Advertisement

ಉದ್ಯೋಗದಲ್ಲಿ ಮಾನಸಿಕ ಆರೋಗ್ಯ

06:00 AM Nov 18, 2018 | |

ಮನಸ್ಸಿಗೆ ಹಿತಕರವಾದ ವಾತಾವರಣ. ಎಲ್ಲ  ರೀತಿಯ ಕೆಲಸಗಳಿಗೂ/ವ್ಯಾಪಾರಿಗಳಿಗೂ/ಉದ್ಯಮಗಳಿಗೂ ಹಾಗೂ ಎಲ್ಲ ವರ್ಗಗಳ‌ ಕೆಲಸದವರಿಗೂ ಅತ್ಯಗತ್ಯ. ನಮಗೆಲ್ಲಾ  ತಿಳಿದಿರುವ ಹಾಗೆ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಾನಸಿಕ ಆರೋಗ್ಯ ಹದಗೆಟ್ಟರೆ, ದೈಹಿಕ ಆರೋಗ್ಯ ಕೂಡ ಹದಗೆಡುತ್ತದೆ ಅಥವಾ ಕೆಲಸದ ಸಾಮರ್ಥ್ಯ ಕಡಿಮೆಯಾಗುತ್ತದೆ. ಕೆಲವೊಮ್ಮೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ಕೆಲಸದಲ್ಲಿರಬಹುದು ಅಥವಾ ಕೆಲಸದಲ್ಲಿರುವಾಗಲೇ ಮಾನಸಿಕ ಆರೋಗ್ಯ ಹದಗೆಡಬಹುದು. ಹಾಗಾಗಿ ಮಾನಸಿಕ ಆರೋಗ್ಯ ಕಾಪಾಡುವುದಲ್ಲದೆ, ಯಾವುದೇ ಮಾನಸಿಕ ಸಮಸ್ಯೆ ಉಲ್ಬಣವಾಗದಂತೆ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ. ಕೆಲಸದಲ್ಲಿರುವ ಹೆಚ್ಚಿನ ವ್ಯಕ್ತಿಗಳು ತಿಳಿಸುವ ಸಮಸ್ಯೆಗಳೆಂದರೆ; ಕೆಲಸದ ಒತ್ತಡ ಮತ್ತು ಬರ್ನ್ ಔಟ್‌ (ಕನ್ನಡದಲ್ಲಿ ಇದರ ಸಮಾನಾರ್ಥಕ ಪದ ಸಿಗುವುದು ಕಷ್ಟ. ಅದರೆ ಇದನ್ನು ಕೆಲಸದಲ್ಲಿ  ದೈಹಿಕವಾಗಿ ಹಾಗೂ ಮಾನಸಿಕವಾಗಿ ದಣಿವಿನ ಭಾವನೆಯೆಂದು ಅರ್ಥಮಾಡಿಕೊಳ್ಳಬಹುದು).

Advertisement

ಬರ್ನ್ ಔಟ್‌ 
ಇದನ್ನು ಹೆಚ್ಚಿನ ಸಂದರ್ಭಗಳಲ್ಲಿ  ವಿವಿಧ ರೀತಿಯಲ್ಲಿ ಅರ್ಥಮಾಡಿಕೊಳ್ಳಲಾಗಿದೆ. ವ್ಯಕ್ತಿಯ ಕೆಲಸದ ಸಾಮರ್ಥ್ಯ ಕಡಿಮೆಯಾಗುವುದು. ವೈಯಕ್ತಿಕ ಸಾಧನೆಗಳು ಕಡಿಮೆಯಾಗುವುದು. ಭಾವನೆಗಳೇ ಇರದ ಹಾಗೆ ನಿರ್ಲಿಪ್ತನಾಗಿರುವುದು. ತನ್ನ ಕಾರ್ಯದಕ್ಷತೆ ಕಡಿಮೆಯೆನಿಸುವುದು.

ಕೆಲಸದ ಒತ್ತಡ
ಎಲ್ಲರಿಗೂ ಕೆಲಸದೊತ್ತಡ ಒಂದು ದೊಡ್ಡ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸವಾಲಾಗಿದೆ. ಹೆಚ್ಚಿನ ಅಧ್ಯಯನಗಳಲ್ಲಿ ಕಂಡು ಬಂದಿರುವ ಅಂಶವೆಂದರೆ, ಕೆಲಸದೊತ್ತಡ ಹೆಚ್ಚಿನ ಕೆಲಸದವರ ಮುಖ್ಯವಾಗಿರುವ ಚಿಂತೆಯ ವಿಷಯ. ಇದರಿಂದಾಗಿ, ಕೆಲಸದಲ್ಲಿನ ಸಾಮರ್ಥ್ಯ ಕಡಿಮೆಯಾಗುವುದಲ್ಲದೇ ಕೆಲಸದಿಂದ ಗೈರು ಹಾಜರಾಗುವ ಸಾಧ್ಯತೆ ಹೆಚ್ಚಿಗೆಯಾಗುತ್ತದೆ.

ಹಾಗಾದರೆ ಏನು ಮಾಡಬಹುದು? 
ವ್ಯಕ್ತಿಗಳು/ಉದ್ಯೋಗಿಗಳು ಕೈಗೊಳ್ಳಬಹುದಾದ ಕ್ರಮಗಳು
– ತನ್ನ ಆರೋಗ್ಯದ ಕಾಳಜಿ ವಹಿಸುವುದು, ಮುಂಜಾಗ್ರತೆಯಿಂದಿರುವುದು.
– ಸಂಯಮದಿಂದಿರುವುದು, ತನ್ನ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು.
– ತನ್ನನ್ನು ತಾನು ಹತೋಟಿಯಲ್ಲಿಟ್ಟುಕೊಳ್ಳುವುದು.
– ಆರೋಗ್ಯದ ವಿಷಯಗಳ ಬಗ್ಗೆ /ಕಾಯಿಲೆಗಳ ಬಗ್ಗೆ ಅಗತ್ಯ ಮಾಹಿತಿ ಇಟ್ಟುಕೊಳ್ಳುವುದು.
– ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡುವುದು/ಆಟವಾಡುವುದು/ಅಥವಾ ಮನಸ್ಸಿಗೆ ಹಿತವೆನಿಸುವ ವಿರಾಮದ ಚಟುವಟಿಕೆಗಳಲ್ಲಿ ತೊಡಗುವುದು.
– ತನಗೆ ಲಭ್ಯವಿರುವ ವಿವಿಧ ಸವಲತ್ತುಗಳನ್ನು ಬಳಸಿಕೊಳ್ಳುವುದು.

ತನ್ನ ಸಾಮಾಜಿಕ ಸಂಪರ್ಕದಲ್ಲಿರುವವರ ಜತೆಗೆ ನಿಯಮಿತವಾಗಿ ಬೆರೆಯುವುದು ಮತ್ತು ಅವರೊಟ್ಟಿಗಿನ ಸಂಬಂಧಗಳನ್ನು ಕಾಯ್ದುಕೊಳ್ಳುವುದು ಮತ್ತು ವೃದ್ಧಿಸುವುದು.
– ಕೌಟುಂಬಿಕ ಮತ್ತು ವೃತ್ತಿ ಜೀವನದ ಸಮತೋಲನವನ್ನು ಕಾಪಾಡಿಕೊಂಡಿರುವುದು.
– ಅಗತ್ಯವಿದ್ದಾಗ ಸಹಾಯ ಪಡೆಯುವುದು.

Advertisement

ಈ ಕೆಲಸದ ಒತ್ತಡ ಮತ್ತು ಬರ್ನ್ ಔಟ್‌  ಕಂಡು ಬರಲು ಕೆಲವು ಪೋಷಕ ವಿಷಯಗಳೆಂದರೆ
– ಜಟಿಲವಾದ ಮತ್ತು ಅತಿಯಾದ ಕೆಲಸದ ಹೊರೆ
– ಸಮಯದ ಒತ್ತಡ: ನಿರ್ದಿಷ್ಟ ಸಮಯದಲ್ಲಿಯೇ ಸೂಚಿಸಿದ ಕೆಲಸ ಮುಗಿಸಬೇಕು.
– ಕೆಲಸದಲ್ಲಿನ ಭಿನ್ನಾಭಿಪ್ರಾಯಗಳು: ಸಹೋದ್ಯೋಗಿಗಳ ಜತೆಗೆ ಹೊಂದಾಣಿಕೆಯಿರದಿರುವುದು.
– ಸಮಸ್ಯೆಯನ್ನುಂಟು ಮಾಡುವ ಮುಂದಾಳತ್ವ
– ಬೆದರಿಸುವುದು, ತಂಟೆ ಕೊಡುವುದು.
– ಸ್ವಾಯತ್ತತೆ/ ಸ್ವತಂತ್ರತೆ ಇರದೆ ಇರುವುದು
– ಯಾವುದೇ ನಿಯಂತ್ರಣವಿರದಿರುವುದು
– ಇತರ ಕೆಲಸದ ಅವಕಾಶಗಳು ಕಡಿಮೆಯಿರುವುದು
– ಕೆಲಸದಿಂದ ತೃಪ್ತಿಯಿರದಿರುವುದು

ಸಂಘ-ಸಂಸ್ಥೆಗಳು/ಕೆಲಸ ನೀಡುವವರು/ಮಾನವ ಸಂಪನ್ಮೂಲ ತಂಡದವರು ಕೈಗೊಳ್ಳಬಹುದಾದ ಕ್ರಮಗಳು
– ಕೆಲಸ ಮಾಡಿದಾಗ ಉದ್ಯೋಗಿಗಳನ್ನು ಶ್ಲಾ ಸುವುದು/ಮೆಚ್ಚುಗೆ ವ್ಯಕ್ತಪಡಿಸುವುದು.
– ಪೂರಕ ವಾತಾವರಣ ನಿರ್ಮಿಸುವುದು.
– ಬರ್ನ್ ಔಟ್‌ ಲಕ್ಷಣಗಳನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸುವುದು.
– ಸಂಸ್ಥೆಯ ಸಂಸ್ಕೃತಿಯು, ಮೌಲ್ಯಾಧಾರಿತ ಮತ್ತು ವಿಶ್ವಾಸಾರ್ಹಕವೆಂದು ಬಿಂಬಿಸುವುದು.
– ಆವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ  ಕೆಲಸದ ಅವಕಾಶಗಳನ್ನು ಕಲ್ಪಿಸುವುದು.
– ಕುಟುಂಬದವರ ಜತೆ ಸಮಯ ಕಳೆಯಲು ಸಾಕಷ್ಟು ಸಮಯಾವಕಾಶ ಮಾಡಿಕೊಡುವುದು.
– ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯ ಹಣಕಾಸಿನ ಹಾಗೂ ಭಾವನಾತ್ಮಕ ಬೆಂಬಲ ನೀಡುವುದು.
– ಬೆದರಿಸುವುದನ್ನು, ತಂಟೆ ನೀಡುವುದನ್ನು ಮಾಡದಿರುವುದು ಹಾಗೂ ಈ ರೀತಿ ಮಾಡುವ ಸಹೋದ್ಯೋಗಿಗಳಿಂದ ಉದ್ಯೋಗಿಯನ್ನು ರಕ್ಷಿಸುವುದು.
– ಒತ್ತಡ ನಿರ್ವಹಣೆ ಕಾರ್ಯಾಗಾರಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುವುದು
– ವರ್ಷಕ್ಕೊಮ್ಮೆಯಾದರೂ ಎಲ್ಲ ಉದ್ಯೋಗಿಗಳನ್ನು, ಇಡೀ ತಂಡದ ಜತೆಗೆ ವಿರಾಮದ ಚಟುವಟಿಕೆಗಳಿಗೆ ಕರೆದುಕೊಂಡು ಹೋಗುವುದು.
– ಕೆಲಸಕ್ಕೆ ಸಂಬಂಧಪಟ್ಟಂತೆ ಬೇಕಾಗುವ ಕೌಶಲಗಳಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಉದ್ಯೋಗಿಗಳಿಗೆ ತರಬೇತಿ ನೀಡುವುದು.
– ಮುತುವರ್ಜಿ ವಹಿಸಿ ಕೆಲಸ ಮಾಡಿಸುವುದು.

ಈ ರೀತಿ ಅಗತ್ಯಕ್ಕೆ ತಕ್ಕಂತೆ ಹಾಗೂ ಕೆಲಸಕ್ಕೆ ತಕ್ಕಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯದಿಂದ ಜೀವನದ ಗುಣಮಟ್ಟ  ವೃದ್ಧಿಯಾಗುತ್ತದೆ ಮತ್ತು ವ್ಯಕ್ತಿಯು ಸಂತೋಷದಿಂದ ಉದ್ಯೋಗದಲ್ಲಿ  ತೊಡಗಿಕೊಳ್ಳುತ್ತಾನೆ ಮತ್ತು ಅದೇ ಉದ್ಯೋಗದಲ್ಲಿ /ಅದೇ ಸಂಸ್ಥೆಯಲ್ಲಿ  ಮುಂದುವರಿಯಲು ಬಯಸುತ್ತಾನೆ. ಈ ಕ್ರಮಗಳಿಂದಾಗಿ ವ್ಯಕ್ತಿಯ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ಮತ್ತು ಸಂಸ್ಥೆಯ ಮತ್ತು ವ್ಯಕ್ತಿಯ ಆರ್ಥಿಕ ಬೆಳವಣಿಗೆಗೂ ಕೂಡ ಸಹಕಾರಿಯಾಗುತ್ತದೆ. ಎಲ್ಲರಿಗೂ ತಿಳಿದಿರುವ ಹಾಗೆ ಹೆಚ್ಚಿನ ಜನರು ಭವಿಷ್ಯದಲ್ಲಿ  ಬದುಕುವ ಆಯಾಮವಾಗಿ ವಿವಿಧ ಉದ್ಯೋಗಗಳ ಮೇಲೆ ಅವಲಂಬಿತರಾಗಿರುವವರು. ಸ್ವಂತ ಉದ್ಯೋಗದ ಮೇಲೆ ಅವಲಂಬಿತರಾಗಿರುವವರು ಕಡಿಮೆ ಪ್ರಮಾಣದಲ್ಲಿದ್ದಾರೆ. ಹಾಗಾಗಿ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಹಿತ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅತ್ಯಗತ್ಯ.

– ಡಾ| ರವೀಂದ್ರ ಮುನೋಳಿ, 
ಸಹಾಯಕ ಪ್ರಾಧ್ಯಾಪಕರು,
ಮನೋರೋಗ ಚಿಕಿತ್ಸಾ ವಿಭಾಗ,
ಕಸ್ತೂರ್ಬಾ ಆಸ್ಪತ್ರೆ , ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next