Advertisement

ರಾಮಮಂದಿರದೊಂದಿಗೆ ರಾಮರಾಜ್ಯ ಸ್ಥಾಪನೆಯಾಗಲಿ: ಪೇಜಾವರ ಶ್ರೀ

07:32 PM Jan 25, 2023 | Team Udayavani |

ಬೆಂಗಳೂರು: ಇನ್ನೊಂದು ವರ್ಷದಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ರಾಮ ರಾಜ್ಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಮರ್ಥ್ಯ ಇದ್ದವರು ಸೂರಿಲ್ಲದವರಿಗೆ ಮನೆ ಕಟ್ಟಿಸುವ ಕೈಂಕರ್ಯದಲ್ಲಿ ತೊಡಗಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಮುಂದಿನ ಮಕರ ಸಂಕ್ರಮಣದ ಬಳಿಕದ ಶುಭ ಲಗ್ನದಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪತ್ರಿಷ್ಠಾಪನೆ ನಡೆಯಲಿದೆ. ಈ ಸಂದರ್ಭವನ್ನು ಬಳಸಿಕೊಂಡು ಮುಂದಿನ ಒಂದು ವರ್ಷದಲ್ಲಿ ಸಾಧ್ಯವಾದಷ್ಟು ಸಮಾಜಪರ ಕೆಲಸ ಮಾಡಿ ರಾಮ ಮಂದಿರದ ಜತೆಗೆ ರಾಮ ರಾಜ್ಯ ಸ್ಥಾಪನೆ ಆಗುವಂತೆ ನೋಡಿಕೊಳ್ಳಬೇಕು. ಹಾಗಾಗಿ ವಸತಿ ಸೌಕರ್ಯ ಇಲ್ಲದವರಿಗೆ ವಸತಿ ಕಲ್ಪಿಸುವ ಪ್ರಯತ್ನವನ್ನು ಮಾಡೋಣ. ಕನಿಷ್ಠ 5 ಲಕ್ಷ ರೂ ವಿನಿಯೋಗಿಸಿ ಮನೆಯಿಲ್ಲದವರಿಗೆ ಮನೆ ಕಟ್ಟೋಣ ಎಂದು ತಿಳಿಸಿದರು.

ದೊಡ್ಡ ದೊಡ್ಡ ಸಂಸ್ಥೆಗಳು, ಕ್ಲಬ್‌, ಸೊಸೈಟಿಗಳು ಒಂದಿಡೀ ಗ್ರಾಮವನ್ನೇ ದತ್ತು ತೆಗೆದುಕೊಂಡು ಹತ್ತು ಮನೆಗಳನ್ನು ಕಟ್ಟಿಸಬಹುದು. ಪುತ್ತೂರಿನಲ್ಲಿ ಒಬ್ಬರು ಮುನ್ನೂರು, ಉಡುಪಿಯಲ್ಲಿ ಒಬ್ಬರು ಇನ್ನೂರು ಮನೆ ಕಟ್ಟಿಸಿದ ಉದಾಹರಣೆ ಇದೆ. ಇದು ಸಮಾಜದ ಇತರರಿಗೆ ಸ್ಫೂರ್ತಿಯಾಗಲಿ ಎಂದು ಸ್ವಾಮೀಜಿ ಆಶಿಸಿದರು.

ವಸತಿ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಆ್ಯಪ್‌ ಒಂದನ್ನು ರಚಿಸುವ ಚಿಂತನೆ ಇದೆ. ಯೋಜನೆಯಲ್ಲಿ ಭಾಗಿಯಾಗುವ ಬಯಕೆ ಹೊಂದಿರುವವರನ್ನು ಆ್ಯಪ್‌ ಮೂಲಕ ಜೋಡಿಸುವ ಆಶಯ ಹೊಂದಲಾಗಿದೆ. ರಾಮ ರಾಜ್ಯ ಸಂಕಲ್ಪ ಎಂಬ ಈ ಅಭಿಯಾನಕ್ಕೆ ಪ್ರಧಾನ ಮಂತ್ರಿಗಳು ಚಾಲನೆ ನೀಡಬೇಕು ಎಂದು ತಾವು ಬಯಸಿರುವುದಾಗಿ ತಿಳಿಸಿದರು.

ಉಚಿತ ಸೇವೆ ನೀಡಿ
ವಕೀಲರು ಬಡ ಕಕ್ಷಿದಾರರಿಗೆ ಉಚಿತವಾಗಿ ಕಾನೂನು ನೆರವು, ವೈದ್ಯರು ಹತ್ತು ಜನ ಬಡ ರೋಗಿಗಳಿಗೆ ಚಿಕಿತ್ಸೆ, ಶಿಕ್ಷಕರು ಹತ್ತು ಜನ ವಿದ್ಯಾರ್ಥಿಗಳಿಗೆ ಟ್ಯೂಷನ್‌ ನೀಡುವುದು ಹೀಗೆ ಜನರು ತಮ್ಮ ವೃತ್ತಿಯ ಸೀಮೆಯ ಒಳಗೆಯೇ ಸಮಾಜಕ್ಕೆ ನೆರವು ನೀಡುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.

Advertisement

ಈ ಹಿಂದೆ ರಾಜನೇ ರಾಜ್ಯ ಮುನ್ನಡೆಸುತ್ತಿದ್ದ ಹಿನ್ನೆಲೆಯಲ್ಲಿ ರಾಜ ರಾಮನಂತಿದ್ದರೆ ಸಾಕಿತ್ತು. ಆದರೆ ಈಗ ಪ್ರಜಾ ರಾಜ್ಯವಿದೆ. ಪ್ರಜೆಗಳೆಲ್ಲರೂ ರಾಮನಾಗುವ ಅಗತ್ಯವಿದೆ. ರಾಮನಲ್ಲಿದ್ದ ಸದ್ಗುಣಗಳನ್ನು ಪ್ರಜೆಗಳಲ್ಲಿ ತುಂಬಲು ಮುಂದಿನ ದಿನಗಳಲ್ಲಿ ರಾಮಾಯಣ ಅಧ್ಯಯನಕ್ಕೆ ವಿಶೇಷ ಒತ್ತು ನೀಡೋಣ. ರಾಮಯಣ ಪ್ರವಚನಗಳನ್ನು ಎಲ್ಲೆಡೆ ಆಯೋಜಿಸೋಣ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಹೇಳಿದರು.

ರಾಮಭಕ್ತಿ ಬೇರೆಯಲ್ಲ, ದೇಶ ಭಕ್ತಿ ಬೇರೆಯಲ್ಲ. ರಾಮಸೇವೆ ಬೇರೆಯಲ್ಲ, ದೇಶ ಸೇವೆ ಬೇರೆಯಲ್ಲ. ಸಂಕಷ್ಟದಲ್ಲಿರುವವರ ಸೇವೆ ಮಾಡುವುದೆಂದರೆ ರಾಮನಿಗೆ ಕಾಣಿಕೆ ಸಲ್ಲಿಸಿದಂತೆ ಎಂದು ಸ್ವಾಮೀಜಿ ಹೇಳಿದರು.

ರಾಮ ಟೀಕೆ ಪ್ರಚಾರದ ಗಿಮಿಕ್‌
ರಾಮ ಹಾಗೂ ರಾಮಚರಿತಾ ಮಾನಸವನ್ನು ಟೀಕಿಸುವ ವ್ಯಕ್ತಿಗಳನ್ನು ವೈಭವೀಕರಿಸುವ ಅಗತ್ಯವಿಲ್ಲ. ಅವರು ಕೇವಲ ಪ್ರಚಾರ ಪಡೆಯಲು ರಾಮನನ್ನು ಟೀಕಿಸುತ್ತಿದ್ದಾರೆ. ನಾವು ರಾಮಾಯಣದ ಆಶಯಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಕೆಲಸದಲ್ಲಿ ತೊಡಗೋಣ ಎಂದು ಸ್ವಾಮೀಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next