಕಳನ್ನು ಕೇಳಿದಾಗ, ಪರೀಕ್ಷೆ ಬೇಕು ಸಾರ್, ನಾವು ಬರೆಯುತ್ತೇವೆ ಎಂದು ಹೇಳಿದ್ದು ಸಚಿವರಿಗೆ ಸಂತಸ ತಂದಿತು. ಸಚಿವರೊಂದಿಗೆ ಮಾತನಾಡಿದ ಮಕ್ಕಳಲ್ಲಿ ಅಧಿಕಾರಿಗಳ ಮಕ್ಕಳು, ಹಮಾಲರ ಮಕ್ಕಳು, ಶಿಕ್ಷಕರ ಮಕ್ಕಳು, ಖಾಸಗಿ ಕಂಪನಿಗಳ ನೌಕರರ ಮಕ್ಕಳು, ಮನೆ ಕೆಲಸದವರ ಮಕ್ಕಳು ಸೇರಿದಂತೆ ನಾನಾ ಸಾಮಾಜಿಕ ಸ್ತರಗಳಿಗೆ ಸೇರಿದವರಾಗಿದ್ದು, ಸಚಿವರು ತಮ್ಮದೇ ಆಪ್ತ ಧಾಟಿಯಲ್ಲಿ ಮಾತನಾಡಿ ಎಲ್ಲರಲ್ಲೂ ಆತ್ಮ ವಿಶ್ವಾಸ ಮೂಡಿಸಿದರು. ತಮ್ಮೆಲ್ಲರ ಇಚ್ಛೆಯಂತೆ  ಪರೀಕ್ಷೆ ನಡೆದೇ ನಡೆಯುತ್ತದೆ, ಯಾವುದೇ ವದಂತಿ ಹಾಗೂ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ಚೆನ್ನಾಗಿ ಓದಿಕೊಳ್ಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next