Advertisement

ಗುಂಡಿ ಬಿದ್ದ ಮಾದಪ್ಪನ ರಸ್ತೆ ದುರಸ್ತಿ ಎಂದು?

01:25 PM Jul 20, 2023 | Team Udayavani |

ಹನೂರು: ಭಕ್ತರಿಂದ ಪ್ರತಿ ವರ್ಷ ನೂರಾರು ಕೋಟಿ ರೂ. ಆದಾಯ ತಂದುಕೊಡುವ ರಾಜ್ಯದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಸುವ್ಯವಸ್ಥಿತ ರಸ್ತೆ ಇಲ್ಲದೇ ವಾಹನ ಸಂಚಾರ ದುಸ್ತರವಾಗಿದೆ.

Advertisement

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟವು ಮಲೆ ಮಹ ದೇಶ್ವರರು ತಪೋಗೈದು ನೆಲೆಸಿರುವ ಪುಣ್ಯಕ್ಷೇತ್ರವಾಗಿದೆ. ಈ ಪುಣ್ಯಕ್ಷೇತ್ರಕ್ಕೆ ಪ್ರತಿನಿತ್ಯ 10 ರಿಂದ 15 ಸಾವಿರ ಜನರು, ಸರ್ಕಾರಿ ರಜೆ ಮತ್ತು ವಾರಾಂತ್ಯಗಳಲ್ಲಿ ಸುಮಾರು 30 ಸಾವಿರದಷ್ಟು ಭಕ್ತರು ಮತ್ತು ಎಣ್ಣೆಮಜ್ಜನ ಸೇವೆ ಹಾಗೂ ಮಾವಾಸ್ಯೆ ದಿನಗಳಂದು ಸುಮಾರು 50ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಆಗಮಿಸುತ್ತಾರೆ. ಶ್ರೀ ಕ್ಷೇತ್ರದ ಶಿವರಾತ್ರಿ, ಯುಗಾದಿ, ದೀಪಾವಳಿ ಜಾತ್ರಾ ಮಹೋತ್ಸವಗಳಲ್ಲಿ 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಶ್ರೀ ಕ್ಷೇತ್ರದತ್ತ ಆಗಮಿಸುತ್ತಾರೆ.

ಪವಾಡ ಪುರುಷನ ಪುಣ್ಯಕ್ಷೇತ್ರವು ಜಿಲ್ಲಾ ಕೇಂದ್ರ ಚಾಮರಾಜನಗರದಿಂದ 120 ಕಿ.ಮೀ. ತಾಲೂಕು ಕೇಂದ್ರವಾಗಿರುವ ಹನೂರು ಪಟ್ಟಣದಿಂದ 47ಕಿ.ಮೀ, ಕೊಳ್ಳೇಗಾಲದಿಂದ 71 ಕಿ.ಮೀ, ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ 132 ಕಿ.ಮೀ ಮತ್ತು ರಾಜಧಾನಿ ಬೆಂಗಳೂರಿನಿಂದ 210 ಕಿ.ಮೀ ದೂರ ಹೊಂದಿದೆ. ಆದರೆ ಇಂತಹ ಪವಾಡ ಪುರುಷನ ಸನ್ನಿಧಾನಕ್ಕೆ ಸಮ ರ್ಪಕ ರಸ್ತೆ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರು ಮತ್ತು ಭಕ್ತಾದಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಗುಂಡಿಬಿದ್ದಿರುವ ರಸ್ತೆಗಳು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯು ಹನೂರು ಪಟ್ಟಣದಿಂದ ಶ್ರೀ ಕ್ಷೇತ್ರದವರೆಗೂ ಸಂಪೂರ್ಣವಾಗಿ ಹದಗೆಟ್ಟಿದ್ದು ಗುಂಡಿಬಿದ್ದಿವೆ. ಈ ಮಾರ್ಗದ 47 ಕಿ. ಮೀ ರಸ್ತೆಯಲ್ಲಿ ಆಗಾಗ್ಗೆ ತೇಪೆ ಹಾಕಿ ಕೆಲವು ಗುಂಡಿಗಳನ್ನು ಮುಚ್ಚಲಾಗಿದ್ದರೂ ಹಲವೆಡೆ ಮತ್ತೆ ಗುಂಡಿಬಿದ್ದಿವೆ. ರಾತ್ರಿ ವೇಳೆ ಶ್ರೀ ಕ್ಷೇತ್ರಕ್ಕೆ ದ್ವಿಚಕ್ರ ವಾಹನಗಳಲ್ಲಿ ತೆರಳುವ ಕೆಲ ಭಕ್ತಾದಿಗಳು ಗಾಯಗೊಂಡ ಪ್ರಕರಣಗಳೂ ಜರುಗಿವೆ. ಇನ್ನು ಈ ಮಾರ್ಗದಲ್ಲಿ ಹೊಸದಾಗಿ ಬರುವ ಮಿನಿ ಬಸ್ಸುಗಳು, ಕಾರುಗಳು ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿರುವ ಘಟನೆಗಳೂ ಜರುಗಿವೆ.

ಕಳೆದ 10 ವರ್ಷಗಳಿಂದ ಪ್ರಾಧಿಕಾರ ರಚನೆಯಾದ ಬಳಿಕವಂತು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಸಂಚಾರ ದಟ್ಟಣೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಭಕ್ತಾದಿಗಳು ಆಗ್ರಹಿಸಿದ್ದಾರೆ.

Advertisement

ತಡೆಗೋಡೆಗಳು ಸಂಪೂರ್ಣವಾಗಿ ಶಿಥಿಲ: ಮಲೆ ಮಹದೇಶ್ವರ ಬೆಟ್ಟದ ಆರಂಭದ ಪ್ರದೇಶ ತಾಳಬೆಟ್ಟದಿಂದ ಶ್ರೀ ಕ್ಷೇತ್ರದವರೆಗೆ 19 ಕಿ.ಮೀ ಅಂತರವಿದೆ. ಈ ರಸ್ತೆಯು ದಟ್ಟ ಕಾನನದ ನಡುವಿನ ತೀರ ಕಡಿದಾದ ರಸ್ತೆಯಾಗಿದೆ. ಹೇರ್‌ಪಿನ್‌ ತಿರುವುಗಳು ಬಹಳ ಅಪಾಯಕಾರಿಯಾಗಿವೆ. ಈ ರಸ್ತೆಯಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ತಡೆಗೋಡೆ ಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಈ ತಡೆಗೋಡೆಗಳು ಸಂಪೂರ್ಣ ವಾಗಿ ಶಿಥಿಲ ವಾಗಿದ್ದು ಅಲ್ಲಲ್ಲಿ ಕುಸಿದು ಬಿದ್ದಿವೆ. ಹೇರ್‌ ಪಿನ್‌ ತಿರುವುಗಳಲ್ಲಿ ತಡೆಗೋಡೆಗಳು ಅತ್ಯವಶ್ಯಕ. ಭಾರಿ ವಾಹನಗಳು ಸಂಚರಿಸುವಾಗ ಬಹಳ ಜಾಗ್ರತೆ ಯಿಂದ ಸಂಚರಿಸಬೇಕಾಗುತ್ತದೆ.

ತಿರುವುಗಳಲ್ಲಿ ತಡೆಗೋಡೆಗಳೇ ಬಹಳ ಮುಖ್ಯ. ಆದುದರಿಂದ ಅಧಿಕಾರಿಗಳು ಇತ್ತ ಗಮನಹರಿಸಿ ತಡೆಗೋಡೆಗಳ ನವೀಕರಣ ಕಾಮಗಾರಿಗೆ ಮುಂದಾಗಬೇಕು ಎಂದು ಆಗ್ರಹಗಳು ಕೇಳಿಬಂದಿವೆ. ಒಟ್ಟಾರೆ ಹನೂರು ಪಟ್ಟಣದಿಂದ ಶ್ರೀ ಕ್ಷೇತ್ರದವರೆಗೆ ತೆರಳುವ 47 ಕಿ.ಮೀ ರಸ್ತೆಯಲ್ಲಿ ಹಲವಾರು ಸಮಸ್ಯೆಗಳಿದ್ದು ಭಕ್ತಾದಿಗಳು ಮತ್ತು ಪ್ರಯಾಣಿಕರು ವ್ಯವಸ್ತೆಯ ವಿರುದ್ಧ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲಲ್ಲಿ ಆಕ್ರೋಶ ಹೊರ ಹಾಕುತ್ತಲೇ ಇರುತ್ತಾರೆ. ಈ ನಿಟ್ಟಿನಲ್ಲಿ ಪ್ರಾಧಿ ಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಇತ್ತ ಗಮನಹರಿಸಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಗಮನ ಹರಿಸ ಬೇಕೆಂಬುದು ಭಕ್ತರ ಮನವಿಯಾಗಿದೆ.

ಯಮರೂಪಿಯಾಗಿರುವ ಕಿರು ಸೇತುವೆಗಳು: ಹನೂರು ಪಟ್ಟಣದಿಂದ ವೈಶಂಪಾಳ್ಯ ಅಡ್ಡ ರಸ್ತೆಯವರೆಗೆ ರಸ್ತೆಗೆ ಅಡ್ಡಲಾಗಿ ನೀರು ಹರಿದು ಹೋಗುವ ಸ್ಥಳಗಳಲ್ಲಿ ಸಿಮೆಂಟ್‌ ತೂಬುಗಳನ್ನು ಅಳವಡಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಇದೀಗ ಈ ತೂಬುಗಳು ಶಿಥಿಲಗೊಂಡಿದ್ದ ಹಿನ್ನೆಲೆ 4 ಸ್ಥಳಗಳಲ್ಲಿ ಕಲ್ವರ್ಟ್‌ (ಕಿರು ಸೇತುವೆ) ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಈ ಕಾಮಗಾರಿ ಪೂರ್ಣಗೊಂಡಿರುವುದರಿಂದ ಕಲ್ವರ್ಟ್‌ಗಳು ರಸ್ತೆಯ ಮಟ್ಟಕ್ಕಿಂರ ಎತ್ತರವಾಗಿವೆ. ಇದರ ಪರಿಣಾಮ ವೇಗವಾಗಿ ಬರುವ ವಾಹನ ಸವಾರರು ಇವುಗಳನ್ನು ಗಮನಿಸದೆ ಬಂದು, ಅಥವಾ ತತ್‌ಕ್ಷಣ ವಾಹನ ನಿಯಂತ್ರಿಸಲು ಹೋಗಿ ಹಲವಾರು ಬಾರಿ ಅಪಘಾತ ಸಂಭವಿಸಿವೆ.ಒಟ್ಟಾರೆ ಈ ಕಲ್ವರ್ಟ್‌ಗಳು ಯಮರೂಪಿ ಕಲ್ವರ್ಟ್‌ಗಳಾಗಿ ಪರಿಣಮಿಸಿವೆ.

ತಿರುವುಗಳಲ್ಲಿ ಪೀನಮಸೂರ (ಕನ್ನಡಿ) ಅಳವಡಿಸಬೇಕು: ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ತೆರಳುವ ರಸ್ತೆಯ ತೀವ್ರ ತಿರುವುಗಳಲ್ಲಿ ಬೃಹತ್‌ ಪೀನಮಸೂರಗಳನ್ನು (ಕನ್ನಡಿ) ಅಳವಡಿಸಲು ಅಧಿಕಾರಿಗಳು ಕ್ರಮವಹಿಸಬೇಕಿದೆ. ತಿರುಪತಿಯಿಂದ ತಿರುಮಲಕ್ಕೆ ಹೋಗುವಾಗ ತೀವ್ರ ತಿರುವುಗಳಲ್ಲಿ ಈ ರೀತಿಯ ಬೃಹತ್‌ ಕನ್ನಡಿಗಳನ್ನು ಅಳವಡಿಸಲಾಗಿದೆ. ಈ ರೀತಿ ಬೃಹತ್‌ ಕನ್ನಡಿ(ಪೀನಮಸೂರಗಳನ್ನು ) ಅಳವಡಿಸಿದಲ್ಲಿ ಎದುರುಗಡೆಯಿಂದ ಬರುವ ವಾಹನಗಳು ಮತ್ತು ಹಿಂಬದಿಯಿಂದ ಬರುವ ವಾಹನಗಳು ಪೀನ ಮಸೂರದಲ್ಲಿ ಪ್ರದರ್ಶನವಾಗುವುದರಿಂದ ಅಪಘಾತಗಳನ್ನು ತಡೆಯಬಹುದಾಗಿದೆ.

ಮರಗಳ ರೆಂಬೆ-ಕೊಂಬೆ ಕತ್ತರಿಸಬೇಕು: ಹನೂರು ಪಟ್ಟಣದ ಹೊರವಲಯದಿಂದ ಶ್ರೀ ಕ್ಷೇತ್ರ ತಲುಪುವವರೆಗೂ ಗಿಡ- ಮರಗಳು, ಪೊದೆಗಳು ರಸ್ತೆಗೆ ಬಾಗಿ ನಿಂತಿದ್ದು ಎದುರಿನಿಂದ ಬರುವ ವಾಹನಗಳು ಸಮರ್ಪಕವಾಗಿ ಕಾಣುತ್ತಿಲ್ಲ. ಇದರ ಪರಿಣಾಮವೂ ಹಲವೆಡೆ ಅಪಘಾತಗಳು ಸಂಭವಿಸುತ್ತಿವೆ. ತಾಳಬೆಟ್ಟ ಮಹದೇಶ್ವರಬೆಟ್ಟ ಮಾರ್ಗಮಧ್ಯದಲ್ಲಿಯಂತೂ ಬಿದಿರಿನ ಕೊಂಬೆಗಳು ಮತ್ತು ಬೃಹತ್‌ ಮರಗಳ ಕೊಂಬೆಗಳು ರಸ್ತೆಗೆ ಭಾಗಿ ನಿಂತಿರುವುದರಿಂದ ಹಲವಾರು ಭಾರೀ ಅಪಘಾತಗಳು ಸಂಭವಿಸಿವೆ. ಈ ನಿಟ್ಟಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ರೆಂಬೆ-ಕೊಂಬೆ ಕತ್ತರಿಸುವ ಅವಶ್ಯಕವಾಗಿದೆ.

ತಾಳಬೆಟ್ಟ-ಮಹದೇಶ್ವರ ಬೆಟ್ಟ ಮಾರ್ಗದಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕಾಗಿ 100ಕೋಟಿ ವೆಚ್ಚದಲ್ಲಿ ಅಂದಾಜುಪಟ್ಟಿ ತಯಾರಿಸಿ ಹಿಂದಿನ ಸರ್ಕಾರದ ಅವಧಿಯಲ್ಲಿ ಸಲ್ಲಿಸಲಾಗಿತ್ತು. ಇದೀಗ ಹನೂರು ಪಟ್ಟಣದ ಹೊರವಲಯದಿಂದ 4.5ಕಿ.ಮೀ ಮತ್ತು ಕೌದಳ್ಳಿ ಹೊರವಲಯದ ಪೆಟ್ರೋಲ್‌ ಬಂಕ್‌ನಿಂದ ಕೌದಳ್ಳಿ ವೃತ್ತದವರೆಗೆ 1.5ಕಿ.ಮೀ ರಸ್ತೆ ನಿರ್ಮಾಣ ಕಾರ್ಯ 10 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. -ಸತೀಶ್‌ ಕುಮಾರ್‌, ಕಾರ್ಯಪಾಲಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

-ವಿನೋದ್‌ ಎನ್‌ ಗೌಡ

Advertisement

Udayavani is now on Telegram. Click here to join our channel and stay updated with the latest news.

Next