Advertisement

ಸಚಿವ ಮಹದೇವಪ್ಪ, ತಮ್ಮ ನಡುವೆ ಭಿನ್ನಾಭಿಪಾಯವಿಲ್ಲ: ಧ್ರುವ

12:20 PM Jan 20, 2017 | Team Udayavani |

ನಂಜನಗೂಡು: ರಾಜ್ಯದ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ತಮ್ಮ ನಡುವೆ ಭಿನ್ನಾಭಿಪ್ರಾಯಗಳಿಲ್ಲ, ನಾವೆಲ್ಲ ಅನೋನ್ಯರಾಗಿಯೇ ಇದ್ದೇವೆ ಎಂದು ಲೋಕಸಭಾ ಸದಸ್ಯ ಆರ್‌.ಧ್ರುವ ನಾರಾಯಣ ಸ್ಪಷ್ಟಪಡಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ, ಉಪಚುನಾವಣಾ ಅಭ್ಯರ್ಥಿ ಕುರಿತಂತೆ ನಿಮ್ಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಅಸಮಾಧಾನ ಭುಗಿಲೆದ್ದಿದೆ ಎಂಬ ವಿಷಯ ಕ್ಷೇತ್ರದಾದ್ಯಂತ ಹರಿದಾಡುತ್ತಿದೆ, ಅದಕ್ಕೆ ಸಾಕ್ಷಿ ಎಂಬಂತೆ ಮಹದೇವಪ್ಪನವರ ಬೆಂಬಲಿಗರ ಪಡೆ ಕಾಣುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಸತ್ಯಕ್ಕೆ ದೂರವಾದ ಸಂಗತಿ ಎಂದರು.

ನಾವಿರುವುದು ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲಿ ತನ್ನ ಅಭ್ಯರ್ಥಿ ಅವರ ಅಭ್ಯರ್ಥಿ ಎಂಬುದಿಲ್ಲ. ಹೈಕಮಾಂಡ್‌ ಯಾರನ್ನು ಸೂಚಿಸುತ್ತದೆಯೋ ಅವರೇ ನಮ್ಮೆಲ್ಲರ ಅಭ್ಯರ್ಥಿ. ಅವರ ಪರವಾಗಿ ದುಡಿಯುವುದು ಮಾತ್ರ ನಮ್ಮ ಕೆಲಸ. ನಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯವೇ ಇಲ್ಲ ಎಂದು ಹೇಳಿದರು. ಉಪಚುನಾವಣೆಗೆ ಅಭ್ಯರ್ಥಿ ಕಾಂಗ್ರೆಸ್ಸಿಗರೋ ಅಥವಾ ಬೇರೆ ಪಕ್ಷದವರೋ ಎಂಬ ಪ್ರಶ್ನೆಗೆ ಸಂಸದರು ನೇರವಾಗಿ ಉತ್ತರ ನೀಡದೆ ಕಾಂಗ್ರೆಸ್‌ ವರಿಷ್ಠರು ಈ ಕುರಿತು ನಿರ್ಧರಿಸುತ್ತಾರೆ ಎಂದಷ್ಟೇ ಉತ್ತರಿಸಿದರು.

16 ಕೋಟಿ ರೂ. ಬಿಡುಗಡೆ: ವಿವಿಧ ಸಮುದಾಯಗಳ ಭವನದ ನಿರ್ಮಾಣಕ್ಕಾಗಿ 15.95 ಕೋಟಿ ರೂ. ಬಿಡುಗಡೆಯಾಗಿದೆ. ಸದ್ಯದಲ್ಲೇ ಕಾಮಗಾರಿಗಳು ಪ್ರಾರಂಭವಾಗಲಿವೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಿಸಲು ಬೇಡಿಕೆ ಸಲ್ಲಿಸಲಾಗಿತ್ತು. ಈ ಎಲ್ಲ 152 ಸುಮಾದಾಯ ಭವನಗಳ ನಿರ್ಮಾಣಕ್ಕಾಗಿ ಸರ್ಕಾರ ಹಣವನ್ನು ಜನವರಿ 9ರಂದು ಬಿಡುಗಡೆ ಮಾಡಿ 8 ಕಾಮಗಾರಿ ಆರಂಭಿಸಲು ಹಸಿರು ನಿಶಾನೆ ತೋರಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್‌ ಹಾಗೂ ಜಗಜೀವನರಾಂ ಸಮುದಾಯ ಭವನಕ್ಕಾಗಿ 6.30 ಕೋಟಿ ಹಾಗೂ 4.5 ಕೋಟಿ ರೂ. ಬಿಡುಗಡೆಯಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 5. 65 ಕೋಟಿ ರೂ. ಸೇರಿದಂತೆ ಒಟ್ಟಾರೆ ನಂಜನಗೂಡು ವಿಧಾನಸಭಾ ಕ್ಷೇತ್ರದಾದ್ಯಂತ 152 ಸಮುದಾಯ ಭವನಗಳನ್ನು 15.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಬಿಡುಗಡೆಯಾದ ಎಲ್ಲ ಹಣವೂ ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತ. ವರುಣಾ ವ್ಯಾಪ್ತಿಯಲ್ಲಿ ಈಗಾಲೆ ಸಮುದಾಯ ಭವನಗಳ ಕಾಮಗಾರಿ ಪ್ರಾರಂಭವಾಗಿದೆ ಎಂದರು.

Advertisement

ಹೆಗ್ಗಡದೇವನಕೋಟೆಗೂ ಹಣ ಬಿಡುಗಡೆಯಾಗಿದೆ. ಆದರೆ ಇಲ್ಲಿ ಉಪ ಚುನಾವಣೆ ಇರುವುದರಿಂದ ಸ್ವಲ್ಪ ಹೆಚ್ಚು ಹಣ ಮಂಜೂರಾಗಿದೆ. ಉಪಚುನಾವಣೆ ಇರುವಲ್ಲಿ ಇದು ಸಹಜ ಪ್ರಕ್ರಿಯೆಯಾಗಿದೆ ಎಂದು ಸಮರ್ಥನೆ ನೀಡಿದರು. ಅಂಬೇಡ್ಕರ್‌ ಭವನ ಪರಿಪೂರ್ಣವಾಗಿಸಿ ಜನತೆ ಮಡಿಲಲ್ಲಿ ಇಡುವುದು ಮಾಜಿ ಸಚಿವ ವಿ.ಶ್ರೀನೀವಾಸ್‌ ಪ್ರಸಾದ್‌ ಆಶಯ, ಹಾಗಾಗಿ ತಡವಾಗುತ್ತಿದೆ. ಅದಕ್ಕೆ ಅವರೇ ಸಾಕಷ್ಟು ಹಣ ನೀಡಿದ್ದಾರೆ. ಆ ಹಣದಲ್ಲಿ ಪೀಠೊಪಕರಣಗಳು ಪಾತ್ರೆ ಪಗಡೆಗಳ ಖರೀದಿಯಾಗಬೇಕಿದೆ.

ಪರಿಪೂರ್ಣತೆಗೆ ಏನೇನು ಬೇಕೋ ಅದನ್ನು ಶೀಘ್ರದಲ್ಲಿಯೇ ಪೂರೈಸಿ ಬೃಹತ್‌ ಸಾಮೂಹಿಕ ವಿವಾಹ ಸಮಾರಂಭದ ಮೂಲಕ ಅದನ್ನು ಜನತೆಗೆ ಆದಷ್ಟು ಬೇಗ ಅರ್ಪಿಸಲಾಗುವುದು ಎಂದರು. ಜಿಪಂ ಸದಸ್ಯೆ ಲತಾ ಸಿದ್ದಶೆಟ್ಟಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಹಾಗೂ ಎಪಿಎಂಸಿ ನೂತನ ನಿರ್ದೇಶಕ ಕುರಹಟ್ಟಿ ಮಹೇಶ, ಹುಲ್ಲಹಳ್ಳಿ ಮಾದಪ್ಪ, ತಾಪಂ ಮಾಜಿ ಅಧ್ಯಕ್ಷ ನಾಗೇಶರಾಜು, ಪುರಸಭಾ ಸದಸ್ಯ ಸಿ.ಎಂ.ಶಂಕರ ಇನ್ನಿತರರು ಉಪಸ್ಥತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next