Advertisement

ಗ್ರಾಮೀಣ ಭಾರತದಿಂದ ಮಾಧ್ಯಮ ದೂರು

03:19 PM Nov 17, 2018 | |

ಬೀದರ: ಮಾಧ್ಯಮಗಳು ಗ್ರಾಮೀಣ ಭಾರತದಿಂದ ದೂರವಾಗುತ್ತಿವೆ. ಕೃಷಿ ಕ್ಷೇತ್ರದ ಬಿಕ್ಕಟ್ಟುಗಳು, ರೈತರನ್ನು ಕಾಡುತ್ತಿರುವ ತಲ್ಲಣಗಳು, ನೀರಿಗಾಗಿನ ಸಂಕಟ ಸುದ್ದಿಯಾಗುತ್ತಿಲ್ಲ ಎಂದು ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಪಿ.ಸಾಯಿನಾಥ ವಿಷಾದ ವ್ಯಕ್ತಪಡಿಸಿದರು.

Advertisement

ನಗರದ ಸಪ್ನ ಮಾಲ್‌ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪತ್ರಿಕಾ ನೀತಿ ಮತ್ತು ಡಿಜಿಟಲ್‌ ಯುಗದ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಸಂಪತ್ತಿನ ಅಸಮಾನ ಹಂಚಿಕೆ ಬಗ್ಗೆ, ನಗರ ನಿವಾಸಿಗಳು ನೈಸರ್ಗಿಕ ಸಂಪನ್ಮೂಲಗಳನ್ನು ಅತಿಯಾಗಿ ಬಳಸುತ್ತಿರುವ ಬಗ್ಗೆ ಪತ್ರಿಕೆಗಳು ಮೌನವಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಪತ್ರಿಕೆಗಳು ಹುಟ್ಟಿದ್ದೇ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ. ಬಹುತೇಕ ಹೋರಾಟಗಾರರು ಪರ್ತಕರ್ತರೂ ಆಗಿದ್ದರು. 1947ಕ್ಕಿಂತ ಮೊದಲು ಉತ್ಕೃಷ್ಟ ಪತ್ರಕರ್ತರಿದ್ದರು ಎಂದು ಅವರು ಸ್ಮರಿಸಿದರು. ಗ್ರಾಮೀಣ ಭಾರತ ಅವನತಿಯತ್ತ ಸಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟು ಹೆಚ್ಚಿವೆ. ಕೃಷಿ ಮುಂದುವರಿಸಲಾರದ ಸ್ಥಿತಿ ನಿರ್ಮಾಣವಾಗಿದೆ. ಆದರೂ, ಇವು ಪತ್ರಕರ್ತರಿಗೆ ಮುಖ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

2011ರ ಗಣತಿ ಪ್ರಕಾರ ದೇಶದಲ್ಲಿ ಬೇಸಾಯಗಾರರ ಸಂಖ್ಯೆ ಇಳಿಮುಖವಾಗಿದೆ. 150 ಲಕ್ಷ ರೈತರು ಜಮೀನು ಕಳೆದುಕೊಂಡು ಕೃಷಿ ಕಾರ್ಮಿಕರಾಗಿ ಬದಲಾಗಿದ್ದಾರೆ. ಪ್ರತಿ ದಿನ 2,000 ರೈತರು ಬೇಸಾಯ ಬಿಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 1995ರಿಂದ 2015ರ ವರೆಗಿನ 20 ವರ್ಷಗಳ ಅವಧಿಯಲ್ಲಿ 3.10 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

2001ರಿಂದ 2015ರ ಅವಧಿಯಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಿದೆ. ಪ್ರತಿ 32 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ಗ್ರಾಮೀಣ ವರದಿಗಾರಿಕೆಯಿಂದಲೇ ದೇಶಾದ್ಯಂತ ಹೆಸರು ಮಾಡಿರುವ ಸಾಯಿನಾಥ ಹೇಳಿದರು.

ಕರ್ನಾಟಕದಲ್ಲೂ ರೈತರ ಆತ್ಮಹತ್ಯೆ ಹೆಚ್ಚಿದೆ. ಈ ವಿಷಯದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿ ಸಿಲುಕಿರುವುದರಿಂದಲೇ ರೈತರ ಆತ್ಮಹತ್ಯೆ ಮುಂದುವರಿದಿದೆ ಎಂದು ಅವರು ಪ್ರತಿಪಾದಿಸಿದರು. ದೇಶದಲ್ಲಿ ನೀರಿನ ದುರ್ಬಳಕೆ ಹೆಚ್ಚಿದೆ. ಹವಾಮಾನ ಬದಲಾವಣೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದರೆ, ಇಂತಹ ವಿದ್ಯಮಾನಗಳು ದೊಡ್ಡ ಸುದ್ದಿ ಆಗುತ್ತಿಲ್ಲ ಎಂದು ವಿಷಾದಿಸಿದರು. 

ಕುಡಿಯುವ ನೀರಿನ ಅತಿಯಾದ ಬಳಕೆ ಮೇಲೂ ಅವರು ಬೆಳಕು ಚೆಲ್ಲಿದರು. ಮುಂಬೈ ಬಾಂದ್ರಾ ಉಪನಗರದಲ್ಲಿ ದಿನದ 24 ತಾಸು ನೀರು ಪೂರೈಕೆಯಾಗುತ್ತದೆ. ಈ ನೀರು ಬರುವುದು ಥಾಣೆ ಜಿಲ್ಲೆಯ ಐದು ಹಳ್ಳಿಗಳಿಂದ. ಈ ಐದೂ ಹಳ್ಳಿಗಳಲ್ಲಿರುವ ಆದಿವಾಸಿಗಳ ಪೈಕಿ ಒಬ್ಬರೂ ನೀರಿನ ಸಂಪರ್ಕ ಹೊಂದಿಲ್ಲ. ಆದರೆ, ಬಾಂದ್ರಾ ನಿವಾಸಿಗಳು ದಿನವಿಡೀ ನೀರು ಚೆಲ್ಲುತ್ತಲೇ ಇರುತ್ತಾರೆ ಎಂದು ಅವರು ಹೇಳಿದರು. ದೇಶದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಿದೆ. ಆದರೆ, ಮಾನವ ಅಭಿವದ್ಧಿಯಲ್ಲಿ ದೇಶ ಹಿಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಹಕಾರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶಂಪುರ ಮಾತನಾಡಿ, ಅ ಧಿಕಾರಿಗಳು ವರದಿ ಕೊಡುವ ಮೊದಲೇ ಪತ್ರಿಕೆಗಳು ಆ ಮಾಹಿತಿಯನ್ನು ನಮಗೆ ತಲುಪಿಸುವ ಮಹತ್ಕಾರ್ಯ ಮಾಡುತ್ತವೆ. ಹೀಗಾಗಿ ಪತ್ರಿಕಾ ರಂಗದ ಘನತೆ ಗೌರವಿಸುವಂಥದ್ದಾಗಿದೆ ಎಂದು ಹೇಳಿದರು. 

ಕಾರ್ಯಕ್ರಮಕ್ಕೆ ಆಗಮಿಸಿದ್ದ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಇದೇ ವೇಳೆ ಸಚಿವರು ಭವಿಷ್ಯದ ನಿಮ್ಮ ದಿನಗಳು ಸುಂದರವಾರಲಿ ಎಂದು ಹಾರೈಸಿದರು. ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬು ವಾಲಿ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು, ಜಿಪಂ ಅಧ್ಯಕ್ಷ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ, ವಿಜಯಪುರ ಮಹಿಳಾ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ| ಓಂಕಾರ ಕಾಕಡೆ, ಅಕಾಡೆಮಿ ಸದಸ್ಯರಾದ ಮುತ್ತು ನಾಯ್ಕರ, ಜಿ. ವೆಂಕಟಸಿಂಗ್‌, ಎನ್‌. ನಾಗರಾಜ, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ. ರೂಪಾ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಪ್ರಮುಖರಾದ ಶಿವಶರಣಪ್ಪ ವಾಲಿ, ಮಲ್ಲಿಕಾರ್ಜುನ ಬಿರಾದಾರ, ಸಿದ್ರಾಮ ಡಿ.ಕೆ., ಗಂಧರ್ವ ಸೇನಾ, ಮಾಳಪ್ಪ ಅಡಸಾರೆ, ಶಶಿಕುಮಾರ ಪಾಟೀಲ ಸಂಗಮ, ಆನಂದ ದೇವಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next