Advertisement

ಮೆಟ್ರೋ, ಕೆಳಸೇತುವೆ, ಸಿಗ್ನಲ್‌ ಫ್ರೀ ಕಾರಿಡಾರ್‌…

11:33 AM Apr 30, 2017 | Team Udayavani |

ರಾಜಧಾನಿಯಲ್ಲಿ ಏಕಕಾಲಕ್ಕೆ ಹಲವು ಭಾಗಗಳಲ್ಲಿ  ಬಿಬಿಎಂಪಿ, ಬಿಡಿಎ, ಮೆಟ್ರೋ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳ ಪ್ರಗತಿಯ ಬಗ್ಗೆ ಬಹುತೇಕ ಕಡೆ ಮಾಹಿತಿ ಫ‌ಲಕಗಳಿಲ್ಲ. ಇನ್ನೊಂದೆಡೆ ಸಚಿವರು, ಅಧಿಕಾರಿಗಳು ಗಡುವು ನೀಡುತ್ತಿದ್ದರೂ  ನಿರೀಕ್ಷಿತ ವೇಗದಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಮಾಹಿತಿಯ ಜತೆಗೆ, ಅಧಿಕಾರಿಗಳ ಪ್ರತಿಕ್ರಿಯೆ ಹಾಗೂ ವಸ್ತುಸ್ಥಿತಿಯನ್ನು “ಉದಯವಾಣಿ’ ಮುಂದಿಡುತ್ತಿದೆ. ಇದು ಪ್ರತಿ ಮಾಸಾಂತ್ಯದ ವಿಶೇಷ. 

Advertisement

ಮೇನಲ್ಲಿ ಆಗಲಿದೆ ಸಿಗ್ನಲ್‌ ಮುಕ್ತ 
ಯೋಜನೆ: ರಾಜ್‌ಕುಮಾರ್‌ ರಸ್ತೆಯಲ್ಲಿ ಸಿಗ್ನಲ್‌ ಮುಕ್ತ ಸಂಚಾರಕ್ಕಾಗಿ ವಿವೇಕಾನಂದ ಕಾಲೇಜು ಎದುರು ಅಂಡರ್‌ ಪಾಸ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡರೆ ರಾಜ್‌ಕುಮಾರ್‌ ರಸ್ತೆಯಲ್ಲಿನ ಸಂಚಾರ ಸಿಗ್ನಲ್‌ ಮುಕ್ತವಾಗಲಿದೆ.

ಗುತ್ತಿಗೆದಾರ: ಪಿಜೆಬಿ ಎಂಜಿನಿಯರ್ ಪ್ರೈವೇಟ್‌ ಲಿಮಿಟೆಡ್‌

ಈ ತಿಂಗಳ ಪ್ರಗತಿ: ಅಂಡರ್‌ ಪಾಸ್‌ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿದ್ದ ಜಲಮಂಡಳಿಯ ಕುಡಿಯುವ ನೀರು ಪೂರೈಕೆಯ ಬೃಹತ್‌ ಪೈಪುಗಳನ್ನು ಸ್ಥಳಾಂತರ ಮಾಡಲಾಗಿದೆ. 

ವಸ್ತುಸ್ಥಿತಿ: ಅಂಡರ್‌ ಪಾಸ್‌ ಕಾಮಗಾರಿ ಸ್ಥಳದಲ್ಲಿ ಬೆಸ್ಕಾಂನ 66 ಕೆವಿ ಲೈನ್‌ಗಳನ್ನು ಸ್ಥಳಾಂತರಿಸಲು ಬೆಸ್ಕಾಂ ಅಧಿಕಾರಿಗಳು ಸಮಯ ದೂಡುತ್ತಿದ್ದಾರೆ. ಇದರಿಂದ ಏಪ್ರಿಲ್‌ ಮೊದಲ ವಾರದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಬೇಕಾಗಿದ್ದ ಅಂಡರ್‌ ಪಾಸ್‌ ಮೇ ಮೊದಲ ವಾರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆಯಿದೆ. 

Advertisement

ಅಂಡರ್‌ ಪಾಸ್‌ ಕಾಮಗಾರಿ ಅಂತಿಮ ಹಂತದಲ್ಲಿದೆ. ವಿದ್ಯುತ್‌ ಸಂಪರ್ಕ ಜಾಲ ಸ್ಥಳಾಂತರ ಮಾಡಲು ಬೆಸ್ಕಾಂ ಸಮಯ ತೆಗೆದುಕೊಂಡಿದೆ. ನಂತರ ಡಾಂಬರೀಕರಣ ಮಾಡಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಒಟ್ಟಾರೆ ಮೇ ಮೊದಲ ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ 
-ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ 

ಮೇ 12ರ ಒಳಗೆ ಮೆಟ್ರೋ ಪರೀಕ್ಷಾರ್ಥ ಸಂಚಾರ ಪೂರ್ಣ 
ವಸ್ತುಸ್ಥಿತಿ:
ನಗರದ ನಾಲ್ಕು ದಿಕ್ಕುಗಳಿಂದ ಹೃದಯಭಾಗ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆ ಐದು ವರ್ಷದಲ್ಲಿ ಮುಗಿಯಬೇಕಿತ್ತು. ಆದರೆ, ಒಂದು ದಶಕ ಪೂರೈಸಿದರೂ “ಕಾಮಗಾರಿ ಪ್ರಗತಿಯಲ್ಲಿದೆ’! ಸಂಪಿಗೆರಸ್ತೆಯಿಂದ ಮೆಜೆಸ್ಟಿಕ್‌ ಮೂಲಕ ನ್ಯಾಷನಲ್‌ ಕಾಲೇಜು ನಿಲ್ದಾಣದಲ್ಲಿ ಹಾದು ಯಲಚೇನಹಳ್ಳಿ ಸೇರುವ ಮಾರ್ಗದಲ್ಲಿ ಪ್ರಸ್ತುತ ಪರೀಕ್ಷಾರ್ಥ ಸಂಚಾರ ನಡೆಯುತ್ತಿದೆ.

ಈಗಾಗಲೇ ಈ ಯೋಜನೆ ಹಲವು ಬಾರಿ ಗಡವುಗಳನ್ನು ಮೀರಿದೆ. ಕೊನೆಕ್ಷಣದಲ್ಲಿ ಬಿಎಂಆರ್‌ಸಿ ಮತ್ತೆ ಒಂದು ತಿಂಗಳು ಗಡವು ವಿಸ್ತರಿಸಿಕೊಂಡಿದೆ. ಅಂದರೆ, ಏಪ್ರಿಲ್‌ನಲ್ಲಿ ಮೊದಲ ಹಂತ ಪೂರ್ಣಗೊಳ್ಳುವುದು ಅನುಮಾನವಾಗಿದ್ದು, ಮೇ ಅಂತ್ಯಕ್ಕೆ ಸಾರ್ವಜನಿಕರಿಗೆ ಮುಕ್ತಗೊಳ್ಳುವ ನಿರೀಕ್ಷೆ ಇದೆ. 

ಮೊದಲ ಹಂತ ತಡವಾಗಿಯಾದರೂ ಈಗ ಬಹುತೇಕ ಪೂರ್ಣಗೊಂಡಿದೆ. ಈಗೇನಿದ್ದರೂ ಲೈಟಿಂಗ್‌ ಅಳವಡಿಕೆ ಮತ್ತಿತರ ಸಣ್ಣಪುಟ್ಟ ಸಿವಿಲ್‌ ಕಾಮಗಾರಿಗಳು ಮಾತ್ರ ಬಾಕಿ ಇವೆ. ಮೇ 10 ಅಥವಾ 12ಕ್ಕೆ ಪರೀಕ್ಷಾರ್ಥ ಸಂಚಾರ ಪೂರ್ಣಗೊಳ್ಳಲಿದ್ದು, ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ, ಅನುಮೋದನೆ ನೀಡಲಿದ್ದಾರೆ. ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗಿನ ಸಂಪೂರ್ಣ ಮಾರ್ಗ ಒಮ್ಮೆಲೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ. 
-ಪ್ರದೀಪ್‌ಸಿಂಗ್‌ ಖರೋಲಾ, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿ

ಗಡುವಿನೊಳಗೆ ಮುಗಿಯದ ಕೆಲಸ
ಯೋಜನೆ:
ಮಾಗಡಿ ರಸ್ತೆಯಲ್ಲಿ ಸಿಗ್ನಲ್‌ ಮುಕ್ತ ಸಂಚಾರ ಹಾಗೆಯೇ, ಮಾಗಡಿ ರಸ್ತೆಯಿಂದ ಬಸವೇಶ್ವರನಗರದ ಕಡೆಗೆ ಸಿಗ್ನಲ್‌ ಮುಕ್ತವಾಗಿ ಸಂಚಾರಕ್ಕಾಗಿ ಈ ಅಂಡರ್‌ ಪಾಸ್‌ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. 

ಗುತ್ತಿಗೆದಾರ: ಪಿಎಂಜೆ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟ್‌ ಲಿಮಿಟೆಡ್‌

ಈ ತಿಂಗಳ ಪ್ರಗತಿ: ಕಳೆದೊಂದು ತಿಂಗಳಲ್ಲಿ ಕಾಮಗಾರಿಯನ್ನು ತ್ವರಿತಗತಿಯಾಗಿ ಮಾಡಲಾಗುತ್ತಿದ್ದು, ಈ ಭಾಗದಲ್ಲಿದ್ದ ವಿವಿಧ ಸೇವಾ ಜಾಲಗಳ ಸ್ಥಳಾಂತರ ಮಾಡಲಾಗಿದೆ.
 
ವಸ್ತುಸ್ಥಿತಿ:
ಅಂಡರ್‌ ಪಾಸ್‌ ನಿರ್ಮಾಣದ ವೇಳೆ ಭಾರಿ ಪ್ರಮಾಣದ ಕಲ್ಲುಗಳು ಅಡ್ಡ ಬಂದಿದ್ದು ಅವುಗಳನ್ನು ತೆರವುಗೊಳಿಸಲು ಹೆಚ್ಚು ಸಮಯ ಹಿಡಿದಿದೆ. ಶೇ.10ರಷ್ಟು ಕಾಮಗಾರಿ ಪೂರ್ಣಗೊಳ್ಳುಧಿವುದು ಬಾಕಿಯಿರುವುದರಿಂದ ಮೇ ಮೊದಲ ವಾರದ ವೇಳೆಗೆ ಅಂಡರ್‌ ಪಾಸ್‌ ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆಯಿದೆ.

ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆಗೆ ಡಾಂಬರೀಕರಣ, ವಿದ್ಯುತ್‌ ಸೇರಿದಂತೆ ಕೆಲ ಸೌಲಭ್ಯಗಳನ್ನು ಒದಗಿಸುವ ಕೆಲಸಗಳು ಮಾತ್ರ ಬಾಕಿಯಿವೆ. ವಾರದೊಳಗೆ ಉಳಿದ ಕಾಮಗಾರಿಗಳನ್ನು ಮುಗಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು.
-ಸಹಾಯಕ ಕಾರ್ಯಪಾಲಕ ಎಂಜಿನಿಯರ್‌

ಸೆಪ್ಟೆಂಬರ್‌ಗೆ ಕಾರಿಡಾರ್‌ ರೆಡಿ 
ಯೋಜನೆ:
ಸಿಗ್ನಲ್‌ ಮುಕ್ತ ಕಾರಿಡಾರ್‌ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ಎರಡು ಮೇಲ್ಸೇತುವೆ ಹಾಗೂ ಒಂದು ಅಂಡರ್‌ ಪಾಸ್‌ ನಿರ್ಮಾಣ ಮಾಡಲಾಗುತ್ತಿದ್ದು, ಈ ಕಾಮಗಾರಿಯಿಂದ 1.60 ಕಿ.ಮೀ ಮಾರ್ಗ ಸಿಗ್ನಲ್‌ ಮುಕ್ತವಾಗಲಿದೆ.

ಗುತ್ತಿಗೆದಾರ: ಎಂ.ವೆಂಕಟರಾವ್‌ ಇನಾ ಪ್ರಾಜೆಕ್ಟ್ ಪ್ರೈವೇಟ್‌ ಲಿಮಿಟೆಡ್‌

ಈ ತಿಂಗಳ ಪ್ರಗತಿ: ಸಿಗ್ನಲ್‌ ಮುಕ್ತ ಕಾಮಗಾರಿ ಎರಡು ಮೇಲ್ಸೇತುವೆ ಕಾಮಗಾರಿಗಾಗಿ ಪಿಲ್ಲರ್‌ಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ಪಿಲ್ಲರ್‌ಗಳ ಮೇಲೆ ಎಲಿಮೆಂಟ್‌ ಕೂರಿಸಲು ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ವಸ್ತುಸ್ಥಿತಿ: ಡಾ.ರಾಜ್‌ ರಸ್ತೆಯಲ್ಲಿ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಸಂಚಾರ ಪೊಲೀಸರು ಅವಕಾಶ ನೀಡಿದ್ದು, ಕಾರ್ಡ್‌ ರಸ್ತೆಯಲ್ಲಿ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಅಂಡರ್‌ ಪಾಸ್‌ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ. 

ಬಸವೇಶ್ವರ ವೃತ್ತ, ಮಂಜುನಾಥ ನಗರ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದೆ. ಪಿಲ್ಲರ್‌ಗಳನ್ನು ಹಾಕಲಾಗಿದೆ. ಶೀಘ್ರದಲ್ಲೇ ಕಾಂಕ್ರಿಟ್‌ ಎಲಿಮೆಂಟ್‌ ಅಳವಡಿಸಲಾಗುವುದು. ಆಗಸ್ಟ್‌ ವೇಳೆಗೆ ಎರಡು ಮೇಲ್ಸೇತುವೆಗಳು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿವೆ.
-ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌  

ಆಗಸ್ಟ್‌ ವೇಳೆಗೆ ಎರಡು ಪಥ?
ಯೋಜನೆ:
ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗಿನ ಎಂಟು ಪಥದ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆ. ಈ ಕಾಮಗಾರಿಯಿಂದ ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ, ಕೃಷ್ಣಮಿಲ್‌ ರಸ್ತೆ ನಡುವೆ ಸಿಗ್ನಲ್‌ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ. 

ಗುತ್ತಿಗೆದಾರ: ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌

ಈ ತಿಂಗಳ ಪ್ರಗತಿ: ಜಂಕ್ಷನ್‌ನಲ್ಲಿರುವ ರೈಲ್ವೆ ಹಳಿಗಳ ಕೆಳಭಾಗದಲ್ಲಿ ಎರಡು ಪ್ರೀಕಾಸ್ಟ್‌ ಎಲಿಮೆಂಟ್‌ಗಳ ಅಳವಡಿಕೆ ಕಾರ್ಯ ನಡೆದಿದೆ.

ವಸ್ತುಸ್ಥಿತಿ: ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ ಸಚಿವ ಕೆ.ಜೆ.ಜಾರ್ಜ್‌ ಅವರು ಆಗಸ್ಟ್‌ ವೇಳೆಗೆ ಎರಡು ಪಥಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಭರವಸೆ ನೀಡಿದ್ದಾರೆ. ಆದರೆ, ಮಳೆಗಾಲ ಆರಂಭವಾದರೆ ಕಾಮಗಾರಿಯ ವೇಗ ಕಡಿಮೆಯಾಗುವ ಸಾಧ್ಯತೆಯಿದ್ದು, ಆಗಸ್ಟ್‌ ವೇಳೆಗೆ ಎರಡು ಪಥಗಳು ಸಾರ್ವಜನಿಕರಿಗೆ ಮುಕ್ತವಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ರೈಲ್ವೆ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ನಡೆಸಲಾಗುತ್ತಿದ್ದು, ರೈಲ್ವೆ ಹಳಿಗಳ ಕೆಳಭಾಗದಲ್ಲಿ 10 ಪ್ರೀಕಾಸ್ಟ್‌ ಎಲಿಮೆಂಟ್‌ಗಳನ್ನು ಅಳವಡಿಸಬೇಕಿದೆ. ಅದರ ಹಿನ್ನೆಲೆಯಲ್ಲಿ ಕಳೆದ ಮೂರು ವಾರಗಳಲ್ಲಿ ಎರಡು ಎಲಿಮೆಂಟ್‌ಗಳನ್ನು ಅಳವಡಿಕೆ ಮಾಡಲಾಗಿದ್ದು, ಹಂತ ಹಂತವಾಗಿ 10 ಎಲಿಮೆಂಟ್‌ಗಳ ಅಳವಡಿಕೆ ಕಾರ್ಯ ಮುಂದುವರಿಯಲಿದೆ.
-ರಮೇಶ್‌, ಮುಖ್ಯ ಎಂಜಿನಿಯರ್‌

1.ಮೊದಲ ಹಂತ ಸಂಪೂರ್ಣವಾಗಿ ವಾಣಿಜ್ಯ ಸಂಚಾರ ಆರಂಭಗೊಂಡ ಒಂದು ತಿಂಗಳಲ್ಲೇ ನಾಲ್ಕು ಲಕ್ಷ ಜನ ಸಂಚರಿಸಲಿದ್ದಾರೆ. 

2.ಮೆಟ್ರೋ ಮಾರ್ಗದುದ್ದಕ್ಕೂ ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೆ ನೂರು ಬಸ್‌ ಸಂಪರ್ಕ ಸೇವೆಗಳನ್ನು ಆರಂಭಿಸಲಿದೆ. 

3.ಮೆಟ್ರೋ ಮೊದಲ ಹಂತ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಇದಕ್ಕೆ ಪೂರಕವಾಗಿ ಬಿಎಂಟಿಸಿ ಸ್ಮಾರ್ಟ್‌ ಕಾಡ್‌ಗಳನ್ನು ಪರಿಚಯಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಒಂದೇ ಕಾರ್ಡ್‌ಅನ್ನು ಮೆಟ್ರೋ-ಬಸ್‌ಗಳ ಪ್ರಯಾಣಕ್ಕೆ ಬಳಸಬಹುದು. 

4.ಮೊದಲ ಹಂತದಲ್ಲಿ ಮೆಜೆಸ್ಟಿಕ್‌ ಅತಿದೊಡ್ಡ ನಿಲ್ದಾಣವಾಗಿದ್ದು, ಒಮ್ಮೆಲೆ 20 ಸಾವಿರ ಪ್ರಯಾಣಿಕರು ಇಲ್ಲಿ ಪ್ರವೇಶಿಸಬಹುದು. 

5.ಯೋಜನೆ ಪೂರ್ಣಗೊಂಡ ನಂತರ ವಿಪರೀತ ಜನದಟ್ಟಣೆ ಉಂಟಾಗಲಿದೆ. ಅದಕ್ಕಾಗಿ ಮೆಟ್ರೋ ರೈಲು ಸಂಚಾರದ ಅಂತರ 3 ನಿಮಿಷದಿಂದ ಎರಡೂವರೆ ನಿಮಿಷಕ್ಕೆ ತಗ್ಗಿಸುವ ಹಾಗೂ ರಾತ್ರಿ ಸೇವೆ ವಿಸ್ತರಿಸುವ ಆಲೋಚನೆ ಇದೆ. 

6.ಮೆಜೆಸ್ಟಿಕ್‌ನಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ರೈಲು ನಿಲ್ದಾಣ ಮತ್ತು ಮೆಟ್ರೋ ಒಂದೇ ಕಡೆ ಇದ್ದರೂ, ಪರಸ್ಪರ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಪ್ರಯಾಣಿಕರಿಗೆ ಪರದಾಟ ತಪ್ಪಿದ್ದಲ್ಲ. 

ಮಾಹಿತಿ: ವಿಜಯ್‌ಕುಮಾರ್‌ ಚಂದರಗಿ, ವೆಂ. ಸುನೀಲ್‌ಕುಮಾರ್‌
ಚಿತ್ರಗಳು: ಅಕ್ರಂ ಚೌಧರಿ

Advertisement

Udayavani is now on Telegram. Click here to join our channel and stay updated with the latest news.

Next