Advertisement

“ಮೆಟ್ರೋ ಬಿರುಕು’ಇಂದಿನದಲ್ಲ!

12:16 PM Dec 17, 2018 | |

“ನಮ್ಮ ಮೆಟ್ರೋ’ ರೈಲುಗಳು ಆಗಾಗ ಕೆಟ್ಟುನಿಂತು ಸುದ್ದಿಯಾಗಿವೆ. ಆದರೆ, ಈಗ ರೈಲು ಓಡುವ ಮಾರ್ಗದಲ್ಲೇ ದೋಷ ಕಾಣಿಸಿಕೊಂಡಿದೆ. ಕಾಮಗಾರಿ ನಡೆದ ಹತ್ತು ವರ್ಷಗಳ ಅಂತರದಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದು ಕಾಮಗಾರಿ ಗುಣಮಟ್ಟವನ್ನು ಪ್ರಶ್ನಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ನಿರ್ಮಾಣ ಹಂತದಲ್ಲೇ ಈ ದೋಷವಿದೆ ಎನ್ನಲಾಗಿದೆ. ಹಾಗಿದ್ದರೆ, ಇಷ್ಟು ವರ್ಷಗಳಾದರೂ ಬಿಎಂಆರ್‌ಸಿ ಕಣ್ಣಿಗೆ ಯಾಕೆ ಬೀಳಲಿಲ್ಲ? ಕಣ್ಣಿಗೆ ಬಿದ್ದಿದ್ದರೂ ಅದಕ್ಕೆ ತೇಪೆ ಹಚ್ಚುವ ಕೆಲಸ ನಡೆದಿದೆಯೇ? ನಿಗಮದಿಂದಲೇ ನಿರ್ವಹಣಾ ಲೋಪವಾಗಿದೆಯೇ? ಇಂತಹ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿರುವ “ಮೆಟ್ರೋ ಬಿರುಕಿ’ನ ಸುತ್ತ ಒಂದು ನೋಟ ಈ ಬಾರಿ ಸುದ್ದಿ ಸುತ್ತಾಟ…

Advertisement

ಬೆಂಗಳೂರು: ಟ್ರಿನಿಟಿ ನಿಲ್ದಾಣದ ಬಳಿಯ ಕಾಂಕ್ರೀಟ್‌ ಬೀಮ್‌ನಲ್ಲಿ ಕಂಡುಬಂದಿರುವ “ಹನಿ ಕಾಂಬ್‌’ (ಕಾಂಕ್ರೀಟ್‌ ಪದರ ಟೊಳ್ಳಾಗಿರುವುದು) ಏಕಾಏಕಿ ಈಗ ಉದ್ಭವಿಸಿರುವುದಲ್ಲ; ಈ ಮೊದಲೇ ಸಂಭವಿಸಿತ್ತು ಎಂಬುದು ತಡವಾಗಿ ಬೆಳಕಿಗೆಬಂದಿದೆ. ಈ ಮೂಲಕ “ನಮ್ಮ ಮೆಟ್ರೋ’ದಲ್ಲಿನ ನಿರ್ವಹಣಾ ಲೋಪಕ್ಕೆ ಕನ್ನಡಿ ಹಿಡಿದಿದೆ.

ಕಾಂಕ್ರೀಟ್‌ ಪದರದಲ್ಲಿ “ಹನಿ ಕಾಂಬ್‌’ ಪತ್ತೆ ಆಗಿರುವ ಜಾಗದಲ್ಲಿ ತೇಪೆ ಹಚ್ಚಿರುವುದು ಪರಿಶೀಲನೆ ವೇಳೆ ಸ್ಪಷ್ಟವಾಗಿ ಕಾಣುತ್ತದೆ. ಇನ್ನು ಸಾಮಾನ್ಯವಾಗಿ “ಹನಿ ಕಾಂಬ್‌’ ನಿರ್ಮಾಣದ ಹಂತದಲ್ಲೇ ಕಂಡುಬರುತ್ತದೆ. ಹಾಗಾಗಿ, ಮೆಟ್ರೋ ಟ್ರಿನಿಟಿ ವೃತ್ತದಲ್ಲಿ ಕೂಡ ನಿರ್ಮಾಣ ಹಂತದಲ್ಲಿ ಇರುವಾಗಲೇ ಕಾಂಕ್ರೀಟ್‌ ಹಾಕುವ ಕಾರ್ಯ ಸಮರ್ಪಕವಾಗಿ ಆಗಿಲ್ಲ. ಇದನ್ನು ಗುಣಮಟ್ಟ ದೃಢೀಕರಣ ತಂಡ (Quality assurance team)ವೂ ನೋಡಿಲ್ಲ. ವರ್ಷಕ್ಕೊಮ್ಮೆ ಪರಿಶೀಲನೆ ಮಾಡುವ ಸಿವಿಲ್‌ ವಿಭಾಗವು ಕಳೆದ ಎಂಟು ವರ್ಷಗಳಿಂದ ಇತ್ತ ಗಮನಹರಿಸಿಲ್ಲ!

ಬಿಎಂಆರ್‌ಸಿಯಲ್ಲಿ ಮುಖ್ಯವಾಗಿ ಸಿವಿಲ್‌ ಮತ್ತು ಸಿಸ್ಟ್‌ಂ ಎಂಬ ಎರಡು ವಿಭಾಗಗಳಿವೆ. ಅವುಗಳಲ್ಲಿ ಸಿಗ್ನಲಿಂಗ್‌, ಟ್ರ್ಯಾಕಿಂಗ್‌, ಎಲೆಕ್ಟ್ರಿಕ್‌, ಟ್ರ್ಯಾಕ್ಷನ್‌, ಸಿವಿಲ್‌ ಸೇರಿದಂತೆ 20ಕ್ಕೂ ಅಧಿಕ ಉಪ ವಿಭಾಗಗಳಿವೆ. ಅವೆಲ್ಲವೂ ಪ್ರತಿದಿನ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ತ್ತೈಮಾಸಿಕ ಹಾಗೂ ವಾರ್ಷಿಕ ಹೀಗೆ ತಮಗೆ ನೀಡಿದ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತವೆ.

ವಹಿಸಿದ ಕೆಲಸವನ್ನು ಅವು ವ್ಯವಸ್ಥಿತವಾಗಿ ಮಾಡಿದ್ದರೆ, ಈ ದೋಷ ಪತ್ತೆಗೆ ಇಷ್ಟು ವರ್ಷ ಹಿಡಿಯುತ್ತಿತ್ತಾ? ಅಷ್ಟಕ್ಕೂ ಇದನ್ನು ಪತ್ತೆಹಚ್ಚಿದ್ದು ಸಿವಿಲ್‌ ವಿಭಾಗ ಅಲ್ಲ. ನಿತ್ಯ ಪೆಟ್ರೋಲಿಂಗ್‌ ಮಾಡುವ ತಂಡಕ್ಕೆ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಿದ್ದು, ಮಾಹಿತಿ ರವಾನಿಸಿದೆ. ಇದೆಲ್ಲವೂ ಬಿಎಂಆರ್‌ಸಿ ನಿರ್ವಹಣಾ ಲೋಪವನ್ನೇ ಎತ್ತಿತೋರಿಸುತ್ತದೆ. ಇದೇ ಕಾರಣಕ್ಕೆ ಅದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

Advertisement

ನಿರ್ಮಾಣ ಹಂತದಲ್ಲೇ ಸರಿಪಡಿಸಬಹುದಿತ್ತು: ಮೆಟ್ರೋ ಸೇರಿದಂತೆ ಯಾವೊಂದು ಸ್ಟ್ರಕ್ಚರ್‌ ನಿರ್ಮಾಣದ ವೇಳೆ ಸೆಂಟ್ರಿಂಗ್‌ ಹಾಕುತ್ತಾರೆ. ಅದನ್ನು ತೆಗೆದ ತಕ್ಷಣ ಕಾಂಕ್ರೀಟ್‌ ಸರಿಯಾಗಿ ಆಗಿಲ್ಲದಿರುವ ಭಾಗ ಅಥವಾ ಜಲ್ಲಿಕಲ್ಲು ಇರುವುದು ಕಣ್ಣಿಗೆ ಕಾಣುತ್ತದೆ. ಹೀಗೆ ಕಾಣುವುದೇ ಹನಿ ಕಾಂಬ್‌. ಆಗ ಅದನ್ನು ಪ್ಲಾಸ್ಟರ್‌ ಮಾಡಿ ಮುಚ್ಚಲಾಗುತ್ತದೆ.

ಮೆಟ್ರೋ ವಯಾಡಕ್ಟ್ ಕೆಳಗಿನ ಬೀಮ್‌ನಲ್ಲಿ ಕಂಡುಬಂದಿರುವುದೂ ಅಂತಹದ್ದೇ ಆಗಿರುವ ಸಾಧ್ಯತೆ ಇದೆ. ಆರಂಭದಲ್ಲೇ ಇದನ್ನು ಗುತ್ತಿಗೆದಾರರು ಹೈಪ್ರಷರ್‌ನಲ್ಲಿ ಸಿಮೆಂಟ್‌ ತುಂಬಿ ಗಟ್ಟಿಗೊಳಿಸಬೇಕಾಗಿತ್ತು. ಕಣ್ತಪ್ಪಿನಿಂದ ಹಾಗೇ ಉಳಿದಿರಬಹುದು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಹಾಗೂ ತಜ್ಞ ರಾಚನಿಕ (ಸ್ಟ್ರಕ್ಚರಲ್‌) ಇಂಜಿನಿಯರ್‌ ಪ್ರೊ. ಜೆ.ಎಂ.ಚಂದ್ರಕಿಶನ್‌ ಅಭಿಪ್ರಾಯಪಡುತ್ತಾರೆ.

ಕಳಪೆ ಸಿವಿಲ್‌ ಇಂಜಿನಿಯರಿಂಗ್‌ ಕಾಮಗಾರಿ ಇದಾಗಿದೆ. ನಿರ್ಮಾಣ ಹಂತದಲ್ಲಿರುವಾಗಲೇ ಇದು ಆಗಿದ್ದು, ಹಾಗೆಯೇ ಅದರ ಮೇಲೆ ತೇಪೆ ಹಾಕಿ ಮುಚ್ಚಲಾಗಿದೆ. ನಂತರದ ದಿನಗಳಲ್ಲಿ ಆ ತೇಪೆ ಕಿತ್ತುಹೋಗಿ, ಮತ್ತೆ ಹನಿ ಕಾಂಬ್‌ ಹೊರಬಂದಿದೆ. ಆಗ ಮೇಲ್ವಿಚಾರಣೆ ಮಾಡುತ್ತಿದ್ದ ಎಂಜಿನಿಯರ್‌ ಇದನ್ನು ಗುರುತಿಸಬೇಕಾಗಿತ್ತು. ಈ ಕೆಲಸ ಸರಿಯಾಗಿ ಆಗಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಮೆಟ್ರೋ ಎಂಜಿನಿಯರಿಂಗ್‌ ತಜ್ಞರೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು. 

ಹಾಗೇಬಿಟ್ರೆ ಏನಾಗುತ್ತೆ?: ಸಾಮಾನ್ಯ ಕಟ್ಟಡಗಳಲ್ಲಿ ಹನಿ ಕಾಂಬ್‌ ಹಾಗೇಬಿಟ್ಟರೂ ಸಮಸ್ಯೆ ಇಲ್ಲ. ಆದರೆ, ಮೆಟ್ರೋದಂತಹ ಮೂಲಸೌಕರ್ಯಗಳಲ್ಲಿ ಕಾಣಿಸಿಕೊಂಡಾಗ ಅಪಾಯಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮೆಟ್ರೋ ವಯಾಡಕ್ಟ್ ಕೆಳಗಿರುವ ಬೀಮ್‌, ಒಳಗಡೆ ಟೊಳ್ಳಾಗಿರುತ್ತದೆ.

ಹನಿ ಕಾಂಬ್‌ ಮೂಲಕ ಅದರೊಳಗೆ ಸೇರಿಕೊಳ್ಳುವ ನೀರು ಮತ್ತು ಗಾಳಿ ಕಬ್ಬಿಣದ ಸರಳುಗಳ ಮೇಲೆ ಕುಳಿತುಕೊಳ್ಳುತ್ತದೆ. ಆಗ ಅದು ತುಕ್ಕುಹಿಡಿದು, ಇಡೀ ಬೀಮ್‌ ಹಾಳುಮಾಡುತ್ತದೆ. ಇದರಿಂದ ಕುಸಿದು ಬೇರಿಂಗ್‌ ಮೇಲೆ ಭಾರ ಬೀಳುತ್ತದೆ. ನಂತರ ಬೇರಿಂಗ್‌ ಜಖಂಗೊಂಡರೆ, ಸ್ಥಾನಪಲ್ಲಟವಾಗುವ ಸಾಧ್ಯತೆಯೂ ಇರುತ್ತದೆ. ಇದು ಇನ್ನೂ ಡೇಂಜರ್‌ ಎಂದು ಸ್ಟ್ರಕ್ಚರಲ್‌ ಎಂಜಿನಿಯರ್‌ಗಳು ತಿಳಿಸುತ್ತಾರೆ. 

ಯಾವ ವಿಧಾನ ಸೂಕ್ತ?: ಸಾಮಾನ್ಯವಾಗಿ ಹೀಗೆ ಕಾಂಕ್ರೀಟ್‌ಗಳಲ್ಲಿ ಕಂಡುಬರುವ ರಂಧ್ರಗಳನ್ನು ಮುಚ್ಚಲು ಪಾಲಿಯೂರಿಥೇನ್‌ (Polyurethane) ಹಾಗೂ ಎಪಾಕ್ಸಿ (epoxy) ಎಂಬ ಎರಡು ವಿಧಾನಗಳಿವೆ. ಇವೆರಡೂ ಅಂಟು ಪ್ರಕಾರದ ಕಾರ್ಬನ್‌ ಕಾಂಪೋನೆಂಟ್‌ಗಳು. ಈಗಾಗಲೇ ಸುರಂಗದಲ್ಲಿ ಜಿನುಗುವ ನೀರನ್ನು ತಡೆಯಲು ಪಾಲಿಯೂರಿಥೇನ್‌ ಬಳಸಲಾಗುತ್ತಿದೆ. 

ಎಪಾಕ್ಸಿ ಎರಡು ರಾಸಾಯನಿಕ ಅಂಶಗಳನ್ನು ಒಳಗೊಂಡಿರುತ್ತದೆ. ಅದನ್ನು ಪ್ರತ್ಯೇಕವಾಗಿ ಪೈಪ್‌ಗ್ಳ ಮೂಲಕ ಟೊಳ್ಳಿರುವ ಜಾಗಗಳಿಗೆ ಪಂಪ್‌ ಮಾಡಿ ತುಂಬಲಾಗುತ್ತದೆ. ಒಳಗಡೆ ಅದು ತಾನಾಗಿಯೇ ಕೂಡಿಕೊಂಡು ಗಟ್ಟಿಯಾಗುತ್ತದೆ. ಎರಡನೇ ವಿಧಾನವೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಅವಾಸ್ತವಿಕ ಟಾರ್ಗೆಟ್‌ ಕೂಡ ಕಾರಣ?: ಮೆಟ್ರೋ ಕಾಮಗಾರಿಯಲ್ಲಿನ ದೋಷಕ್ಕೆ ನಿಗದಿತ ಅವಧಿಯಲ್ಲಿ ಮಾಡಿಮುಗಿಸುವ ಧಾವಂತವೂ ಕಾರಣವಾಗಿರಬಹುದು. ನಮ್ಮಲ್ಲಿ ಯೋಜನೆ ಅನುಮೋದನೆಗೆ ಹೆಚ್ಚು ಸಮಯ ಹಿಡಿಯುತ್ತದೆ (ಇದಕ್ಕೆ ಸಾಮಾನ್ಯವಾಗಿ ಡೆಡ್‌ಲೈನ್‌ ಇರುವುದೇ ಇಲ್ಲ!). ಆದರೆ, ಅದನ್ನು ಕಾರ್ಯರೂಪಕ್ಕೆ ಕಡಿಮೆ ಸಮಯ ನೀಡಲಾಗುತ್ತದೆ.

ಉದಾಹರಣೆಗೆ ಎರಡನೇ ಹಂತದ ಮೆಟ್ರೋ 2014ರಲ್ಲೇ ಅನುಮೋದನೆಗೊಂಡಿದ್ದರೂ, ಟೆಂಡರ್‌ ಪ್ರಕ್ರಿಯೆ ಇನ್ನೂ ನಡೆದಿದೆ. ಈ ಮಧ್ಯೆ ಮತ್ತೂಂದೆಡೆ ಆ ಕಾಮಗಾರಿ ಪೂರ್ಣಗೊಳಿಸಬೇಕಾದ ಡೆಡ್‌ಲೈನ್‌ ಐದು ವರ್ಷ ಮುಗಿಯುತ್ತಿದೆ. ಹೀಗಿರುವಾಗ, ಎಂಜಿನಿಯರ್‌ಗಳ ಮೇಲೆ ಒತ್ತಡ ಬೀಳುತ್ತದೆ. ಅದು ಕಾಮಗಾರಿ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಬಿಎಂಆರ್‌ಸಿ ಎಂಜಿನಿಯರ್‌ಗಳು. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಯುವ ಎಂಜಿನಿಯರ್‌ಗಳಲ್ಲಿ ಬದ್ಧತೆ ಕೊರತೆಯನ್ನೂ ಕಾಣಬಹುದು. ತರಾತುರಿಯಲ್ಲಿ ಮಾಡಿಮುಗಿಸುವ ತರಾತುರಿ ಹೆಚ್ಚಿದೆ. 

ದಿಕ್ಕು ತಪ್ಪಿಸುವ ಯತ್ನ?: ಅಷ್ಟೇ ಅಲ್ಲ, ವಿವಿಧ ವಿಭಾಗಗಳಲ್ಲಿ ತಮಗೆ ಬೇಕಾದವರಿಗೆ ಅನನುಭವಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ನಿಯಮಬಾಹಿರವಾಗಿಯೇ ಈ ನೇಮಕಾತಿ ನಡೆದಿದೆ. ಜತೆಗೆ ಮೆಟ್ರೋದಲ್ಲಿ ಕಾರ್ಯನಿರ್ವಹಿಸಿದ ಅನುಭವ ಇಲ್ಲದವರು ನಿಗಮದ ಆಯಕಟ್ಟಿನ ಜಾಗಗಳಲ್ಲಿ ಕುಳಿತಿದ್ದಾರೆ.

ಅವರ್ಯಾರಿಗೂ ಇಂತಹ ಒತ್ತಡದ ಪರಿಸ್ಥಿತಿಗಳನ್ನು ಎದುರಿಸಿ ಗೊತ್ತೇ ಇಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಆರೋಪಿಸುತ್ತಾರೆ. ಹನಿ ಕಾಂಬ್‌ ಎಂದು ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ವಾಸ್ತವವಾಗಿ ಬೇರಿಂಗ್‌ ಹಾಳಾಗಿರುವ ಸಾಧ್ಯತೆ ಇದೆ. ಅದೇನೇ ಇರಲಿ, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದೂ ಅವರು ಒತ್ತಾಯಿಸುತ್ತಾರೆ. 

ಹೊರಗಷ್ಟೇ ಅಲ್ಲ; ಒಳಗೂ ಇವೆ ಸಮಸ್ಯೆ: ಮೆಟ್ರೋ ಹೊರಗಡೆ ಒಂದು ರೀತಿಯ ಸಮಸ್ಯೆಯಾದರೆ, ಒಳಗಡೆ ಕೂಡ ಗೊಂದಲಗಳ ಗೂಡಾಗಿಯೇ ಇದೆ. ಯೋಜನೆ ಪೂರ್ಣಗೊಂಡು ಒಂದೂವರೆ ವರ್ಷ ಕಳೆದರೂ ಮೂಲಸೌಕರ್ಯಗಳ ಕೊರತೆಯಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅವುಗಳ ಪೈಕಿ “ಸುದ್ದಿ ಸುತ್ತಾಟ’ದಲ್ಲಿ ಕಂಡುಬಂದ ಹಲವು ಅಂಶಗಳು ಇಲ್ಲಿವೆ.
 
ಫೀಡರ್‌ ಬಸ್‌ ಸೌಲಭ್ಯವಿಲ್ಲ: ಮೆಟ್ರೋ ನಿಲ್ದಾಣಗಳಿಂದ ಹೊರಬಂದರೆ ಸಮರ್ಪಕ ಬಸ್‌ ಸೌಲಭ್ಯಗಳಿಲ್ಲ. ಈ ಹಿಂದೆ ಮೆಟ್ರೋ ಸಂಪರ್ಕ ಸೇವೆಗೆ 180 ಬಸ್‌ಗಳನ್ನು ನಿಯೋಜಿಸಲಾಗಿತ್ತು. ಆದರೆ, ಈ ಬಸ್‌ಗಳಿಂದ ನಿರೀಕ್ಷಿತ ಆದಾಯ ಸಿಗದಿದ್ದರಿಂದ ಸೇವೆಗೆ ಕತ್ತರಿ ಹಾಕಲಾಗಿದೆ. ಮಲ್ಲೇಶ್ವರ, ನ್ಯಾಷನಲ್‌ ಕಾಲೇಜು, ಜಯನರ ಭಾಗಗಳಲ್ಲಿ ಮೆಟ್ರೋ ನಿಲ್ದಾಣಗಳಿಂದ ಬಿಎಂಟಿಸಿ ಬಸ್‌ ತಂಗುದಾಣ ಕಿ.ಮೀ. ದೂರದಲ್ಲಿದೆ.

ಇದರಿಂದಾಗಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ಬಳಸಲಾರಂಭಿಸಿದ ಮೇಲೆ ಬಿಎಂಆರ್‌ಸಿಎಲ್‌ ಈ ಹಿಂದೆ ಒದಗಿಸುತ್ತಿದ್ದ ಕ್ಯಾಬ್‌ ಸೌಲಭ್ಯ ಸ್ಥಗಿತಗೊಳಿಸಿತು. 

ಕಾರ್ಡ್‌ ಸಮಸ್ಯೆ ಇನ್ನೂ ಬಗೆಹರಿದಿಲ್ಲ: ಬಿಎಂಆರ್‌ಸಿಎಲ್‌ ಟೋಕನ್‌ ಬದಲು ಸ್ಮಾರ್ಟ್‌ ಕಾರ್ಡ್‌ ಬಳಸಿ ಎಂದು ಉತ್ತೇಜಿಸುತ್ತಿದೆ. ಆದರೆ, ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ತೆಗೆದುಕೊಂಡ ಪ್ರಯಾಣಿಕರು ರಿಚಾರ್ಜ್‌ ಮಾಡಲು ವಿವಿಧ ಸಮಸ್ಯೆ ಎದುರಿಸುತ್ತಿದ್ದಾರೆ. ನಿಲ್ದಾಣಗಳಲ್ಲಿನ ಕಾರ್ಡ್‌ ಸ್ವೆ„ಪಿಂಗ್‌ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ. ಮೆಜೆಸ್ಟಿಕ್‌ ನಿಲ್ದಾಣದ ಗ್ರಾಹಕ ಸೇವಾ ಕೇಂದ್ರ ಹೊರತುಪಡಿಸಿದರೆ, ಬೇರೆ ಯಾವ ನಿಲ್ದಾಣಗಲ್ಲೂ ಸ್ವೆ„ಪಿಂಗ್‌ ಯಂತ್ರಗಳು ಡೆಬಿಡ್‌ ಕಾರ್ಡ್‌, ರೂಪೇ ಕಾರ್ಡ್‌ ಸ್ವೀಕರಿಸುತ್ತಿಲ್ಲ. ಜತೆಗೆ ಎಲ್ಲಾ ನಿಲ್ದಾಣಗಳಲ್ಲೂ ಎಟಿಎಂ ಸೌಲಭ್ಯವಿಲ್ಲ ಎನ್ನುತ್ತಾರೆ ನಾಗಸಂದ್ರದ ನಿವಾಸಿ ಯೋಗೇಶ್‌. 

ವೇಳಾಪಟ್ಟಿ ಇಲ್ಲ: ಮೆಟ್ರೋ ಸೇವೆ ನಿತ್ಯ ಬೆಳಿಗ್ಗೆ ಯಾವಾಗ ಶುರುವಾಗುತ್ತದೆ ಮತ್ತು ಯಾವಾಗ ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ ಈಗಲೂ ಸ್ಪಷ್ಟ ಮಾಹಿತಿ ಫ‌ಲಕಗಳೇ ನಿಲ್ದಾಣಗಳಲ್ಲಿಲ್ಲ. ಇದಕ್ಕಾಗಿ ವೆಬ್‌ಸೈಟ್‌ ವೀಕ್ಷಿಸಿ ಎನ್ನುತ್ತದೆ ಬಿಎಂಆರ್‌ಸಿ. ಇದರಿಂದ ಬೆಳಗಿನ ಜಾವ ಹಾಗೂ ರಾತ್ರಿ ತಡವಾದ ಸಮಯದಲ್ಲಿ ಮೆಟ್ರೋ ಅವಲಂಬನೆಗೆ ಹಿಂದೇಟು ಹಾಕುತ್ತಾರೆ. 

ಇದ್ದರೂ ಇಲ್ಲದಂತಿವೆ ಶೌಚಾಲಯಗಳು: ಎಲ್ಲ 40 ಮೆಟ್ರೋ ನಿಲ್ದಾಣಗಳಲ್ಲಿಯೂ ಶೌಚಾಲಯ ಸೌಲಭ್ಯವಿದೆ. ಆದರೆ, ಯಾವ ಭಾಗದಲ್ಲಿದೆ ಎಂಬ ಮಾಹಿತಿ ಫ‌ಲಕಗಳಿಲ್ಲ. ಶೌಚಾಲಯವನ್ನು ಕಷ್ಟಪಟ್ಟು ಪತ್ತೆ ಹಚ್ಚಬೇಕು. ಮೆಜೆಸ್ಟಿಕ್‌ನಲ್ಲಿ ಒಂದು ಪ್ಲಾಟ್‌ಫಾರಂನಲ್ಲಿ ಮಾತ್ರ ಇದ್ದು, ಉಳಿದ ಪ್ಲಾಟ್‌ಫಾರಂಗೆ ಬರುವ ಪ್ರಯಾಣಿಕರಿಗೆ ಈ ಸೌಲಭ್ಯ ಅಪರೂಪ. ಇನ್ನು ಮಾಗಡಿ ರಸ್ತೆ ನಿಲ್ದಾಣದಲ್ಲಿ ಶೌಚಾಲಯ ಬಳಕೆಗೆ ಟೋಕನ್‌ ಅಡ ಇಡಬೇಕಾಗುತ್ತದೆ! 

ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲೂ ಟಿಕೆಟ್‌ ಕೌಂಟರ್‌ ಬಳಿ ಮೂಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರು ನೀರಿಗಾಗಿ ಹುಡುಕಾಟ ನಡೆಸುತ್ತಾರೆ. ಇದರ ಬದಲು ಎರಡೂ ಬದಿ ಪ್ಲಾಟ್‌ಫಾರಂಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂಬುದು ಪ್ರಯಾಣಿಕರ ಒತ್ತಾಯ.

ಒಂದೇ ಬದಿ ಎಸ್ಕಲೇಟರ್‌: ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ಟಿಲು ಏರಲು ಮಾತ್ರ ಎಸ್ಕಲೇಟರ್‌ ಸೌಲಭ್ಯವಿದ್ದು, ಇಳಿಯಲು ಎಸ್ಕಲೇಟರ್‌ ಇಲ್ಲದೆ ವೃದ್ಧರು, ರೋಗಿಗಳು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಕೆಲವು ನಿಲ್ದಾಣಗಳಲ್ಲಿ ವಿಕಲಚೇತರನ್ನು ಪ್ಲಾಟ್‌ಫಾರಂಗೆ ಕೊಂಡೊಯ್ಯುವ ವ್ಯವಸ್ಥೆ ಇದೆ. ಕೆಲವು ಕಡೆ ಈ ಸೇವೆಗೆ ಸಾಕಷ್ಟು ಹೊತ್ತು ಕಾಯಬೇಕು. ಉಳಿದಂತೆ ಮೆಟ್ಟಿಲು ಇಳಿಯಲು ವಯಸ್ಸಾದವರು ಪೇಚಾಡುವ ದೃಶ್ಯ ಸರ್ವೇಸಾಮಾನ್ಯವಾಗಿದೆ.

ಮೆಜೆಸ್ಟಿಕ್‌ ಗೊಂದಲದ ಗೂಡು!: ಹಸಿರು ಮತ್ತು ನೇರಳೆ ಎರಡೂ ಮಾರ್ಗಗಳನ್ನು ಸಂದಿಸುವ ಜಂಕ್ಷನ್‌ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣ. ಸೂಕ್ತ ಮಾರ್ಗ ಸೂಚಿಸುವ ನಾಮಫ‌ಲಕಗಳು, ಸಹಾಯಕ ಸಿಬ್ಬಂದಿ ಕೊರತೆಯಂತಹ ಕಾರಣಗಳಿಂದ ಪ್ರಯಾಣಿಕರಿಗೆ ವರ್ಷ ಕಳೆದರೂ ಗೊಂದಲದ ಗೂಡಾಗಿಯೇ ಉಳಿದಿದೆ. ನಿಲ್ದಾಣಕ್ಕೆ ಬಂದಿಳಿಯುವವರು ಈಗಲೂ ನಿರ್ಗಮನ ದ್ವಾರ, ಮಾರ್ಗ ಬದಲಾವಣೆಗೆ ತಡಕಾಡಬೇಕು. ಜತೆಗೆ ಉಳಿದ ನಿಲ್ದಾಣಗಳ ಚಿತ್ರಣವೂ ಇದಕ್ಕಿಂತ ಭಿನ್ನವಾಗಿಲ್ಲ. 

ಪತ್ತೆಯಾದ ದೋಷವನ್ನು ಸರಿಪಡಿಸುವುದು ನಮ್ಮ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಹಲವು ತಜ್ಞರಿಂದ ಮಾಹಿತಿ ಪಡೆದು, ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಾದ ನಂತರ ಲೋಪಕ್ಕೆ ಕಾರಣರಾದವರ ವಿರುದ್ಧ ಕ್ರಮದ ವಿಚಾರ.
-ಅಜಯ್‌ ಸೇಠ್, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

* ವಿಜಯಕುಮಾರ್‌ ಚಂದರಗಿ/ಜಯಪ್ರಕಾಶ್‌ ಬಿರಾದಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next