Advertisement

ಮಹಡಿಯ ಮೇಲೆ ಮನೆಯ ಮಾಡಿ!

10:00 AM Jan 06, 2020 | mahesh |

ಇಂಡಿಪೆಂಡೆಂಟ್‌ ಮನೆಗಳ ವಾಸದ ಸಾಧಕ-ಬಾಧಕಗಳಂತೆಯೇ ವಸತಿ ಸಮುತ್ಛಯದ ವಾಸಿಗರು ಒಮ್ಮೆ ಕಷ್ಟ, ಮತ್ತೂಮ್ಮೆ ಸುಖ, ಮಗದೊಮ್ಮೆ ಗೊಂದಲ, ಜಿಗುಪ್ಸೆ – ಹೀಗೆ ಸಕಲ ರಾಗಗಳನ್ನು ಇಷ್ಟವಿರಲಿ, ಇಲ್ಲದಿರಲಿ ಅನುಭವಿಸಲೇಬೇಕು. “ಗಗನಚುಂಬಿ ಕಟ್ಟಡಗಳ ನಡುವೆ ಮನೆ ಮಾಡಿ ಜಂಜಾಟಕ್ಕೆ ಅಂಜಿದಡೆಂತಯ್ನಾ’ ಎಂಬಂತೆ ಎಲ್ಲವನ್ನೂ ಅನುಭವಿಸಿಯೇ ಮುಂದೆ ಸಾಗಬೇಕು.

Advertisement

ಒಮ್ಮೆ ಒಳ್ಳೆಯ ನಿದ್ದೆ ಹತ್ತಿದ ಸಮಯ-ಮೇಲ್ಮಹಡಿಯಿಂದ ವಿಚಿತ್ರ ಶಬ್ದ ನಿಯಮಿತ ತಾಳದಲ್ಲಿ ಕೇಳಿಸುತ್ತಿತ್ತು. ಮೊದಲೆರಡು ಈ ಶಬ್ದಮೂಲ ಏನೆಂದು ಅರ್ಥವಾಗಲಿಲ್ಲ. ಕುತೂಹಲ ತಡೆಯಲಾಗದೆ ವಿಚಾರಿಸಿದಾಗ ತಿಳಿದದ್ದು, ಆ ಮನೆಯಾಕೆ ಬೆಳಿಗ್ಗೆ ಬೇಗನೇ ಕೆಲಸಕ್ಕೆ ಹೋಗುವವರು. ಹೀಗಾಗಿ, ಅಡುಗೆ ಕೆಲಸಗಳು ಬೆಳಿಗ್ಗೆ ಐದಕ್ಕೆ ಶುರು. ಅವರು ತೆಂಗಿನಕಾಯಿ ತುರಿಯುವ ಶಬ್ದ ನಿಯಮಿತವಾಗಿ ಕೇಳಿಸುತ್ತಿತ್ತು. ಈಗ ಈ ಶಬ್ದಕ್ಕೆ ಎಷ್ಟು ಹೊಂದಿಕೊಂಡಿರುವೆವೆಂದರೆ, ತುರಿಯುವ ಶಬ್ದ ಕೇಳಿದರೆ, ಅದು ಬೆಳಗಿನ ಐದೂವರೆ ಗಂಟೆಯ ಆಸುಪಾಸು ಎಂದರ್ಥ. ನಮ್ಮ ಅಲಾರಮ್‌ ಆಗಿಬಿಟ್ಟಿದೆ. ಆ ಶಬ್ದವಿಲ್ಲದೇ ಇದ್ದರೆ ಅಂದು ರಜೆ.

ಮತ್ತೂಬ್ಬರು ಸಂಗೀತ ಪ್ರೇಮಿಯ ಕಥೆಯೋ, ವಿಭಿನ್ನವಾಗಿದೆ. ಆತ ಹಾಡುಗಾರನಾಗಬೇಕೆಂಬ ಆಶಯದಿಂದ ಉತ್ಛ ಸ್ಥಾಯಿಯಲ್ಲಿ ಅಭ್ಯಾಸ ಶುರುಮಾಡಿದ್ದೇ ತಡ, ಅಕ್ಕಪಕ್ಕದವರ ನಿದ್ದೆ ಹಾರಿ ಹೋಗುತ್ತಿತ್ತು. ಕೊನೆಗೆ ಅವನ ಹಾಡುಗಾರಿಕೆಯ ಉಪಟಳ ಅಂತ್ಯ ಕಂಡದ್ದು ವಾಸಿಗರ ಕ್ಷೇಮಾಭಿವೃದ್ಧಿ ಸಂಘದವರ ಮಧ್ಯ ಪ್ರವೇಶದಿಂದ. “ಅಕ್ಕಪಕ್ಕದವರನ್ನು ಮನಸ್ಸಲ್ಲಿಟ್ಟುಕೊಂಡು ಅಭ್ಯಾಸ ಮುಂದುವರೆಸು, ಇಲ್ಲದೇ ಇದ್ದರೆ ಜಾಗ ಖಾಲಿ ಮಾಡು’ ಎಂದು ಸಂಘದವರು ಸೂಚಿಸಿದಾಗ.

ಎಂಟು ಮನೆಗಳಿಗೆ ನಡುವೆ ಮೊಗಸಾಲೆ. ಅದನ್ನು ಎಲ್ಲ ಮನೆಯವರು ಓಡಾಡಲು ಬಳಸುವುದು ಎಲ್ಲ ಕಡೆ ವಾಡಿಕೆ ತಾನೇ. ಅಲ್ಲಿ ಮಕ್ಕಳ ಕೇಕೆ, ಕುಣಿತ, ಆಟದ ಕಾರ್‌, ಸೈಕಲ್‌ಗ‌ಳನ್ನೂ ರಭಸವಾಗಿ ಓಡಿಸುತ್ತ ಸದಾ ಗದ್ದಲ ಮುಗಿಲಿಗೇರುತ್ತಿತ್ತು. ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ಮಧ್ಯ ವಯಸ್ಕ ಹೆಂಗಸು, ಹೊರಕ್ಕೆ ತಲೆ ಇಣುಕಿ, “ಈ ಜಾಗದಲ್ಲಿ ರಾದ್ಧಾಂತ ಮಾಡಬೇಡಿ ತೊಂದರೆಯಾಗುತ್ತೆ’ ಎಂದ ಕೂಡಲೇ ಆಟವಾಡುತಿದ್ದ ಮಗುವೊಂದರ ಮಾತೆ, “ಮಕ್ಕಳಲ್ಲವೇ ಆಂಟಿ…ಆಡಿಕೊಳ್ಳಲಿ ಬಿಡಿ, ಬೇರೆಲ್ಲಿ ಹೋದಾರು?’ ಎಂದು ಸಮರ್ಥಿಸಿದರು.

ಪ್ರಶ್ನಿಸಿದವರಿಗೆ ಸಹನೆಯೊಡೆದು, “ನಿಮ್ಮ ಮಕ್ಕಳನ್ನು ಮನೆಯೊಳಗೇ ಆಡಿಸಿಕೊಳ್ಳಿ, ಇಲ್ಲಿ ವಾಸಿಸುವವರಲ್ಲಿ, ರೋಗಿಗಳು, ವಯೋವೃದ್ಧರು, ಎಳೆ ಮಕ್ಕಳು ಎಲ್ಲರೂ ಇದ್ದಾರೆ, ಮಕ್ಕಳಾಟ ನೆರೆಯವರಿಗೆ ಕಿರಿಕಿರಿ ಆಗಬಾರದು’ ಎಂದು ದಬಾಯಿಸಿಬಿಟ್ಟರು.

Advertisement

ಇನ್ನೊಂದು ಕಡೆ ತುಂಟ ಪುಟಾಣಿ ರಬ್ಬರ್‌ ಹಾವು ಹಿಡಿದುಕೊಂಡು ಎಲ್ಲರನ್ನೂ ಬೆದರಿಸುತ್ತಿದ್ದ. ಮಕ್ಕಳೆಲ್ಲ ಓಡಿ ತಪ್ಪಿಸಿಕೊಳ್ಳುತ್ತಿದ್ದರು. “ಈ ಮಕ್ಕಳು ಬಿದ್ದರೆ ಗತಿಯೇನು’ ಎಂದು ಕಂಗಾಲಾದ ಹಿರಿಯರೊಬ್ಬರು ಬೈದೇ ಬಿಟ್ಟರು. “ಮರದಿಂದ ನೇರ ಇಲ್ಲೇ ಇಳಿದಿವೆ, ಮರ್ಕಟ ಮುಂಡೇವು, ಒಂದು ಗಳಿಗೆ ಶಾಂತಿ ಇಲ್ಲ’ ಎಂದು ವಟಗುಟ್ಟಿದರು ಅನ್ನಿ.
.
ಮೊನ್ನೆ ಹೀಗಾಯಿತು. ಐದು ನಿಮಿಷದ ಮೊದಲು ಶುಭ್ರಗೊಳಿಸಿದ್ದ ಬಾಲ್ಕನಿ ತೇವ ಕಂಡಾಗ ನನಗೆ ಗಾಬರಿಯಾಯಿತು. “ನೀರು ಎಲ್ಲಾದರೂ ಲೀಕ್‌ ಆಗ್ತಿದೆಯೇ ಮತ್ತೆ ರಿಪೇರಿಗೆ ಹಣ ಸುರಿಯಬೇಕೇನೋ’ ಎಂಬ ಅಂಜಿಕೆ ಶುರುವಾಯಿತು. ಸಂಶಯಗೊಂಡು ಸ್ವಲ್ಪ ಕಣ್ಣುಹಾಯಿಸಿದಾಗ ಕಂಡದ್ದು ಮೇಲ್ಗಡೆ ಮನೆಯಿಂದ ಜಿನುಗುತ್ತಿರುವ ನೀರ ಹನಿ. ಒದ್ದೆ ಬಟ್ಟೆಗಳನ್ನು ಹರವುವ ಮೊದಲು ಬಾಲ್ಕನಿಗೋಡೆಗೆ ಬಟ್ಟೆಗಳನ್ನು ಇಳಿಬಿಟ್ಟ ಪರಿಣಾಮ ಬಟ್ಟೆಯ ನೀರು ಗೋಡೆಯಿಂದಿಳಿದು ನಮ್ಮ ಬಾಲ್ಕನಿಯನ್ನು ತೇವಗೊಳಿಸುತಿತ್ತು. ನಂತರ ಅವರ ಗಮನಕ್ಕೆ ತಂದು ಎಚ್ಚರಿಸಿ ಬಚಾವ್‌ ಆದೆವು.

ಮತ್ತೂಂದು ಪ್ರಸಂಗದಲ್ಲಿ ಕಂಬಿಯಲ್ಲಿ ಒಣಗಿಸಿದ್ದ ಬಟ್ಟೆಗಳು ಮುಕ್ಕಾಲು ಒಣಗಿದ್ದು ಪುನಃ ತೇವಗೊಂಡಿತ್ತು. ಮಳೆಯಿಲ್ಲದೇ ಇದ್ದರೂ ಬಟ್ಟೆ ಒದ್ದೆಯಾದದ್ದು ಹೇಗೆ ಎಂಬ ಯಕ್ಷಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಮೇಲಿನ ಮನೆಯವರ ಸಸ್ಯ ಪ್ರೇಮ !ಅವರು ಪ್ಯಾರಾಫಿಟ್‌ ವಾಲ್‌ ಮೇಲಿರಿಸಿದ್ದ ಸಸ್ಯಕುಂಡಗಳಿಗೆ ನೀರುಣಿಸುವ ಸಂಭ್ರಮದಲ್ಲಿ, ಅಧಿಕವಾದ ನೀರು ಹೊರಚೆಲ್ಲಿ ಒಣಗಿದ ಬಟ್ಟೆಗಳನ್ನೂ ಮುತ್ತಿಟ್ಟಿತ್ತು. ಮತ್ತೆ ಯಥಾ ಪ್ರಕಾರ “ನಿಮ್ಮ ಸಸ್ಯ ಪ್ರೇಮವನ್ನು ಮನೆಯೊಳಕ್ಕೆ ಇರಿಸಿಕೊಳ್ಳಿ’ ಎಂದು ಸಲಹೆ ನೀಡಿದೆವು.

ಆಡಲು ಮೀಸಲಿಟ್ಟ ಜಾಗದಲ್ಲಿ, ಹಿರಿಯರ ಮೇಲ್ವಿಚಾರಣೆಯಲ್ಲಿ ಚಿಕ್ಕಮಕ್ಕಳಿಗೆ ಆಟೋಟಗಳನ್ನು ನಡೆಸಿದರೆ ಯಾರಿಗೂ ತೊಂದರೆ ಇರದು. ಬದಲಿಗೆ ಟೆರೇಸ್‌ನಲ್ಲೋ ವಾಹನಗಳನ್ನು ನಿಲ್ಲಿಸುವ ಜಾಗಗಳನ್ನೋ ಆಟದ ಅಡ್ಡೆಯಾಗಿಸಿಕೊಂಡರೆ ಅಶಿಸ್ತು ಮೈಗೂಡುವುದು.

ಮೈದಾನದಲ್ಲಿ ಆಡುವ ಕ್ರಿಕೆಟ್‌ ಆಟವನ್ನು ಕಾರ್‌ಪಾರ್ಕಿಂಗ್‌ನಲ್ಲೇ ಆಡಿ, ಮೇಲಿನ ಮನೆಯವರ ಗಾಜು ಮುರಿದು, ಅಸೋಸಿಯೇಶನ್‌ಗೆ ದಂಡ ಕಟ್ಟುವಂತೆ ಮಾಡುವ ತುಂಟ ಮಕ್ಕಳನ್ನು ನಿಭಾಯಿಸುವುದಾದರೂ ಹೇಗೆ !

ಇದಿರುಬದಿರು ಬಾಲ್ಕನಿಗಳಿರುವ ಕಡೆ ಇನ್ನೊಂದು ಬಗೆಯ ಸಮಸ್ಯೆ. ಬಾಲ್ಕನಿಯಲ್ಲಿ ನಿಂತು ಮೊಬೈಲುಗಳಲ್ಲಿ ಖಾಸಗಿ, ವೈಯಕ್ತಿಕ ಕರೆಗಳನ್ನು ಮಾಡುವುದು ವಾಡಿಕೆ. ಕೆಲವೊಮ್ಮೆ ಆ ಪ್ರೇಮ ಸಲ್ಲಾಪವೋ, ಬೈಗುಳವೋ, ಅರಚಾಟವೋ ಅಳುವೋ ಮೇಲಿನ ಬಾಲ್ಕನಿಯವರಿಗೂ ಕೇಳಿಸದೇ ಇರದು. ಆದರೇನು ಮಾಡುವುದು. ಕೇಳಿಸಿಕೊಳ್ಳಲೇಬೇಕಲ್ಲವೇ…

ಕೆ.ವಿ.ರಾಜಲಕ್ಷ್ಮಿ

Advertisement

Udayavani is now on Telegram. Click here to join our channel and stay updated with the latest news.

Next