Advertisement

Maharaja Trophy: ಮಂಗಳೂರು ಡ್ರ್ಯಾಗನ್ಸ್‌  ಔಟ್‌: ಸೆಮಿಫೈನಲ್‌ ಪ್ರವೇಶಿಸಿದ ಗುಲ್ಬರ್ಗ

11:32 PM Aug 27, 2023 | Team Udayavani |

ಬೆಂಗಳೂರು: ಹಾಲಿ ಚಾಂಪಿಯನ್‌ ಗುಲ್ಬರ್ಗ ಮಿಸ್ಟಿಕ್ಸ್‌ 3ನೇ ತಂಡವಾಗಿ “ಮಹಾರಾಜ ಟ್ರೋಫಿ’ ಕೆಎಸ್‌ಸಿಎ ಟಿ20 ಲೀಗ್‌ ಸೆಮಿಫೈನಲ್‌ ಪ್ರವೇಶಿಸಿದೆ. ರವಿವಾರದ ಮೊದಲ ಪಂದ್ಯದಲ್ಲಿ ಅದು ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಉಪಾಂತ್ಯದ ಟಿಕೆಟ್‌ ಪಡೆದುಕೊಂಡಿತು.

Advertisement

ಹುಬ್ಬಳ್ಳಿ ಟೈಗರ್ ಮತ್ತು ಮೈಸೂರು ವಾರಿಯರ್ ಸೆಮಿಫೈನಲ್‌ ಪ್ರವೇಶಿಸಿದ ಮೊದಲೆರಡು ತಂಡಗಳಾಗಿವೆ.
ದಿನದ ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡವನ್ನು 11 ರನ್ನುಗಳಿಂದ ಪರಾಭವಗೊಳಿಸಿದ ಶಿವಮೊಗ್ಗ ಲಯನ್ಸ್‌ 4ನೇ ತಂಡವಾಗಿ ಸೆಮಿಫೈನಲ್‌ ತಲುಪಿತು. ಈ ಫ‌ಲಿತಾಂಶದಿಂದ ಮಂಗಳೂರು ತಂಡ ಕೂಟದಿಂದ ನಿರ್ಗಮಿಸಿತು.

ಸೆಮಿಫೈನಲ್‌ ಪ್ರವೇಶಕ್ಕೆ ಎರಡೂ ತಂಡಗಳಿಗೆ ಗೆಲುವಿನ ಅಗತ್ಯವಿತ್ತು. ಅದೃಷ್ಟ ಗುಲ್ಬರ್ಗಕ್ಕೆ ಒಲಿಯಿತು. ಅದು ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆರಡರಲ್ಲೂ ಅಮೋಘ ಪ್ರದರ್ಶನ ನೀಡಿತು. ಮಂಗಳೂರು ಡ್ರ್ಯಾಗನ್ಸ್‌ 19.1 ಓವರ್‌ಗಳಲ್ಲಿ 144ಕ್ಕೆ ಕುಸಿದರೆ, ಗುಲ್ಬರ್ಗ ಮಿಸ್ಟಿಕ್ಸ್‌ 15.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 145 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಇದು 10 ಪಂದ್ಯಗಳಲ್ಲಿ ಗುಲ್ಬರ್ಗ ಸಾಧಿಸಿದ 6ನೇ ಗೆಲುವು. ಇನ್ನೊಂದೆಡೆ ಮಂಗಳೂರು ಇಷ್ಟೇ ಪಂದ್ಯಗಳಲ್ಲಿ 6ನೇ ಸೋಲನುಭವಿಸಿತು.

ಅಭಿಲಾಷ್‌ ಶೆಟ್ಟಿ, ನಾಯಕ ವಿಜಯ್‌ಕುಮಾರ್‌ ವೈಶಾಖ್‌ ಮತ್ತು ಹಾರ್ದಿಕ್‌ ರಾಜ್‌ ಸೇರಿಕೊಂಡು ಮಂಗಳೂರು ಸರದಿಗೆ ಕಡಿವಾಣ ಹಾಕಿದರು. ಅನಿರುದ್ಧ ಜೋಶಿ ಸರ್ವಾಧಿಕ 46 ರನ್‌ ಮಾಡಿದರೆ, ಆರಂಭಕಾರ ಶರತ್‌ ಬಿ.ಆರ್‌. 38 , ತಿಪ್ಪಾ ರೆಡ್ಡಿ 27 ರನ್‌ ಹೊಡೆದರು.
ಚೇಸಿಂಗ್‌ ವೇಳೆ ಗುಲ್ಬರ್ಗ ಆರಂಭಿಕರಾದ ಎಲ್‌.ಆರ್‌. ಚೇತನ್‌-ಅನೀಶ್‌ ಕೆ.ವಿ. ಅಮೋಘ ಜತೆಯಾಟ ನಿಭಾಯಿಸಿದರು. 11.2 ಓವರ್‌ಗಳಲ್ಲಿ 114 ರನ್‌ ಪೇರಿಸಿ ಮಂಗಳೂರು ಬೌಲರ್‌ಗಳಿಗೆ ಬೆವರಿಳಿಸಿದರು. ಅನೀಶ್‌ ಅವರದು ಅಜೇಯ 72 ರನ್‌ ಕೊಡುಗೆ (42 ಎಸೆತ, 5 ಬೌಂಡರಿ, 4 ಸಿಕ್ಸರ್‌). ಚೇತನ್‌ 37 ಎಸೆತ ಎದುರಿಸಿ 58 ರನ್‌ ಮಾಡಿದರು (6 ಬೌಂಡರಿ, 3 ಸಿಕ್ಸರ್‌).

Advertisement

ಸಂಕ್ಷಿಪ್ತ ಸ್ಕೋರ್‌: ಮಂಗಳೂರು ಡ್ರ್ಯಾಗನ್ಸ್‌-19.1 ಓವರ್‌ಗಳಲ್ಲಿ 144 (ಅನಿರುದ್ಧ ಜೋಶಿ 46, ಶರತ್‌ ಬಿ.ಆರ್‌. 38, ತಿಪ್ಪಾ ರೆಡ್ಡಿ 27, ಅಭಿಲಾಷ್‌ ಶೆಟ್ಟಿ 33ಕ್ಕೆ 3, ವಿಜಯ್‌ಕುಮಾರ್‌ ವೈಶಾಖ್‌ 20ಕ್ಕೆ 2, ಹಾರ್ದಿಕ್‌ ರಾಜ್‌ 24ಕ್ಕೆ 2). ಗುಲ್ಬರ್ಗ ಮಿಸ್ಟಿಕ್ಸ್‌-15.3 ಓವರ್‌ಗಳಲ್ಲಿ 2 ವಿಕೆಟಿಗೆ 145 (ಅನೀಶ್‌ ಕೆ.ವಿ. ಔಟಾಗದೆ 72, ಎಲ್‌.ಆರ್‌. ಚೇತನ್‌ 58, ಕೆ. ಗೌತಮ್‌ 21ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next