Advertisement

Ullal ಟಾರ್ಗೆಟ್‌ ಇಲ್ಯಾಸ್‌ ಕೊಲೆಗೆ ಪ್ರತೀಕಾರವಾಗಿ ಸಮೀರ್‌ ಹತ್ಯೆ

07:51 AM Aug 13, 2024 | Team Udayavani |

ಉಳ್ಳಾಲ: ತೊಕ್ಕೊಟ್ಟು ಕಲ್ಲಾಪು ಬಳಿ ರವಿವಾರ ರಾತ್ರಿ ಕೊಲೆಯಾದ ರೌಡಿಶೀಟರ್‌ ಸಮೀರ್‌ ಆಲಿಯಾಸ್‌ ಕಡಪ್ಪರ ಸಮೀರ್‌ (33) ಹತ್ಯೆಯು 2018ರ ಉಳ್ಳಾಲ ನಿವಾಸಿ ಟಾರ್ಗೆಟ್‌ ಇಲ್ಯಾಸ್‌ ಕೊಲೆ ಪ್ರಕರಣಕ್ಕೆ ಪ್ರತಿಕಾರವಾಗಿದೆ ಎಂಬುದು ಪೊಲೀಸ್‌ ತನಿಖೆಯಲ್ಲಿ ಖಚಿತವಾಗಿದ್ದು, ಇಲ್ಯಾಸ್‌ನ ಹತ್ತಿರದ ಸಂಬಂಧಿ ಸಹಿತ ಐವರ ತಂಡ ಈ ಕೃತ್ಯವನ್ನು ಎಸಗಿದೆ ಎನ್ನಲಾಗಿದೆ.

Advertisement

ಘಟನೆಗೆ ಸಂಬಂಧಿಸಿ ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.ದರೋಡೆ ಪ್ರಕರಣವೊಂದಕ್ಕೆ ಜೈಲು ಸೇರಿದ್ದ ಸಮೀರ್‌ ನಾಲ್ಕು ದಿನಗಳ ಹಿಂದೆ ಜಾಮೀನಿನಲ್ಲಿ ಹೊರಬಂದಿದ್ದ. ರವಿವಾರ ಮುಕ್ಕಚ್ಚೇರಿಯಲ್ಲಿರುವ ತನ್ನ ತಾಯಿ ಮತ್ತು ಕುಟುಂಬದ ಸದಸ್ಯರೊಂದಿಗೆ ಪಂಪ್‌ವೆಲ್‌ನಲ್ಲಿರುವ ತನ್ನ ಫ್ಲ್ಯಾಟ್ ಗೆ ತೆರಳುತ್ತಿದ್ದ. ಈ ಸಂದರ್ಭ ಕಲ್ಲಾಪು ಬಳಿಯಿರುವ ವಾಣಿಜ್ಯ ಸಂಕೀರ್ಣದ ಎದುರು ಕಾರು ನಿಲ್ಲಿಸಿ ಬಾಗಿಲು ತೆರೆಯುತ್ತಿದ್ದಂತೆ, ಹಿಂದಿನಿಂದ ಕಾರಿನಲ್ಲಿ ಬಂದ ಐವರ ತಂಡವೊಂದು ಅಟ್ಟಾಡಿಸಿ ತಲವಾರಿನಿಂದ ಕೊಂದು ಹಾಕಿದೆ.

ಟಾರ್ಗೆಟ್‌ ಇಲ್ಯಾಸ್‌ ಹತ್ಯೆಗೆ ಪ್ರತಿಕಾರ
ಉಳ್ಳಾಲದಲ್ಲಿ “ಟಾರ್ಗೆಟ್‌ ಹೆಸರಿನ ಮೂಲಕ ಹನಿಟ್ರ್ಯಾಪ್ ಸಹಿತ ಉದ್ಯಮಿಗಳನ್ನು ಬೆದರಿಸಿ ಹಣ ವಸೂಲಿಯಂತಹ ಹಲವು ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ಇಲ್ಯಾಸ್‌ನನ್ನು ಆತನದೇ ತಂಡದ ಸದಸ್ಯರಾಗಿ ಬಳಿಕ ಆತನಿಂದ ಬೇರ್ಪಟ್ಟಿದ್ದ ದಾವೂದ್‌ ಸಮೀರ್‌ ಕಡಪ್ಪರ ಸಹಿತ ಎಂಟು ಜನರ ತಂಡವೊಂದು 2018ರ ಜ. 13ರಂದು ಬೆಳ್ಳಂಬೆಳಗ್ಗೆ ಮಂಗಳೂರಿನ ಕುಡಾ³ಡಿ ಬದ್ರಿಯಾ ಜುಮ್ಮಾ ಮಸೀದಿ ಎದುರಿನ ಮಿಸ್ತಾಹ್‌ ಗ್ಯಾಲೋರ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಮಲಗಿದ್ದ ವೇಳೆಯೇ ಕೊಲೆ ಮಾಡಿ ಪರಾರಿಯಾಗಿತ್ತು. ಈ ಪ್ರಕರಣದ ಪ್ರಮುಖ ಅರೋಪಿಯಾಗಿ ಸಮೀರ್‌ ಹಾಗೂ ದಾವೂದ್‌ ಗುರುತಿಸಿಕೊಂಡಿದ್ದರು.

ಖುಲಾಸೆ ಬಳಿಕ ಹೆಚ್ಚಾದ ಪ್ರತೀಕಾರದ ಕಿಚ್ಚು
ಇಲ್ಯಾಸ್‌ ಕೊಲೆ ನಡೆದ ಸಂದರ್ಭದಲ್ಲೇ ಇಲ್ಯಾಸ್‌ನ ಸಂಬಂಧಿ ಫಾರೂಕ್‌ ನೇತೃತ್ವದಲ್ಲಿ ಸಮೀರ್‌ ಹತ್ಯೆಗೆ ಯತ್ನ ನಡೆದಿತ್ತು. ಈ ಸಂದರ್ಭದಲ್ಲಿ ಉಳ್ಳಾಲ ಪೊಲೀಸರು ಫಾರೂಕ್‌ನ ಕಾಲಿಗೆ ಗುಂಡು ಹೊಡೆದು ರೌಡಿ ತಂಡವನ್ನು ಹಿಮ್ಮೆಟ್ಟಿಸಿದ್ದು, ಬಳಿಕ ಯಾವುದೇ ಘಟನೆಗಳು ನಡೆದಿರಲಿಲ್ಲ. ಸಮೀರ್‌ ವಿರುದ್ಧ ಉಳ್ಳಾಲ, ಕೊಣಾಜೆ, ಬಂಟ್ವಾಳ, ಪಾಂಡೇಶ್ವರ ಸಹಿತ ವಿವಿಧ ಠಾಣೆಗಳಲ್ಲಿ ಸುಮಾರು 9 ಪ್ರಕರಣಗಳು ದಾಖಲಾಗಿದ್ದವು. ಸಮೀರ್‌ ಪಾಂಡೇಶ್ವರದ ಶೂಟೌಟ್‌ ಪ್ರಕರಣದಲ್ಲೂ ಆರೋಪಿಯಾಗಿದ್ದ. ಟಾರ್ಗೆಟ್‌ ಇಲ್ಯಾಸ್‌ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಕೋರ್ಟ್‌ 2023ರ ಡಿ. 11ರಂದು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಖುಲಾಸೆ ಬಳಿಕ ಇಲ್ಯಾಸ್‌ ತಂಡದ ಸದಸ್ಯರು ಸಮೀರ್‌ ಕೊಲೆಗೆ ಯೋಜನೆ ರೂಪಿಸಿದ್ದರು.

ಜೈಲಿನಲ್ಲೂ ನಡೆದಿತ್ತು ಹತ್ಯೆಗೆ ಪ್ಲ್ಯಾನ್
ಸಮೀರ್‌ 2024ರ ಜೂನ್‌ನಲ್ಲಿ ವಿದೇಶದಿಂದ ಬಂದ ಉದ್ಯಮಿಯೊಬ್ಬರ ದರೋಡೆಗೆ ಯತ್ನಿಸಿ ಜೈಲು ಸೇರಿದ್ದ. ಜೈಲು ಸೇರಿದ್ದ ಸಮೀರ್‌ ಹತ್ಯೆಗೆ ಮುಹೂರ್ತ ಇಟ್ಟಿದ್ದ ತಂಡ ಜು. 11ರಂದು ಮಂಗಳೂರು ಜೈಲಿನಲ್ಲೇ ಸಮೀರ್‌ ಹಾಗೂ ಆತನ ಸಹಚರ ಬೋಳಿಯಾರ್‌ ನಿವಾಸಿ ಮುಹಮ್ಮದ್‌ ಮನ್ಸೂರ್‌ಗೆ ಕೈದಿಗಳ ಗುಂಪೊಂದು ಜೈಲಿನ ಒಳಗೆ ಮಾರಕಾಯುಧಗಳಿಂದ ದಾಳಿ ನಡೆಸಿತ್ತು. ಇಲ್ಯಾಸ್‌ ಅಪ್ತ ವಲಯದ ಟೋಪಿ ನೌಫಲ್‌ ಮತ್ತು ಗ್ಯಾಂಗ್‌ನಿಂದ ಈ ದಾಳಿ ನಡೆದಿತ್ತು.

Advertisement

ಇಲ್ಯಾಸ್‌ ಮಾದರಿಯಲ್ಲೇ ಕೊಲೆ ಇಲ್ಯಾಸ್‌ನನ್ನು ಆತನ ಅತ್ತೆ ಆಸ್ಮತ್‌, ಬಾವ ಮೊಹಮ್ಮದ್‌ ನೌಷಾದ್‌ ಎದುರೇ ಕೊಲೆ ಮಾಡಲಾಗಿತ್ತು. ಅದೇ ರೀತಿ ಸಮೀರ್‌ನನ್ನು ಆತನ ತಾಯಿ ಮತ್ತು ಕುಟುಂಬದ ಸದಸ್ಯರ ಎದುರೇ ಕೊಲೆ ಮಾಡಿದೆ.

ರೀಲ್ಸ್‌ ಮಾಡಿ ಸಿಲುಕಿದನೇ?
ವಿದೇಶದಿಂದ ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಕಳ್ಳ ದಾರಿಯಲ್ಲಿ ತಂದು ಕೇರಳಕ್ಕೆ ಸಾಗಿಸುತ್ತಿದ್ದವರನ್ನು ಟಾರ್ಗೆಟ್‌ ಮಾಡಿ ಚಿನ್ನ ಸುಲಿಗೆ ಮಾಡಿರುವ ಆರೋಪ ಸಮೀರ್‌ ಮೇಲಿದ್ದು, ಇಂತಹ ಪ್ರಕರಣದ ಮೂಲಕ ಅಪರಾಧ ಜಗತ್ತಿನಲ್ಲಿ ಹಣ ಮಾಡಿ ಸ್ಥಿತಿವಂತನಾಗಿದ್ದ. ಹೊಸ ಕಾರು ಖರೀದಿಸಿ ಜಾಮೀನು ಸಿಕ್ಕಿದ ಬಳಿಕ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದ. ಸಮೀರ್‌ ದರೋಡೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವುದು ಮತ್ತು ಆತನ ಕಾರ್‌ನ ಸಂಪೂರ್ಣ ವಿವರ ಎದುರಾಳಿಗಳಿಗೆ ಸಾಮಾಜಿಕ ಜಾಲತಾಣದಿಂದ ಸಿಕ್ಕಿತ್ತು. ನಾಲ್ಕು ದಿನಗಳಿಂದ ಆತನ ಚಲನವಲನ ಮತ್ತು ಕಾರನ್ನು ಹಿಂಬಾಲಿಸಿ ಕೊಲೆಗೆ ಸ್ಕೆಚ್‌ ರೂಪಿಸಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ತಲವಾರು ವಶಕ್ಕೆ
ಸಮೀರ್‌ನನ್ನು ವಾಣಿಜ್ಯ ಸಂಕೀರ್ಣದ ಹಿಂಬದಿಯ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ತಲವಾರನ್ನು ಬಿಸಾಡಿ ಹೋಗಿದ್ದರು. ಕೊಲೆ ನಡೆದ ಗಂಟೆಯ ಬಳಿಕ ಸಮೀರ್‌ನ ಮೃತದೆಹ ಪತ್ತೆಯಾಗಿದ್ದು, ಸೋಮವಾರ ಬೆಳಗ್ಗೆ ಎರಡು ತಲವಾರುಗಳನ್ನು ಪೊದೆಗಳೆಡೆಯಿಂದ ವಶಕ್ಕೆ ಪಡೆಯಲಾಗಿದೆ.

ಕಮಿಷನರ್‌ ಅನುಪಮ್‌ ಅಗರವಾಲ್‌ ಅವರ ಮಾರ್ಗದರ್ಶನದಲ್ಲಿ ಎಸಿಪಿ ಧನ್ಯಾ ನಾಯಕ್‌ ಅವರ ನೆತೃತ್ವದಲ್ಲಿ ಉಳ್ಳಾಲ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಎಚ್‌.ಎನ್‌. ಮತ್ತು ತಂಡ ತನಿಖೆ ನಡೆಸುತ್ತಿದ್ದು, ಆರೋಪಿಗಳ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ಹೇಳಲಾಗಿದೆ.

ಇಬ್ಬರೂ ಜಾಮೀನಿನಲ್ಲಿದ್ದಾಗಲೇ ಕೊಲೆ
ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ “ಟಾರ್ಗೆಟ್‌’ ಎಂಬ ಹೆಸರಿನಲ್ಲಿ ಕಾರುಗಳನ್ನು ಬಾಡಿಗೆಗೆ ನೀಡುವ ವ್ಯವಹಾರ ಆರಂಭಿಸಿದ್ದ. ಇಲ್ಯಾಸ್‌ ತನ್ನದೇ ಆದ ಯುವಕರ ತಂಡ ಕಟ್ಟಿಕೊಂಡು ಹಣ ಸುಲಿಗೆ ಸಹಿತ ದರೋಡೆ, ಕೊಲೆಯತ್ನದಂತಹ ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಹಣದ ವಿಚಾರದಲ್ಲಿ ಈತನ ತಂಡದಲ್ಲಿದ್ದ ದಾವೂದ್‌, ಸಮೀರ್‌ ಒಂದು ತಂಡವನ್ನು ಕಟ್ಟಿಕೊಂಡರೆ, ಸರ್ಫಾನ್‌ ಇನ್ನೊಂದು ತಂಡವನ್ನು ಕಟ್ಟಿಕೊಂಡು ಇಲ್ಯಾಸ್‌ನಿಂದ ಬೇರ್ಪಡುತ್ತಾರೆ. ಇದೇ ವಿಚಾರದಲ್ಲಿ ದಾವೂದ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಇಲ್ಯಾಸ್‌ ಜೈಲು ಪಾಲಾಗಿ ಜಾಮೀನಿನಲ್ಲಿ ಹೊರಗೆ ಬಂದು ಐದೇ ದಿನದಲ್ಲಿ ಕೊಲೆಯಾಗಿದ್ದ. ಈಗ ಸಮೀರ್‌ ಜಾಮೀನಿನಲ್ಲಿ ಹೊರಂಬದ ನಾಲ್ಕೇ ದಿನಗಳಲ್ಲಿ ಕೊಲೆಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next