Advertisement

Mangaluru: ಬೊಕ್ಕಪಟ್ಣ ಶಾಲೆ- ಮಾದರಿ ತಾರಸಿ ತರಕಾರಿ ತೋಟ

04:02 PM Oct 05, 2023 | Team Udayavani |

ಬೊಕ್ಕಪಟ್ಣ: ಶಾಲೆಗಳಲ್ಲಿ ಕೈ ತರಕಾರಿ ತೋಟ ನಿರ್ಮಿಸುವುದು ಸಾಮಾನ್ಯವಾಗಿದ್ದು, ಬಹುತೇಕ ಸರಕಾರಿ ಶಾಲೆಗಳಲ್ಲಿ ಸರಕಾರದ ಸೂಚನೆಯಂತೆ ತರಕಾರಿ ಗಿಡಗಳನ್ನು ಬೆಳೆಸಲಾಗುತ್ತಿದೆ. ಆದರೆ ನಗರದ ಬೊಕ್ಕಪಟ್ಣ ಶಾಲೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾರಸಿಯಲ್ಲಿ ತರಕಾರಿ ಬೆಳೆಸುವ ಮೂಲಕ ಇತರ ಶಾಲೆಗಳಿಗೆ ಮಾದರಿಯಾಗಿದೆ.

Advertisement

ಬೊಕ್ಕಪಟ್ಣ ದ.ಕ. ಜಿಲ್ಲಾ ಪಂಚಾಯತ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಗಳದಲ್ಲಿ ಕೈ ತೋಟ ಇದೆ. ಅದರ ಜತೆಗೆ
ಶಾಲಾ ಕಟ್ಟಡದ ತಾರಸಿ ಮೇಲೆಯೂ ತರಕಾರಿ ಗಿಡಗಳನ್ನು ಬೆಳೆಸಲಾಗಿದೆ.

ಗುಜರಿಗೆ ಹಾಕಲಾದ ರೆಫ್ರಿಜರೇಟರ್‌ ಗಳನ್ನು ತಂದು, ಅದಕ್ಕೆ ಮಣ್ಣು ತುಂಬಿಸಿ ಬೀಜಗಳನ್ನು ಬಿತ್ತಿ ಗಿಡ ಮಾಡಲಾಗಿದೆ. ಶಾಲಾ ಮುಖ್ಯ ಶಿಕ್ಷಕಿ ಡ್ರೆಸಿಲ್‌ ಲಿಲ್ಲಿ ಮಿನೇಜಸ್‌, ಶಿಕ್ಷಕಿಯರಾದ ಕಲ್ಪನಾ ಆರ್‌., ಸ್ಟೆಲ್ಲಾ ಮೊರಾಸ್‌, ಆಶಾ, ಉಷಾ, ಮಾಧವಿ
ಅವರೊಂದಿಗೆ ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ, ಸದಸ್ಯರು ಈ ಚಟುವಟಿಕೆಯಲ್ಲಿ ಕೈ ಜೋಡಿಸಿದ್ದಾರೆ. ಲಯನ್ಸ್‌ ಕ್ಲಬ್‌ ಪಡೀಲ್‌
ಮತ್ತು ಲಯನ್ಸ್‌ ಕ್ಲಬ್‌ ಸ್ಮಾರ್ಟ್‌ ಸಿಟಿಯ ಆಶಾ ನಾಗರಾಜ್‌ ಅವರ ಸಹಕಾರವೂ ಇದೆ. ಕಳೆದ ವರ್ಷವೂ ಶಾಲೆಯಲ್ಲಿ ತಾರಸಿ
ತೋಟ ಮಾಡಲಾಗಿತ್ತು. ಶಾಲೆಯಲ್ಲಿ ಶಿಕ್ಷಕಿಯರು ತರಕಾರಿ ಗಿಡಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ.

ಏನೆಲ್ಲಾ ಗಿಡಗಳಿವೆ
ತಾರಸಿ ತೋಟದಲ್ಲಿ ಮುಖ್ಯವಾಗಿ ಬೆಂಡೆ, ಮೂಲಂಗಿ, ಹೀರೆಕಾಯಿ, ಹರಿವೆ, ಮುಳ್ಳು ಸೌತೆ, ಅಲಸಂಡೆ, ಬಸಳೆ ಮೊದಲಾದವುಗಳನ್ನು ಬೆಳೆಯಲಾಗಿದೆ. ಗಿಡಗಳಿಗೆ ಸಾವಯವ ಗೊಬ್ಬರವನ್ನೇ ಹಾಕುತ್ತಿದ್ದು, ದನದ ಸೆಗಣಿಯನ್ನು ಉಪಯೋಗಿಸಲಾಗುತ್ತಿದೆ. ಇದರಿಂದ ಗಿಡಗಳು ಸೊಂಪಾಗಿ ಬೆಳೆಯುತ್ತಿವೆ. ಈ ನಡುವೆ ಕೀಟ ಬಾಧೆ ಕಾಣಿಸಿಕೊಂಡಿದ್ದು,
ಕೆಲವು ಗಿಡಗಳಲ್ಲಿ ಎಲೆಗಳನ್ನು ಕೀಟಗಳು ತಿಂದಿವೆ. ಮಳೆ, ಬಿಸಿಲು ಸಹಿತ ಹವಾಮಾನ ಬದಲಾವಣೆ ಕಾರಣದಿಂದ ಈ ರೀತಿ ಉಂಟಾಗಿರಬಹುದು ಎನ್ನುತ್ತಾರೆ ಶಿಕ್ಷಕಿಯರು.

ಬಿಸಿಯೂಟಕ್ಕೆ ಬಳಕೆ
ಶಾಲೆಗೆ ಮಧ್ಯಾಹ್ನದ ಬಿಸಿಯೂಟ ಇಸ್ಕಾನ್‌ ಸಂಸ್ಥೆ ಒದಗಿಸುತ್ತಿದೆ. ಅದರೊಂದಿಗೆ ಶಾಲೆಯ ತೋಟದಲ್ಲಿ ಬೆಳೆದ ತರಕಾರಿಯೊಂದರ ಪಲ್ಯವನ್ನೂ ಮಾಡಲಾಗುತ್ತದೆ. ಈಗಾಗಲೇ ಬೆಂಡೆಕಾಯಿ ಸುಮಾರು 10 ಬಾರಿ, ಅಲಸಂಡೆ 5 ಬಾರಿ, ಮೂಲಂಗಿ 4 ಬಾರಿ, ಹರಿವೆ 10 ಕಟ್ಟು ವರೆಗೆ ತೆಗೆಯಲಾಗಿದೆ. ಅಷ್ಟಮಿ ಸಂದರ್ಭ ಹರಿವೆ ಮಾರಾಟ ಮಾಡಲಾಗಿದೆ. ಗಿಡಗಳಿಗೆ ಮಣ್ಣು, ಗೊಬ್ಬರಗಳನ್ನು ಶಿಕ್ಷಕಿಯರೇ ವ್ಯವಸ್ಥೆ ಮಾಡುತ್ತಿದ್ದಾರೆ.

Advertisement

ಮಕ್ಕಳೇ ಗಿಡಗಳ ನಿರ್ವಹಣೆ
ತಾರಸಿಯಲ್ಲಿ ತರಕಾರಿ, ಸೊಪ್ಪುಗಳನ್ನು ಬೆಳಸುವ ಪರಿಕಲ್ಪನೆಯನ್ನು ವಿಶೇಷವಾಗಿ ನಮ್ಮ ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಈಗಾಗಲೇ ಹಲವು ಬಾರಿ ತರಕಾರಿಗಳನ್ನು ಕೊಯ್ದು ಪಲ್ಯ ಮಾಡಿ ಮಕ್ಕಳಿಗೆ ಬಿಸಿಯೂಟದ
ಜತೆಗೆ ನೀಡಲಾಗಿದೆ. ಶಿಕ್ಷಕರ ಸಲಹೆ ಸೂಚನೆಯಂತೆ ಮಕ್ಕಳೇ ಖುಷಿಯಿಂದ ಗಿಡಗಳ ನಿರ್ವಹಣೆ ಮಾಡುತ್ತಾರೆ.
ಡ್ರೆಸಿಲ್‌ ಲಿಲ್ಲಿ ಮಿನೇಜಸ್‌,
ಶಾಲಾ ಮುಖ್ಯ ಶಿಕ್ಷಕಿ (ಪ್ರಭಾರ)

ಕಲಿಯಲು ಅವಕಾಶ
ಶಾಲೆಯಲ್ಲಿ ತರಕಾರಿ ಬೆಳೆಸುವ ಚಟುವಟಿಕೆಯಲ್ಲಿ ಭಾಗವಹಿಸುವುದು ಖುಷಿ ತಂದಿದೆ. ಇದರಿಂದ ಕೃಷಿ ಬಗ್ಗೆ ಕಲಿಯುವ ಅವಕಾಶವೂ ಇದೆ. ನೀರು ಹಾಕುವುದು, ಗಿಡಗಳು ಹೂ ಬಿಟ್ಟ ಬಳಿಕ ಕಾಯಿ ಮೂಡಿ ಅದು ಬೆಳೆದು ದೊಡ್ಡದಾಗುವುದು ಇದೆಲ್ಲಾ ನೋಡುವಾಗ ಖುಷಿಯಾಗುತ್ತದೆ.
ಶ್ವೇತಾ,ವಿದ್ಯಾರ್ಥಿನಿ

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next