ನವದೆಹಲಿ:ಪ್ರಸಿದ್ಧ ಮಾತಾ ವೈಷ್ಣೋ ದೇವಿ ಯಾತ್ರೆ ಆಗಸ್ಟ್ 16ರಂದು (ಆಗಸ್ಟ್ 16, 2020) ಆರಂಭವಾಗಲಿದ್ದು, ದಿನಂಪ್ರತಿ ಕೇವಲ 2 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ದೇವಾಲಯದ ಮಂಡಳಿ ತಿಳಿಸಿದೆ.
ಎರಡು ಸಾವಿರ ಯಾತ್ರಾರ್ಥಿಗಳಲ್ಲಿ ಜಮ್ಮು-ಕಾಶ್ಮೀರರೇತರ ಕೇವಲ 100 ಮಂದಿಗೆ ಮಾತ್ರ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಒಂದು ವಾರದ ನಂತರ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ 18ರಂದು (2020) ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಜಮ್ಮು-ಕಾಶ್ಮೀರ ಸರ್ಕಾರ ಆಗಸ್ಟ್ 11ರಂದು ಧಾರ್ಮಿಕ ಸ್ಥಳವನ್ನು ತೆರೆಯುವ ಮತ್ತು ಪೂಜೆ ಸಲ್ಲಿಸಲು ಹಲವಾರು ಮಾರ್ಗಸೂಚಿಯೊಂದಿಗೆ ಅನುಮತಿ ನೀಡತ್ತು.
ಕೋವಿಡ್ 19 ವೈರಸ್ ನಿಂದಾಗಿ ಸುಮಾರು ಐದು ತಿಂಗಳ ನಂತರ ಯಾತ್ರೆ ಪುನರಾರಂಭವಾಗುತ್ತಿದೆ. ವೈಷ್ಣೋದೇವಿ ಯಾತ್ರೆಯ ವೇಳೆ ಯಾತ್ರಾರ್ಥಿಗಳು ಅನುಸರಿಸಬೇಕಾದ ಹಲವು ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆಗೊಳಿಸಿತ್ತು.
ಜಮ್ಮು-ಕಾಶ್ಮೀರ ಆಡಳಿತ ಬಿಡುಗಡೆಗೊಳಿಸಿದ ಮಾರ್ಗಸೂಚಿ ಪ್ರಕಾರ, ಹತ್ತು ವರ್ಷದೊಳಗಿನ ಮಕ್ಕಳಿಗೆ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಇಲ್ಲ. ಎಲ್ಲಾ ಯಾತ್ರಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೆಲವು ಸಮಯದವರೆಗೆ ರಾತ್ರಿ ಸಂಚಾರವನ್ನು ಬಂದ್ ಮಾಡಲಾಗುವುದು. ಮಾತಾ ಭವನದಲ್ಲಿ ಭಕ್ತರು ಉಳಿದುಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.