Advertisement

ಮಾನಸಿಕ ವ್ಯಭಿಚಾರ

06:30 PM Nov 17, 2017 | Team Udayavani |

ಮೈಥಿಲೀ,
ಪಂಚವಟಿಯ ಕುಟೀರದಲ್ಲಿದ್ದ ಒಂಟಿಯಾದ ನಿನ್ನನ್ನು ಬಲವಂತವಾಗಿ ಎಳೆದೊಯ್ಯಲು ಕಪಟಿ ರಾವಣ ತೊಟ್ಟಿದ್ದು ಸನ್ಯಾಸಿಯ ವೇಷವನ್ನು. ನಂತರದ ಆ ಹತ್ತು ತಿಂಗಳು ನಿನ್ನನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ನಿನ್ನ ಕುರಿತು ಅವನು ನಿಜದ ಸನ್ಯಾಸಿಯಾಗಿಯೇ ಉಳಿಯಬೇಕಾದದ್ದು ದೊಡ್ಡ ವಿಪರ್ಯಾಸ, ಆಶ್ಚರ್ಯ! ದುಂಬಿಗಾಗಿ ಕಾಯುವ ಪರಾಗ ಮೌನದ ಅರಿವಿತ್ತೇ ಅವನಿಗೆ? ಅಥವಾ ನಿನ್ನ ಕಾಠಿಣ್ಯದ ತೀವ್ರತೆಗೆ ಹೆದರಿದನೆ? ರಾಮನ ಸೇನೆ ತನ್ನವರನ್ನೆಲ್ಲ ಮಣ್ಣು ಮುಕ್ಕಿಸುತ್ತಿದ್ದ ಆ ಕೊನೆಯ ಕ್ಷಣಗಳಲ್ಲೂ ನಿನ್ನ ಮೈ ಮುಟ್ಟಲಿಲ್ಲ ಅವನು!

Advertisement

ಆದರೆ, ಪ್ರತಿ ಗಳಿಗೆಯೂ ನಿನ್ನ ಅಂತರಾತ್ಮ ಅತ್ಯಾಚಾರಕ್ಕೆ ಒಳಗಾಗುತ್ತಲೇ ಇತ್ತು. ನೀನು ನಿನ್ನೊಲವಿನಿಂದ ದೂರಾಗಿ, ರಾವಣನನ್ನೊಪ್ಪಲೇಬೇಕೆಂಬ ರಾಕ್ಷಸರ ಅಪರಿಮಿತ ಒತ್ತಡಕ್ಕೆ ನಲುಗಿ, ಅನುಭವಿಸಿದ ನೋವು, ಆತಂಕಕ್ಕೆ ಎಣೆಯುಂಟೇ? ನಿನ್ನೊಂದಿಗೆ ಹೃದಯ ಕಲ್ಲಾಗಿಸಿಕೊಂಡ ಇನ್ನೊಂದು ಹೆಣ್ಣುಜೀವವೂ ಅಲ್ಲಿತ್ತಲ್ಲವೇ ಸೀತೆ? ತನ್ನೆದುರಲ್ಲೇ ಗಂಡ ಇನ್ನೊಬ್ಬಳನ್ನು ಕಾಮಕೇಳಿಗೆ ಒತ್ತಾಯಿಸುವ ಆ ವಿಷ ಗಳಿಗೆಗಳು ರಾವಣನ ಮಡದಿ ಮಂಡೋದರಿಗೆ ಅದೆಷ್ಟು ಚುಚ್ಚಿರಬಹುದು?

ದ್ವಾಪರಕ್ಕೆ ಬರುವಾಗ “ಅತ್ಯಾಚಾರ’ದ ಪರಂಪರೆ ಇನ್ನಷ್ಟು ಗಟ್ಟಿಯಾಗುತ್ತ ಹೋದದ್ದು ಕುತೂಹಲ ಮೂಡಿಸುತ್ತದೆ. ಕಾಲು ಜಾರಿ ಬಿದ್ದ ಸುಯೋಧನನನ್ನು ಕಂಡು ನಕ್ಕದ್ದೇ ದ್ರೌಪದಿಯ ದೊಡ್ಡ ಅಪರಾಧವಾಗಿ ಪರಿಗಣಿತವಾಗಿ, ಜೂಜಿನ ನೆಪದಲ್ಲಿ ಅವಳ ಸೀರೆಯನ್ನು ಸೆಳೆಯಲಾಯ್ತು. ಅದೂ ಪ್ರಾಜ್ಞರು ತುಂಬಿದ ಸಭೆಯಲ್ಲಿ, ಅವಳ ಐದು ಜನ ಗಂಡಂದಿರ ಎದುರಲ್ಲಿ. ಇಲ್ಲಿ, ಸುಯೋಧನ, ದುಶಾÏಸನರು ಮಾತ್ರವಲ್ಲ, ಅನ್ಯಾಯ ಸಹಿಷ್ಣುಗಳಾದ ಪ್ರತಿಯೊಬ್ಬ ಸಭಾಸದನೂ ಅತ್ಯಾಚಾರಿಯೇ! ಕೃಷ್ಣ ಅಕ್ಷಯಾಂಬರವನ್ನು ಕರುಣಿಸಿದನೋ ಇಲ್ಲವೋ ಎಂಬುದು ಇಲ್ಲಿ ಅಮುಖ್ಯ. ದ್ರೌಪದಿಯನ್ನು ಅಸಹಾಯಕಳನ್ನಾಗಿಸಿ ಸಾರ್ವಜನಿಕವಾಗಿ ಬೆತ್ತಲುಗೊಳಿಸಲು ಹೊರಟ ಕ್ರೂರ ಮನಸ್ಥಿತಿಯೇ ಮುಖ್ಯವಾಗುತ್ತದೆ. ಸುಯೋಧನನೊಬ್ಬನ ಅಹಂಕಾರ, ಪ್ರತಿಷ್ಠೆ, ಸೇಡು, ರಾಜಕೀಯ ಈ ಎಲ್ಲವುಗಳಿಗಾಗಿ ಅತ್ಯಾಚಾರವೆಂಬುದೊಂದು ಇಲ್ಲಿಯೂ ಸಾಧನವಾಗಿದೆ. ರಾವಣನ ಕಾಯುವಿಕೆ ಇಲ್ಲಿ ಇಲ್ಲವಾಗಿದೆ, ಅಶೋಕವನದ ಬದಲು ರಾಜಸಭೆಯಲ್ಲೇ ಅವಳು ನಗ್ನಳಾಗಬೇಕಾಯ್ತು; ಅಂತರಂಗ ಬಹಿರಂಗಗಳೆರಡರಲ್ಲೂ!

ಹೆಣ್ಣೊಬ್ಬಳ “ಅನಪೇಕ್ಷಿತ ಕಾರ್ಯಕ್ಕೆ’ ಸಾರ್ವಜನಿಕವಾಗಿ ಅವಳನ್ನು ಅತ್ಯಾಚಾರಗೈಯುವುದೇ ಅವಳಿಗೆ ಕೊಡಬಹುದಾದ ಸೂಕ್ತ ಶಿಕ್ಷೆ ಎಂಬ ಉಡಾಫೆ ಇಂದಿಗೂ ಪ್ರಚಲಿತದಲ್ಲಿದೆ ತಾಯೀ, ಜಾತಿ-ವರ್ಗ ಸಂಘರ್ಷಗಳಲ್ಲಿಯೂ ಒಂದು ಸಮುದಾಯ ಇನ್ನೊಂದು ಸಮುದಾಯದ ವಿರುದ್ಧ ಸೇಡು ತೀರಿಸಿಕೊಳ್ಳುವ ಬಗೆ ಅಲ್ಲಿಯ ಹೆಣ್ಣುಗಳನ್ನು ಬಲಾತ್ಕಾರವಾಗಿ ಭೋಗಿಸುವುದು! ನಮ್ಮ ದಲಿತ ಸೋದರಿಯರಲ್ಲಿ ದಿನಕ್ಕೊಬ್ಬರಾದರೂ ಇಂತಹ ಅನ್ಯಾಯಕ್ಕೆ ಒಳಗಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಇದೆಂಥ ವಿಲಕ್ಷಣವಾದ ಸಂಸ್ಕೃತಿ! ಇದು ಆಕೆಯನ್ನು ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತಗೊಳಿಸುವುದರ ಜೊತೆಗೆ ಅವಳ ಸಂಗಡಿಗರ ಅಭಿಮಾನ ಭಂಜನೆಯ ಸುಲಭ ಮಾರ್ಗವೂ ಹೌದು ಎಂಬುದು ಇದರ ಹಿಂದಿನ ತರ್ಕವಲ್ಲವೆ?

ಕೂಡುವಿಕೆ ಎನ್ನುವುದು ಆತ್ಮಸಂಗಾತದಂತಿರಬೇಕು. ಆದರೆ, ದೈಹಿಕ ಭೋಗವೇ ಆತ್ಯಂತಿಕ ಎಂದು ಕುಣಿಯುವ ವಿಕೃತ ಮನಸ್ಸುಗಳಿಗೆ ಆತ್ಮಗಳ ಪಿಸುಮಾತೂ ಕೇಳಿಸುವುದಿಲ್ಲ, ನರಳುವಿಕೆಯೂ ಕಾಡುವುದಿಲ್ಲ. ಹಾದಿ-ಬೀದಿಗಳಲ್ಲಿ ಕಾಣುವ ಅಂತಹ ಮನಸ್ಸುಗಳು ಒಂಟಿ ಹೆಣ್ಣನ್ನು ಕಂಡರೆ ಅವಳನ್ನು  ಅಟ್ಟಾಡಿಸಿಕೊಂಡು ಲೈಂಗಿಕವಾಗಿ ಹಿಂಸಿಸುತ್ತವೆ. ಬೇಟ ಇಲ್ಲಿ ಸಂತಸದ ಆಟವಾಗದೇ ಬೇಟೆಯ ಖುಷಿಗಾಗಿದೆ.

Advertisement

ಹೆಣ್ಣುಗಳ ರಕ್ಷಣೆಯ ಹೊಣೆ ಹೊತ್ತ ಈ ಲೋಕ ಅವಳನ್ನು “ಮುಚ್ಚಿಟ್ಟು ಕಾಪಾಡುವ’ ಒಳ ದಾರಿ ಕಂಡುಕೊಂಡಿದೆ. ಅವಳ ಮೇಲೆ ವಸ್ತ್ರಸಂಹಿತೆ, ನೀತಿಸಂಹಿತೆಯ ಕಟು ನಿಷ್ಠುರತೆಯ ಕಾವಲು ನೇಮಿಸಿಬಿಡುತ್ತದೆ. ಆದರೆ ಈ ಮುಚ್ಚುಗೆಯೊಳಗಾದರೂ ಅವಳು ಸುರಕ್ಷಿತಳೇ? ತನ್ನವರೆಂದು ನಂಬಿರುವ ಬಂಧು-ಬಾಂಧವರೇ ಆಕೆಯ ದೇಹಕ್ಕೆ ಹಸಿದಿರುತ್ತಾರೆ. ಈ ಹಿಂಸೆಯನ್ನು ಹೊರ ಪ್ರಪಂಚಕ್ಕೆ ತಿಳಿಸಲೂ ಆಗದ ತಬ್ಬಲಿ ಮೌನವನ್ನೂ ಅವಳು ಧರಿಸಬೇಕು!

ಇಲ್ಲಿ ದಿನನಿತ್ಯ ಸೀತಾಪಹರಣ, ವಸ್ತ್ರಾಪಹರಣದ ಭಯದ ನೆರಳಲ್ಲೇ ಹೆಣ್ಣುಗಳು ಬದುಕಬೇಕು. ಇದರಿಂದ ಹೇಗೆಲ್ಲಾ ತಪ್ಪಿಸಿಕೊಳ್ಳಬಹುದು ಎಂಬುದಕ್ಕೆ ನಮ್ಮ ಸ್ತ್ರೀವರ್ಗವನ್ನು ಸಿದ್ಧಪಡಿಸುವ ಈ ಲೋಕ ಇದಕ್ಕೆ ಹೇತುವಾದ ಕೆಟ್ಟ ಮನಸ್ಸುಗಳನ್ನು ತಿದ್ದುವ ಜವಾಬ್ದಾರಿಯನ್ನೂ ಹೊರಬೇಕಲ್ಲವೆ? ತನ್ನ ಮೇಲಾಗುವ ದೈಹಿಕ ಆಕ್ರಮಣವನ್ನು ಧಿಕ್ಕರಿಸುವ ದಿಟ್ಟತನ, ಮಾನಸಿಕ ಸ್ಥೈರ್ಯವನ್ನು ಹೆಣ್ಣಿಗೆ ತುಂಬಿದರೆ ಶಕ್ತಿಶಾಲಿ ಕಾಮುಕ ಗಂಡನನ್ನೂ ಅವಳು ದೈಹಿಕವಾಗಿ ಮಣಿಸಬಹುದೇನೋ!

ದೇಹ-ಆತ್ಮಗಳೆಂದು ಅವಳ ವ್ಯಕ್ತಿತ್ವವನ್ನು ಹೋಳಾಗಿಸದೇ ಇಡಿಯಾಗಿ ಕಂಡರೆ, ಅವಳ ಬೇಕು-ಬೇಡಗಳನ್ನು ಗೌರವಿಸುವ ಗಂಡುಕುಲ ವೃದ್ಧಿಯಾದೀತು. ಆಗ ಯಾರ ಭಯವಿಲ್ಲದೇ, ತನ್ನ ಯಾವ ಆಕಾಂಕ್ಷೆಯನ್ನೂ ಬೂದಿಗೊಳಿಸದೇ ಅವಳು ಸ್ವತ್ಛಂದವಾಗಿ ಇಲ್ಲಿರುವುದು ಸಾಧ್ಯ. ಹೇಳು ಸೀತೆ, ಅಂತಹ ರಾಮರಾಜ್ಯವನ್ನು ನಾವು ಎಂದಾದರೂ ಕಂಡೇವೇ?

ಅಭಿಲಾಷಾ ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next