Advertisement

ಪಂ|ನಿತ್ಯಾನಂದಗೆ ಮನಸೂರ ಪ್ರಶಸ್ತಿ  ಪ್ರದಾನ

08:50 PM Jan 02, 2022 | Team Udayavani |

ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ| ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ಡಾ| ಮಲ್ಲಿಕಾರ್ಜುನ ಮನಸೂರ 111ನೇ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ನಗರದ ಸೃಜನಾ ರಂಗಮಂದಿರದಲ್ಲಿ ಶನಿವಾರ ಜರುಗಿತು.

Advertisement

ಹಿಂದೂಸ್ತಾನಿ ಸಂಗೀತಗಾರರಾದ ಮುಂಬೈನ ಪಂ| ನಿತ್ಯಾನಂದ ಹಳದಿಪುರ ಅವರಿಗೆ 1 ಲಕ್ಷ ನಗದು ಒಳಗೊಂಡ ರಾಷ್ಟ್ರೀಯ ಪ್ರಶಸ್ತಿ ಹಾಗೂ 25 ಸಾವಿರ ನಗದು ಒಳಗೊಂಡ ಯುವ ಪ್ರಶಸ್ತಿಯನ್ನು ಧಾರವಾಡದ ಯುವ ಗಾಯಕಿ ಶಿವಾನಿ ಮಿರಜಕರ ಅವರಿಗೆ ಟ್ರಸ್ಟ್‌ ಅಧ್ಯಕ್ಷ ಡಿಸಿ ನಿತೇಶ ಪಾಟೀಲ ಅವರು ಪ್ರದಾನ ಮಾಡಿದರು. ಅತಿಥಿಯಾಗಿದ್ದ ಪದ್ಮಶ್ರೀ ಪುರಸ್ಕೃತ ಪಂ| ಎಂ.ವೆಂಕಟೇಶಕುಮಾರ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಡಾ| ಮನಸೂರರ ಕೊಡುಗೆ ಅಪಾರ. ಅವರ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ.

ಈ ಪರಂಪರೆ ನಿರಂತರ ಸಾಗುವುದರ ಜತೆಗೆ ಯುವ ಪೀಳಿಗೆಗೆ ಮನಸೂರರನ್ನು ಪರಿಚಯಿಸುವ ಅಗತ್ಯವಿದೆ ಎಂದರು. ದೇಶ-ವಿದೇಶದಲ್ಲಿಯೇ ಧಾರವಾಡಕ್ಕೆ ವಿಶಿಷ್ಟ ಸ್ಥಾನವಿದ್ದು, ಸಾಹಿತ್ಯ, ಸಂಗೀತ ಹಾಗೂ ಲಲಿತಕಲೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿರುವಷ್ಟು ಟ್ರಸ್ಟ್‌ ಯಾವ ಜಿಲ್ಲೆಯಲ್ಲೂ ಇಲ್ಲ. ಇದು ಈ ಕ್ಷೇತ್ರಗಳಲ್ಲಿ ಇಲ್ಲಿಯವರ ಸಾಧನೆಗೆ ಹಿಡಿದ ಕೈಗನ್ನಡಿ. ಕಲಾವಿದರು ಎಂದಿಗೂ ಪ್ರಶಸ್ತಿ ಬಯಸುವುದಿಲ್ಲ. ಅವರ ಸಾಧನೆ ಗುರುತಿಸಿ ಪ್ರಶಸ್ತಿ ಅರಸಿಕೊಂಡು ಬರುತ್ತದೆ ಎಂದು ಹೇಳಿದರು.

ಯುವ ಗಾಯಕಿ ಶಿವಾನಿ ಮಿರಜಕರ ಮಾತನಾಡಿ, ನನ್ನ ಸಂಗೀತ ಜೀವನ ಡಾ| ಮನಸೂರರ ಪ್ರಶಸ್ತಿಯಿಂದ ಆರಂಭಗೊಂಡಿದ್ದು ಸಂತಸ ತಂದಿದೆ. ಈ ಪ್ರಶಸ್ತಿಯು ಜವಾಬ್ದಾರಿ ಹೆಚ್ಚಿಸಿದೆ ಎಂದರು. ಬಾಬುರಾವ್‌ ಹಾನಗಲ್‌, ನೀಲಾ ಕೊಡ್ಲಿ, ಎಸಿ ಗೋಪಾಲಕೃಷ್ಣ ಬಿ., ಮಂಜುಳಾ ಯಲಿಗಾರ ಇನ್ನಿತರರಿದ್ದರು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಾದ ಪಂ| ನಿತ್ಯಾನಂದ ಹಳದಿಪುರ ಅವರಿಂದ ಕೊಳಲು ವಾದನ ಹಾಗೂ ಶಿವಾನಿ ಮಿರಜಕರ ಗಾಯನ ನಡೆಯಿತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next