Advertisement

ಮಾರುವ ಕಾಡಾಗಿ ಬದಲಾದ ಜಗತ್ತನ್ನು ತೋರಿಸಿದ ಮಾರಿಕಾಡು

06:00 AM May 04, 2018 | |

 ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ, ಮನುಷ್ಯನ ಮನದ ಮುಂದಿನ ಆಸೆಯೇ ಮಾಯೆ ಎಂಬ ಅಲ್ಲಮನ ವಚನದ ಸುಮಧುರ ಗಾಯನದೊಂದಿಗೆ ಆರಂಭವಾದ ಮಾರಿಕಾಡು ನಾಟಕ ಮನುಷ್ಯನ ದುರಾಸೆ ಮತ್ತು ಮಹತ್ವಾಕಾಂಕ್ಷೆಗಳ ದುರಂತವನ್ನು ಮನ ಕದಡುವಂತೆ ಪ್ರಸ್ತುತ ಪಡಿಸಿತು. ಮಂಡ್ಯ ರಮೇಶ್‌ ಅವರ ಮೈಸೂರಿನ “ನಟನಾ’ ತಂಡವು ಈ ನಾಟಕವನ್ನು ಉಡುಪಿಯ ರಂಗಭೂಮಿ ಸಂಸ್ಥೆಯು ಎಂ.ಜಿ.ಎಂ.ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗ ಸಂಘಟಕರಾದ ಆನಂದ ಗಾಣಿಗರ ನೆನಪಿನಲ್ಲಿ ನಡೆಸಿದ ಆನಂದೋತ್ಸವದ ಸಂದರ್ಭದಲ್ಲಿ ಪ್ರದರ್ಶಿಸಿತು. ಶೇಕ್ಸ್‌ಪಿಯರ್‌ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿದವರು ಡಾ|ಚಂದ್ರಶೇಖರ ಕಂಬಾರ ಹಾಗೂ ನಿರ್ದೇಶಿಸಿದವರು ಮೇಘ ಸಮೀರ.

Advertisement

 ನಾಟಕಕಾರ ಮನುಷ್ಯ ಮನಸ್ಸುಗಳ ಆಳಕ್ಕಿಳಿದು ಯೋಚನೆಗಳನ್ನು ಹೊರ ಹಾಕುತ್ತಿದ್ದಾನೇನೋ ಎನ್ನುವ ಭ್ರಮೆ ಹುಟ್ಟಿಸುವ ನಾಟಕ. ತನ್ನ ಆಸೆಗಳ ಪೂರೈಕೆಗೆ ಅಡ್ಡಿಯಾಗಿ ಬರುವ ಹಲವರ ಕಗ್ಗೊಲೆ ನಡೆಸಲು ಹೇಸದ ಮ್ಯಾಕ್‌ಬೆಥ್‌ ದಂಪತಿಯ ಬದುಕು ದಾರುಣ ಅಂತ್ಯಕ್ಕೀಡಾಗುವ ಕಥೆ ಇಲ್ಲಿದೆ. ಭಾಷೆ ಮತ್ತು ಸಂಸ್ಕೃತಿಗೆ ಒಗ್ಗುವ ರೀತಿಯಲ್ಲಿ ಬದಲಾವಣೆಗಳೊಂದಿಗೆ, ಮೂಲಸತ್ವವನ್ನು ಉಳಿಸಿಕೊಂಡು ಕಂಬಾರರು ಕನ್ನಡಕ್ಕೆ ಅಳವಡಿಸಿಕೊಂಡಿದ್ದಾರೆ. ರಂಗಕ್ಕೆ ಅಳವಡಿಸಿಕೊಳ್ಳುವಾಗ ನಿರ್ದೇಶಕರು ನಾಟಕ ನೀಡುವ ಸಂದೇಶದ ಸಂವಹನವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಮತ್ತು ಆಧುನಿಕ ಜಗತ್ತಿನ ದುರಂತಗಳಿಗೆ ಅನ್ವಯಿಸುವ ರೀತಿಯಲ್ಲಿ ಹೊಂದಿಸಿಕೊಳ್ಳುವ ಉದ್ದೇಶದಿಂದ ಇನ್ನೂ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡದ್ದು ಮೆರುಗು ನೀಡಿದೆ. ಮೂಲ ನಾಟಕದಲ್ಲಿ ಸಂಭವಿಸುವ ಘಟನೆಗಳಿಗೆ ಸಮಾಂತರವಾಗಿ ಅಳವಡಿಸಿಕೊಂಡ ತಂತ್ರಗಳೇ ಇದಕ್ಕೆ ಸಾಕ್ಷಿ. 

 ರಂಗಸಜ್ಜಿಕೆಯಲ್ಲಿ ಎದ್ದು ಕಾಣುತ್ತಿದ್ದದ್ದು ವಾಣಿಜ್ಯೀಕೃತ ಜಗತ್ತಿನಲ್ಲಿ ಗ್ರಾಹಕರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನದಲ್ಲಿ ತೊಡಗಿರುವ ವ್ಯಾಪಾರ ಜಾಲವನ್ನು ಪ್ರತಿನಿಧಿಸುವ ಮತ್ತು ಅಧಿಕಾರ ಕ್ಷೇತ್ರದಲ್ಲಿ ಕಾಣುವ ವಿವಿಧ ಅವಕಾಶಗಳತ್ತ ಬೊಟ್ಟುಮಾಡಿ ತೋರಿಸುವ ಫ‌ಲಕಗಳು. ನಾಟಕದೊಳಗಿನ ಮಾರಿಗಳು ವಾಸಿಸುವ ಭಯಾನಕ ಕಾಡಿಗೇನೂ ಕಮ್ಮಿಯಿಲ್ಲದ ಸುಳ್ಳು ಆಮಿಷಗಳನ್ನೊಡ್ಡಿ ತನ್ನತ್ತ ಸೆಳೆಯುವ ಆಧುನಿಕ ಜಗತ್ತಿನ ಮಾರುಕಟ್ಟೆ ಎಂಬ ಕಾಡಿನ ಕಬಂಧ ಬಾಹುಗಳೊಳಗೆ ಸಿಕ್ಕಿ ಬಿದ್ದ ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಮಾಡುವ ಹುನ್ನಾರಗಳಿಗೂ ಮದಕರಿ ನಾಯಕನಾಗಲಿ ಮ್ಯಾಕ್‌ಬೆಥ್‌ ಆಗಲಿ ಮಾಡುವ ಸಂಚುಗಳಿಗೂ ಏನೂ ವ್ಯತ್ಯಾಸವಿಲ್ಲ ಎಂಬುದನ್ನು ನಾಟಕ ಸಾರಿ ಹೇಳುತ್ತದೆ. ಹಳೆಯ ಕಥೆಗೊಂದು ಹೊಸ ಸಮಾಂತರವನ್ನು ಸೃಷ್ಟಿಸಿದ ಹೆಮ್ಮೆ ರಂಗಕೃತಿಗೆ ಸಲ್ಲುತ್ತದೆ. ಆದ್ದರಿಂದಲೇ ಮೂಲ ನಾಟಕದಲ್ಲಿ ಮಾಟಗಾತಿಯರು ಅಥವಾ ಮಾರಿಗಳು ಮ್ಯಾಕ್‌ಬೆಥ್‌ನ ಮನದೊಳಗಣ ಆಲೋಚನೆಗಳಿಗೆ ರೂಪಕವಾಗಿ ನಿಲ್ಲುವಂತೆ ಮಾರುಕಟ್ಟೆಯ ತಂತ್ರಗಳು ಬಂಡವಾಳಶಾಹಿಗಳ ಮಹತ್ವಾಕಾಂಕ್ಷೆಯನ್ನೂ ಸಾರಿ ಹೇಳುತ್ತವೆೆ. ಕಾಲದ ಬದಲಾವಣೆಗೆ ಅನುಸಾರವಾಗಿ ಮನುಷ್ಯನ ಹೊರನೋಟ ಮತ್ತು ಸಂದರ್ಭಗಳಲ್ಲಷ್ಟೇ ಬದಲಾವಣೆಗಳು ಕಾಣಿಸಿಕೊಳ್ಳುತ್ತವ‌ಷ್ಟೇ ಹೊರತು ಒಳ ಜಗತ್ತು ಬದಲಾಗುವುದಿಲ್ಲ ಎಂಬ ಹೊಸ ಒಳನೋಟವನ್ನು ನಾಟಕವು ಕಟ್ಟಿ ಕೊಟ್ಟಿತು.”ನಟನಾ’ದಲ್ಲಿ ಈಗಿನ್ನೂ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಾದರೂ ಪ್ರತಿಯೊಬ್ಬ ನಟನ ಅಭಿನಯ, ಸಂಭಾಷಣೆ ಮತ್ತು ಚಲನವಲನಗಳ ನಿರ್ವಹಣೆ ಉತ್ತಮ ಮಟ್ಟದ್ದಾಗಿತ್ತು. ದೂತನ ಪಾತ್ರ ವಹಿಸಿ ರಂಗದ ಮೇಲೆ ಮಿಂಚಿ ಮಾಯವಾಗುವ ನಟನೂ ತನ್ನ ಛಾಪನ್ನೊತ್ತಬಲ್ಲ ಎಂಬುದನ್ನು ಇಲ್ಲಿ ದೂತರಾಗಿ ಅಭಿನಯಿಸಿದವರು ತೋರಿಸಿದರು. ಅದರಲ್ಲೂ ಕರಿಬಂಟ ತಪ್ಪಿಸಿಕೊಂಡು ಹೋದ ಎಂದವನನ್ನು ಮದಕರಿ ನಾಯಕ ಕೊಲ್ಲುವಾಗ ಅವನು ವಿಲವಿಲನೆ ಒದ್ದಾಡಿದ್ದು ತುಂಬ ನೈಜವಾಗಿ ಬಂತು. ಈ ಕಾರಣದಿಂದಾಗಿ ನಾಟಕದ ಓಘ ಎಲ್ಲೂ ನಿಧಾನವಾಗದೆ, ಚಕಚಕನೆ ಸಾಗಿದ ದೃಶ್ಯಗಳು ನಾಟಕದ ಯಶಸ್ಸಿಗೆ ಕಾರಣವಾದವು. ಶ್ರೀಪಾದ ಭಟ್‌ ಅವರ ಸಂಗೀತ ನಿರ್ದೇಶನದಲ್ಲಿ ದಿಶಾ ರಮೇಶ್‌ ಇಂಪಾಗಿ ಹಾಡಿದ ಹಾಡುಗಳು ಮತ್ತು ಏನೋ ಗಹನವಾದುದನ್ನು ಸೂಚಿಸುವಂತೆ ಭಾರ ನಡೆಯೊಂದಿಗೆ ಸಾಗಿದ ತಬಲ, ಡೋಲಕ್‌, ನಗಾರಿ,ತಾಸೆ, ತಮಟೆ,ಮಡಕೆ, ದಮ್ಮಡಿ, ಡೊಳ್ಳು ಮೊದಲಾದ ಮರ್ದನ ವಾದ್ಯಗಳು ಮತ್ತು ಹಾರ್ಮೋನಿಯಂ, ಕೊಳಲು , ಸ್ವರಮಂಡಲ ಮೊದಲಾದ ಸ್ವರವಾದ್ಯಗಳು, ಔಚಿತ್ಯಪೂರ್ಣವಾಗಿ ಬಳಸಿದ ವೇಷಭೂಷಣಗಳು ಮತ್ತು ಸಂದರ್ಭಕ್ಕೆ ಸೂಕ್ತವಾಗಿ ಮಾಡಿದ ಬೆಳಕಿನ ಪ್ರಯೋಗಗಳು ನಾಟಕದ ಸೊಬಗನ್ನು ಹೆಚ್ಚಿಸಿದವು.

 ಡಾ| ಪಾರ್ವತಿ ಜಿ.ಐತಾಳ್‌

Advertisement

Udayavani is now on Telegram. Click here to join our channel and stay updated with the latest news.

Next