Advertisement

ಮೂಲಸೌಕರ್ಯ ಗಳಿಲ್ಲದೆ ಪರದಾಡುತ್ತಿರುವ ವಲಸಿಗರು

01:07 PM Nov 08, 2020 | mahesh |

ಪಣಂಬೂರು, ನ. 7: ಇಂದಿಗೂ ಶೌಚಾಲಯವಿಲ್ಲದ ನೂರಾರು ವಲಸಿಗ ಕುಟುಂಬಗಳು, ಮನೆ, ಜೋಪಡಿಗಳು ಆಧುನಿಕ ತಂತ್ರ ಜ್ಞಾನದ ದಿನ ಗಳಲ್ಲಿಯೂ ಅದೂ ಮಂಗಳೂರು ಸುತ್ತಮುತ್ತ ಕಾಣಸಿಗುತ್ತಿವೆ.

Advertisement

ಬೈಕಂಪಾಡಿಯ ಮೀನಕಳಿಯ ಬಳಿ ಸಮುದ್ರ ದಂಡೆ, ರೈಲ್ವೇ ಯಾರ್ಡ್‌ ಭಾಗಗಳಲ್ಲಿ ಒಂದು ಬಾರಿ ಸುತ್ತಾಡಿ ಬಂದರೆ ನಿಜ ಸ್ವರೂಪ ದರ್ಶನವಾಗುತ್ತದೆ. ರಾಜ್ಯದ ಉತ್ತರ ಕರ್ನಾಟಕದಿಂದ ಬಂದ ಕೂಲಿ ಕಾರ್ಮಿಕರಿಗೆ ತಮ್ಮ ಜಾಗದಲ್ಲಿ ಜೋಪಡಿ ನಿರ್ಮಿಸಲು ಅವಕಾಶ ಕೊಟ್ಟು 500ರಿಂದ 2,000 ರೂ.ಗಳ ವರೆಗೆ ಜಾಗದ ಮಾಲಕರು ಬಾಡಿಗೆ ವಸೂಲು ಮಾಡುತ್ತಾರೆ. ಆದರೆ ಅವರಿಗೆ ಸ್ನಾನ, ಶೌಚಾಲಯಕ್ಕೆ ಬೇಕಾದ ವ್ಯವಸ್ಥೆ ಮಾಡುವಲ್ಲಿ ಹಿಂದುಳಿದಿದ್ದಾರೆ. ನಿತ್ಯ ಕರ್ಮಕ್ಕಾಗಿ ರಸ್ತೆ ಬದಿ, ರೈಲ್ವೇ ಯಾರ್ಡ್‌ ಮತ್ತಿತರ ಪ್ರದೇಶ ಹುಡುಕಿಕೊಳ್ಳುತ್ತಾರೆ. ಇನ್ನು ಕೆಲವರಂತೂ ರಸ್ತೆ ಬದಿ ನಾಲ್ಕು ಪ್ಲಾಸ್ಟಿಕ್‌ ಹೊದಿಕೆ ಕಟ್ಟಿ ಸ್ನಾನಗೃಹ ನಿರ್ಮಿಸಿದ್ದಾರೆ. ಆದರೆ ರಸ್ತೆ ಮೇಲೆಯೇ ಈ ನೀರು ಹರಿದು ಪಾದಚಾರಿಗಳು ಸಂಕಷ್ಟ ಎದುರಿ ಸುವಂತಾಗಿದೆ. ಈ ಭಾಗದಲ್ಲಿ ಐವತ್ತಕ್ಕೂ ಮಿಕ್ಕಿ ಜೋಪಡಿಗಳಿದ್ದು ಇನ್ನೂರಕ್ಕೂ ಮಿಕ್ಕಿ ಕಾರ್ಮಿಕರು ನಿತ್ಯ ಜೀವನ ಸಾಗಿಸುತ್ತಿದ್ದಾರೆ.

ಶುಚಿತ್ವದ ಕೊರತೆ;ಆರೋಗ್ಯ ಸಮಸ್ಯೆ :
ಮಂಗಳೂರು ಹೊರವಲಯದ ಪ್ರವಾಸಿ ಸಮುದ್ರ ತೀರ ಪ್ರದೇಶಗಳಲ್ಲಿ ಹಣ ಕೊಟ್ಟು ಬಳಸುವ ಶೌಚಾಲಯವಿಲ್ಲ. ಇದರ ಜತೆಗೆ ಈ ಭಾಗದಲ್ಲಿ ಕೆಲವೊಂದು ಬಾಡಿಗೆದಾರರು ಶೌಚಾಲಯ ನಿರ್ಮಿಸಿ ಕೊಟ್ಟಿದ್ದಾರೆ. ಇನ್ನುಳಿದವರು ಬಾಡಿಗೆ ಮಾತ್ರ ಪಡೆಯುತ್ತಾರೆ. ಮೂಲಸೌಕರ್ಯ ನೀಡಿಲ್ಲ. ಜೋಪಡಿಯಲ್ಲಿರುವ ಪುಟ್ಟ ಮಕ್ಕಳು ಕೂಡ ಈ ಬಯಲು ಶೌಚಾಲಯದ ದುಷ್ಪರಿಣಾಮ ಎದುರಿಸುತ್ತಿದ್ದಾರೆ. ಶುಚಿತ್ವದ ಕೊರತೆಯಿಂದ ನೆಗಡಿ, ಕೆಮ್ಮು, ಹೊಟ್ಟೆ ನೋವು ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಪಣಂಬೂರು, ಬೈಕಂಪಾಡಿ, ಮುಕ್ಕ ಸಹಿತ ಈ ಭಾಗದಲ್ಲಿ ಸಮುದ್ರ ತೀರದುದ್ದಕ್ಕೂ ವಲಸೆ ಕಾರ್ಮಿಕರು ಜೋಪಡಿ ನಿರ್ಮಿಸಿ ಕೊಂಡಿದ್ದಾರೆ. ಇನ್ನೊಂದೆಡೆ ಜಾಗವಿದ್ದ ಕಡೆಯಲ್ಲೆಲ್ಲ ತಗಡು ಶೀಟು ಹಾಕಿ ಕಾರ್ಮಿಕರಿಗೆ ಬಾಡಿಗೆ ನೀಡಲಾಗಿದೆ.

ಎಚ್ಚರಿಕೆ ನೀಡಿದ್ದೇವೆ :
ಇಲ್ಲಿನ ಜಾಗ ಬಾಡಿಗೆ ನೀಡಿದ ಸ್ಥಳಕ್ಕೆ ಭೇಟಿ ನೀಡಿ ಮಾಲಕರಿಗೆ ಎಚ್ಚರಿಕೆ ನೀಡಿದ್ದೇವೆ. ಸೂಕ್ತ ಶೌಚಾಲಯ ಕಟ್ಟಿಕೊಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದಲ್ಲಿ ಪಾಲಿಕೆಯ ಆರೋಗ್ಯ ಮತ್ತು ಪರಿಸರ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಸುರತ್ಕಲ್‌ ವಲಯ ಆರೋಗ್ಯಾಧಿಕಾರಿ ಸುಶಾಂತ್‌, ಸುರತ್ಕಲ್‌ ವಲಯ ಪರಿಸರ ಅಧಿಕಾರಿ ದಯಾನಂದ್‌ ಅವರು ತಿಳಿಸಿದ್ದಾರೆ.

ರೋಗ ಹರಡುವ ಭೀತಿ : ನಾವು ಇಲ್ಲಿಯೇ ಅನೇಕ ವರ್ಷಗಳಿಂದ ವಾಸಿಸುತ್ತಿದ್ದೇವೆ. ಈ ಭಾಗದಲ್ಲಿ ಬಾಡಿಗೆಗೆ ಕುಳಿತುಕೊಳ್ಳಲು ಜಾಗ ನೀಡಿದರೂ ಬೇಕಾದ ಮೂಲಸೌಕರ್ಯ ನಿರ್ಮಿಸಿಕೊಡದೆ ಪರಿಸರ ಮಾಲಿನ್ಯವಾಗುತ್ತಿದೆ. ಬಯಲು ಶೌಚದಿಂದ ನಮ್ಮ ಸುತ್ತಮುತ್ತ ರೋಗ ಹರಡುವ ಭೀತಿ ವ್ಯಕ್ತವಾಗಿದೆ. -ಅನಂತ ಐತಾಳ್‌, ಮಾಜಿ ಅಧ್ಯಕ್ಷರು, ಪಣಂಬೂರು ಶ್ರೀ ನಂದನೇಶ್ವರ ವ್ಯವಸ್ಥಾಪನ ಸಮಿತಿ

Advertisement

 

 -ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next