Advertisement

ಮಸ್ಕಿಯಲ್ಲಿ ಕಣಕ್ಕಿಳಿದ ಉಸ್ತುವಾರಿಗಳು

06:30 PM Mar 18, 2021 | Team Udayavani |

ಮಸ್ಕಿ: ಮತಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ಚುನಾವಣೆಯಲ್ಲಿ ಉಸ್ತುವಾರಿಗಳನ್ನಾಗಿ ನೇಮಕ ಮಾಡಿದವರೆಲ್ಲರೂ ಕೂಡಲೇ ಮಸ್ಕಿ ಅಖಾಡಕ್ಕೆ ಇಳಿಯುವಂತೆ ಕಾಂಗ್ರೆಸ್‌, ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ.

Advertisement

ಬಿಜೆಪಿ ಮತ್ತು ಕಾಂಗ್ರೆಸ್‌ ಎರಡು ಪಕ್ಷದಲ್ಲೂ ಚುನಾವಣೆ ಉಸ್ತುವಾರಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಮುಖ್ಯ ಮತ್ತು ಸಹ ಉಸ್ತುವಾರಿಗಳ ಹೆಸರನ್ನು ಪ್ರಕಟಿಸಲಾಗಿದೆ. ಮಸ್ಕಿ ಕ್ಷೇತ್ರದಲ್ಲಿನ ಮತದಾರರ ಮೈಂಡ್‌ಸೆಟ್‌, ಜಾತಿ ಲೆಕ್ಕಾಚಾರದಲ್ಲಿ ಮತ ಗಳಿಕೆ ಯೋಜನೆಯಿಂದ ಉಸ್ತುವಾರಿಯನ್ನು ಎರಡು ಪಕ್ಷದಲ್ಲಿ ನೇಮಕ ಮಾಡಲಾಗಿದೆ. ಚುನಾವಣೆಯ ಮುಖ್ಯ ಉಸ್ತುವಾರಿಗಳು ನಾಮಪತ್ರ ಸಲ್ಲಿಕೆ ವೇಳೆ ಆಗಮಿಸಲ್ಲಿದ್ದು, ಸದ್ಯ ಸಹ ಉಸ್ತುವಾರಿಗಳಾಗಿ ನೇಮಕವಾದವರೆಲ್ಲರೂ ಫೀಲ್ಡ್‌ಗೆ ಇಳಿಯುವಂತೆ ನಿರ್ದೇಶನ ನೀಡಲಾಗಿದೆ. ಈ ಆದೇಶದ ಅನುಸಾರ ರಾಜಕೀಯ ಪಕ್ಷಗಳ ಮುಖಂಡರು
ಮಸ್ಕಿ ಅಖಾಡಕ್ಕೆ ಧುಮುಕಲಿದ್ದಾರೆ.

ಉಸ್ತುವಾರಿಯಲ್ಲಿ ಯಾರ್ಯಾರು?: ಬಿಜೆಪಿಯಲ್ಲಿ ಸಚಿವ ಬಿ.ಶ್ರೀರಾಮುಲು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಸಹ ಉಸ್ತುವಾರಿಗಳನ್ನಾಗಿ ನೇಮಿರಾಜ್‌ ನಾಯ್ಕ, ಶಾಸಕ ನರಸಿಂಹ ನಾಯಕ (ರಾಜುಗೌಡ), ಡಾ| ಶಿವರಾಜ್‌ ಪಾಟೀಲ್‌, ಶಾಸಕರಾದ ದೊಡ್ಡನಗೌಡ ಪಾಟೀಲ್‌, ಪರಣ್ಣ ಮನವಳ್ಳಿ, ಬಸವರಾಜ ದಡೇಸುಗೂರು ಸೇರಿ ನೆರೆಯ ಹಾಲಿ-ಮಾಜಿ ಚುನಾಯಿತರನ್ನು ಈಗಾಗಲೇ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಬಿ.ವೈ. ವಿಜಯೇಂದ್ರ ಮಾ.19ರಂದು ಮಸ್ಕಿಗೆ ಆಗಮಿಸಲಿದ್ದಾರೆ. ಇದಕ್ಕೂ ಪೂರ್ವವಾಗಿ ಮಾ.18ರಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಆಗಮಿಸಲಿದ್ದು, ಸ್ಥಳೀಯವಾಗಿ ಎಲ್ಲ ಮುಖಂಡರನ್ನು ಒಳಗೊಂಡು ರಾಜಕೀಯ ತಂತ್ರಗಾರಿಕೆ ಹೆಣೆಯಲಿದ್ದಾರೆ. ಇನ್ನು ಮಾ.20ರಂದು ಸಿಎಂ ಯಡಿಯೂರಪ್ಪ ಆಗಮಿಸುವುದರಿಂದ ಸಹಜವಾಗಿಯೇ ಬಿಜೆಪಿಯಲ್ಲಿ ರಾಜಕೀಯ ರಂಗು ಚುರುಕು ಪಡೆದಿದೆ.

ಹೋಬಳಿವಾರು ನೇಮಕ: ಕಾಂಗ್ರೆಸ್‌ನಲ್ಲೂ ಈ ಭಾಗದ ಹಾಲಿ-ಮಾಜಿ ಚುನಾಯಿತರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ, ವಿಧಾನ ಪರಿಷತ್‌ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಎನ್‌.ಎಸ್‌. ಭೋಸರಾಜು, ಕೆ.ಸಿ.ಕೊಂಡಯ್ಯ, ನಾಸೀರ್‌ ಹುಸೇನ, ಅಮರೇಗೌಡ ಬಯ್ನಾಪೂರ, ಹಂಪನಗೌಡ ಬಾದರ್ಲಿ, ಇಕ್ಬಾಲ್‌ ಅನ್ಸಾರಿ, ಸೈಯ್ಯದ್‌ ಯಾಸಿನ್‌, ಬಸನಗೌಡ ಬಾದರ್ಲಿ, ಕೆ.ಕರಿಯಪ್ಪ ಸೇರಿ ಹಲವು ನಾಯಕರಿಗೆ ಉಸ್ತುವಾರಿ ವಹಿಸಲಾಗಿದೆ. ಇನ್ನು ಹೋಬಳಿವಾರು, ಮಸ್ಕಿ ನಗರಕ್ಕೂ ಪ್ರತ್ಯೇಕವಾಗಿ ಉಸ್ತುವಾರಿ ವಹಿಸಲಾಗಿದೆ.

ಈ ಎಲ್ಲ ನಾಯಕರು ಈಗ ಮಸ್ಕಿ ಅಖಾಡಕ್ಕೆ ಕಾಲಿಡುತ್ತಿದ್ದಾರೆ. ಇವರೆಲ್ಲರಿಗೂ ಹೋಬಳಿವಾರು ಹಳ್ಳಿಗಳನ್ನು ಹಂಚಿಕೆ ಮಾಡಲಾಗಿದ್ದು, ಎಲ್ಲೆಂದರಲ್ಲಿ
ಪ್ರಚಾರದ ಅಬ್ಬರ ಜೋರಾಗಲಿದೆ.

Advertisement

21ರ ಬಳಿಕ ಶಕ್ತಿ ಪ್ರದರ್ಶನ: ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮುನ್ನವೇ ಎರಡೂ ಪಕ್ಷದಿಂದ ಪ್ರತ್ಯೇಕವಾಗಿ ಶಕ್ತಿ ಪ್ರದರ್ಶನ, ಬೃಹತ್‌ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆದಿವೆ. ಈಗಾಗಲೇ ಬಿಜೆಪಿ ವತಿಯಿಂದ ಮಾ.20ರಂದು ಸಿಎಂ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಇಲ್ಲಿನ ಜನಸ್ಪಂದನೆ ಗಮನಿಸಿ ಕಾಂಗ್ರೆಸ್‌ ಕೂಡ ಬೃಹತ್‌ ಕಾರ್ಯಕ್ರಮ ಆಯೋಜನೆಗೆ ಚಿಂತನೆ ನಡೆಸಿದೆ. ನಾಮಪತ್ರ ಸಲ್ಲಿಕೆ ಆರಂಭದ ಬಳಿಕ ಎರಡು ಪಕ್ಷದ ದಿಗ್ಗಜ ನಾಯಕರ ದರ್ಶನ ಮಸ್ಕಿ ಅಖಾಡದಲ್ಲಿ ನಡೆಯಲಿದೆ.

ಸೂತ್ರ ಹೆಣೆಯುತ್ತಿವೆ ಪಕ್ಷಗಳು ಕಳೆದ ಮೂರು ಚುನಾವಣೆಗಳಿಗಿಂತಲೂ ಈ ಬಾರಿಯ ಮಸ್ಕಿ ಕ್ಷೇತ್ರದ ಚುನಾವಣೆ ತೀವ್ರ ರಂಗು ಪಡೆದಿದೆ. ಆರ್‌. ಬಸನಗೌಡ ತುರುವಿಹಾಳ ವರ್ಸಸ್‌ ಪ್ರತಾಪಗೌಡ ಪಾಟೀಲ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಹೀಗಾಗಿ ಎರಡು ಪಕ್ಷದ ನಾಯಕರು ರಾಜಕೀಯ ತಂತ್ರ ಹೆಣೆಯುತ್ತಿದ್ದಾರೆ. ವಿಶೇಷವಾಗಿ ಜಾತಿ ಲೆಕ್ಕಾಚಾರದಲ್ಲಿ ಮತಗಳಿಕೆ ತೀವ್ರವಾಗಿದ್ದು, ಬಹಿರಂಗ ಪ್ರಚಾರ ಕಾವೇರಿದಾಗ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆ ನಡೆಯುವುದು ದಟ್ಟವಾಗಿವೆ.

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next