Advertisement

Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !

12:52 AM Jul 04, 2024 | Team Udayavani |

ಮಂಗಳೂರು: “ನಮಗೆ ಕೆಲಸ ಹೊಸತಲ್ಲ, ದುರದೃಷ್ಟ ಹೊಸತು!’

Advertisement

ಮಣ್ಣು ಕುಸಿತವಾಗಿ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳದಲ್ಲಿ ಕೇಳಿಬಂದ ಮಾತಿದು. ಸತತ 7 ಗಂಟೆಗಳ ಕಾರ್ಯಾಚರಣೆ ಬಳಿಕ ಚಂದನ್‌ ಕುಮಾರ್‌ ಅವರ ಶವವನ್ನು ಹೊರ ತೆಗೆದಾಗ ಸುತ್ತಲಿದ್ದ ಸಹ ಕಾರ್ಮಿಕರು, ಚಂದನ್‌ ಅವರ ಸ್ನೇಹಿತರ ದುಃಖದ ಕಟ್ಟೆ ಒಡೆಯಿತು. ಬಿಕ್ಕಿ ಬಿಕ್ಕಿ ಅಳತೊಡಗಿದರು.

“ಸುಮಾರು ಏಳು ವರ್ಷಗಳಿಂದ ನಾವು ಕಟ್ಟಡಗಳ ವಾಟರ್‌ ಪ್ರೂಫಿಂಗ್‌ ಕೆಲಸವನ್ನು ಮಂಗಳೂರಿನಲ್ಲಿ ಮಾಡುತ್ತಿದ್ದೇವೆ. ಕೆಲಸ ಹೊಸತಲ್ಲ. ಇಂದು ಹೀಗೆ ಏಕಾಯಿತೋ ಗೊತ್ತಿಲ್ಲ, ದುರದೃಷ್ಟ ‘ ಎಂದರು ಚಂದನ್‌ ಸಹೋದ್ಯೋಗಿಯೊಬ್ಬರು.

“ಚಂದನ್‌ ಹಾಗೂ ರಾಜ್‌ ಕುಮಾರ್‌ ಬುಧವಾರದಿಂದ ಬಲ್ಮಠದಲ್ಲಿ ಕೆಲಸಕ್ಕೆ ಹೋಗು ವುದಾಗಿ ಹೇಳಿದ್ದರು. ಅದರಂತೆ ತೆರಳಿದ್ದರು. ಮಧ್ಯಾಹ್ನ 1 ಗಂಟೆಯ ವೇಳೆಗೆ ಕರೆ ಬಂದು ಅವರಿಬ್ಬರು ಮಣ್ಣಿನಡಿ ಸಿಲುಕಿದ್ದಾರೆ ಎಂದು ಗೊತ್ತಾಯಿತು. ಇಲ್ಲಿಗೆ ಬಂದೆವು. ಪಾಪ, ಆತನಿಗೆ ಪತ್ನಿ, ಎರಡು ಮಕ್ಕಳಿದ್ದಾರೆ. ಅವರ ಭವಿಷ್ಯ?’ ಎಂದು ಪ್ರಶ್ನಾರ್ಥ ಕವಾಗಿ ನೋಡುತ್ತಾರೆ ಚಂದನ್‌ ಸಂಬಂಧಿ ಪಾಪು ಬೈತ.

“ಕಳೆದ ಎಪ್ರಿಲ್‌ನಲ್ಲಿ ಚಂದನ್‌ ತಂಗಿಯ ವಿವಾಹಕ್ಕೆ ನಾವೆಲ್ಲ ಊರಿಗೆ ಹೋಗಿದ್ದೆವು. ಮದುವೆಯೂ ಚೆನ್ನಾಗಿ ಆಗಿತ್ತು. 20 ದಿನಗಳ ಹಿಂದಷ್ಟೇ ಮಂಗಳೂರಿಗೆ ಕೆಲಸಕ್ಕೆ ವಾಪಸಾಗಿದ್ದೆವು ಎಂದು ವಿವರಿಸಿದರು ಪಾಪು.

Advertisement

ಅದೃಷ್ಟ ಕೈ ಬಿಡಲಿಲ್ಲ
ಸ್ಥಳೀಯ ಕಾರ್ಮಿಕರು ಹೇಳುವಂತೆ, ರಾಜ್‌ ಕುಮಾರ್‌ ಕೆಲಸಕ್ಕೆ ಹೊಸಬ. ತಮ್ಮ ಊರು ಬಿಹಾರದಲ್ಲಿ ಕೂಲಿ ಕಾರ್ಮಿಕನಾಗಿದ್ದ ರಾಜ್‌ ಕುಮಾರ್‌ ಮೂರು ತಿಂಗಳ ಹಿಂದಷ್ಟೇ ಇಲ್ಲಿನ ಗುಂಪಿನೊಂದಿಗೆ ಕೆಲಸಕ್ಕೆ ಸೇರಿದ್ದನಂತೆ. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

“ರಾಜ್‌ಕುಮಾರ್‌ ಮೂರು ತಿಂಗಳ ಹಿಂದಷ್ಟೇ ನಮ್ಮ ಜತೆ ಬಂದಿದ್ದ. ಊರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಮಾನಸಿಕವಾಗಿ ಅಸ್ವಸ್ಥರಾಗಿರುವ ತಂದೆ ಹಾಗೂ ತಾಯಿಯನ್ನು ನೋಡಿಕೊಳುವ ಹೊಣೆ ಅವನದಾಗಿತ್ತು. ಕೆಲವೇ ದಿನಗಳಲ್ಲಿ ಈ ದುರ್ಘ‌ಟನೆ ಸಂಭವಿಸಿದ್ದು, ಸದ್ಯ ಆತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಅದೇ ಅದೃಷ್ಟ’ ಎನ್ನುತ್ತಾರೆ ಅವರು. ರಾಜ್‌ ಕುಮಾರ್‌ ಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಮೂರು ತಿಂಗಳು ಅಗತ್ಯವಿದೆ ಎನ್ನಲಾಗಿದೆ. “ಮೂರು ತಿಂಗಳ ವಿಶ್ರಾಂತಿ ತೀರಾ ಅವಶ್ಯ. ಆ ಬಳಿಕ ನೋಡಬೇಕು’ ಎನ್ನುತ್ತಾರೆ ರಾಜ್‌ ಕುಮಾರ್‌ ಸಂಬಂಧಿ ಭುಲನ್‌ ಸಿಂಗ್‌.

ಮಳೆಗಾಲದ ಕಾಮಗಾರಿ ಇರಲಿ ಎಚ್ಚರ
ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ಮಳೆಗಾಲ ದಲ್ಲಿಯೂ ಕಟ್ಟಡ ನಿರ್ಮಾಣ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಮಣ್ಣು ಕುಸಿತದಂತಹ ಘಟನೆ ನಡೆಯು ತ್ತಿದ್ದರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಆರೋಪವಿದೆ. ಹೆಚ್ಚು ಮಳೆ ಬರುವ ದಿನಗಳಲ್ಲಿ ಇಂತಹ ಕಾಮಗಾರಿಗಳನ್ನು ನಡೆಸಲು ಅವಕಾಶ ನೀಡಬಾರದು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

ಭೂಕುಸಿತವಾಗಿ ಕಾರ್ಮಿಕರ ಸಾವು: ಹಿಂದಿನ ಪ್ರಕರಣಗಳು
-2007ರ ಡಿಸೆಂಬರ್‌ 17ರಂದು ಕಾವೂರಿನ ಬಳಿ ಆವರಣ ಗೋಡೆ ಕೆಲಸಕ್ಕೆಂದು ಅಗೆಯುವಾಗ ಭೂಕುಸಿತವಾಗಿ ಕೊಪ್ಪಳ ಜಿಲ್ಲೆಯ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು.
-2015ರ ಜುಲೆ„ 14ರಂದು ಸಂಜೆ ಫರಂಗಿಪೇಟೆ ಗ್ರಾ.ಪಂ. ಕಚೇರಿ ಬಳಿ ಖಾಸಗಿ ಕಟ್ಟಡ ನಿರ್ಮಾಣ ಸಂಸ್ಥೆಯವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಬಳಿ ಬರೆ ಕುಸಿದು ಮೂವರು ಸಾವನ್ನಪ್ಪಿದ್ದರು.
-2019ರ ಡಿ.7ರಂದು ಒಡಿಯೂರು ಬಳಿ ಗುಡ್ಡ ಅಗೆಯುತ್ತಿದ್ದಾಗ ಅದರ ಒಂದು ಭಾಗ ಕುಸಿದು ಬಿದ್ದು, ಮೂವರು ಕಾರ್ಮಿಕರು ಮೃತಪಟ್ಟಿದ್ದರು.
-2012ರಲ್ಲಿ ಮಂಗಳೂರಿನ ದೇರೆಬೈಲ್‌ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ತಡೆಗೋಡೆ ಕೆಲಸದಲ್ಲಿ ತೊಡಗಿದ್ದವರ ಮೇಲೆ ಬೃಹತ್‌ ಬರೆ ಕುಸಿದು ಬಿದ್ದು ಓರ್ವ ಕಾರ್ಮಿಕ ಮೃತಪಟ್ಟಿದ್ದು, ಆರು ಮಂದಿಯನ್ನು ರಕ್ಷಿಸಲಾಯಿತು.
-2020ರ ಫೆ.28ರಂದು ಬಂಟ್ಸ್‌ಹಾಸ್ಟೆಲ್‌ ಸಮೀಪದ ಕರಂಗಲ್ಪಾಡಿ ಜಂಕ್ಷನ್‌ ಬಳಿ ಮಧ್ಯಾಹ್ನ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದ ತಡೆಗೋಡೆ ಸಮೇತ ಭೂಕುಸಿತ ಸಂಭವಿಸಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು.

ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ
ಮಳೆಗಾಲ ಮುಗಿಯುವವರೆಗೆ ಕಟ್ಟಡದ ಕಾಮಗಾರಿ ನಡೆಸಬಾರದು. ಈಗಾಗಲೇ ಪ್ರಾರಂಭಿಸಿರುವ ಕಾಮಗಾರಿ ಗಳನ್ನು ಅಗತ್ಯ ಮುನ್ನೆ ಚ್ಚರಿಕೆ ಕ್ರಮದೊಂದಿಗೆ ಕಾಮಗಾರಿ ನಿಲ್ಲಿಸಬೇಕು. ಉಲ್ಲಂಘನೆ ಕಂಡುಬಂದಲ್ಲಿ ವಿಪತ್ತು ನಿರ್ವಹಣ ಕಾಯ್ದೆಯಡಿ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next