Advertisement

ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಇಲ್ಲ

02:45 AM Jun 27, 2018 | Karthik A |

ವಿಟ್ಲ: ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಇಲ್ಲದಿರುವುದೇ ಪ್ರಮುಖ ಸಮಸ್ಯೆ. ವೈದ್ಯಾಧಿಕಾರಿ ಡಾ| ಶ್ವೇತಾ ಉನ್ನತ ವ್ಯಾಸಂಗಕ್ಕಾಗಿ ತೆರಳಿರುವುದರಿಂದ ಹುದ್ದೆ ಖಾಲಿಯಾಗಿದೆ. ಜೂ. 1ರಿಂದ ಅಳಿಕೆ ಪ್ರಾ.ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಜಯಪ್ರಕಾಶ್‌ ಅವರಿಗೆ ಸೋಮವಾರ ಮತ್ತು ಬುಧವಾರ ಅಂದರೆ ವಾರದಲ್ಲಿ ಎರಡು ದಿನಗಳ ಜವಾಬ್ದಾರಿ ನೀಡಲಾಗಿದೆ.

Advertisement

ಸಿಬಂದಿ ಕೊರತೆಯೂ ಇದೆ
ಪ್ರತಿದಿನವೂ 100ರ ಆಸುಪಾಸಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿ ಔಷಧ ಪಡೆಯುವ ಕನ್ಯಾನ ಆಸ್ಪತ್ರೆಯಲ್ಲಿ ಇತರ ಸಿಬಂದಿ ಕೊರತೆಯೂ ಇದೆ. ಕಿರಿಯ ಆರೋಗ್ಯ ಸಹಾಯಕಿಯರ ಹುದ್ದೆ ಮೂರರಲ್ಲಿ ಒಂದು ಖಾಲಿಯಿದೆ. ಹಿರಿಯ ಆರೋಗ್ಯ ಸಹಾಯಕರೋರ್ವರು ವಾಮದಪದವು ಆಸ್ಪತ್ರೆಯಿಂದ ವಾರದಲ್ಲಿ ಒಂದು ದಿನ ಆಗಮಿಸುತ್ತಾರೆ. ಹೊರಗುತ್ತಿಗೆಯಲ್ಲಿ ಲ್ಯಾಬ್‌ ಟೆಕ್ನೀಶಿಯನ್‌, ಗ್ರೂಪ್‌ ಡಿ, ಫಾರ್ಮಾಸಿಸ್ಟ್‌ ಸಿಬಂದಿ ಇದ್ದು, ಉಳಿದಂತೆ ಭರ್ತಿಯಾಗಿದೆ. ಇಲ್ಲಿ ಇಬ್ಬರು ಆರೋಗ್ಯ ಸಹಾಯಕಿಯರಿಗೆ ವಸತಿ ನಿಲಯವಿದೆ.

ವಸತಿ ನಿಲಯಕ್ಕೆ ಹಾನಿ


ವೈದ್ಯಾಧಿಕಾರಿ ವಸತಿ ನಿಲಯವು ಭೂತಬಂಗಲೆಯಾಗಿದೆ. ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಪುಡಿಗೈದಿದ್ದಾರೆ. ಮತ್ತೂಂದು ಕಿಟಕಿ ಹಾಗೂ ಕುರ್ಚಿ ಎದುರಲ್ಲಿ ಬಿದ್ದುಕೊಂಡಿದೆ. ಬಣ್ಣ ಮಾಸಿಹೋಗಿದೆ. ನೂತನ ವೈದ್ಯರು ಇಲ್ಲಿಗೆ ನೇಮಕಗೊಂಡರೂ ಈ ವಸತಿನಿಲಯದಲ್ಲಿ ಉಳಿಯುವ ಹಾಗಿಲ್ಲ. ಈ ಬಗ್ಗೆ ಇಲಾಖೆ ಗಮನಹರಿಸಿ, ಕ್ರಮ ಕೈಗೊಳ್ಳುವುದು ಒಳಿತು ಎಂದು ಗ್ರಾಮಸ್ಥರು ಹೇಳುತ್ತಾರೆ.

ಸಭಾಭವನ ನಿರ್ಮಾಣ
ಆಸ್ಪತ್ರೆಗೆ ಸಮಾನಾಂತರವಾಗಿ ಒಂದು ಚಿಕ್ಕ ಸಭಾಭವನ ನಿರ್ಮಾಣವಾಗುತ್ತಿದೆ. ಈ ಮೀಟಿಂಗ್‌ ಹಾಲ್‌ ಕೆ.ಎಚ್‌.ಎಸ್‌.ಆರ್‌.ಡಿ.ಪಿ. ಅವರ 10 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗುತ್ತಿದೆ. ಇದಲ್ಲದೇ ಇಡೀ ಆಸ್ಪತ್ರೆ ಸುಣ್ಣ ಬಣ್ಣಗಳಿಂದ ಅಲಂಕಾರಗೊಂಡಿದೆ. ಆಸ್ಪತ್ರೆಗೆ ತೆರಳುವ ರಸ್ತೆ ಸುಸಜ್ಜಿತವಾಗಿದ್ದು, ಬೆಟ್ಟದೆತ್ತರದಲ್ಲಿ ಹಸುರಿನ ಮಧ್ಯೆ ಪೇಟೆಯ ಗಜಿಬಿಜಿ ವಾತಾವರಣದಿಂದ ದೂರದಲ್ಲಿದೆ. ಆರೋಗ್ಯಪೂರ್ಣ ಆಸ್ಪತ್ರೆಗೆ ವೈದ್ಯರು ಆಗಮಿಸಿ, ರೋಗಿಗಳನ್ನೂ ಆರೋಗ್ಯ ವಂತರನ್ನಾಗಿಸಬೇಕೆಂದು ಬಡವರ ಅಪೇಕ್ಷೆ.

ಅಳಿಕೆ ಆರೋಗ್ಯ ಕೇಂದ್ರ
ಅಳಿಕೆ ಪ್ರಾ. ಆ. ಕೇಂದ್ರದಲ್ಲಿ ವಾರದ ಉಳಿದ ದಿನಗಳಲ್ಲಿ ವೈದ್ಯಾಧಿಕಾರಿ ಡಾ|ಜಯಪ್ರಕಾಶ್‌ ರೋಗಿಗಳ ಸೇವೆಗೆ ಲಭ್ಯರಿರುತ್ತಾರೆ. ಇಲ್ಲಿ ಪ್ರತಿನಿತ್ಯ 30-40 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಇಲ್ಲಿ 3ರಲ್ಲಿ 2 ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿ ಇದೆ. ಒಬ್ಬರು ಡೆಪ್ಯುಟೇಶನ್‌ನಲ್ಲಿದ್ದಾರೆ. ಹೊರಗುತ್ತಿಗೆಯಲ್ಲಿ ಗ್ರೂಪ್‌ ಡಿ, ಲ್ಯಾಬ್‌ ಟೆಕ್ನೀಶಿಯನ್‌ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಫಾರ್ಮಾಸಿಸ್ಟ್‌  ಹುದ್ದೆ ಖಾಲಿಯಿದೆ.

Advertisement

ಹುದ್ದೆ ಭರ್ತಿಗೆ ಸಂದರ್ಶನ 
ಸರಕಾರದ ಆದೇಶದಂತೆ ಜೂ. 21ಕ್ಕೆ ನಾವು ಎಂ.ಬಿ.ಬಿ.ಎಸ್‌. ಪದವೀಧರರ ಸಂದರ್ಶನ ಇಟ್ಟುಕೊಂಡಿದ್ದೆವು. ಜಿಲ್ಲೆಯಲ್ಲಿ 18ಕ್ಕೂ ಅಧಿಕ ಹುದ್ದೆಗಳು ಭರ್ತಿಯಾಗಬೇಕಿದೆ. ಆದರೆ ಸಂದರ್ಶನಕ್ಕೆ ಹಾಜರಾಗಿರುವುದು ಕೇವಲ 9 ಮಂದಿ. ಅದರಲ್ಲಿ ಕನ್ಯಾನವನ್ನು ಆಯ್ಕೆ ಮಾಡಿದವರಿಲ್ಲ. ಓರ್ವ ವೈದ್ಯರು ಪುಣಚ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಹುದ್ದೆ ಭರ್ತಿ ಮಾಡುವ ಉದ್ದೇಶದಿಂದ ಸಂದರ್ಶನ ಮಾಡುತ್ತೇವೆ. ಕನ್ಯಾನ ಆಸ್ಪತ್ರೆಯ ವೈದ್ಯಾಧಿಕಾರಿ ವಸತಿ ನಿಲಯದಲ್ಲಿ ಹಿಂದಿನ ವೈದ್ಯರು ವೈಯಕ್ತಿಕ ಸಮಸ್ಯೆಯಿಂದ ತಂಗುತ್ತಿರಲಿಲ್ಲ. ವಸತಿ ನಿಲಯವನ್ನು ಕಿಡಿಗೇಡಿಗಳು ಹಾನಿಗೈದಿದ್ದಾರೆ.
– ಡಾ| ರಾಮಕೃಷ್ಣ, DHO

ಪುಣಚ, ಸಜಿಪಕ್ಕೆ ವೈದ್ಯಾಧಿಕಾರಿ
ಕನ್ಯಾನ ಕೇಂದ್ರದಲ್ಲಿ ಸುಮಾರು 450 ಚದರ ಅಡಿ ವಿಸ್ತೀರ್ಣದ ಮೀಟಿಂಗ್‌ ಹಾಲ್‌ ನಿರ್ಮಾಣ ಹಂತದಲ್ಲಿದ್ದು, ಜುಲೈ ತಿಂಗಳ ಕೊನೆಗೆ ಆಸ್ಪತ್ರೆಗೆ ಹಸ್ತಾಂತರಗೊಳ್ಳಲಿದೆ. ತಾಲೂಕಿಗೆ ಒಟ್ಟು ಮೂವರು ವೈದ್ಯರು ಆಗಮಿಸಲಿದ್ದಾರೆ. ಪುಣಚ, ಸಜಿಪ ಆಸ್ಪತ್ರೆಗಳಿಗೆ ವೈದ್ಯಾಧಿಕಾರಿಗಳು ಆಗಮಿಸಲಿದ್ದಾರೆ.
– ಡಾ| ದೀಪಾ ಪ್ರಭು, THO

— ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next