ಬೆಂಗಳೂರು: ವಿವಿಧ ಸಭೆ-ಸಮಾರಂಭಗಳಲ್ಲಿ ಗಣ್ಯ ವ್ಯಕ್ತಿಗಳು ಮತ್ತು ರಾಜಕಾರಣಿಗಳಿಗೆ ಹಣ್ಣು -ಹೂವು, ತರಕಾರಿ ಹಾರಗಳನ್ನು ಹಾಕಲು ಜೆಸಿಬಿ-ಕ್ರೇನ್ ಬಳಕೆಯನ್ನು ನಿಷೇಧಿಸಬೇಕೆಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದರು.
ಬುಧವಾರ ಕಲಾಪದ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾವಿಸಿದ ಮರಿತಿಬ್ಬೇಗೌಡ, ಸಮಾರಂಭ, ಮನರಂಜನೆ, ಜಾತ್ರೆ, ಮೆರವಣಿಗೆ ಮತ್ತು ಖಾಸಗಿ ಹಾಗೂ ವಿವಿಧ ಧಾರ್ಮಿಕ ಸಮಾರಂಭಗಳಲ್ಲಿ ಗಣ್ಯ ವ್ಯಕ್ತಿಗಳಿಗೆ ಹಾಗೂ ರಾಜಕಾರಣಿಗಳಿಗೆ ಅಭಿಮಾನಿಗಳು ಜೆಸಿಬಿ ಮತ್ತು ಕ್ರೇನ್ಗಳನ್ನು ಅನಧಿಕೃತವಾಗಿ ಬಳಸಿ ದಟ್ಟ ಜನಸಂದಣಿಯಲ್ಲಿ ಜೆಸಿಬಿ-ಕ್ರೇನ್ಗಳ ಮೇಲೆ ನಿಂತು ಅಲ್ಲಿಂದ ಹೂವು ಚೆಲ್ಲುವುದು, ಸೇಬು, ಮೂಸಂಬಿ, ಕಿತ್ತಲೆ ಇನ್ನಿತರ ಹಣ್ಣುಗಳಿಂದ ತಯಾರಿಸಿದ ದೊಡ್ಡ ಹಾರ-ತುರಾಯಿಗಳನ್ನು ಹಾಕುತ್ತಾರೆ.
ಜೆಸಿಬಿ-ಕ್ರೇನ್ ದುರ್ಬಳಕೆಯಿಂದ, ಅವಘಡಗಳು ಸಂಭವಿಸುತ್ತಿದೆ. ಜತೆಗೆ, ನಗರ ಮತ್ತು ಪಟ್ಟಣ ಪ್ರದೇಶಗಳ ಮುಖ್ಯ ರಸ್ತೆಗಳಲ್ಲಿ ಇದೇ ರೀತಿಯ ದೊಡ್ಡ ಗಾತ್ರದ ಫ್ಲೆಕ್ಸ್, ಬ್ಯಾನರ್ ಹಾಗೂ ಕಟೌಟ್ಗಳನ್ನು ಹಾಕುವುದರಿಂದ ಸಂಘರ್ಷಗಳು, ಅಪಘಾತಗಳು ಹಾಗೂ ಪರಿಸರ ಮಾಲಿನ್ಯದಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸರಕಾರಿ ಆದೇಶ ಹೊರಡಿಸಿ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಯವರಿಂದ ಇದಕ್ಕೆ ಉತ್ತರ ಕೊಡಿಸುವುದಾಗಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.