Advertisement

ಶಿಕ್ಷಣದ ಮೂಲಕ ಕೌಶಲಪೂರ್ಣ ವ್ಯಕ್ತಿತ್ವ ನಿರ್ಮಾಣ: ಥಾವರ್‌ಚಂದ್‌ ಗೆಹ್ಲೋಟ್

11:19 PM Jun 15, 2024 | Team Udayavani |

ಮಂಗಳೂರು: ಜೀವನದಲ್ಲಿ ಸಫಲರಾಗುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುವುದಲ್ಲದೇ ಕೌಶಲಪೂರ್ಣ ವ್ಯಕ್ತಿಯನ್ನಾಗಿಸುತ್ತದೆ. ಆಧುನಿಕ ಜ್ಞಾನ ವನ್ನು ಮೌಲ್ಯಗಳೊಂದಿಗೆ ಸೇರಿಸಿ ಶಿಕ್ಷಣ ನೀಡಲು ವಿದ್ಯಾಲಯಗಳು ಆದ್ಯತೆ ನೀಡಲಿ ಎಂದು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್ ಹೇಳಿದರು.

Advertisement

ಶನಿವಾರ ಮಂಗಳೂರು ವಿಶ್ವ ವಿದ್ಯಾಲಯದ 42ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪದವಿ ಪಡೆದ ವಿದ್ಯಾರ್ಥಿಗಳು ಸಾಧ್ಯವಾದರೆ ಒಂದು ಗ್ರಾಮದ ಮಕ್ಕಳು ಅಥವಾ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ ಒದಗಿಸುವ ಕೆಲಸ ಮಾಡಬೇಕು ಎಂದರು.

ಆತ್ಮನಿರ್ಭರರೆಯನ್ನು ವಿ.ವಿ.ಯಲ್ಲಿ ಸಾಕಾರಗೊಳಿಸಲಾಗಿದೆ. ಇನ್‌ಹೌಸ್‌ ಸಾಫ್ಟ್‌ವೇರ್‌ “ಎಂಯು ಲಿಂಕ್‌’ ಆರಂಭಿಸಿರುವುದು ಪ್ರಶಸಂನೀಯ. ಇ- ಆಡಳಿತ, ಗ್ರೀನ್‌ ಕ್ಯಾಂಪಸ್‌, ಅಂತಾರಾಷ್ಟ್ರೀಯ ಅನುಸಂಧಾನ ಕೇಂದ್ರಗಳು, ಪಿಎಂ ಉಚ್ಚತರ ಶಿಕ್ಷಾಅಭಿಯಾನವನ್ನು ಯಶಸ್ವಿಯಾಗಿ ಜಾರಿ ಗೊಳಿಸಲಾಗಿದೆ ಎಂದು ಶ್ಲಾಘಿಸಿದರು.

ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ
ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಮಾತನಾಡಿ, ಜಾಗತೀಕರಣ ವ್ಯವಸ್ಥೆಯಲ್ಲಿ ಬದಲಾವಣೆಗೆ ನಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕಿದೆ. ಈ ನಿಟ್ಟಿ ನಲ್ಲಿ ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು. ಅಪ್ರಂಟಿಸ್‌ಶಿಪ್‌ ಎಂಬೆಡೆಡ್‌ ಡಿಗ್ರಿ ಪ್ರೋಗ್ರಾಮ್‌ (ಎಇಡಿಪಿ) ಮೂಲಕ 2 ವರ್ಷದ ಪಠ್ಯದ ಜತೆಗೆ ಒಂದು ವರ್ಷದ ಇಂಟರ್ನ್ಶಿಪ್‌ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ನಿರುದ್ಯೋಗ ಸಮಸ್ಯೆ ನಿವಾರಣೆಗೆ ತಾಂತ್ರಿಕ ಶಿಕ್ಷಣದಲ್ಲಿ ಬದಲಾವಣೆ ತರುವ ಪ್ರಯತ್ನವೂ ನಡೆಯುತ್ತಿದೆ ಎಂದರು.

ಘಟಿಕೋತ್ಸವ ಭಾಷಣ ಮಾಡಿದ ಹೊಸದಿಲ್ಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ (ಆರ್‌ಐಎಸ್‌) ಮಹಾನಿರ್ದೇಶಕ ಪ್ರೊ| ಸಚಿನ್‌ ಚತುರ್ವೇದಿ ಮಾತನಾಡಿ, ವಿ.ವಿ.ಗಳು ಸಂಶೋಧನ ಕೇಂದ್ರಿತವಾಗಿರಬೇಕು. ಇದಕ್ಕಾಗಿ ವಿ.ವಿ.ಗಳು ಸಂಶೋಧನ ಸಂಸ್ಥೆಗಳ ಮಧ್ಯೆ ತಮ್ಮ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕಿದೆ. ದೇಶದ 25 ವಿ.ವಿ.ಗಳ “ಯುನಿವರ್ಸಿಟಿ ಕನೆಕ್ಟ್ ಹಬ್‌’ ರಚಿಸಿ, ಸಮಾಜ ವಿಜ್ಞಾನ ಮತ್ತು ಮೂಲ ವಿಜ್ಞಾನವನ್ನು ಸಂಯೋಜಿಸಲು ಉದ್ದೇಶಿಸಲಾಗಿದೆ ಎಂದರು.

Advertisement

ಕುಲಪತಿ ಪ್ರೊ| ಪಿ.ಎಲ್‌. ಧರ್ಮ ಪ್ರಸ್ತಾವನೆಗೈದರು. ಕುಲಸಚಿವ (ಆಡಳಿತ) ರಾಜು ಮೊಗವೀರ, ಕುಲಸಚಿವ (ಪರೀûಾಂಗ) ಡಾ| ದೇವೇಂದ್ರಪ್ಪ, ವಿ.ವಿ.ಯ, ಸಿಂಡಿಕೇಟ್‌ ಸದಸ್ಯರು, ವಿದ್ಯಾವಿಷಯ ಪರಿಷತ್‌ ಸದಸ್ಯರು, ವಿವಿಧ ನಿಕಾಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಡಾ| ಧನಂಜಯ ಕುಂಬ್ಳೆ ಮತ್ತು ಪ್ರೊ| ಪ್ರೀತಿ ಕೀರ್ತಿ ಡಿ’ಸೋಜಾ ನಿರೂಪಿಸಿದರು.

ಗೌರವ ಡಾಕ್ಟರೆಟ್‌ ಪ್ರದಾನ
ಸಮಾಜ ಸೇವೆ ವಿಭಾಗದಲ್ಲಿ ಎಂ.ಆರ್‌.ಜಿ. ಗ್ರೂಪ್‌ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ್‌ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ಡಾ| ರೊನಾಲ್ಡ್‌ ಕೊಲಾಸೋ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೆಟ್‌ ಪ್ರದಾನಿಸಿದರು. ಶಿಕ್ಷಣ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಡಾಕ್ಟರೆಟ್‌ಗೆ ಆಯ್ಕೆಯಾಗಿದ್ದ ತುಂಬೆ ಗ್ರೂಪ್‌ ಸ್ಥಾಪಕಾಧ್ಯಕ್ಷ ಡಾ| ತುಂಬೆ ಮೊಯ್ದಿನ್‌ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

58 ಮಂದಿಗೆ ಚಿನ್ನದ ಪದಕ
155 ಮಂದಿಗೆ (ಕಲೆ 51, ವಿಜ್ಞಾನ 73, ವಾಣಿಜ್ಯ 26, ಶಿಕ್ಷಣ 5) ಪಿಎಚ್‌. ಡಿ., 58 ಮಂದಿಗೆ ಚಿನ್ನದ ಪದಕ ಮತ್ತು 57 ಮಂದಿಗೆ ನಗದು ಬಹುಮಾನ ಪ್ರದಾನ ಮಾಡಲಾಯಿತು. ವಿವಿಧ ಕೋರ್ಸ್‌ಗಳ 168 ರ್‍ಯಾಂಕ್‌ಗಳಲ್ಲಿ ಪ್ರಥಮ ರ್‍ಯಾಂಕ್‌ ಪಡೆದ 72 ಮಂದಿಗೆ ರಾಜ್ಯಪಾಲರು ಪ್ರಮಾಣ ಪತ್ರ ಪ್ರದಾನ ಮಾಡಿದರು.

ಅಂದು ವಿದ್ಯಾರ್ಥಿ; ಇಂದು ಸಹಕುಲಾಧಿಪತಿ!
1994 ರಲ್ಲಿ ಇದೇ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ಇದೇ ವಿ.ವಿ.ಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದರು. ಇಂದು ಅದೇ ವಿ.ವಿ.ಯ ಸಹಕುಲಾಧಿಪತಿ. ಇದನ್ನು ಭಾಷಣ ಸಂದರ್ಭದಲ್ಲಿ ನೆನಪಿಸಿಕೊಂಡ ಅವರು, ವಿದ್ಯಾರ್ಥಿಯಾಗಿದ್ದ ಅವಧಿ ಜೀವನದ ಮಹತ್ತರ ಘಟ್ಟವಾಗಿದ್ದು, ಅಲ್ಲಿಂದಲೇ ಹೊಸ ತಿರುವು ಸಿಕ್ಕಿದೆ ಎಂದರು.

ಗೊಂದಲ, ಗೊಂದಲ; ಭಾವುಕರಾದ ಕುಲಪತಿ!
ಸಮಾರಂಭ ಆರಂಭದಿಂದಲೇ ಕೆಲವು ಗೊಂದಲಗಳಿಗೆ ಕಾರಣ ವಾಯಿತು. ನಾಡಗೀತೆಗೂ ಮೊದಲು ರಾಷ್ಟ್ರಗೀತೆ ಹಾಡುವಂತೆ ರಾಜ್ಯಪಾಲರು ಸೂಚಿಸಿದರು. ರ್‍ಯಾಂಕ್‌ ವಿಜೇತರ ಪಟ್ಟಿ ವಾಚಿಸುವಾಗಲೂ ತುಸು ಗೊಂದಲವಾಯಿತು. ಮುಖ್ಯ ಅತಿಥಿಯನ್ನು ಪುಷ್ಪಗುತ್ಛ ನೀಡಿ ಸ್ವಾಗತಿಸ ದಿರುವುದನ್ನು ರಾಜ್ಯಪಾಲರು ಆಕ್ಷೇಪಿಸಿದರು. ಕುಲಪತಿಗಳು ಮಾತನಾಡುವ ವೇಳೆ ಮೈಕ್‌ ಆಫ್‌ ಆಯಿತು. ಡಾಕ್ಟರೆಟ್‌ ಪಡೆದವರಿಗೆ ರಾಜ್ಯಪಾಲರು ಪ್ರಮಾಣಪತ್ರ ನೀಡುವ ಬದಲು ಮೊದಲೇ ನೀಡಿದ್ದರಿಂದ ಕೇವಲ ಛಾಯಾಚಿತ್ರಕ್ಕೆ ನಿಲ್ಲುವಂತಾಯಿತು. “ಗೊಂದಲಕ್ಕೆ ಒಳಗಾಗಬೇಡಿ’ ಎಂದು ಒಂದು ಹಂತದಲ್ಲಿ ಸ್ವತಃ ರಾಜ್ಯಪಾಲರೇ ಕುಲಪತಿಗಳಿಗೆ ಸೂಚಿಸಿದರು. ಇದರಿಂದಾಗಿ ಕುಲಪತಿ ಒಂದು ಕ್ಷಣ ಭಾವುಕರಾದ ಪ್ರಸಂಗವೂ ನಡೆಯಿತು.

ಬಾಲ್ಯ ಸ್ನೇಹಿತೆಯರಿಗೆ ಮೊದಲೆರಡು ರ್‍ಯಾಂಕ್‌!


ಉಳ್ಳಾಲ: ಅಂಗನವಾಡಿಯಿಂದ ಎಂಎಸ್ಸಿ ವರೆಗೆ ಒಂದೇ ತರಗತಿಯಲ್ಲಿ ಅಧ್ಯಯನ ನಡೆಸಿದ ಸ್ನೇಹಿತೆ ಯರಿಬ್ಬರು ಪ್ರಥಮ, ದ್ವಿತೀಯ ರ್‍ಯಾಂಕ್‌ ಗಳಿಸಿ ಸಂಭ್ರಮಿಸಿದ್ದಾರೆ.

ಮಂಗಳೂರು ವಿ.ವಿ. ಸ್ನಾತಕೋತ್ತರ ವಿಭಾಗ (ಕೈಗಾರಿಕಾ ರಸಾಯನಶಾಸ್ತ್ರ ಎಂಎಸ್ಸಿ)ದಲ್ಲಿ ವ್ಯಾಸಂಗ ನಡೆಸಿ ಪ್ರಥಮ ರ್‍ಯಾಂಕ್‌ ಪಡೆದಿರುವ ಭಾಗ್ಯಲಕ್ಷ್ಮೀ ಮತ್ತು ದ್ವಿತೀಯ ರ್‍ಯಾಂಕ್‌ ಪಡೆದಿರುವ ಶಿಲ್ಪಾ ಬಾಲ್ಯದ ಒಡನಾಡಿಗಳು. ಶನಿವಾರ ನಡೆದ ಘಟಿಕೋತ್ಸವದಲ್ಲಿ ಒಬ್ಬರ ಹಿಂದೆ ಒಬ್ಬರು ನಿಂತು ರಾಜ್ಯಪಾಲರಿಂದ ಪದಕ ಸ್ವೀಕರಿಸಿದರು. ಪುತ್ತೂರಿನ ಬನ್ನೂರಿನಲ್ಲಿ ನಮ್ಮ ಮನೆಯೂ ಅಕ್ಕಪಕ್ಕದಲ್ಲಿದೆ. ಬಾಲ್ಯದಿಂದಲೂ ಕಲಿಕೆಯಲ್ಲಿ ನಮ್ಮಿಬ್ಬರ ನಡುವೆ ಆರೋಗ್ಯಕರ ಪೈಪೋಟಿ ಇತ್ತು. ರ್‍ಯಾಂಕ್‌ ಬಂದ ಖುಷಿಯನ್ನು ನಾವಿಬ್ಬರೂ ನಮ್ಮ ಮನೆಯವರೊಂದಿಗೆ ಸಂಭ್ರಮ ಪಟ್ಟಿದ್ದೇವೆ ಎನ್ನುತ್ತಾರೆ ಭಾಗ್ಯಲಕ್ಷ್ಮೀ ಹಾಗೂ ಶಿಲ್ಪಾ. ಪ್ರಸ್ತುತ ಇಬ್ಬರೂ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

ಸಾಧನೆಗೆ ಅಂಧತ್ವ ಅಡ್ಡಿಯಾಗಿಲ್ಲ
ಉಳ್ಳಾಲ: ಬಿ.ಎ. (ಮಾನವ ಸಂಪನ್ಮೂಲ) ಪದವಿಯಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿರುವ ಉಚ್ಚಿಲದ ಅಧೀಶ್‌ ಸಾಧನೆಗೆ ಅಂಧತ್ವ ಅಡ್ಡಿಯಾಗಿಲ್ಲ.

ಘಟಿಕೋತ್ಸವದಲ್ಲಿ ಅಧೀಶ್‌ ಹೆಸರನ್ನು ಕರೆಯುತ್ತಿದ್ದಂತೆ ಹೆತ್ತವರು ಹರ್ಷಗೊಂಡರೆ, ಕರತಾಡನದ ನಡುವೆಯೇ ಅಧೀಶ್‌ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಅವರಿಂದ ಪ್ರಥಮ ರ್‍ಯಾಂಕ್‌ನೊಂದಿಗೆ ಪದವಿಯನ್ನು ಸ್ವೀಕರಿಸಿದರು.

ಎಂಆರ್‌ಪಿಎಲ್‌ನಲ್ಲಿ ಉದ್ಯೋಗಿಯಾಗಿರುವ ಸು ಧೀರ್‌ ಉಚ್ಚಿಲ ಮತ್ತು ಗುಣಶ್ರೀ ದಂಪತಿಯ ಪುತ್ರನಾಗಿರುವ ಅಧೀಶ್‌ 10ನೇ ತರಗತಿಯಲ್ಲಿ ರೆಟಿನಾದ ಸಮಸ್ಯೆಯಿಂದ ದೃಷ್ಟಿ ಕಳೆದುಕೊಂಡರು. ಪಿಯುಸಿಯಲ್ಲಿದ್ದಾಗ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡರು. ಆದರೆ ಉನ್ನತ ಶಿಕ್ಷಣದ ಹಂಬಲ ಕಡಿಮೆಯಾಗಲಿಲ್ಲ. ಉಪನ್ಯಾಸಕರು ತುಂಬಾ ಬೆಂಬಲ ನೀಡುತ್ತಿದ್ದರು ಮತ್ತು ನನಗೆ ಅಧ್ಯಯನ ಸಾಮಗ್ರಿಗಳೊಂದಿಗೆ ಸಹಾಯ ಮಾಡಿದರು ಮತ್ತು ಪರೀಕ್ಷೆಗಳನ್ನು ಬರೆಯಲು ನನಗೆ ಮಾರ್ಗದರ್ಶನ ನೀಡಿದರು.

ಬೆಂಗಳೂರಿನಲ್ಲಿರುವ ಎನ್‌ಜಿಒ ಎನೇಬಲ್‌ ಇಂಡಿಯಾ ನನಗೆ ಸಾಫ್ಟ್‌ವೇರ್‌ ಅನ್ನು ಬಳಸಲು ಕಲಿಸಿತು. ತರಗತಿಯಲ್ಲಿ ದೈನಂದಿನ ಬೋಧನೆಯ ಕಡೆ ಗಮನಹರಿಸುತ್ತಿದ್ದೆ ಮತ್ತು ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೆ. ಶಿಕ್ಷಕರು ತರಗತಿಗಳಲ್ಲಿ ಬಳಸುತ್ತಿದ್ದ ಪಿಪಿಟಿಯನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ವಿಷಯಗಳನ್ನು ಬೋಧಿಸುವಾಗ, ಅದು ನನಗೆ ಬಹಳಷ್ಟು ಸಹಾಯ ಮಾಡಿತು ಎನ್ನುತ್ತಾರೆ ಅಧೀಶ್‌.

ಕಲಿಕೆಗಿಲ್ಲ ವಯಸ್ಸಿನ ಹಂಗು
ಯೋಗ ವಿಜ್ಞಾನ ಪಿ.ಜಿ. ಡಿಪ್ಲೊಮಾದಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿರುವ 68 ವರ್ಷದ ನಿವೃತ್ತ ಇಂಜಿನಿಯರ್‌ ಮೋಹನ ಪೈಲೂರು ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂದು ಸಾಬೀತುಪಡಿಸಿದ್ದಾರೆ. ಮಂಗಳೂರಿನ ನಿವಾಸಿಯಾಗಿರುವ ಅವರು ನನಗೆ ಯೋಗದಲ್ಲಿ ಆಸಕ್ತಿ. ಬೆಳಗ್ಗಿನ ಅವಧಿಯಲ್ಲಿ ತರಗತಿ ನಡೆಯುತ್ತಿದ್ದ ಕಾರಣ ಕಲಿಕೆಗೆ ಪೂರಕವಾಯಿತು. ಮನೆಯಲ್ಲೂ ಯೋಗ ಅಭ್ಯಾಸ ಮಾಡುತ್ತಿದ್ದೇನೆ ಎಂದರು.

ಐಎಎಸ್‌ ಮಾಡುವ ಉದ್ದೇಶ: ವರೇಣ್ಯ
ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ವರೇಣ್ಯ ನಾಯಕ್‌ ಬಿ.ಎ. ಪದವಿಯಲ್ಲಿ ಪ್ರಥಮ ರ್‍ಯಾಂಕ್‌ನೊಂದಿಗೆ 2 ಚಿನ್ನದ ಪದಕವನ್ನು ಪಡೆದರು. ಬಾಲ್ಯದಿಂದಲೂ ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಕನಸು ಕಂಡಿದ್ದು ಇದೇ ಉದ್ದೇಶದಿಂದ ಬಿ.ಎ. ಪದವಿಯಲ್ಲಿ ವ್ಯಾಸಂಗ ನಡೆಸಿದ್ದೆ ಎನ್ನುತ್ತಾರೆ. ಪದವಿ ಕಲಿಕೆಯೊಂದಿಗೆ ಐಎಎಸ್‌ ಕೋಚಿಂಗ್‌ ಪಡೆಯುತ್ತಿದ್ದು, ಪ್ರಸ್ತುತ ವಿ.ವಿ. ಕ್ಯಾಂಪಸ್‌ನಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂಎ ಶಿಕ್ಷಣ ಪಡೆಯುತ್ತಿದ್ದಾರೆ. ಮೂಲತಃ ಅಂಕೋಲಾದವರಾಗಿರುವ ಅವರು ಉಡುಪಿ ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್‌ ನಾಯಕ್‌ ಮತ್ತು ಶಿಕ್ಷಕಿ ಜಯಂತಿ ದಂಪತಿಯ ಪುತ್ರಿ.

ಚಿನ್ನದ ಪದಕದೊಂದಿಗೆ 6 ನಗದು ಪುರಸ್ಕಾರ
ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸೌಜನ್ಯಾ ಕನ್ನಡ ಎಂ.ಎ. ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ನೊಂದಿಗೆ ಚಿನ್ನದ ಪದಕ ಮತ್ತು ಆರು ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ. ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಬಾಬು ಮತ್ತು ಬಿಸಿಯೂಟ ಸಹಾಯಕಿ ಸುಂದರಿ ಅವರ ಪುತ್ರಿಯಾಗಿರುವ ಸೌಜನ್ಯಾ ಬರವಣಿಗೆ, ಸಂಗೀತ ಹಾಗೂ ಕ್ರೀಡೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಆಕೆಗೆ ಉಪನ್ಯಾಸಕಿಯಾಗುವ ಹಂಬಲ.

ಜೀವ ರಸಾಯನ ವಿಜ್ಞಾನದಲ್ಲಿ
ಸಂಶೋಧನೆ ನನ್ನ ಗುರಿ: ಅದಿತಿ
ಉಳ್ಳಾಲ: ಬಿ.ಎಸ್ಸಿ. ಪದವಿಯಲ್ಲಿ ರ್‍ಯಾಂಕ್‌ ನಿರೀಕ್ಷೆಯಿತ್ತು ಆದರೆ ಪ್ರಥಮವೇ ಬರುತ್ತದೆ ಎಂದು ಭಾವಿಸಿರಲಿಲ್ಲ ಎನ್ನುತ್ತಾರೆ ಬಿ.ಎಸ್ಸಿ.ಯಲ್ಲಿ ಪ್ರಥಮ ರ್‍ಯಾಂಕ್‌ಗಳಿಸಿದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಅದಿತಿ ಎನ್‌. ರಸಾಯನಶಾಸ್ತ್ರ ನನ್ನ ಅಚ್ಚುಮೆಚ್ಚಿನ ವಿಷಯ. ಮುಂದೆ ಸ್ನಾತಕೋತ್ತರ ಪದವಿ ಪಡೆದು ಜೀವರಸಾಯನ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next