Advertisement

ಟ್ರಾಫಿಕ್‌ ಪೊಲೀಸರಿಗೆ ಬೆಳಗ್ಗೆ-ಸಂಜೆ ಜಂಕ್ಷನ್‌ಗಳಲ್ಲಿ ಕರ್ತವ್ಯ ಕಡ್ಡಾಯ: ಕಮಿಷನರ್‌

04:01 PM Jun 26, 2023 | Team Udayavani |

ಸ್ಟೇಟ್‌ಬ್ಯಾಂಕ್‌: ಟ್ರಾಫಿಕ್‌ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯ ಜಂಕ್ಷನ್‌, ವಾಹನ ದಟ್ಟಣೆ ಪ್ರದೇಶದಲ್ಲಿ ಬೆಳಗ್ಗೆ, ಸಂಜೆ ಹೊತ್ತು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಈಗಾಗಲೇ ಈ ಕುರಿತು ಸೂಚನೆ ನೀಡಲಾಗಿದ್ದು, ಶೇ.95ರಷ್ಟು ಮಂದಿ ಠಾಣೆಯಿಂದ ಹೊರಗಿರಬೇಕು ಎಂದು ನಗರ ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ ಸೂಚನೆ ನೀಡಿದ್ದಾರೆ.

Advertisement

ರವಿವಾರ ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಜರಗಿದ ಪ.ಜಾ./ಪ.ಪಂಗಡದವರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಕೆಲವು ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಮರದಡಿಯಲ್ಲಿ ನಿಂತು ಮೊಬೈಲ್‌ ನೋಡಿಕೊಂಡು ಇರುತ್ತಾರೆ ಎನ್ನುವ ದಲಿತ ಮುಖಂಡರ ದೂರಿನ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಿದರು. ಇದರಿಂದ ಅಪಘಾತಗಳು ಉಂಟಾಗುವುದನ್ನು ತಡೆಯಲು ಸಾಧ್ಯವಿದೆ. ಪೊಲೀಸರು ಇರುವುದನ್ನು ನೋಡಿದರೆ ವಾಹನ ಸವಾರರಲ್ಲಿ ಶಿಸ್ತು ಇರುತ್ತದೆ ಎಂದರು.

ಶಾಲಾ ಆವರಣದಲ್ಲಿ ದಟ್ಟಣೆ
ನಗರದ ಬಹುತೇಕ ಶಾಲೆ ವಠಾರದ ರಸ್ತೆಗಳಲ್ಲಿ ಬೆಳಗ್ಗೆ, ಸಂಜೆ ವೇಳೆ ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ. ಶಾಲಾ ಆವರಣದೊಳಗೆ ಜಾಗವಿದ್ದರೂ ವಾಹನಗಳನ್ನು ಒಳಗೆ ಬಿಡದಿರುವುದರಿಂದ ರಸ್ತೆಯಲ್ಲಿ ಸಾಗುವವರಿಗೆ ಸಮಸ್ಯೆಯಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಪ್ರಮುಖರು ಆಗ್ರಹಿಸಿದರು. ಉತ್ತರ ನೀಡಿದ ಪೊಲೀಸ್‌ ಉಪಾಯುಕ್ತ ದಿನೇಶ್‌ ಕುಮಾರ್‌ ಅವರು, ಸಂಬಂಧಪಟ್ಟ ಶಾಲೆಯವರಿಗೆ ವಾಹನಗಳನ್ನು ಆವರಣ, ಮೈದಾನದಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗುವುದು ಎಂದರು.

ಅಂಬೇಡ್ಕರ್‌ ಭವನದ ಸೊತ್ತು ಕಳವು
ಬಜಪೆ ಠಾಣಾ ವ್ಯಾಪ್ತಿಯ ಗಂಜಿಮಠದ ಗಣೇಶನಗರದ ಅಂಬೇಡ್ಕರ್‌ ಭವನದ ಲಕ್ಷಾಂತರ ರೂ.ಮೌಲ್ಯದ ಸೊತ್ತುಗಳು ಕಳ್ಳತನವಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವ ಕೆಲಸ ಆಗಿಲ್ಲ ಎಂದು ದಸಂಸ ಮುಖಂಡ ಎಸ್‌.ಪಿ.ಆನಂದ ದೂರಿದರು. ಬಜಪೆ ಠಾಣಾಧಿಕಾರಿ ಉತ್ತರಿಸಿ, ಮಾ. 30ರಂದು ಎಫ್‌ಐಆರ್‌ ಆಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಪ್ರಗತಿಯಲ್ಲಿದೆ ಎಂದರು.

Advertisement

ಚನ್ನದಾಸ ಸಮುದಾಯದವರು ಮೇಲ್ವರ್ಗಕ್ಕೆ ಸೇರಿದವರಾಗಿದ್ದು, ಪ.ಜಾತಿಯಲ್ಲಿ ಜಾತಿ ಪ್ರಮಾಣ ಪತ್ರ ಕೇಳುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಪ್ರಮಾಣ ಪತ್ರ ನೀಡದಂತೆ ತಡೆಯಬೇಕು ಎಂದು ಆನಂದ್‌ ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ತಿಳಿಸಿದರು.

ಮುಂಜಾನೆಯೇ ಮದ್ಯದಂಗಡಿ ಓಪನ್‌
ನಗರದ ಕೆಲವು ಪ್ರಮುಖ ಸ್ಥಳಗಳಲ್ಲಿ ವೈನ್‌ಶಾಪ್‌ಗ್ಳು ಬೆಳಗ್ಗೆ 5-6 ಗಂಟೆ ಹೊತ್ತಿಗೆ ತೆರೆಯುತ್ತದೆ. ಇದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುವ ಬದಲು ವೈನ್‌ಶಾಪ್‌ಗ್ಳ ಮುಂದೆ ಹೋಗಿ ನಿಲ್ಲುತ್ತಾರೆ ಈ ಕುರಿತು ಗಮನ ಹರಿಸಬೇಕು ಮುಖಂಡರು ಮನವಿ ಮಾಡಿದರು. ಉತ್ತರಿಸಿದ ಆಯುಕ್ತರು ಈಗಾಗಲೇ ಕೆಲವು ವೈನ್‌ಶಾಪ್‌ಗ್ಳಿಗೆ ದಂಡ ವಿಧಿಸಲಾಗಿದೆ. ಕಾನೂನು ಉಲ್ಲಂಘನೆ ಕಂಡು ಬಂದರೆ ಫೋಟೋ ತೆಗೆದು ಕಳುಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಲನಿಗಳಿಗೆ ಸಿಸಿ ಕೆಮರಾ
ಪಾಲಿಕೆ ವ್ಯಾಪ್ತಿಯ ಎಸ್‌ಸಿ-ಎಸ್‌ಟಿ ಕಾಲನಿಗಳಿಗೆ ಸಿಸಿ ಕೆಮರಾ ಅಳವಡಿಕೆ ಸಂಬಂಧಿಸಿದ ಪ್ರಕ್ರಿಯೆ ಏನಾಗಿದೆ ಎಂದು ಎಸ್‌.ಪಿ. ಆನಂದ ಪ್ರಶ್ನಿಸಿದರು. ಇದು ಪಾಲಿಕೆ ಕೈಗೊಳ್ಳುವ ಕಾಮಗಾರಿಯಾಗಿದ್ದು, ಮಾಹಿತಿ ಪಡೆಯಲಾಗುವುದು ಎಂದು ಡಿಸಿಪಿ ತಿಳಿಸಿದರು. ಕಾನೂನು ಸುವ್ಯವಸ್ಥೆ ಡಿಸಿಪಿ ಅಂಶುಕುಮಾರ್‌, ಟ್ರಾಫಿಕ್‌ ಎಸಿಪಿ ಗೀತಾ ಕುಲಕರ್ಣಿ ಉಪಸ್ಥಿತರಿದ್ದರು. ದಲಿತ ಮುಖಂಡರಾದ ಮುಕೇಶ್‌ ಕುಮಾರ್‌ ಕುಲಶೇಖರ, ರಮೇಶ್‌ ಎ. ಪಾಂಡೇಶ್ವರ, ಅಮಲ ಜ್ಯೋತಿ, ಅನಿಲ್‌ ಕುಮಾರ್‌, ಮಂಜುನಾಥ ಮೂಲ್ಕಿ ಮೊದಲಾದವರಿದ್ದರು.

ಅಂಬೇಡ್ಕರ್‌ ವೃತ್ತ
ಅಭಿವೃದ್ಧಿಗೆ ಆಗ್ರಹ
ನಗರದ ಅಂಬೇಡ್ಕರ್‌ ವೃತ್ತ ಅಭಿವೃದ್ಧಿ ವಿಳಂಬವಾಗಿದ್ದು, ಸ್ಮಾರ್ಟ್‌ ಸಿಟಿ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮುಖಂಡರಾದ ಚಂದ್ರಕುಮಾರ್‌ ಆಗ್ರಹಿಸಿದರು. ಸ್ಮಾರ್ಟ್‌ಸಿಟಿ ಪ್ರಮುಖರೊಂದಿಗೆ ಈ ಕುರಿತು ಮಾತನಾಡಿ, ಶೀಘ್ರ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗುವುದು ಎಂದು ದಿನೇಶ್‌ ಕುಮಾರ್‌ ಉತ್ತರಿಸಿದರು.

ಸೈಬರ್‌ ವಂಚನೆಗೆ ಬಲಿಯಾಗದಿರಿ
ಸೈಬರ್‌ ವಂಚನೆ ಪ್ರಕರಣಗಳು ಪೊಲೀಸ್‌ ಇಲಾಖೆಗೆ ಸವಾಲಾಗಿವೆ. 100ರಲ್ಲಿ 2 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ. ಸಾರ್ವಜನಿಕರು ಎಫ್‌ಐಆರ್‌ ಮಾಡಿಸಿದ ತತ್‌ಕ್ಷಣ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಆದರೆ ಯಾವ ರಾಜ್ಯದಿಂದ ಕರೆ ಬರುತ್ತಿದೆ ಎಂದು ಪ್ರಕರಣವನ್ನು ಗ್ರೂಪ್‌ ಮಾಡಿ ಅಲ್ಲಿ ಹೋಗಿ ಈ ಕುರಿತು ಏನಾದರೂ ಸುಳಿವು ಸಿಗುತ್ತದೆಯೇ ಎಂದು ಪರಿಶೀಲಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರು ಸೈಬರ್‌ ವಂಚನೆ ಕುರಿತಂತೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ದಲಿತಮುಖಂಡರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next