Advertisement

ಲಕ್ಷಾಂತರ ಬಡವರಿಗೆ ಸೂರಿನ ಭಾಗ್ಯ

12:08 PM May 11, 2018 | Team Udayavani |

ಬೆಂಗಳೂರು: ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಗುರುವಾರ ವಿಜಯನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ವಸತಿ ಸಚಿವ ಎಂ.ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ಅವರು ಇಡೀ ದಿನ ಬಿರುಸಿನ ಪ್ರಚಾರ ನಡೆಸಿದರು.

Advertisement

ಕಾಂಗ್ರೆಸ್‌ ಪಾಲಿಕೆ ಸದಸ್ಯರು, ಮುಖಂಡರು ಹಾಗೂ ನಾಯಕರ ಜತೆಗೂಡಿ ಎಂ.ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಅವರು ರೋಡ್‌ಶೋ ಹಾಗೂ ಪಾದಯಾತ್ರೆ ನಡೆಸಿ ಎರಡೂ ಕ್ಷೇತ್ರಗಳಲ್ಲಿ ಮತ ನೀಡುವಂತೆ ಮನವಿ ಮಾಡಿದರು.

ವಿಜಯನಗರದ  ಕೆಂಪಾಪುರ ಅಗ್ರಹಾರ, ವಿಜಯನಗರ, ಹೊಸಹಳ್ಳಿ, ಅತ್ತಿಗುಪ್ಪೆ, ಹಂಪಿನಗರ, ಬಾಪೂಜಿನಗರ, ಗಾಳಿ  ಆಂಜನೇಯ ದೇವಾಲಯ, ದೀಪಾಂಜಲಿ ನಗರ ವಾರ್ಡ್‌ ಹಾಗೂ ಗೋವಿಂದರಾಜನಗರದ ಕಾವೇರಿಪುರ, ಗೋವಿಂದರಾಜನಗರ, ಅಗ್ರಹಾರ ದಾಸರಹಳ್ಳಿ,

ಡಾ.ರಾಜ್‌ಕುಮಾರ್‌ ವಾರ್ಡ್‌, ಮಾರೇನಹಳ್ಳಿ, ಮಾರುತಿಮಂದಿರ, ಮೂಡಲಪಾಳ್ಯ, ನಾಗರಭಾವಿ , ನಾಯಂಡಹಳ್ಳಿ ವಾರ್ಡ್‌ಗಳಲ್ಲಿ ಕೊನೇ ಹಂತದ ಪ್ರಚಾರ ನಡೆಸಿದ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ, ಎರಡೂ ಕ್ಷೇತ್ರಗಳ ಜನತೆ ಅಪಪ್ರಚಾರಕ್ಕೆ ಕಿವಿಕೊಡದೆ ಕಾಂಗ್ರೆಸ್‌ ಪರ ಮತ ನೀಡಬೇಕು ಎಂದು ಮನವಿ ಮಾಡಿದರು.

ಜನಪರ ಕೆಲಸ: ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಪ್ಪ, ವಿಜಯನಗರದಲ್ಲಿ ಮುಖ್ಯಮಂತ್ರಿಯವರ 1 ಲಕ್ಷ ಮನೆ ನಿರ್ಮಾಣ ಯೋಜನೆಯಡಿ 4800 ಹಾಗೂ ಗೋವಿಂದರಾಜನಗರದಲ್ಲಿ 2333 ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.

Advertisement

ಗೋವಿಂದರಾಜನಗರದಲ್ಲಿ 2156 ಒಂಟಿ ಮನೆ ನಿರ್ಮಿಸಿಕೊಡಲಾಗಿದೆ. ವಿಜಯನಗರದಲ್ಲಿ 2750 ಕಚ್ಚಾ ಮನೆಗಳನ್ನು ತಲಾ 5 ಲಕ್ಷ ರೂ. ವೆಚ್ಚದಲ್ಲಿ ಪಕ್ಕಾ ಮನೆ ನಿರ್ಮಿಸಿಕೊಡಲಾಗಿದೆ. ಎರಡೂ ಕ್ಷೇತ್ರಗಳ ಎಲ್ಲ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಬಡವರಿಗೆ ಭಾಗ್ಯಗಳು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ,ಇಂದಿರಾ ಕ್ಯಾಂಟೀನ್‌ನಂತರ ಅತ್ಯುತ್ತಮ ಯೋಜನೆಗಳು ದೇಶದಲ್ಲೇ ಎಲ್ಲೂ ಇಲ್ಲ. ಐದು ವರ್ಷಗಳಲ್ಲಿ ಹದಿನೈದು ಲಕ್ಷ ಮನೆ ನಿರ್ಮಿಸಿ ನುಡಿದಂತೆ ನಡೆದಿದ್ದೇವೆ. ಒಂದು ವರ್ಷದಲ್ಲಿ ಬಸವ ವಸತಿ, ಅಂಬೇಡ್ಕರ್‌ ವಸತಿ, ದೇವರಾಜ ಅರಸು ವಸತಿ ಯೋಜನೆಯಡಿ ಆರು ಲಕ್ಷ ಮನೆ ನಿರ್ಮಿಸಿದ್ದೇವೆ.

ಐದು ವರ್ಷಗಳಲ್ಲಿ 15 ಲಕ್ಷ ಮನೆ ನಿರ್ಮಿಸಿ, ರಾಜೀವ್‌ಗಾಂಧಿ ಹೌಸಿಂಗ್‌ ನಿಗಮದ ವತಿಯಿಂದ 40 ಸಾವಿರ ನಿವೇಶನ ಬಡವರಿಗೆ ಹಂಚಿಸಿದ್ದೇವೆ. ಕೊಳಗೇರಿ ವಾಸಿಗಳು ಆಶ್ರಯ ಹಾಗೂ ವಾಂಬೆ ಯೋಜನೆಯಡಿ ಮನೆ ನಿರ್ಮಾಣಕ್ಕೆ ಮಾಡಿದ್ದ 2478 ಕೋಟಿ ರೂ. ಮನ್ನಾ ಮಾಡಲಾಗಿದೆ. ಜನಪರ ಕಾರ್ಯಗಳಿಗೆ ಮತ್ತೂಮ್ಮೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಸಾಧನೆ ಶ್ರೀರಕ್ಷೆ: ಪ್ರಿಯಕೃಷ್ಣ ಮಾತನಾಡಿ , ಕಳೆದ ಒಂಬತ್ತು ವರ್ಷಗಳಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. 15 ಕೋಟಿ ರೂ. ವೆಚ್ಚದಲ್ಲಿ ಗೋವಿಂದರಾಜನಗರ ಹಮತ -1 ಮತ್ತು ಹಂತ-2, ಕನಕನಗರ, ಅಗ್ರಹಾರ ದಾಸರಹಳ್ಳಿ, ಗಂಗೊಂಡನಹಳ್ಳಿ ಹಾಗೂ ಪಂತರಪಾಳ್ಯದ ಕೊಳಗೇರಿ ನಿವಾಸಿಗಳಿಗೆ ಮೂಲಸೌಕರ್ಯಗಳಾದ ಕುಡಿಯುವ ನೀರು,

ರಸ್ತೆ, ಒಳಚರಂಡಿ, ಸಮುದಾಯದ ಭವನ ನಿರ್ಮಾನ ಕಾರ್ಯ ಪ್ರಗತಿಯಲ್ಲಿದೆ. ಹಕ್ಕುಪತ್ರ/ನೋಂದಣಿ ಪತ್ರ ವಿತರಣೆ ಮಾಡಲಾಗಿದ್ದು 40 ವರ್ಷದಿಂದ ನೆನಗುದಿಗೆ ಬಿದ್ದಿದ್ದ ಪಂಚಶೀಲ ನಗರ ನಿವಾಸಿಗಳಿಗೆ ಬಿಬಿಎಂಪಿ ವತಿಯಿಂದ ಖಾತಾ ಮಾಡಿಕೊಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಲಾಗಿದ್ದು, 4 ಕೋಟಿ ರೂ. ವೆಚ್ಚದಲ್ಲಿ 400 ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಪೊಲೀಸ್‌ ಠಾಣೆಗಳಿಗೆ ನೇರ ಸಂಪರ್ಕ ಕಲ್ಪಿಸಲಾಗಿದೆ. ಅಪರಾಧ ಪ್ರಕರಣ ನಿಯಂತ್ರಣ, ಸರಗಳ್ಳತನ ನಿಗ್ರಹಕ್ಕೆ  ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next