Advertisement

ತ್ರಾಸಿ ಮರವಂತೆ : ಕಷ್ಟ ಕಾಲಕ್ಕೆ ಇಲ್ಲಿ ಯಾರೂ ಇಲ್ಲ

01:48 AM Apr 23, 2022 | Team Udayavani |

ಕುಂದಾಪುರ ಸುತ್ತಮುತ್ತ ಇರುವ ಕಡಲ ತೀರಗಳೂ ನೋಡಲು ಬಹಳ ಚೆನ್ನಾಗಿವೆ. ವಿಶೇಷವಾಗಿ ತ್ರಾಸಿ-ಮರವಂತೆ ಇತ್ಯಾದಿ ಸಮುದ್ರ ತೀರಗಳು ನೋಡಲು ಬಹಳ ಖುಷಿಯಾಗುವಂಥದ್ದು. ಆದರೆ ಕನಿಷ್ಠ ಎಚ್ಚರಿಕೆ, ಮೂಲಸೌಕರ್ಯಗಳು ಕರಾವಳಿ ತೀರಗಳಿಗೆ ಬೇಕೇಬೇಕು. ಈ ವಿಷಯ ಕುಂದಾಪುರ, ಬೈಂದೂರು ತಾಲೂಕಿನ ಸಮುದ್ರ ತೀರಗಳಿಗೆ ಅನ್ವಯ.

Advertisement

ಸುರಕ್ಷೆಗೆ ಕ್ರಮ ವಹಿಸಿಲ್ಲ
ಕುಂದಾಪುರದ ಕೋಡಿ ಬೀಚ್‌
ಕುಂದಾಪುರ: ಇಲ್ಲಿನ ಕೋಡಿ ಬೀಚ್‌ ರಾಜ್ಯದ ಅತಿ ಉದ್ದನೆಯ ಕರಾವಳಿ ತೀರ ಎಂಬ ಹೆಗ್ಗಳಿಕೆ ಪಡೆದಿದೆ. ಇಲ್ಲಿ ಸಮುದ್ರ ಕೊರೆತ ತಡೆಗಾಗಿ ನಿರ್ಮಿಸಿದ ಗೋಡೆ ಸೀ ವಾಕ್‌ ಮಾದರಿಯಲ್ಲಿದೆ. ಅತ್ತಲಿಂದ ಗಂಗೊಳ್ಳಿಯ ಸೀವಾಕ್‌, ಇತ್ತ ಕೋಡಿ ಸೀವಾಕ್‌ ಎರಡು ದಡಗಳಂತೆ ಕಾಣುತ್ತವೆ. ಬೋಟಿಂಗ್‌, ಕಾಂಡ್ಲಾ ವನ, ಡಾಲ್ಫಿನ್‌ ವೀಕ್ಷಣೆ, ಬೀಚ್‌ಹಾಗೂ ಸೀವಾಕ್‌ಗೆ ರಜಾದಿನಗಳಲ್ಲಿ ಸಾವಿರಾರು ಜನ ಬರುತ್ತಾರೆ. ಅವರ ಸುರಕ್ಷೆಗೆ ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಂಡಿಲ್ಲ. ಪುರಸಭೆ ವತಿಯಿಂದ ಸಂಚಾರಿ ಶೌಚಾಲಯ, ಸಿಸಿ ಕೆಮರಾ ಅಳವಡಿಸಲಾಗಿದೆ. ಅರಣ್ಯ ಇಲಾಖೆ ವತಿಯಿಂದ ಪರಿಸರ ಸ್ವತ್ಛತೆಗೆ ಇಬ್ಬರು ನೌಕರರು ಇದ್ದರಾದರೂ ಫೆಬ್ರವರಿಗೆ ಅವರ ಸೇವಾವಧಿ ಮುಗಿದ ಕಾರಣ ಮರುನವೀಕರಣ ಆಗಿಲ್ಲ.


ಮುಳುಗು ಪರಿಣತರು, ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ, ಜಾಕೆಟ್‌ಗಳು, ಬೋಟ್‌ಗಳು ಇದ್ಯಾವುದೂ ಇಲಾಖೆಗಳ ವತಿಯಿಂದ ಮಾಡಿಲ್ಲ. ಆದರೆ ಸ್ಥಳೀಯರು ರಕ್ಷಣೆಯ ಸ್ವಯಂಸೇವೆ ನಡೆಸುತ್ತಿದ್ದಾರೆ.

- ಲಕ್ಷ್ಮೀ ಮಚ್ಚಿನ

ಜೀವರಕ್ಷಕರಿಲ್ಲ , ಮುನ್ನೆಚ್ಚರಿಕೆ ಅಗತ್ಯ
ಬೈಂದೂರು ಸೋಮೇಶ್ವರ
ಬೈಂದೂರು: ಇಲ್ಲಿನ ಸೋಮೇ ಶ್ವರ ಕಡಲ ತೀರಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿ ರಕ್ಷಣೆಗೆ ಪ್ರವಾ ಸಿಗರೇ ಮುನ್ನೆಚ್ಚರಿಕೆ ವಹಿಸಬೇಕೇ ಹೊರತು ಬೇರೆ ವ್ಯವಸ್ಥೆಯಿಲ್ಲ.

ಹೆಚ್ಚಿನ ಕಡಲ ತೀರದಲ್ಲಿ ಪ್ರವಾಸಿ ಮಿತ್ರ ಯೋಜನೆಯಲ್ಲಿ ಜೀವ ರಕ್ಷಕ ರನ್ನು ನೇಮಿಸಲಾಗಿದೆ. ಆದರೆ ಇಲ್ಲಿ ಅವರೂ ಇಲ್ಲ. ಗ್ರೀನ್‌ ಪೊಲೀಸ್‌ ಸಹ ಇಲ್ಲ. ಕರಾವಳಿ ಕಾವಲು ಪಡೆ ಸಿಬಂದಿ ಸಂಜೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಜೀವರಕ್ಷಕ ಸಲಕರಣೆಗಳಿವೆ. ಅವಘಡ ಸಂಭವಿಸಿದರೆ ರಕ್ಷಣೆಗೆ ಬೇರೆ ವ್ಯವಸ್ಥೆ ಇಲ್ಲ. ಆ್ಯಂಬುಲೆನ್ಸ್‌, ಪ್ರಾಥಮಿಕ ಚಿಕಿತ್ಸೆ ಸೌಲಭ್ಯಗಳಿಲ್ಲ.


ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ 5 ಕೋಟಿ ರೂ. ಮಂಜೂರಾಗಿದೆ. ಪಾರ್ಕಿಂಗ್‌, ರೋಪ್‌ ವೇ, ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.

Advertisement

- ಅರುಣ್‌ ಶಿರೂರು

ಮನಮೋಹಕ; ಕಷ್ಟ ಬಂದರೆ ಅಸಹಾಯಕ
ತ್ರಾಸಿ – ಮರವಂತೆ ಬೀಚ್‌
ಮರವಂತೆ: ನದಿ-ಕಡಲಿನ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ತ್ರಾಸಿ – ಮರವಂತೆ ಕಡಲ ಕಿನಾರೆ ಆಕರ್ಷಣೆಗೆ ಒಳಗಾಗದವರಿಲ್ಲ. ನಿತ್ಯವೂ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ.
ಇಲ್ಲಿ ಸಮುದ್ರ ಆಳವಾಗಿರುವುದು ಮಾತ್ರವಲ್ಲದೆ, ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಕಡಲಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ. ಆದರೂ ಕೆಲವರು ನೀರಿಗಿಳಿದಾಗ, ಅವರನ್ನು ಎಚ್ಚರಿಸಲು ಮತ್ತು ಸಂಕಷ್ಟಕಾಲದಲ್ಲಿ ಕಾಪಾಡಲು ಪ್ರವಾಸಿ ಮಿತ್ರರಾಗಲೀ ಜೀವರಕ್ಷಕರಾಗಲೀ ಇಲ್ಲ.

ರಕ್ಷಣೆಗೆ ಒಬ್ಬರೂ ಇಲ್ಲ
ಗೃಹರಕ್ಷಕ ದಳದ ಇಬ್ಬರು ಸಿಬಂದಿಯನ್ನು ಪ್ರವಾಸಿ ಮಿತ್ರರನ್ನಾಗಿ ನೇಮಿಸಲಾಗಿದೆ. ಆದರೆ ಮಾರ್ಚ್‌ವರೆಗೆ ಅವರು ಕಾರ್ಯನಿರ್ವಹಿಸಿದ್ದು, ಎಪ್ರಿಲ್‌ನಿಂದ ಅವರಿಗೆ ಪ್ರವಾಸೋದ್ಯಮ ಇಲಾಖೆಯು ಆದೇಶ ಹೊರಡಿಸದ ಕಾರಣ ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ.

ಪ್ರವಾಸಿ ಮಿತ್ರರ ಅಗತ್ಯ
ಈಗ ಬೇಸಗೆ ರಜೆ ಇರುವುದ ರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚು. ಕಡಲಿಗೆ ಇಳಿಯಬೇಡಿ ಎನ್ನುವ ಎಚ್ಚರಿಕೆ ಫಲಕವನ್ನು ಅಳವಡಿಸಿದ್ದರೂ ಬಹುತೇಕ ಪ್ರವಾಸಿಗರು ಲೆಕ್ಕಿಸುವುದಿಲ್ಲ. ಆಗೊಮ್ಮೆ, ಈಗೊಮ್ಮೆ ಬರುವ ಪೊಲೀಸರು ಎಚ್ಚರಿಸಿ ಹೋಗುತ್ತಾರಾದರೂ ಉಳಿದ ಹೊತ್ತಿನಲ್ಲಿ ಕೇಳುವವರೇ ಇಲ್ಲ.

ಎಚ್ಚರಿಕೆ ಅಗತ್ಯ
ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿಯ ಹೆದ್ದಾರಿಯಿಂದ ಆರಂಭಗೊಂಡು ತ್ರಾಸಿಯ ಸೀಲ್ಯಾಂಡ್‌ ವರೆಗಿನ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿರುತ್ತದೆ. ಹೆದ್ದೆರೆಗಳು ದಡಕ್ಕೆ ಅಪ್ಪಳಿಸುತ್ತವೆ. ತ್ರಾಸಿ ಹಾಗೂ ಮರವಂತೆಯ ಕಡಲ ತೀರದಲ್ಲಿ ಆಳ ಹೆಚ್ಚು. ಆದ್ದರಿಂದ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು. ಇಲ್ಲಿ ನಾರ್ವೇಯ ಮಾದರಿಯಲ್ಲಿ ಕಡಲ ತೀರದ ಸಂರಕ್ಷಣೆಗಾಗಿ ಟಿ ಆಕಾರದ ಗ್ರೋಯಾನ್‌ (ಬಂಡೆಗಲ್ಲಿನ ಹಾದಿ) ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ಇದರ ಮೇಲೆ ನಿಂತು ಸೆಲ್ಫಿ ತೆಗೆಯುವ ಪ್ರವೃತ್ತಿ ಹೆಚ್ಚುತ್ತಿದ್ದು, ಅದು ಜಾರುವುದರಿಂದ ಸಮುದ್ರ ಪಾಲಾಗುವ ಅಪಾಯ ಜಾಸ್ತಿ.

ಸಂಪರ್ಕ ಸಂಖ್ಯೆ ಇಲ್ಲ
ಇಲ್ಲಿ ಏನಾದರೂ ಅವಘಡ ಸಂಭವಿಸಿದರೆ, ತತ್‌ಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಯಾರಿಗೆ ತಿಳಿಸಬೇಕು ಎನ್ನುವ ಸಂಪರ್ಕ ಸಂಖ್ಯೆಗಳ ನಾಮಫಲಕವೊಂದು ಇತ್ತು. ಅದೀಗ ಹಾಳಾಗಿ ಹರಿದು ಹೋಗಿದ್ದು, ಅಲ್ಪ-ಸ್ವಲ್ಪ ಕಾಣುತ್ತಿದೆ. ನಾಲ್ಕೈದು ಕಡೆಗಳಲ್ಲಿ ಕಡಲಿಗೆ ಇಳಿಯಬೇಡಿ ಎನ್ನುವ ನಾಮಫಲಕಗಳಷ್ಟೇ ಇವೆ.

-ಪ್ರಶಾಂತ್‌ ಪಾದೆ

ಬೇಕಿವೆ ಮುನ್ನೆಚ್ಚರಿಕೆ ಕ್ರಮಗಳು
ಕೋಟ ಪಡುಕರೆ ಬೀಚ್‌
ಕೋಟ: ರಾಷ್ಟ್ರೀಯ ಹೆದ್ದಾರಿಗೆ ಹೆಚ್ಚು ಹತ್ತಿರವಿರುವ ಬೀಚ್‌ಗಳಲ್ಲಿ ಕೋಟ ಪಡುಕರೆ ಒಂದು.
ಕೋಟ ಪಡುಕರೆಯಲ್ಲಿ ಸಮುದ್ರದ ಆಳ ಸಾಕಷ್ಟು ಕಡಿಮೆ ಇರುವುದರಿಂದ ಪ್ರವಾಸಿಗರು ಮೋಜಿಗೆ ಬರುತ್ತಾರೆ. ಆದರೆ ಇವರಿಗೆ ಎಚ್ಚರಿಕೆ ನೀಡಲು ಅಥವಾ ಜೀವ ರಕ್ಷಣೆಗಾಗಿ ಯಾವುದೇ ವ್ಯವಸ್ಥೆಗಳಿಲ್ಲ.


ಪಡುಕರೆಯಲ್ಲಿ ಈ ಹಿಂದೆ ಸಮುದ್ರ ಸ್ನಾನದ ಸಂದರ್ಭ ಕೆಲವು ಜೀವ ಹಾನಿ ನಡೆದದ್ದಿದೆ. ಪ್ರವಾಸಿಗರು ಪ್ರಾಣಾಪಾಯಕ್ಕೆ ಸಿಲುಕಿದಾಗ ಸ್ಥಳೀಯ ಮೀನು ಗಾರರೇ ಆಶ್ರಯ. ಕರಾವಳಿ ಕಾವಲು ಪಡೆಯವರು ಅಳವಡಿಸಿದ ಎಚ್ಚರಿ ಕೆಯ ಫಲಕ ಮಾಯವಾಗಿದ್ದು, ಸ್ಥಳೀಯ ಪೊಲೀಸರು ಆಗಾಗ್ಗೆ ಭೇಟಿ ನೀಡಿ ಪ್ರವಾಸಿಗರನ್ನು ಎಚ್ಚರಿಸುತ್ತಾರೆ.

-ರಾಜೇಶ್‌ ಗಾಣಿಗ ಅಚ್ಲಾಡಿ

ಅಪಾಯಕಾರಿ ಬೀಚ್‌
ಕೋಡಿಬೆಂಗ್ರೆ ಡೆಲ್ಟಾ ಬೀಚ್‌
ದ್ವೀಪ ಪ್ರದೇಶವಾದ ಕೋಡಿಬೆಂಗ್ರೆಯ ಡೆಲ್ಟಾ ಬೀಚ್‌ ವಿದ್ಯಾರ್ಥಿಗಳು ಮತ್ತು ವಿದೇಶಿಗರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಹಲವು ವಿದ್ಯಾರ್ಥಿಗಳು ಪಾನಮತ್ತರಾಗಿ ಮೋಜು ಮಸ್ತಿಯಲ್ಲಿ ಮುಳುಗುವುದು ಸಾಮಾನ್ಯ. ಆದರೆ ರಕ್ಷಣ ವ್ಯವಸ್ಥೆ ಇಲ್ಲಿಲ್ಲ.


ವಿದ್ಯಾರ್ಥಿಗಳು ಮೈ ಮರೆತು ಅಪಾಯ ತಂದುಕೊಳ್ಳುವ ಸೂಚನೆ ತಿಳಿದಾಗ ಮೀನುಗಾರರೇ ಎಚ್ಚರಿಸುತ್ತಾರೆ. ಹಲವಾರು ಬಾರಿ ಜೀವ ರಕ್ಷಿಸಿದ ಘಟನೆಗಳು ನಡೆದಿವೆ. ಹೀಗಾಗಿ ಇಲ್ಲಿಗೆ ಜೀವ ರಕ್ಷಕರು ಮತ್ತು ಜೀವ ರಕ್ಷಕ ಸಾಧನಗಳು, ಮುನ್ನೆಚ್ಚರಿಕೆ ಕ್ರಮಗಳು ತುರ್ತು ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next