Advertisement

ಮಾವುಮೇಳ: 1.15 ಕೋಟಿ ರೂ. ವಹಿವಾಟು

04:06 PM Jun 02, 2022 | Team Udayavani |

ಬಳ್ಳಾರಿ: ನಗರದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದ್ದ ‘ಮಾವು ಮೇಳ/ಮಾವು ಜಾತ್ರೆ’ಗೆ ನಗರದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೂರು ದಿನಗಳಲ್ಲಿ ಸುಮಾರು 85ಕ್ಕೂ ಹೆಚ್ಚು ಟನ್‌ ವಿವಿಧ ತಳಿಯ ಮಾವುಗಳು ಮಾರಾಟವಾಗಿದ್ದು, ಅಂದಾಜು 1.15 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿದೆ.

Advertisement

ಮಾವು ಮೇಳ/ಮಾವು ಜಾತ್ರೆಯಲ್ಲಿ ರಾಜ್ಯದ ಧಾರವಾಡ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ ನೆರೆಯ ಆಂಧ್ರದ ಅನಂತಪುರ ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳಿಂದ ಸುಮಾರು 55-60 ಮಾವು ಬೆಳೆಯುವ ರೈತರು ಮೇಳದಲ್ಲಿ ಭಾಗವಹಿಸಿದ್ದರು. ಮೇಳದಲ್ಲಿ ವಿವಿಧ ರೀತಿಯ ಸುಮಾರು 308 ಮಾವುಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಗ್ರಾಹಕರ ಗಮನ ಸೆಳೆಯಲಾಯಿತು. ಈ ಪೈಕಿ ಅಂದಾಜು 10-12 ತಳಿಗಳ ಮಾವುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ನಗರದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಪ್ಪ ಎಸ್‌.ಭೋಗಿ ತಿಳಿಸಿದರು.

1.15 ಕೋಟಿ ರೂ.ಗೂ ಹೆಚ್ಚು ವಹಿವಾಟು

ಮೇ 30ರಿಂದ ಜೂನ್‌ 1ರವರೆಗೆ ಮೂರು ದಿನಗಳ ಕಾಲ ನಡೆದ ಮಾವು ಮೇಳ/ಮಾವು ಜಾತ್ರೆಯಲ್ಲಿ ನಗರ ಸೇರಿ ನೆರೆಹೊರೆಯ ಗ್ರಾಮ, ಪಟ್ಟಣಗಳ 10 ಸಾವಿರಕ್ಕೂ ಹೆಚ್ಚು ಗ್ರಾಹಕರು ಭೇಟಿ ನೀಡಿ ಪ್ರದರ್ಶನಕ್ಕಿಡಲಾಗಿದ್ದ ವಿವಿಧ ರೀತಿಯ ತಳಿಗಳನ್ನು ವೀಕ್ಷಿಸುವುದರ ಜತೆಗೆ ಹಣ್ಣುಗಳ ಮಾರಾಟಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಮೂರು ದಿನಗಳಲ್ಲಿ ಸರಿಸುಮಾರು 1.15 ಕೋಟಿ ರೂ. ಗೂ ಹೆಚ್ಚು ವಹಿವಾಟು ನಡೆದಿದೆ. ನೆರೆಯ ಆಂಧ್ರದ ಅನಂತಪುರದಿಂದ ಮೊದಲ ದಿನ ಬಂದಿದ್ದ ನಾಲ್ಕು ರೈತರು, ತಂದಿದ್ದ ಹಣ್ಣುಗಳೆಲ್ಲವೂ ಖಾಲಿಯಾದ ಹಿನ್ನೆಲೆಯಲ್ಲಿ ಎರಡನೇ ದಿನ ಪುನಃ 6 ರೈತರು ಬಂದಿದ್ದು, ಒಟ್ಟು ಅನಂತಪುರದಿಂದ 10 ರೈತರು ಸುಮಾರು 5-6 ಟನ್‌ಗೂ ಹೆಚ್ಚು ಮಾವಿನ ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ. ಹಣ್ಣುಗಳನ್ನು ಮಾರಾಟ ಮಾಡಲು ನೇರವಾಗಿ ರೈತರಿಗೆ ಅವಕಾಶ ಕಲ್ಪಿಸಿರುವುದು ಮೇಳಕ್ಕೆ ರೈತರು ಬರಲು ಸಹಕಾರಿಯಾಗಿದೆ. ಮೂರು ದಿನಗಳ ಮೇಳದಲ್ಲಿ 35-40 ಟನ್‌ ಮಾರಾಟವಾಗುವ ನಿರೀಕ್ಷೆಯಿತ್ತಾದರೂ, ಅದನ್ನೂ ಮೀರಿ ಡಬಲ್‌ ಪ್ರಮಾಣದಲ್ಲಿ 85 ಟನ್‌ಗೂ ಹೆಚ್ಚು ಮಾರಾಟವಾಗಿದೆ. ಬೆನೆಶಾನ್‌ ಸೇರಿ ಒಂದೆರಡು ತಳಿಗಳ ಹಣ್ಣಿನ ಸ್ವಾದವನ್ನಷ್ಟೇ ಸವಿದಿದ್ದ ಬಳ್ಳಾರಿ ಜನರಿಗೆ ಮೇಳದಿಂದ ಮಾವಿನ ಇನ್ನಷ್ಟು ತಳಿಗಳ ಪರಿಚಯವಾಗಲು ಮೇಳವು ಸಹಕಾರಿಯಾಗಿದೆ ಎಂದು ಡಿಡಿ ಶರಣಪ್ಪ ತಿಳಿಸಿದರು.

ಜಿಲ್ಲೆಯ ಒಬ್ಬ ರೈತರೂ ಇಲ್ಲ

Advertisement

ಮೂರು ದಿನಗಳ ಮಾವು ಮೇಳಕ್ಕೆ ಗ್ರಾಹಕರು, ನಗರದ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಒಂದೆಡೆಯಾದರೆ, ರಾಜ್ಯಮಟ್ಟದ ಮೇಳದಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳಿಂದ ಒಬ್ಬ ರೈತರು ಸಹ ಭಾಗವಹಿಸದಿರುವುದು ಜಿಲ್ಲೆಯ ಮಟ್ಟಿಗೆ ಬೇಸರ ಮೂಡಿಸಿದೆ. ಇನ್ನು ನೆರೆಯ ವಿಜಯನಗರ ಜಿಲ್ಲೆಯಿಂದ ಇಬ್ಬರು ರೈತರು ಬಂದಿದ್ದರಾದರೂ, ಮೂರು ದಿನಗಳಿಗೆ ಬೇಕಾಗುವಷ್ಟು ಹಣ್ಣುಗಳು ಇಲ್ಲದಿರುವುದರಿಂದ ಎರಡನೇ ದಿನಕ್ಕೆ ಖಾಲಿಮಾಡಿಕೊಂಡು ತೆರಳಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಮೆನೆದಾಳ ಗ್ರಾಮದ ರೈತ ಗವಿಸಿದ್ದಪ್ಪ ಕೇಸರಿ ತಳಿಯ 2 ಟನ್‌ ಮಾವನ್ನು ಕಿಲೋ 100 ರೂ.ಗೆ ಮಾರಾಟ ಮಾಡಿದ್ದಾರೆ. ಕಮಲಾಪುರದ ರೈತ ಪ್ರಶಾಂತ್‌ ಸಿಂಗ್‌ 8 ಕ್ವಿಂಟಲ್‌ ಮಾರಾಟ ಮಾಡಿದ್ದಾರೆ. ಆದರೆ, ಮೂರು ದಿನಗಳ ಮೇಳದಲ್ಲಿ ಹಣ್ಣುಗಳ ಬಣ್ಣಕ್ಕೆ ಮಾರುಹೋಗಿದ್ದ ಗ್ರಾಹಕರು, ರಸಾಯನಿಕ ಬಣ್ಣರಹಿತ ಹಣ್ಣುಗಳ ಬಗ್ಗೆ ನಿರಾಸಕ್ತಿ ಹೊಂದಿದ್ದು ಗಮನಾರ್ಹ.

ಬಳ್ಳಾರಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮೂರು ದಿನಗಳ ಮಾವುಮೇಳ/ಮಾವು ಜಾತ್ರೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆರೆಯ ಆಂಧ್ರದ ಅನಂತಪುರ ಜಿಲ್ಲೆ ಸೇರಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ 55-60 ರೈತರು ಮೇಳದಲ್ಲಿ ಭಾಗವಹಿಸಿದ್ದು, ಮೂರು ದಿನಗಳಲ್ಲಿ ಸುಮಾರು 85ಕ್ಕೂ ಹೆಚ್ಚು ಟನ್‌ ಮಾರಾಟವಾಗಿದ್ದು, 1.15 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿದೆ. ವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಮಾವು ಬೆಳೆ ಕಡಿಮೆ ಇರುವುದರಿಂದ ರೈತರು ಭಾಗವಹಿಸಿಲ್ಲ. -ಶರಣಪ್ಪ ಎಸ್.ಭೋಗಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಬಳ್ಳಾರಿ.

Advertisement

Udayavani is now on Telegram. Click here to join our channel and stay updated with the latest news.

Next