Advertisement

ಮಾದಕವಸ್ತು  ಮೂಲೋತ್ಪಾಟನೆಗೆ ಬದ್ಧ

04:44 PM Aug 29, 2018 | Team Udayavani |

ಹುಬ್ಬಳ್ಳಿ: ಅವಳಿ ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮೂಲೋತ್ಪಾಟನೆಗೆ ಇಲಾಖೆ ಕಟಿಬದ್ಧವಾಗಿದೆ. ಇದರಲ್ಲಿ ಭಾಗಿಯಾದವರನ್ನು ಗಡಿಪಾರು ಮಾಡಲಾಗುವುದು. ಸಾರ್ವಜನಿಕರ ಹಾಗೂ ಪೊಲೀಸರ ಆತ್ಮರಕ್ಷಣೆಯಂತಹ ಸಂದರ್ಭದಲ್ಲಿ ರೌಡಿಗಳ ಮೇಲೆ ಫೈರಿಂಗ್‌ ಮಾಡಲು ಹಿಂಜರಿಯುವುದಿಲ್ಲ ಎಂದು ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಹೇಳಿದರು. ಕಾರವಾರ ರಸ್ತೆಯ ಹಳೆಯ ಸಿಎಆರ್‌ ಮೈದಾನದಲ್ಲಿ ಮಂಗಳವಾರ ಹು-ಧಾ ಪೊಲೀಸ್‌ ಕಮಿಷನರೇಟ್‌ ಘಟಕದ ವತಿಯಿಂದ ಹೊಸ ಬೀಟ್‌ ಪದ್ಧತಿಯ ಸದಸ್ಯರೊಂದಿಗೆ ಸಭೆ ಹಾಗೂ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ಅವರು ಅಕ್ರಮ ದಂಧೆಕೋರರಿಗೆ ಹಾಗೂ ರೌಡಿಗಳಿಗೆ ಖಡಕ್‌ ಸಂದೇಶ ನೀಡಿದರು.

Advertisement

ವಿವಿಧ ಭಾಗಗಳ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತ, ನಗರದಲ್ಲಿ ರೌಡಿ-ಗೂಂಡಾಗಳ ಅಟ್ಟಹಾಸ ಮೀತಿ ಮೀರಿದೆ. ಅವರನ್ನೇಕೆ ಎನ್‌ ಕೌಂಟರ್‌ ಮಾಡಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಬಾರದು. ಕಳ್ಳತನ ನಿಯಂತ್ರಿಸಲು ಹಗಲು ಹೊತ್ತಿನಲ್ಲಿಯಂತೆ ರಾತ್ರಿಯೂ ಯಾಕೆ ನಿರಂತರ ಗಸ್ತು ಹೆಚ್ಚಿಸಬಾರದು. ಹಳೆಯ ಕಟ್ಟಡವೊಂದರಲ್ಲಿ ಸಂಜೆಯಾದರೆ ಸಾಕು ಬಾಲಕರು ಗಾಂಜಾ ಬಳಕೆ ಮಾಡುತ್ತಾರೆ. ಅದರ ಮೇಲೆ ನಿಗಾವಹಿಸಿ. ಆಟೋರಿಕ್ಷಾ, ದ್ವಿಚಕ್ರ ವಾಹನಗಳು ಕರ್ಕಶ ಶಬ್ದ ಮಾಡುತ್ತ ಸಾಗುತ್ತವೆ. ಅಂತಹ ವಾಹನಗಳ ಸವಾರರ ಮೇಲೆ ಸೂಕ್ತ ಕ್ರಮಕೈಗೊಳ್ಳಿ. ಹಳೇಹುಬ್ಬಳ್ಳಿ ಭಾಗದಲ್ಲಿ ಸಂಚಾರ ಸಮಸ್ಯೆ ಬಗೆಹರಿಸಿ. ರೌಡಿಗಳು, ಪುಡಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಿ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಬೆಳಗ್ಗೆಯಿಂದಲೇ ಆರಂಭವಾಗಿ ತಡರಾತ್ರಿ ವರೆಗೆ ತೆರೆದುಕೊಂಡಿರುತ್ತವೆ. ಅವುಗಳ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ನಿಮ್ಮ ಪ್ರದೇಶದ ಯಾವುದೇ ಭಾಗದಲ್ಲಿ ಗಾಂಜಾ, ಅಪೀಮು ಮಾರಾಟ, ಮಟ್ಕಾ, ಜೂಜಾಟ, ವೇಶ್ಯಾವಾಟಿಕೆ, ರೌಡಿಸಂ ನಡೆಯುತ್ತಿರುವುದು, ಮಹಿಳೆಯರು- ಯುವತಿಯರನ್ನು ಚುಡಾಯಿಸುತ್ತಿರುವುದು ಹಾಗೂ ಮಾದಕವಸ್ತು ಮಾರಾಟ, ಸೇವನೆ ಕಂಡುಬಂದರೆ ತಕ್ಷಣ ಸಮೀಪದ ಠಾಣೆಗಳಿಗೆ, ಅಧಿಕಾರಿಗಳಿಗೆ ಇಲ್ಲವೆ ಖುದ್ದಾಗಿ ನನಗೆ ಯಾವುದೇ ಸಮಯದಲ್ಲಾದರೂ ತಿಳಿಸಬಹುದು. ಅಂಥವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಭಯಪಡುವ ಅವಶ್ಯಕತೆಯಿಲ್ಲ. ಒಟ್ಟಾರೆ ಅವಳಿ ನಗರದಲ್ಲಿ ಇಂತಹ ಚಟುವಟಿಕೆಗಳನ್ನು ಮಟ್ಟಹಾಕಲು ಪ್ರತಿಯೊಬ್ಬರ ಸಹಕಾರ ಮುಖ್ಯ. ನಗರವನ್ನು ಎಲ್ಲ ರೀತಿಯಿಂದಲೂ ಸ್ಮಾರ್ಟ್‌ ಆಗಿ ಮಾಡೋಣ ಎಂದರು.

ಗಸ್ತು ಸಲುವಾಗಿ 27 ಚಾಲುಕ್ಯ ವಾಹನ, ಎರಡು ಹೈವೇ ಪೆಟ್ರೋಲಿಂಗ್‌, ಎರಡು ಚನ್ನಮ್ಮ ವಾಹನ ನಿಯೋಜಿಸಲಾಗಿದೆ. ಪಾಲಿಕೆ ಸಹಕಾರದಿಂದ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇಲಾಖೆಯಿಂದ ನೈಟ್‌ ವಿಷನ್‌ ಕ್ಯಾಮರಾ ಅಳವಡಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜೇಷ್ಠತಾ ಆಧಾರ ಮೇಲೆ ಪೊಲೀಸ್‌ ಸಿಬ್ಬಂದಿಗೆ ಹೊಸ ಕ್ವಾರ್ಟರ್ಸ್‌ನಲ್ಲಿ ನಿರ್ಮಾಣಗೊಂಡ 150 ಮನೆಗಳನ್ನು ಹಂಚಿಕೆ ಮಾಡಲಾಯಿತು. ಡಿಸಿಪಿ ರೇಣುಕಾ ಸುಕುಮಾರ, ಎಸಿಪಿ ಎನ್‌.ಬಿ. ಸಕ್ರಿ, ಎಚ್‌.ಕೆ. ಪಠಾಣ, ಎಂ.ವಿ. ನಾಗನೂರ ಸೇರಿದಂತೆ ವಿವಿಧ ಠಾಣಾಧಿಕಾರಿಗಳು ಹಾಗೂ ಬೀಟ್‌ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಭಾರೀ ದಂಡ!
ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ತಡೆಗಟ್ಟಲು ಹಾಗೂ ವಾಹನ ನಿಲುಗಡೆ ಸ್ಥಳ ಬಿಟ್ಟು ಬೇರೆಡೆ ನಿಲ್ಲಿಸುವ ವಾಹನಗಳನ್ನು ಅಲ್ಲಿಂದ ತೆರವುಗೊಳಿಸಲು ಆರು ಟೋಯಿಂಗ್‌ ವಾಹನಗಳಿಗಾಗಿ ಟೆಂಡರ್‌ ಕರೆಯಲಾಗಿದೆ. ಗುತ್ತಿಗೆದಾರರು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನಗಳನ್ನು ಎತ್ತಿಕೊಂಡು ಠಾಣೆಗೆ ತಲುಪಿಸಲಿದ್ದಾರೆ. ನಾಲ್ಕು ಚಕ್ರದ ವಾಹನಗಳಿಗೆ 1200 ರೂ., ಆಟೋ ರಿಕ್ಷಾಗಳಿಗೆ 1000 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ 600 ರೂ. ದಂಡ ವಿಧಿಸಲಾಗುವುದು ಹಾಗೂ ವಾಹನಗಳ ಮಾಲೀಕರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹು-ಧಾ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ತಿಳಿಸಿದರು.

Advertisement

11 ರೌಡಿಗಳ ಮೇಲೆ ಕ್ರಮ
ರೌಡಿ-ಗೂಂಡಾಗಳ ಮೇಲೆ ಒಮ್ಮೆಲೆ ಎನ್‌ಕೌಂಟರ್‌ ಮಾಡುವ ವ್ಯವಸ್ಥೆಯಿಲ್ಲ. ಆದರೆ ಪೊಲೀಸರ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ಬರುವ ರೀತಿ ಅವರು ನಡೆದುಕೊಂಡರೆ ನಮ್ಮ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಅವರ ಮೇಲೆ ಫೈರ್‌ ಮಾಡಲು ಹಿಂಜರಿಯುವುದಿಲ್ಲ. ಈಗಾಗಲೇ ರೌಡಿಗಳ ಮನೆ ಮೇಲೆ ದಾಳಿ ಮಾಡಿ 11 ಜನರನ್ನು ಜೈಲಿಗೆ ಕಳುಹಿಸಲಾಗಿದೆ.
ಎಂ.ಎನ್‌. ನಾಗರಾಜ,
ಹು-ಧಾ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next