Advertisement

Mangaluru University ಹೊಸ ಕೋರ್ಸ್‌ಗಳಿಗೆ ಅನುಮೋದನೆ ಗಿಟ್ಟಿಸುವುದೇ ಹರಸಾಹಸ

12:35 AM Jun 20, 2024 | Team Udayavani |

ಮಂಗಳೂರು: ಹೊಸ ಅಗತ್ಯಕ್ಕೆ ತಕ್ಕಂತೆ ಕಾಲೇಜುಗಳು ನವೀನ ಕೋರ್ಸುಗಳನ್ನು ರೂಪಿಸಿದರೂ ಸರಕಾರದಿಂದ ಅನುಮೋದನೆ ಪಡೆಯಲು ಕಾದು ಸುಸ್ತಾಗುವ ಸ್ಥಿತಿ ಸದ್ಯದ್ದು.

Advertisement

ಈ ಅಂಶವನ್ನು ಕಾಲೇಜು ಒಂದರ ಪ್ರಾಂಶುಪಾಲರೇ ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ತೋಡಿ ಕೊಂಡರು.

“ಹೊಸ ಕೋರ್ಸ್‌ ಆರಂಭಿಸಲು ಹಲವು ಕಾಲೇಜುಗಳು ಉತ್ಸುಕವಾಗಿವೆ. ಆದರೆ ಅದಕ್ಕೆ ಅನುಮೋದನೆ ಪಡೆಯುವುದೇ ತೀರಾ ಕಷ್ಟದ್ದು. ಇದರಿಂದ ಹೊಸ ಕೋರ್ಸ್‌ಗಳನ್ನು ಆರಂಭಿಸುವ ಉತ್ಸಾಹವೇ ಇಲ್ಲವಾಗುತ್ತದೆ’ ಎಂದು ವಾಸ್ತವವನ್ನು ವಿವರಿಸಿದರು ಅವರು.

ಇದಕ್ಕೆ ಶೈಕ್ಷಣಿಕ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ಧರ್ಮ ಪ್ರತಿಕ್ರಿಯಿಸಿ, ಎಲ್ಲವೂ ಆನ್‌ಲೈನ್‌ ಪ್ರಕ್ರಿಯೆ.ಅಗತ್ಯವಿರುವ ದಾಖಲೆಗಳನ್ನು ಸರಿಯಾಗಿ ಒದಗಿಸಿ. ಆ ಬಳಿಕ ಅದರ ಬೆನ್ನುಹಿಡಿಯುವ ಕೆಲಸವನ್ನು ವಿಶ್ವವಿದ್ಯಾನಿಲಯದಿಂದಲೂ ಮಾಡಲಾಗುವುದು ಎಂದು ಹೇಳಿದರು.

ಹದಿನೇಳು ಕಾಲೇಜುಗಳು
ಈ ಸಾಲಿನ ಪ್ರವೇಶಾತಿಗೆ ಸಂಯೋಜನೆ ಪಡೆಯಲು 17 ಕಾಲೇಜುಗಳು ಅರ್ಜಿ ಹಾಕಿಲ್ಲ ಎಂದು ಕುಲಪತಿಗಳು ತಿಳಿಸಿದರು.

Advertisement

ವಿ.ವಿ.ಯಡಿ ಒಟ್ಟು 178 ಕಾಲೇಜುಗಳಿದ್ದು, ಇದರಲ್ಲಿ 7 ಸ್ವಾಯತ್ತ ಹಾಗೂ 5 ವಿ.ವಿ. ಸಂಯೋಜಿತ ಕಾಲೇಜುಗಳಾಗಿವೆ. ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆ ಇರುವುದರಿಂದ 17 ಕಾಲೇಜುಗಳು ಸಂಯೋಜನೆ ಪಡೆಯಲು ಮುಂದಾಗಿಲ್ಲ, ಆದರೆ ಎರಡನೇ ಹಾಗೂ ಮೂರನೇ ವರ್ಷದ ಪದವಿ ತರಗತಿಗಳು ಅಲ್ಲಿ ನಡೆಯುತ್ತವೆ ಎಂದರು.

ಮುಂದುವರಿಕೆ ಸಂಯೋಜನೆಗೆ 136, ವಿಸ್ತರಣ ಸಂಯೋಜನೆಗೆ 36, ಶಾಶ್ವತ ಸಂಯೋಜನೆಗೆ 29 ಹಾಗೂ ಹೊಸ ಶಾಶ್ವತ ಸಂಯೋಜನೆಯಲ್ಲಿ 5 ಕಾಲೇಜುಗಳು ಅರ್ಜಿ ಸಲ್ಲಿಸಿದ್ದು ಸಭೆಯಲ್ಲಿ ಅನುಮೋದಿಸಲಾಯಿತು.

ಯುಜಿಸಿ ಮಾರ್ಗಸೂಚಿಯಂತೆ ವಿದ್ಯಾರ್ಥಿಯು ಪ್ರವೇಶಾತಿ ಪಡೆಯುವ ಕಾರ್ಯಕ್ರಮದ ಪಠ್ಯಕ್ರಮ ಚೌಕಟ್ಟಿನ ಬಗ್ಗೆ ಪೂರ್ಣ ಮಾಹಿತಿ ಪಡೆದಿರಬೇಕು. ತಾನು ಅಧ್ಯಯನಕ್ಕೆ ಆಯ್ಕೆ ಮಾಡಿದ ಪಠ್ಯಕ್ರಮಗಳ ಸ್ಪಷ್ಟ ಮಾಹಿತಿ ಮತ್ತು ಕಲಿಯಬೇಕಾದ ವಿಷಯಗಳ ಬಗ್ಗೆ ಅರಿವಿರಬೇಕು. ಹಾಗಾಗಿ ಸ್ನಾತಕೋತ್ತರ ಕಾರ್ಯಕ್ರಮಗಳ ಪಠ್ಯಕ್ರಮಕ್ಕೆ ಸಂಬಂಧಿಸಿ ವಿಶ್ವವಿದ್ಯಾನಿಲಯದ “ಲರ್ನಿಂಗ್‌ ಔಟ್‌ಕಮ್ಸ್‌’ ಮತ್ತು “ಗ್ರಾಜ್ಯುಯೇಟ್‌ ಆಟ್ರಿಬ್ಯೂಟ್ಸ್‌’ ಗೂ ಅನುಮೋದನೆ ನೀಡಲಾಯಿತು.

ಸ್ವಾಯತ್ತ ಕಾಲೇಜಾಗಿರುವ ಎಸ್‌ಡಿಎಂ ಉಜಿರೆಯಲ್ಲಿ ಬಿ.ವೋಕ್‌ ಕೋರ್ಸ್‌ ಮಾಡಿದವರಿಗೆ ಎಂಕಾಂ ಗೆ ಪ್ರವೇಶ ಕಲ್ಪಿಸಲು ಅನುಮೋದನೆ ನೀಡ ಲಾಯಿತು. ಅದೇ ರೀತಿ 2024- 25ನೇ ಸಾಲಿಗೆ ಶೈಕ್ಷಣಿಕ ಮಂಡಳಿ ಸಮಿತಿ ರಚನೆ, ನಂತೂರಿನ ಶ್ರೀ ಭಾರತಿ ಕಾಲೇಜಿನ ಹೊಸ ಸಂಯೋಜನೆಯಾದ ಬಿಕಾಂ(ಬಿಸಿನೆಸ್‌ ಡಾಟಾ ಅನಾ ಲಿಟಿಕ್ಸ್‌)ಗೆ ಮಂಜೂರಾತಿ ನೀಡಲಾಯಿತು. ಬಿಎಸ್ಸಿ-ಎಫ್‌ಎನ್‌ಡಿ (ಫುಡ್‌ ನ್ಯೂಟ್ರಿಶನ್‌, ಡಯೆಟೆಟಿಕ್ಸ್‌)ಯ ಪ್ರವೇಶಾತಿಗೆ ಅರ್ಹತೆಯ ಸಂಬಂಧ ಈ ಹಿಂದಿನ ನಿಯಮಗಳನ್ನು ಪಾಲಿಸಬೇಕು. ಎಸ್‌ಸಿಎಸ್‌ ಪ್ರಥಮ ದರ್ಜೆ ಕಾಲೇಜು, ತ್ರಿಶಾ ಕಾಲೇಜು ಆಫ್‌ ಮ್ಯಾನೇಜ್‌ಮೆಂಟ್‌ ಮತ್ತು ಸಂಧ್ಯಾ ಕಾಲೇಜುಗಳ ಸ್ಥಳ ಬದಲಾವಣೆಯನ್ನೂ ಅನುಮೋದಿಸಲಾಯಿತು.

ಫಿಲೋಮಿನಾ ಕಾಲೇಜಿಗೆ
ಸ್ವಾಯತ್ತ ಸ್ಥಾನಮಾನ
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ 2024-25ರಿಂದ 2033-34ರ ವರೆಗೆ ಸ್ವಾಯತ್ತ ಸ್ಥಾನ ಮಾನ ನೀಡಲು ಸಭೆ ಸಮ್ಮತಿಸಿತು. ಯುಜಿಸಿಯೂ ಅನುಮೋದಿಸಿದ್ದು, ಸ್ವಾಯತ್ತ ಸ್ಥಾನಮಾನ ನೀಡುವ ಪ್ರಸ್ತಾವಕ್ಕೆ ಮಂಡಳಿ ಸದಸ್ಯರು ಒಪ್ಪಿಗೆ ವ್ಯಕ್ತಪಡಿಸಿದರು.

ವಿ.ವಿ. ವ್ಯಾಪ್ತಿಯ ಅರ್ಹ ಸಂಯೋಜಿತ ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನ ನೀಡಿಕೆ ಮತ್ತು ಅವುಗಳ ಕಾರ್ಯ ನಿರ್ವಹಣೆ ನಿರ್ಬಂಧಿಸುವ ನಿಯಮ ಪ್ರಕಾರ ಸ್ಥಾಯಿ ಸಮಿತಿ ರಚಿಸಲಾಗಿದೆ. ಸಮಿತಿಯು ಸಂತ ಫಿಲೋಮಿನಾ ಕಾಲೇಜಿಗೆ ಭೇಟಿ ನೀಡಿಸ್ವಾಯತ್ತ ಸ್ಥಾನಮಾನ ನೀಡುವ ಕುರಿತು ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಿತ್ತು. ವಿ.ವಿ. ಕುಲಸಚಿವ ಕೆ.ರಾಜು ಮೊಗ ವೀರ, ಪರೀಕ್ಷಾಂಗ ಕುಲಸಚಿವ ಡಾ|ಎಚ್‌. ದೇವೇಂದ್ರಪ್ಪ, ಹಣಕಾಸು ಅಧಿಕಾರಿ
ಡಾ. ಸಂಗಪ್ಪ ವೈ ಉಪಸ್ಥಿತರಿದ್ದರು.

ಜೂ. 24ರಿಂದ ಪದವಿ ಪರೀಕ್ಷೆ
ಮಂಗಳೂರು ವಿ.ವಿ.ಯ ಎರಡನೇ, ನಾಲ್ಕನೇ ಹಾಗೂ ಆರನೇ ಸೆಮಿಸ್ಟರ್‌ನ ಪರೀಕ್ಷೆಗಳು ಜೂ. 24ರಿಂದ ಜು. 31ರ ವರೆಗೆ ನಡೆಯಲಿದೆ. ಇದರಲ್ಲಿ ಆರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ಮೊದಲು ಪರೀಕ್ಷೆ ನಡೆಸಿ ನಂತರ ಮೌಲ್ಯಮಾಪನ ನಡೆಸಲು ತೀರ್ಮಾನಿಸಲಾಗಿದೆ. ಆಗಸ್ಟ್‌ ನ ಮೊದಲ ವಾರದಲ್ಲಿ ಪದವಿ ಕೋರ್ಸ್‌ ಗಳ ಆರಂಭಕ್ಕೆ ಸಿದ್ಧತೆ ನಡೆಸಿರುವುದಾಗಿ ಕುಲಪತಿ ಪ್ರೊ.ಪಿ. ಎಲ್‌. ಧರ್ಮ ಸುದ್ದಿಗಾರರಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next