ಮಲ್ಪೆ: ಮನೆಯೊಳಗೆ, ಅಂಗಳಕ್ಕೆ ಹಾವು ಬಂತೆಂದರೆ ಕಾಲಿಗೆ ಬುದ್ಧಿ ಹೇಳುವವರೇ ಹೆಚ್ಚು. ಆದರೆ ಕರಾವಳಿಯಲ್ಲೊಬ್ಬರು ಹಾವು ಇದ್ದಲ್ಲಿಗೆ ಓಡಿ ಬರುತ್ತಾರೆ. ಅನೇಕ ಉರಗ ಪ್ರಿಯರ ಮಧ್ಯೆ ಮಲ್ಪೆ ಕೊಳದ ಮೀನುಗಾರ ಬಾಬು ಸಾಲ್ಯಾನ್ ಇವರಲ್ಲಿ ಒಬ್ಬರು. ಅವರಿಗೆ ಹಾವು ಎಂದರೆ ಸ್ವಲ್ವವೂ ಅಂಜಿಕೆ ಇಲ್ಲ.
ಮೀನುಗಾರಿಕೆ ವೃತ್ತಿಯ ಜತೆಗೆ ಹಾವು ಹಿಡಿಯುವ ಪ್ರವೃತ್ತಿಯನ್ನು ಹೊಂದಿರುವ ಅವರಿಗೆ ಎಲ್ಲ ವರ್ಗದ ಹಾವುಗಳು ಕೂಡ ಕೈವಶವಾಗುತ್ತವೆ. ವಿವಿಧ ಬಗೆಯ ವಿಷಪೂರಿತ ಹಾವು ಹಿಡಿದು, ರಕ್ಷಿಸಿ ಮನೆಯ ಮಾಲಕರು ನಿಟ್ಟುಸಿರುಬಿಡುವಂತೆ ಮಾಡಿದ್ದಾರೆ. ಹಾವಿಗೆ ಯಾವ ರೀತಿಯ ತೊಂದರೆ ಯಾಗದ ರೀತಿಯಲ್ಲಿ ಸಲೀಸಾಗಿ ಹಿಡಿದು ಹತ್ತಿರದ ಕಾಡಿಗೆ ಬಿಟ್ಟು ಬರುತ್ತಾರೆ.
11 ವರ್ಷಗಳ ಹಿಂದೆ ನಾಗರಹಾವಿನ ಮರಿಯೊಂದು ರಸ್ತೆಯಲ್ಲಿ ಕಾಗೆಗಳ ನಡುವೆ ಒದ್ದಾಡುತ್ತಿದ್ದುದನ್ನು ಕಂಡು ಆ ದಾರಿಯಲ್ಲಿ ಬಂದ ಬಾಬು ಅವರು ನಾಗರಹಾವಿನ ಮರಿಯನ್ನು ಬಾಲದಿಂದ ಹಿಡಿದೆತ್ತಿ ರಕ್ಷಣೆ ಮಾಡಿದ್ದಾರೆ. ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಮುಂದೆ ಬಾಬು ಅವರಿಗೆ ಹಾವು ಹಿಡಿಯುವುದು ಹವ್ಯಾಸವಾಗಿದೆ. ಹಾವುಗಳನ್ನು ಹಿಡಿಯುವ ವಿಚಾರದಲ್ಲಿ ಯಾವುದೇ ಪ್ರತಿಫಲ ಅಪೇಕ್ಷಿಸದೇ ಸಮಾಜ ಸೇವೆ ಎಂದು ಮಾಡುತ್ತಿದ್ದಾರೆ. ಮಲ್ಪೆ ಸುತ್ತಮುತ್ತಲಿನ ಜನರು ಇವರನ್ನು ಸ್ನೇಕ್ ಬಾಬು ಎಂದೇ ಕರೆಯುತ್ತಾರೆ.
11ವರ್ಷದಿಂದ ಇದುವರೆಗೆ ಅಪಾರ ಪ್ರಮಾಣದ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ನಾಗರಹಾವು, ಕಡಂಬಳ, ಕೊಳಕಮಂಡಲ ಮುಂತಾದ 7-8 ಜಾತಿಯ ಹಾವುಗಳನ್ನು ಹಿಡಿದಿದ್ದಾರೆ.
ಚಾಕಚಕ್ಯತೆ ಅಗತ್ಯ
ಹಾವು ಹಿಡಿಯುವುದು ಅಪಾಯಕಾರಿ ಕೆಲಸ ಎಂದು ಗೊತ್ತಿದೆ. ಒಂದುಸಲ ಕೊಳಕಮಂಡಲ ಹಾವು ಬೆರಳನ್ನು ಕಡಿದದ್ದು ಬಿಟ್ಟರೆ ಇದುವರೆಗೆ ಬೇರಾವುದೇ ತೊಂದರೆಯಾಗಿಲ್ಲ. ಹಾವು ಹಿಡಿಯಲು ಚಾಕಚಕ್ಯತೆ, ಧೈರ್ಯ, ತಂತ್ರಗಾರಿಕೆ ಬೇಕು. ನಾಗರಹಾವನ್ನು ಉರಗ ತಜ್ಞ ಗುರುರಾಜ್ ಸನೀಲ್ ಬಳಿ ಬಿಟ್ಟರೆ, ಉಳಿದದ್ದು ಕಾಡಿಗೆ ಬಿಡುತ್ತೇನೆ.
ಬಾಬು ಸಾಲ್ಯಾನ್, ಕೊಳ