Advertisement

ವಿಜೃಂಭಣೆಯ ಮಾಲೇಕಲ್‌ ತಿರುಪತಿ ಮಹಾರಥೋತ್ಸವ

09:43 PM Jul 13, 2019 | Lakshmi GovindaRaj |

ಅರಸೀಕೆರೆ: ಮೋಡ ಮುಸುಕಿದ ಪರಿಸರದಲ್ಲಿ ನಗರ ಸಮೀಪದ ಅಮರಗಿರಿ ಮಾಲೇಕಲ್‌ ತಿರುಪತಿ ಲಕ್ಷ್ಮೀವೆಂಕಟರಮಣಸ್ವಾಮಿ ಮಹಾರಥೋತ್ಸವವು ಶನಿವಾರ
ಮಧ್ಯಾಹ್ನ ವೈಖಾನಸಾಗಮ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಸಾವಿರಾರು ಭಕ್ತ ಸಮೂಹದ ನಡುವೆ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.

Advertisement

ರಾಜ್ಯದಲ್ಲಿ ಚಿಕ್ಕ ತಿರುಪತಿ ಎಂದೇ ಇತಿಹಾಸ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ ಅಮರಗಿರಿ ಮಾಲೇಕಲ್‌ ತಿರುಪತಿಯ ಜಾತ್ರಾ ಮಹೋತ್ಸವವು ಪ್ರತಿವರ್ಷ ಆಷಾಢ ಶುದ್ಧ ಪಂಚಮಿಯಂದು ಧ್ವಜಾರೋಹಣ ಮತ್ತು ಅಂಕುರಾರ್ಪಣೆಯಿಂದ ಪ್ರಾರಂಭವಾಗಿ ದ್ವಾದಶಿಯ ದಿನದಂದು ಬೆಳಗ್ಗೆ ಮೂಲ ಸನ್ನಿಧಿಯ ಶ್ರೀ ಗೋವಿಂದರಾಜಸ್ವಾಮಿಯವರಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಲಕ್ಷ್ಮೀವೆಂಕಟರಮಣಸ್ವಾಮಿ ಉತ್ಸವಮೂರ್ತಿಗೆ ಪ್ರಾಕಾರೋತ್ಸವ, ಸೂರ್ಯಮಂಡಲೋತ್ಸವ, ರಥ ಮಂಟಪ ಸೇವೆ,

ವಸಂತ ಸೇವೆ ಸೇರಿದಂತೆ ಇತ್ಯಾದಿ ಧಾರ್ಮಿಕ ಪೂಜಾ ಕಾರ್ಯಗಳನ್ನು ವೈಖಾನಸಾಗಮ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಪುರೋಹಿತ ವೃಂದದವರು ನೆರವೇರಿಸಿದ ನಂತರ ಲಕ್ಷ್ಮೀವೆಂಕಟರಮಣಸ್ವಾಮಿ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ಕರೆ ತಂದು ಮಹಾರಥದಲ್ಲಿ ಪ್ರತಿಷ್ಠಾಪಿಸಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುವ ಮೂಲಕ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ: ಮಹಾರಥೋತ್ಸವ ನೆರವೇರುವ ವೇಳೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಮಂದಿ ಭಕ್ತಾದಿಗಳು ಗೋವಿಂದನ ನಾಮಸ್ಮರಣೆ ಮಾಡುತ್ತಾ ಬಾಳೇಹಣ್ಣು, ದವನ ಪುಷ್ಪಗಳನ್ನು ಮಹಾರಥದ ಮೇಲೆ ಎಸೆದು ತಮ್ಮ ಭಕ್ತಿ ಭಾವನೆಗಳನ್ನು ಸಮರ್ಪಿಸಿದರು.

ಶನಿವಾರ ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತವರಣವಿದ್ದು, ಮಳೆರಾಯನೂ ತನ್ನ ಕಾರ್ಯಕ್ಕೆ ಅಲ್ಪವಿರಾಮ ನೀಡಿದ ಕಾರಣ ಮುಂಜಾನೆಯಿಂದಲೇ ಸಾವಿರಾರು ಜನರು ಎಲ್ಲೆಡೆಗಳಲ್ಲಿಂದ ಸಾಗರೋಪಾದಿಯಲ್ಲಿ ಅಮರಗಿರಿ ಮಾಲೇಕಲ್‌ ತಿರುಪತಿಯ ದೇವರ ಸನ್ನಿಧಿಗೆ ಹರಿದು ಬಂದ ಭಕ್ತಾದಿಗಳಿಗೆ ಹೆಚ್ಚಿನ ಬಿಸಿಲಿನ ತಾಪವಿಲ್ಲದೇ ಭಕ್ತರ ಸಮೂಹದ ಮುಖದಲ್ಲಿ ಮಂದಹಾಸ ಮೂಡಿಸಿತು.

Advertisement

ನವ ದಂಪತಿಗಳಿಂದ ದರ್ಶನ: ಜಾತ್ರಾಗೆ ಆಗಮಿಸಿದ್ದ ಭಕ್ತರೂ ಅದರಲ್ಲೂ ನವದಂಪತಿಗಳು ಕಡಿದಾದ 1,250 ಮೆಟ್ಟಿಲುಳ್ಳ ಮಾಲೇಕಲ್‌ ತಿರುಪತಿ ಬೆಟ್ಟವನ್ನೇರಿ ಅಲ್ಲಿನ ಶ್ರೀನಿವಾಸ ಮತ್ತು ಪದ್ಮಾವತಿ ಅಮ್ಮ ನವರ ದರ್ಶನ ಭಾಗ್ಯವನ್ನು ಪಡೆದರೆ, ಬೆಟ್ಟವನ್ನು ಹತ್ತಲಾರದ ಭಕ್ತವೃಂದ ತಪ್ಪಲಿನಲ್ಲಿರುವ ಗೋವಿಂದರಾಜಸ್ವಾಮಿ ಮತ್ತು ಲಕ್ಷ್ಮೀದೇವಿ ಅಮ್ಮನವರ ದರ್ಶನ ಭಾಗ್ಯವನ್ನು ಗಂಟೆ ಗಟ್ಟಲೆ ಸಮಯ ಸರದಿಯ ಸಾಲಿನಲ್ಲಿ ನಿಂತು ಪಡೆದು ಪುನೀತರಾದರು.

ಗಣ್ಯರ ಉಪಸ್ಥಿತಿ: ಜಾತ್ರಾಮಹೋತ್ಸವದಲ್ಲಿ ಉಪಾಧ್ಯಕ್ಷ ತಹಶೀಲ್ದಾರ್‌ ಸಂತೋಷ್‌ ಕುಮಾರ್‌, ಡಿವೈಎಸ್‌ಪಿ ಸದಾನಂದ ತಿಪ್ಪಣ್ಣನವರ್‌, ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್‌ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರುಣ್‌ ಕುಮಾರ್‌,ಉತ್ಸವ ಸಮಿತಿ ಅಧ್ಯಕ್ಷ ಟಿ.ಎ.ನಾಗರಾಜು, ಸದಸ್ಯರಾದ ವೆಂಕಟೇಶ್‌ಬಾಬು, ಎನ್‌.ಸಿ.ಗೋವಿಂದರಾಜು, ಟಿ.ಆರ್‌.ಚಂದ್ರು, ಪರಮಶಿವಯ್ಯ, ರಂಗರಾಜ್‌, ವಿಶ್ವನಾಥ್‌, ನಗರಸಭಾ ಸದಸ್ಯರು, ತಾ.ಪಂ. ಸದಸ್ಯರು, ಸರ್ಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಾಮೂಹಿಕ ಅನ್ನ ಸಂತರ್ಪಣೆ: ಸಾಮೂಹಿಕ ಅನ್ನಸಂತರ್ಪಣೆಯನ್ನು ದೇವಾಂಗ ಸಮಾಜದವತಿಯಿಂದ ಭಕ್ತಾದಿಗಳಿಗೆ ಎರ್ಪಡಿಸಲಾಗಿತ್ತು, ಬೆಟ್ಟದ ತಪ್ಪಲಿನಲ್ಲಿ ವಿಶ್ವ ಹಿಂದು ಪರಿಷತ್‌ ಹಾಗೂ ಭಜರಂಗದಳದ ಕಾರ್ಯಕರ್ತರು ಸಹಸ್ರಾರು ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪ್ರಸಾದದ ವ್ಯವಸ್ಥೆಯನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದರು.

ಬಸ್ಸಿಲ್ಲದೇ ಪರದಾಟ: ಪ್ರತಿವರ್ಷದ ಜಾತ್ರಾಮಹೋತ್ಸವದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಬೆಳಗಿನಿಂದ ರಾತ್ರಿವರೆಗೂ ತುಂಬಾ ಅಚ್ಚುಕಟ್ಟಿನಿಂದ ಮಾಡುತ್ತಿದ್ದರು.

ಆದರೆ ಈ ವರ್ಷ ದೇವಾಲಯದ ಹಿಂಭಾಗದಲ್ಲಿ ಬಸ್‌ ನಿಲ್ದಾಣಕ್ಕೆ ದೇವಾಲಯ ಆಡಳಿತ ಮಂಡಳಿ ಅವಕಾಶ ಕಲ್ಪಿಸದ ಕಾರಣ ದೇವರ ದರ್ಶನ ಪಡೆದು ನಗರಕ್ಕೆ ವಾಪಸಾಗುವ ಭಕ್ತಾದಿಗಳಿಗೆ ಬಸ್‌ ಸೌಲಭ್ಯ ದೊರೆಯದೇ ತುಂಬಾ ಅವ್ಯವಸ್ಥೆಯಾಗಿದ್ದು, ಆಟೋ ಚಾಲಕರಿಗೆ ಒಳ್ಳೇಯ ವರದಾನವಾಯಿತು.  ಪೊಲೀಸರು ಬೆಟ್ಟದ ಮೇಲೆ ಮತ್ತು ಜಾತ್ರಾ ಮಹೋತ್ಸವದ ಸೂಕ್ಷ್ಮಸ್ಥಳಗಳಲ್ಲಿ ಭಕ್ತಾದಿಗಳಿಗೆ ಬಿಗಿ ಬಂದೊಬಸ್ತ್ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next