Advertisement

ಮನಕಾಮನ ದೇವಾಲಯ  ನೇಪಾಳದ ಶಕ್ತಿಕ್ಷೇತ್ರ

03:50 AM Feb 26, 2017 | |

ನೇಪಾಳದ ಮನಕಾಮನಾ ದೇವಿ ಮನಸ್ಸಿನ ಕಾಮನೆಗಳನ್ನು ಪೂರೈಸುವ ತಾಯಿ ಎಂಬ ನಂಬಿಕೆ ಇದೆ. ಈ ದೇವಾಲಯವನ್ನು ಕ್ರಿ.ಶ. 17ನೇ ಶತಮಾನದಲ್ಲಿ ಅರಸರಾಮ್‌ ಶಾ ನಿರ್ಮಿಸಿದ. ಆತನ ಪತ್ನಿ ದೈವಾಂಶ ಸಂಭೂತಳಂತೆ. ಆಕೆಯ ದೈವೀರೂಪವನ್ನು ನೋಡಿದ ಅರಸ ಈ ವಿಷಯವನ್ನು ತನ್ನ ಮಂತ್ರಿ ಲಖನ್‌ಥಾಪಾನಿಗೆ ತಿಳಿಸಿದ ತಕ್ಷಣ ಮರಣ ಹೊಂದುತ್ತಾನೆ. ಆಗಿನ ಪದ್ಧತಿಯ ಪ್ರಕಾರ ರಾಣಿ ಸತೀ ಸಹಗಮನಕ್ಕೆ ಸಿದ್ಧತೆ ನಡೆಸುವಂತೆ ಮಂತ್ರಿಗೆ ತಿಳಿಸುತ್ತಾಳೆ. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಮಂತ್ರಿಗೆ ರಾಣಿ ತಾನು ಇನ್ನೂ ಆರು ತಿಂಗಳಲ್ಲಿ ಮತ್ತೆ ಜನ್ಮವೆತ್ತುವುದಾಗಿ ತಿಳಿಸಿ ಸಹಗಮನ ಮಾಡುತ್ತಾಳೆ. ಆರು ತಿಂಗಳು ಕಳೆದ ನಂತರ ಮಂತ್ರಿ ಲಖನ್‌ಥಾಪಾನಿಗೆ ಒಬ್ಬ ರೈತನ ಹೊಲದಲ್ಲಿ ಆತ ಉಳುಮೆ ಮಾಡುವಾಗ ನೇಗಿಲಿಗೆ ಸಿಕ್ಕ ಕಲ್ಲೊಂದನ್ನು ಹೊರತೆಗೆಯಲು ಬಲ ಪ್ರಯೋಗ ಮಾಡಲು ಹೋದಾಗ ಅದರಿಂದ ರಕ್ತ ಸುರಿಯಲು ಆರಂಭವಾಯಿತಂತೆ ಎಂಬ ಸುದ್ದಿ ತಲುಪುತ್ತದೆ. ಲಖನ್‌ಥಾಪ ಅಚ್ಚರಿಯಿಂದ ಬಂದು ನೋಡುವಾಗ ಆತನಿಗೆ ರಾಣಿ ಹೇಳಿದ್ದ ಮಾತಿನ ನೆನಪು ಬರುತ್ತದೆ. ತಕ್ಷಣ ಹೋಮಗಳನ್ನು ಮಾಡಿದಾಗ ಹರಿಯುತ್ತಿದ್ದ ರಕ್ತ ತಾನಾಗೇ ನಿಲ್ಲುತ್ತದೆ. ನಂತರ ಲಖನ್‌ಥಾಪಾ ಅಲ್ಲಿ ದೇವಾಲಯವೊಂದನ್ನು ನಿರ್ಮಿಸುತ್ತಾನೆ. ಅದೇ ಈ ದೇವಾಲಯವಂತೆ. ಈ ಹೊಲದ ಮಾಲೀಕ ಕೆಳಜಾತಿಯವನಾಗಿದ್ದು (ಮಗರ್‌) ಅಂದಿನಿಂದ ಆತನ ವಂಶಸ್ಥರೇ ಪೂಜೆ ನಡೆಸಿಕೊಂಡು ಬಂದಿದ್ದಾರೆ. ಆದರೆ, ಪುರಾಣ ಕಥೆಗಳ ಪ್ರಕಾರ ದೇವಾಲಯದ ಮೂಲ ಸಹಸ್ರಾರು ವರ್ಷಗಳ ಹಿಂದಕ್ಕೆ ಸಾಗುತ್ತದೆ.   

Advertisement

ಮನಕಾಮನಾ ದೇವಿಯ ಕ್ಷೇತ್ರವು ಪೋಖರಾದಿಂದ ಸುಮಾರು 104 ಕಿ.ಮೀ. ದೂರದಲ್ಲಿದೆ. ಕಾಠ್ಮಂಡುವಿನಿಂದ ಗೋರ್ಖಾ ಹಾದಿಯಲ್ಲಿ ಸುಮಾರು 125 ಕಿ.ಮೀ. ನಾಲ್ಕು ಗಂಟೆಗಳ ಪ್ರಯಾಣ ಮಾಡಬೇಕು. ನಮ್ಮನ್ನು ಕರೆದೊಯ್ಯಲು ತ್ರಿತುಂಗ ಬಸ್‌ ಬಂದಿತ್ತು. ಹತ್ತಿ ಪೋಖರಾ ನಗರಕ್ಕೆ ಬಾಯ್‌ ಹೇಳಿ ಕುಳಿತೆವು. ಹಾದಿಯಲ್ಲೆಲ್ಲ ಹಸಿರು ತುಂಬಿತ್ತು. ಆದರೆ ಜನ ಮಾತ್ರ ಬಡತನವನ್ನು ಹಾಸಿ ಹೊದ್ದ ಹಾಗೆ ಕಾಣುತ್ತಿದ್ದರು. ರಸ್ತೆಯಿಡಿ ತಿರುವುಗಳು, ಬೆಟ್ಟಗಳ ನಡುವೆ ಹಾದು ಹೋಗುತ್ತಿ¨ªೆವು. ಹಳ್ಳಿಗಳಲ್ಲಿ ಭತ್ತ, ಜೋಳ ಬೆಳೆದಿದ್ದರು. ಹಸು, ಕುರಿ-ಕೋಳಿ ಸಾಕಣೆ ಇತ್ತು. ಹೆಣ್ಣುಮಕ್ಕಳು ಹೊಲಗಳಲ್ಲಿ, ಅಂಗಡಿಗಳಲ್ಲಿ ದುಡಿಯುತ್ತಿದ್ದರು. ಗಂಡಸರು ಮಾತ್ರ ತಮ್ಮ ಯೋಗ್ಯತೆಗೆ ಇವೆಲ್ಲ ಸಣ್ಣ ಕೆಲಸಗಳು ಅನ್ನುವ ಹಾಗೆ ಗುಂಪಾಗಿ ನಿಂತು ಬಾಯಲ್ಲಿ ಸಿಗರೇಟು ಕಚ್ಚಿ ಹಿಡಿದು ಪಟ್ಟಾಂಗ ಬಾರಿಸುತ್ತಿದ್ದರು.

ಮನಕಾಮನಾ ದೇವಿಯ ಪರ್ವತ ಸುಮಾರು 1,100 ಮೀಟರ್‌ಎತ್ತರವಿದೆ. ರೋಪ್‌ ವೇಯಲ್ಲಿ 31 ಕಾರುಗಳು ನಿರಂತರವಾಗಿ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮೇಲೆ ಹೋಗಿ ಬರುತ್ತವೆ. ದಿನಕ್ಕೆ 600 ಜನರನ್ನು ಬೆಟ್ಟದ ಮೇಲಕ್ಕೆ ಅಲ್ಲಿಂದ ಕೆಳಕ್ಕೆ ಸಾಗಿಸುತ್ತವೆ. ಪ್ರತೀ ಗೊಂಡೋಲಾದಲ್ಲೂ 6-7 ಜನ ಕೂರುತ್ತಾರೆ. ಗೊಂಡೋಲಾವನ್ನು ನವೆಂಬರ್‌ 24, 1998ರಂದು ಲಕ್ಷ್ಮಣ ಬಾಬೂ ಶ್ರೇಷ್ಠ ಎಂಬುವವರು ಉದ್ಘಾಟಿಸಿದರು. 

ಬಹಳ ಕಡಿದಾಗಿ ಏರುವ ಗೊಂಡೋಲಾ ಸವಾರಿ ಬಹಳ ಖುಷಿ ಕೊಡುತ್ತದೆ. ಕೇಬಲ್‌ ಕಾರ್‌ ಅತೀ ಎತ್ತರದಲ್ಲಿ ಸಾಗುವಾಗ ಪಾತಾಳದಲ್ಲಿ ಹರಿಯುವ ತ್ರಿಶೂಲಿ ನದಿಯ ನೋಟ ಅದ್ಭುತವಾಗಿ ಕಾಣುತ್ತದೆ. ಸುಮಾರು 256 ಮೀ. ಎತ್ತರದಿಂದ ಕೇಬಲ್‌ ಕಾರ್‌ ಸುಮಾರು 1302 ಮೀ. ಎತ್ತರಕ್ಕೆ ಏರುತ್ತದೆ. ಏರುವಾಗ ಅದೆಷ್ಟು ಕಡಿದಾಗಿ ಏರುತ್ತದೆ ಎಂದರೆ ಜೀವ “ಝಲ್‌’ ಎನ್ನುತ್ತದೆ. ಕೆಳಗೆ ಮಾನವನ ವಿಕೃತಿಗಳು ಅದೆಷ್ಟೋ ಕಾಣುತ್ತವೆ. ಅಸಂಬದ್ಧವಾಗಿ ಕಟ್ಟಲಾದ ರೆಸಾರ್ಟುಗಳು, ಪ್ರಕೃತಿಯನ್ನು ಶೋಷಿಸುವ ದುರಾಸೆಗಳು ಬೇಸರ ಉಂಟುಮಾಡುತ್ತವೆ.  

ದೇವಾಲಯ ತಲುಪಲು ಗೊಂಡೋಲಾ ಇಳಿದು ಸ್ವಲ್ಪ ದೂರ ನಡೆಯಬೇಕು. ಮನಕಾಮನಾ ದೇವಿಯ ದೇವಾಲಯ ನಾಲ್ಕು ಅಂತಸ್ತುಗಳ ಪಗೋಡದ ಆಕಾರದಲ್ಲಿದೆ. ಮನಸ್ಸಿನ ಕಾಮನೆಯನ್ನು ತೀರಿಸುವ ದೇವಿ ಈಕೆಯಂತೆ. ಈಕೆ ಪಾರ್ವತಿಯ ಅಂಶವುಳ್ಳವಳು, ಒಬ್ಬ ಶಕ್ತಿ ದೇವತೆ ಎಂಬ ನಂಬುಗೆ ಇದೆ. ಇಲ್ಲಿ ದೇವಿಯ ನಾಲಗೆ ಬಿದ್ದಿದೆ ಎಂಬ ನಂಬಿಕೆ ಇದೆ. ಈ ದೇವಾಲಯ ಮುಖ ಖಂಡದಲ್ಲಿದೆ. ಮನಕಾಮನಾ ದೇವಿಯ ದೇವಾಲಯದಲ್ಲಿ ಇನ್ನೂ ಕಂದಾಚಾರದ ಪೂಜೆಗಳು ಮತ್ತು ಪ್ರಾಣಿ ಬಲಿ ನಡೆಯುತ್ತಿದೆ. ದೇವಾಲಯದ ಹಿಂಭಾಗದಲ್ಲಿ ಕೋಳಿ-ಕುರಿ ಕತ್ತರಿಸಿ ರಕ್ತವನ್ನು ತಂದು ದೇವಿಗೆ ನೈವೇದ್ಯ ಮಾಡುತ್ತಾರೆ. ಬಳಿಯಲ್ಲಿ  ಸುಮಾರು 1.5 ಕಿ. ಮೀ. ದೂರದಲ್ಲಿ ಶಿವನ ದೇವಾಲಯವಿದ್ದು ಅದನ್ನು ಬಕ್ರೇಶ್ವರ ಎಂದು ಕರೆಯುತ್ತಾರೆ. ದೇವಾಲಯದ ಸುತ್ತಲ ಗಜಿ-ಬಿಜಿಯಲ್ಲಿ ಯಾರು ಏನು ಮಾತಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿರಲಿಲ್ಲ. ಆವತ್ತು ಶುಕ್ರವಾರವಾಗಿದ್ದುದರಿಂದ ದೇವಿಯ ದರ್ಶನಕ್ಕೆ ಸುಮಾರು ಎರಡು ಸಾವಿರ ಜನ ಕ್ಯೂನಲ್ಲಿ ನಿಂತಿದ್ದರು. ಈವತ್ತು ನಮಗೆ ದರ್ಶನ ಸಿಗುವುದಿಲ್ಲ ಅಂತ ಖಾತ್ರಿಯಾದ ಮೇಲೆ ದೇವಾಲಯದ ಮುಂದೆ ನಿಂತು ನಮಸ್ಕಾರ ಮಾಡಿ ಮೂರು ಸುತ್ತು ಹಾಕಿದೆವು. 

Advertisement

ವಾಪಸು ಬರುವಾಗ ಅಂಗಡಿ ಸಾಲಿನಲ್ಲಿ ಬಂದೆವು. ಓಣಿಯಂಥ ದಾರಿಯಲ್ಲಿ ನಡೆದು ಬರುವಾಗ ನಮ್ಮ ದೇವಾಲಯಗಳ ಬಳಿ ಇರುವಂತೆ ಬಳೆ-ಸರ, ತಾಯಿತ, ಕರಿದಾರ, ಮಣಿಸರ ಮಾರುವ ಅಂಗಡಿಗಳು ಕಂಡವು. ನಮಗೆಲ್ಲ ಹೋದ ಕಡೆ ಇಂತಹುದನ್ನೇನಾದರು ತಂದು ಹಂಚುವ ಅಭ್ಯಾಸ ಸಾಮಾನ್ಯವಲ್ಲವೇ! 

ಲಿಂಗರಾಜು ಡಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next