Advertisement

ಮಾಂದಲ್‌ ಪಟ್ಟಿ ಈಗ “ಪ್ಲಾಸ್ಟಿಕ್‌ ಮುಕ್ತ’

12:43 AM Nov 10, 2020 | mahesh |

ಮಡಿಕೇರಿ: ಪ್ರವಾಸಿಗರ ಸ್ವರ್ಗದಂತಿರುವ ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮಾಂದಲ್‌ ಪಟ್ಟಿಯನ್ನು ಪ್ಲಾಸ್ಟಿಕ್‌ ಮುಕ್ತ ಪ್ರವಾಸಿ ತಾಣವನ್ನಾಗಿ ಅರಣ್ಯ ಇಲಾಖೆಯು ಪರಿವರ್ತಿಸಿದೆ.

Advertisement

ಪಶ್ಚಿಮಘಟ್ಟ ಸಾಲಿಗೆ ಒಳಪಡುವ ಮಾಂದಲ್‌ ಪಟ್ಟಿ ಎತ್ತ ನೋಡಿದರೂ ಹಚ್ಚ ಹಸುರಿನ ಕಾಡು ಮತ್ತು ಮಂಜು ತಬ್ಬಿದ ಬೆಟ್ಟ ಶ್ರೇಣಿಗಳನ್ನು ಒಳಗೊಂಡಿದೆ. ಸಹಸ್ರ ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ಹದ್ದು ಮೀರಿದ ವರ್ತನೆಗಳ ಕಾರಣ ಒಡೆದು ಹಾಕಲಾದ ಮದ್ಯದ ಬಾಟಲಿಗಳ ಚೂರುಗಳು, ಪ್ಲಾಸ್ಟಿಕ್‌ ಮಾಂದಲ್‌ ಪಟ್ಟಿಯ ಬೆಟ್ಟದ ನೆತ್ತಿಯ ಮೇಲೆ ಸುರಿಯಲ್ಪಟ್ಟಿದ್ದವು. ಆದರೆ ಮಡಿಕೇರಿ ವಲಯ ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದ ಇದೀಗ ಮಾಂದಲ್‌ ಪಟ್ಟಿಯ ಸ್ಥಿತಿಯೇ ಬದಲಾಗಿದೆ.

ಲಾಕ್‌ಡೌನ್‌ ಸಂದರ್ಭ ಅರಣ್ಯ ಇಲಾಖೆಯು ಇಡೀ ಮಾಂದಲ್‌ ಪಟ್ಟಿಯನ್ನು ಕಸ ಮತ್ತು ಪ್ಲಾಸ್ಟಿಕ್‌ ಮುಕ್ತ ಗೊಳಿಸಿದೆ. ಮಾತ್ರವಲ್ಲದೇ ಪ್ರವಾಸಿ ಗರಿಗೆ ನಿಸರ್ಗ ಸೌಂದರ್ಯ ಸವಿಯಲು ಅನುಕೂಲ ವಾಗುವ ಕಡೆಗಳಿಗೆ ಮಾತ್ರವೇ ತೆರಳಲು ಸಾಧ್ಯವಾಗುವಂತೆ ಕೆಲವು ಕಾಮಗಾರಿಗಳನ್ನು ಕೂಡ ಮಾಡ ಲಾಗಿದೆ. ಈ ಮೂಲಕ ಮೊದಲಿನಂತೆ ಹದ್ದು ಮೀರಿದ ವರ್ತನೆ, ಬೇಕಾಬಿಟ್ಟಿ ನಡವಳಿಕೆಗೆ ಇದೀಗ ಅರಣ್ಯ ಇಲಾಖೆ ಅಂಕುಶ ಹಾಕಿದೆ.

ಪ್ರವಾಸಿಗರಿಗೆ ಮುಕ್ತ
ನ. 1ರಿಂದ ಮಾಂದಲ್‌ ಪಟ್ಟಿಯನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಆದರೆ ಮಾಂದಲ್‌ ಪಟ್ಟಿಯ ಪ್ರವೇಶ ದ್ವಾರದಲ್ಲಿಯೇ ಚೆಕ್‌ಪೋಸ್ಟ್‌ ಅನ್ನು ಅಳವಡಿಸಿ ಪ್ರತಿಯೊಬ್ಬರನ್ನು ಥರ್ಮಲ್‌ ಸ್ಕ್ಯಾನಿಂಗ್‌ ತಪಾಸಿಸಿ ಒಳ ಬಿಡಲಾಗುತ್ತಿದೆ. ಅಷ್ಟು ಮಾತ್ರವಲ್ಲದೇ, ಒಳ ತೆರಳುವ ಪ್ರತಿ ವಾಹನವನ್ನು ಕೂಡ ತಪಾಸಣೆ ನಡೆಸುತ್ತಿದ್ದು, ಪ್ಲಾಸ್ಟಿಕ್‌ ನೀರಿನ ಬಾಟಲಿಗಳು, ಚಿಪ್ಸ್‌ ಪ್ಯಾಕೆಟ್‌ಗಳು, ಬೀಡಿ, ಸಿಗರೇಟ್‌, ಲೈಟರ್‌, ಮದ್ಯದ ಬಾಟಲಿಗಳು ಇನ್ನಿತರ ಪ್ಲಾಸ್ಟಿಕ್‌ ಹೊದಿಕೆಯಿಂದ ಕೂಡಿರುವ ಯಾವುದೇ ವಸ್ತುಗಳನ್ನು ಮಾಂದಲ್‌ ಪಟ್ಟಿ ಒಳಗೆ ಕೊಂಡೊಯ್ಯುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಿದೆ.

ನಿಯಮ ಉಲ್ಲಂ ಸಿದರೆ 500 ರೂ. ದಂಡ
ನೀರಿನ ಪ್ಲಾಸ್ಟಿಕ್‌ ಬಾಟಲಿ ಒಯ್ಯುವುದಾದಲ್ಲಿ ಪ್ರತಿ ಬಾಟಲಿಗೆ 50 ರೂ.ನಂತೆ ಪ್ರವೇಶ ದ್ವಾರದಲ್ಲಿ ಠೇವಣಿ ಇಡಬೇಕು. ಹಿಂದಿರುಗುವಾಗ ಬಾಟಲಿ ತೋರಿಸಿದರೆ ಹಣವನ್ನು ಮರಳಿಸಲಾಗುತ್ತದೆ. ಇದರಿಂದ ಮಾಂದಲ್‌ ಪಟ್ಟಿಯಲ್ಲಿ ಪ್ಲಾಸ್ಟಿಕ್‌ ಕಸದ ಸಮಸ್ಯೆ ಸಂಪೂರ್ಣ ಹತೋಟಿಗೆ ಬಂದಿದೆ. ನಿಯಮ ಉಲ್ಲಂ ಸಿದರೆ 500 ರೂ. ದಂಡ ವಿಧಿಸಲಾಗುತ್ತದೆ. ಪ್ರವಾಸಿ ಹಾಗೂ ಪರಿಸರಸ್ನೇಹಿ ಕೆಲವು ಕಾಮಗಾರಿಗಳನ್ನು ನಡೆಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಅನುದಾನ ಬಂದ ಕೂಡಲೇ ಕಾಮಗಾರಿ ನಡೆಸಲಾಗುತ್ತದೆ.
– ಪ್ರಭಾಕರನ್‌, ಡಿಎಫ್ಒ ಮಡಿಕೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next