Advertisement

Mangaluru; ಕರಾವಳಿ ಘಟನೆಗಳ ಸಾಕ್ಷಿ ಈ ”ಕೇಂದ್ರ” ಮೈದಾನ್‌

11:09 PM Dec 01, 2023 | Team Udayavani |

ಕರ್ನಾಟಕ ಕರಾವಳಿಯ ಅನೇಕಾನೇಕ ಘಟನೆಗಳಿಗೆ ಸಾಕ್ಷಿ ಮಂಗಳೂರಿನ ಕೇಂದ್ರ ಮೈದಾನ್‌ ಅಥವಾ ನೆಹರೂ ಮೈದಾನ್‌. ಮಂಗಳೂರಿನ ಐಕಾನ್‌ಗಳಲ್ಲಿ ಕೂಡ ಒಂದು. ನಗರ ಕೇಂದ್ರ ಪ್ರದೇಶದಲ್ಲಿ ಇರುವ ಈ ವಿಸ್ತಾರವಾದ ಏಕೈಕ ಬಹು ಉದ್ದೇಶಿತ ಅಂಗಣವು ಬಹುಶತಮಾನಗಳ ಇತಿಹಾಸವನ್ನು ಹೊಂದಿದೆ. ಅರಸರ ಕಾಲದಲ್ಲಿ ವಿಶಾಲವಾದ ಪ್ರದೇಶ ಎಂಬ ಉಲ್ಲೇಖವಿದ್ದು, ಮುಂದೆ ಅದು ನಿರ್ದಿಷ್ಟ ಮಾಲಕತ್ವದಿಂದ ಕೊಡುಗೆಯಾಗಿ ಆಟದ ಉದ್ದೇಶಕ್ಕೆ ದಾನರೂಪದಲ್ಲಿ ಸಲ್ಲಿಕೆಯಾಗಿದೆ.

Advertisement

ಕ್ರಿಕೆಟ್‌, ಫ‌ುಟ್ಬಾಲ್‌, ಕಬಡ್ಡಿ ಮತ್ತಿತರ ಆಟಗಳು, ಸ್ವಾತಂತ್ರ್ಯ ದಿನ, ಪ್ರಜಾತಂತ್ರ ದಿನ, ರಾಜ್ಯೋತ್ಸವ ದಿನ ಸಹಿತ ರಾಷ್ಟ್ರೀಯ ಹಬ್ಬಗಳು ಜರಗುವುದು ಈ ಅಂಗಣದಲ್ಲಿಯೇ. ಚುನಾವಣೆ ಬಂತೆಂದರೆ ದೇಶದ ಬಹು ಮಂದಿ ಪ್ರಧಾನಿಗಳು ಇಲ್ಲಿ ಪ್ರಚಾರ ಭಾಷಣ ಅಥವಾ ಅಭಿವೃದ್ಧಿ ರ್ಯಾಲಿಗಳಲ್ಲಿ ಭಾಗವಹಿಸುತ್ತಾರೆ, ಅಂತೆಯೇ ರಾಷ್ಟ್ರೀಯ ನಾಯಕರು ಕೂಡ.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಹು ನಿರ್ಣಾಯಕ ಪಾತ್ರ ಈ ಮೈದಾನಿನದ್ದು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಇಲ್ಲಿ 3 ಬಾರಿ ಕರಾವಳಿಯ ಜನತೆಯನ್ನುದ್ದೇಶಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರಾವಳಿಯ ಜನತೆಗೆ ಇಲ್ಲಿಂದ ಕರೆ ನೀಡಿದರು. ಉಪ್ಪಿನ ಸತ್ಯಾಗ್ರಹ ಕೂಡ ಇಲ್ಲಿ ನಡೆಯಿತು. ಇಲ್ಲಿನ ಸ್ವಾತಂತ್ರ್ಯ ಸೇನಾನಿಗಳು ಕಡಲ ಕಿನಾರೆಯಲ್ಲಿ ಉಪ್ಪು ತಯಾರಿಸಿ ಅದನ್ನು ಈ ಮೈದಾನಿನಲ್ಲಿ ಮಾರಾಟ ಮಾಡುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಟದ ಧ್ವನಿ ಎತ್ತಿದರು. ಬೂಟು ಕಾಲಿನ, ಲಾಟಿ ಏಠಿನ ಪ್ರಹಾರಕ್ಕೂ ತಮ್ಮನ್ನು ತಾವು ಇಲ್ಲಿ ಒಡ್ಡಿಕೊಂಡರು. 1942ರ ಬ್ರಿಟಿಷರೇ ಭಾರತ ಬಿಟ್ಟು ತೊಡಗಿ “ಕ್ವಿಟ್‌ ಇಂಡಿಯಾ’ ಪ್ರತಿಭಟನೆಯ ವೇಳೆ ಇಲ್ಲಿ ರಕ್ತದ ಓಕುಳಿಯೇ ಹರಿಯಿತು. ಚಳವಳಿನಿರತ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಿಟಿಷರು ಯದ್ವಾತದ್ವಾ ಲಾಟಿ ಬೀಸಿದರು. ಬಹುಮಂದಿ ಗಾಯಗೊಂಡು ರಕ್ತ ಸುರಿಸಿದ್ದಕ್ಕೆ ಈ ಮೈದಾನ್‌ ಸಾಕ್ಷಿಯಾಗಿದೆ. ಸ್ವಾತಂತ್ರÂ ಸೇನಾನಿ ಎಂ. ಡಿ. ಅಧಿಕಾರಿ ಅವರು ಬ್ರಿಟಿಷರ ಏಟಿಗೆ ತಲೆ ಒಡೆದು ಬಿದ್ದಾಗ ಅವರನ್ನು ಇತರ ಹೋರಾಟಗಾರರು ಹೊತ್ತು ಕೊಂಡೇ ಪಕ್ಕದ ಆಸ್ಪತ್ರೆಗೆ ಸೇರಿಸಿದರು. ಈಗ ದೇಶದ ಸ್ವಾತಂತ್ರÂ ದಿನಾಚರಣೆ ಇಲ್ಲಿಯೇ ನಡೆಯುತ್ತದೆ. ಅಂತೆಯೇ ಪ್ರಮುಖ ರಾಷ್ಟ್ರೀಯ ಆಚರಣೆಗಳು ಕೂಡ.
ಈ ಮೈದಾನ್‌ಮೂಲತಃಮಂಗಳೂರಿನ ಒಂದು ಕ್ರೈಸ್ತ ಕುಟುಂಬದ ಮೂಲದಲ್ಲಿದ್ದು, ಅವರು ಈ 24.14 ಎಕ್ರೆ ಜಮೀನನ್ನು 1907ರಲ್ಲಿ ಕೇವಲ ಕ್ರೀಡಾ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂಬ ಶರತ್ತು ವಿಧಿಸಿ ಆಗಿನ ಮದ್ರಾಸ್‌ ಪ್ರಾಂತದ ಆಡಳಿತಕ್ಕೆ ದಾನಪತ್ರವಾಗಿ ನೀಡಿದ್ದರು. ಮುಂದೆ ಅದು ಆಗಿನ ಮಂಗಳೂರು ನಗರಸಭೆಯ ವ್ಯಾಪ್ತಿಗೆ ಬಂತು. ಉಳಿದದ್ದೆಲ್ಲ ಇತಿಹಾಸ.

ಪ್ರಧಾನಿಗಳ ಆದ್ಯತೆ
ದೇಶದ ಪ್ರಧಾನಿಗಳು ಈ ತಾಣವನ್ನು ಸಾರ್ವಜನಿಕ ಸಭೆಗಳಿಗೆ ಪ್ರಥಮ ಆಯ್ಕೆಯಾಗಿ ಮೆಚ್ಚುಗೆಯಿಂದ ಆರಿಸಿಕೊಂಡಿರುವ ಪರಂಪರೆಯಿದೆ. ಜವಾಹರಲಾಲ್‌ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್‌ ಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ, ವಿ. ಪಿ. ಸಿಂಗ್‌, ದೇವೇಗೌಡ, ಚಂದ್ರಶೇಖರ್‌, ಐ. ಕೆ. ಗುಜ್ರಾಲ್‌ ಸಹಿತ ಪ್ರಧಾನಿಗಳು ಈ ಮೈದಾನ್‌ ಅಥವಾ ಪಕ್ಕದ ಪುರಭವನ ಸಹಿತ ಪ್ರದೇಶಗಳಲ್ಲಿ ಸಭೆಗಳಲ್ಲಿ ಭಾಗವಹಿಸಿದ್ದರು. ಕಳೆದ ಚುನಾವಣೆ ವೇಳೆ ಇಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ಈವರೆಗೆ ಅತೀ ಹೆಚ್ಚು ಅಭಿಮಾನಿಗಳು ಸಾಕ್ಷಿಯಾದ ಬೃಹತ್‌ ಕಾರ್ಯಕ್ರಮವಾಗಿತ್ತು.

ವಿಶಾಲವಾದ ವಾಹನ ನಿಲುಗಡೆ, ಬಿಗಿ ಭದ್ರತಾ ವ್ಯವಸ್ಥೆ, ಸುಲಭವಾಗಿ ಬಂದು ಹೋಗಬಹುದಾದ ಆಯಕಟ್ಟಿನ ಪ್ರದೇಶ ಇದಾದ್ದರಿಂದ ಸಹಜವಾಗಿಯೇ ನಾಯಕರ ಮೊದಲ ಆದ್ಯತೆ. ಕ್ರಿಕೆಟ್‌ ಮತ್ತು ನೆಹರೂ ಮೈದಾನಿಗೆ ಅವಿನಾಭಾವ ಸಂಬಂಧ. ಇಲ್ಲಿನ ಅನೇಕ ಪ್ರವರ್ತಿತ ಕ್ರಿಕೆಟ್‌ ಪಂದ್ಯಾವಳಿಗಳು, ಅಂತರ ಕಾಲೇಜು ಮತ್ತು ಅಂತರ ಕ್ರಿಕೆಟ್‌ ಕ್ಲಬ್‌ ಪಂದ್ಯಾವಳಿ ಕೂಡ ಇಲ್ಲೇ ನಡೆಯುತ್ತದೆ. ರವಿವಾರವಂತೂ ಅಂಡರ್‌ ಆರ್ಮ್, ಟೆನಿಸ್‌ ಬಾಲ್‌ ಕ್ರಿಕೆಟ್‌ ಸ್ಪರ್ಧೆಗಳು ಮೈದಾನಿನ ಪೂರ್ತಿ ನಡೆಯುವುದು ವಿಶೇಷ. ಫ‌ುಟ್ಬಾಲ್‌ ಆಟಕ್ಕೆಂದೇ ಪ್ರತ್ಯೇಕ ಅಂಕಣವಿದೆ.

Advertisement

ಪುರಭವನ, ಬಸ್‌ ನಿಲ್ದಾಣಗಳು, ಜಿಲ್ಲಾಧಿಕಾರಿ ಕಚೇರಿ, ಪೊಲೀಸ್‌ ಆಯುಕ್ತರ ಕಚೇರಿ, ಆರ್‌ಟಿಒ ಸಹಿತ ವಿವಿಧ ಸರಕಾರಿ ಇಲಾಖೆಗಳ ಕಚೇರಿಗಳು, ಸ್ಥಳೀಯಾಡಳಿತ ಸಂಸ್ಥೆಗಳ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೆಲ್ಲ ಸುತ್ತಮುತ್ತಲಿರುವುದು ಉಲ್ಲೇಖನೀಯ.

ಇತಿಹಾಸದ ಮತ್ತು ಆಡಳಿತಾತ್ಮಕವಾದ ಮತ್ತು ಸಾಂಸ್ಕೃತಿಕವಾದ ಬಹು ಮಹತ್ವದ ಪ್ರದೇಶವಿದು. ಮೈದಾನಿನೊಳಗೆ ಪುಟ್ಟ ಉದ್ಯಾನವನವನ್ನೂ ನಿರ್ಮಿಸಲಾಗಿದೆ. ಸಂಜೆಯ ನಡಿಗೆಯವರು, ಲೋಕಾಭಿರಾಮ ಮಾತುಕತೆಯವರಿಗೂ ಕೂಡ ಇದು ಮೆಚ್ಚಿನ ಪ್ರದೇಶ.

ಹಿಂದೂ ಯುವಸೇನೆಯ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಹಿತ ಬಹು ಪ್ರಮುಖವಾದ ಧಾರ್ಮಿಕ ಉತ್ಸವಗಳು ಕೂಡ ಇಲ್ಲಿ ನಡೆಯುತ್ತದೆ. ಈಗಿನ ಭೌಗೋಳಿಕ ಸ್ವರೂಪದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಮತ್ತು ಕೊಡಗು ಜಿಲ್ಲೆಗಳಿಗೆ ಅನಾದಿ ಕಾಲದಿಂದಲೂ ಇದು ಮುಖ್ಯ ತಾಣ. ಸಮೀಪದಲ್ಲಿಯೇ ಮೀನುಗಾರಿಕ ಬಂದರು ಕೂಡ ಇರುವುದು ಮತ್ತು ಹಳೆಯ ಬಂದರಿನ ಅಸ್ತಿತ್ವ ವ್ಯಾಪಾರ ವ್ಯವಹಾರಗಳಿಗೂ ಪೂರಕವಾಗಿದೆ.

ಅಂದಹಾಗೆ ಮೂಲತಃ ಈ ಮೈದಾನಿನ ಹೆಸರು ಕೇಂದ್ರ ಮೈದಾನ್‌ ಅಥವಾ ಸೆಂಟ್ರಲ್‌ ಮೈದಾನ್‌. 1951ರ ಡಿಸೆಂಬರ್‌ನಲ್ಲಿ ಇಲ್ಲಿಗೆ ಆಗಮಿಸಿದ ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಈ ಅಂಗಣದ ಕ್ರೀಡಾ ಪೆವಿಲಿಯನ್‌ ಉದ್ಘಾಟಿಸಿದರು. ಆ ಬಳಿಕ ಇದು ನೆಹರೂ ಮೈದಾನ್‌ ಎಂದು ನಾಮಕರಣಗೊಂಡಿತು. ಆದರೆ ಇಂದಿಗೂ ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಈ ಪ್ರದೇಶವನ್ನು ಕೇಂದ್ರ ಮೈದಾನ್‌ ಎಂಬುದಾಗಿಯೇ ಉಲ್ಲೇಖೀಸುತ್ತಾರೆ.

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next