Advertisement

ಗೈರಾದ ಸದಸ್ಯರು, ಭಾಗವಹಿಸದ ಸಾರ್ವಜನಿಕರು

03:37 PM Jan 12, 2018 | |

ಪುತ್ತೂರು: ನಗರಸಭೆ ಆಡಳಿತ 2018- 19ನೇ ಸಾಲಿನ ಆಯವ್ಯಯ ಮಂಡನೆ ಕುರಿತ ಸಾರ್ವಜನಿಕರ ಅಭಿಪ್ರಾಯ ಪಡೆಯುವ ಪೂರ್ವಭಾವಿ ಸಭೆ ಗುರುವಾರ ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಅಧ್ಯಕ್ಷತೆಯಲ್ಲಿ ನಡೆಯಿತು. ಆದರೆ ಸಾರ್ವಜನಿಕ ವಲಯ ದಿಂದ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತ ವಾಯಿತು. ಅರ್ಧಕ್ಕಿಂತ ಹೆಚ್ಚು ಸದಸ್ಯರೇ ಸಭೆಯಲ್ಲಿ ಭಾಗವಹಿಸಲಿಲ್ಲ. 

Advertisement

ಸಾರ್ವಜನಿಕರು ಹಾಗೂ ವಿವಿಧ ಸಂಘ -ಸಂಸ್ಥೆಗಳ ಅಭಿಪ್ರಾಯ ಪಡೆದು ಆಯವ್ಯಯ ಮಾಡುವ ಕುರಿತ ಸಭೆಯನ್ನು ಕರೆಯಲಾಗಿದೆ ಎಂದು ವಿಷಯ ಪ್ರಸ್ತಾಪಿಸಿದಾಗ, ನಾಮನಿರ್ದೇಶಿತ ಸದಸ್ಯ ಜೋಕಿಂ ಡಿ’ಸೋಜಾ, ನಗರಸಭಾ ವ್ಯಾಪ್ತಿಯಲ್ಲಿ ಇಷ್ಟೇ ಜನರಿರುವುದೇ? ಎಂದು ಪ್ರಶ್ನಿಸಿದರು. ಸದಸ್ಯ ಎಚ್‌. ಮಹಮ್ಮದಾಲಿ ಮಾತನಾಡಿ, ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಬಜೆಟ್‌ ಮಂಡನೆ ಮಾಡುವ ತೀರ್ಮಾನ ಮಾಡಲಾಗಿದೆ. ಈ ಕುರಿತು ಪತ್ರಿಕಾ ಪ್ರಕಟನೆ ನೀಡಲಾಗಿದೆ. ಆದರೂ ಸಾರ್ವಜನಿಕರು ಬಂದಿಲ್ಲ ಎಂದರು.

ಸಾರ್ವಜನಿಕರಿಂದ ಅಸಹಕಾರ
ಕಳೆದ ಬಾರಿ ಬೈಲಾ ಸಿದ್ಧಪಡಿಸುವ ಕುರಿತು ಪುತ್ತೂರು ನಗರದ ವರ್ತಕರು, ಸಾರ್ವಜನಿಕರ ಸಭೆ ಕರೆಯಲಾಗಿತ್ತು.
ಅದಕ್ಕಾಗಿ 1,500 ಆಹ್ವಾನ ಪತ್ರಿಕೆಗಳನ್ನು ಹಂಚಲಾಗಿತ್ತು. ಆದರೆ ಬೆರಳೆಣಿಕೆಯ ವರ್ತಕರು, ಸಾರ್ವಜನಿಕರು ಸಭೆಗೆ ಹಾಜರಾಗಿದ್ದರು. ಈ ಸಭೆಯಲ್ಲೂ ಅದೇ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಅಸಹಕಾರ ತೋರಿಸುತ್ತಿದ್ದಾರೆ. ಅವರು ತಮ್ಮ ಜವಾಬ್ದಾರಿ ಅರಿಯಬೇಕು ಎಂದರು.

ಸದಸ್ಯ ರಮೇಶ್‌ ರೈ ಮೊಟ್ಟೆತ್ತಡ್ಕ ಮಾತನಾಡಿ, ಸಾರ್ವಜನಿಕರಿಗೆ ನಗರಸಭೆಯಿಂದ ನೀಡುವ ಮಾಹಿತಿ ಅರ್ಥವಾಗುತ್ತಿಲ್ಲ. ಸಭೆ ಕುರಿತು ಸರಿಯಾಗಿ ಮಾಹಿತಿ ಇಲ್ಲದ ಕಾರಣ ಸಾರ್ವಜನಿಕರ ಸ್ಪಂದನೆ ಇಲ್ಲವಾಗಿದೆ ಎಂದರು. ಇದಕ್ಕೆ ಸದಸ್ಯ ಸುಜೀಂದ್ರ ಪ್ರಭು ಧ್ವನಿಗೂಡಿಸಿದರು.

ಬಂದವರನ್ನು ಕುಳ್ಳಿರಿಸಿದರು
ಸಭೆಯಲ್ಲಿ ಸಾರ್ವಜನಿಕರು ಇಲ್ಲದ ಹಿನ್ನೆಲೆಯಲ್ಲಿ ತಮ್ಮ ವೈಯುಕ್ತಿಕ ಕೆಲಸಕ್ಕೆಂದು ನಗರಸಭೆ ಕಚೇರಿಗೆ ಆಗಮಿಸಿದವರನ್ನು ಸಭೆಗೆ ಕರೆತಂದು ಕೂರಿಸಲಾಯಿತು. ಉದ್ದೇಶ ತಿಳಿಯದೆ ಅವರಲ್ಲಿ ಗೊಂದಲ ಮೂಡಿತು. ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಮಾತನಾಡಿ, ನಗರಸಭೆಯ ಬಜೆಟ್‌ ಮಂಡನೆ ಮಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಅಭಿಪ್ರಾಯ ಪಡೆಯುವ ಸಭೆಯನ್ನು ಕರೆಯಲಾಗಿತ್ತು. ಆದರೆ ಸಾರ್ವಜನಿಕರು ಸ್ಪಂದನೆ ನೀಡಿಲ್ಲ. ನೀವೂ ಸಾರ್ವಜನಿಕರು ಆಗಿರುವ ಕಾರಣದಿಂದ ನಿಮ್ಮನ್ನು ಸಭೆಗೆ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೂ ತಮ್ಮ ಕೆಲಸಕ್ಕಾಗಿ ನಗರಸಭೆ ಕಚೇರಿಗೆ ಬಂದಿದ್ದು, ಅರ್ಥವಾಗದ ವಿಷಯದ ಚರ್ಚೆಯಲ್ಲಿ ಪಾಲ್ಗೊಳ್ಳಲು ಆಸಕ್ತಿಯಿಲ್ಲ ಎಂದು ಕೆಲವರು ಗೊಣಗಿದರು.

Advertisement

ರೋಹಿತ್‌ ಎಂಬುವರು ಮಾತನಾಡಿ, ಪಾರ್ಕಿಂಗ್‌ ಶುಲ್ಕ ವಸೂಲಿಯಿಂದ ನಗರ ಸಭೆಗೆ ಎಷ್ಟು ಆದಾಯ ಬರುತ್ತಿದೆ ಎಂಬ ಮಾಹಿತಿ ನೀಡಿ, ಪಾರ್ಕಿಂಗ್‌ ವ್ಯವಸ್ಥೆಯ ವಿವರ ಕೊಡಿ ಎಂದರು. ಪೌರಾಯುಕ್ತೆ ರೂಪಾ ಶೆಟ್ಟಿ ಉತ್ತರಿಸಿ, ಆದಾಯವನ್ನು ಹೇಗೆ ಸಂಗ್ರಹಿಸಬಹುದು? ಮುಂದಿನ ಮುಂಗಡಪತ್ರ ಹೇಗಿರಬೇಕು ಎಂಬ ಕುರಿತು ಅಭಿಪ್ರಾಯ ಸಂಗ್ರಹಿಸುವುದು ಈ ಸಭೆಯ ಉದ್ದೇಶ ಎಂದರು.

ನಗರಸಭೆ ಉಪಾಧ್ಯಕ್ಷ ಬಿ. ವಿಶ್ವನಾಥ ಗೌಡ, ಸದಸ್ಯರಾದ ವಾಣಿ ಶ್ರೀಧರ್‌, ಯಶೋದಾ ಹರೀಶ್‌, ಮುಖೇಶ್‌ ಕೆಮ್ಮಿಂಜೆ, ಶಕ್ತಿ ಸಿನ್ಹಾ, ಜೆಸಿಂತಾ ಮಸ್ಕರೇನಸ್‌, ಉಷಾ ಆಚಾರ್ಯ, ಅನ್ವರ್‌ ಖಾಸಿಂ, ನಾಮ ನಿರ್ದೇಶಿತ ಸದಸ್ಯ ದಿಲೀಪ್‌ ಕುಮಾರ್‌ ಉಪಸ್ಥಿತರಿದ್ದರು.

ಅನುದಾನದ ಮಾಹಿತಿ ನೀಡಿ
ಸಭೆಯಲ್ಲಿ ಭಾಗವಹಿಸಿದ ಪುರಸಭೆ ಮಾಜಿ ಸದಸ್ಯ ಸಂಕಪ್ಪ ಗೌಡ, ಆದಾಯದ ಮೂಲ ಹೇಳುವ ಬದಲು ನೀವು ಕಳೆದ ಬಜೆಟ್‌ನಲ್ಲಿ ಯಾವುದಕ್ಕೆ ಅನುದಾನ ನೀಡಿದ್ದೀರಿ? ಯಾವ ಮೂಲಗಳಿಂದ ಆದಾಯ ಕ್ರೋಡೀಕರಣ ನಡೆದಿದೆ? ಅದನ್ನು ತಿಳಿಸಿ ಎಂದರು. ಉತ್ತರಿಸಿದ ಪೌರಾಯುಕ್ತೆ, ಈ ಸಾಲಿನ ಬಜೆಟ್‌ನಲ್ಲಿ ಆದಾಯದ ಮೂಲಕ್ಕಾಗಿ, ಸಾರ್ವಜನಿಕರ ಸಲಹೆ ಸೂಚನೆ ತಿಳಿದು ಕೊಳ್ಳಲು ಸಭೆ ಕರೆಯಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next