Advertisement

Mahalingpur; ಅವೈಜ್ಞಾನಿಕ ರಸ್ತೆ: ಪುರಸಭೆ ಸದಸ್ಯರು, ಅಧಿಕಾರಿಗಳಿಂದ ಕಾಮಗಾರಿಗೆ ತಡೆ

10:16 PM Aug 16, 2024 | Team Udayavani |

ಮಹಾಲಿಂಗಪುರ: ಪಟ್ಟಣದ ಬಸವ ವೃತ್ತದಿಂದ ಢವಳೇಶ್ವರ ರಸ್ತೆವರೆಗಿನ ಡಬಲ್ ರಸ್ತೆಯ ಕಾಮಗಾರಿಯು ಪ್ರಾರಂಭವಾಗಿ ಎರಡುವರೆ ವರ್ಷಗಳೇ ಕಳೆದಿದೆ. ಆದರೆ ಇಂದಿಗೂ ಕಾಮಗಾರಿಯು ಪೂರ್ತಿಯಾಗದೇ ಅರ್ಧಕ್ಕೆ ಉಳಿದು ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರು, ಬೈಕ್ ಸವಾರರು ಪರದಾಡುವಂತಾಗಿದೆ.

Advertisement

ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಪುಟ್‌ಪಾತ್ ನಿರ್ಮಿಸದೇ ಡಾಂಬರೀಕರಣ ಪ್ರಾರಂಭಿಸಿರುವದನ್ನು ಖಂಡಿಸಿ, ಪುರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಡಾಂಬರೀಕರಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಘಟನೆಯು ಶುಕ್ರವಾರ(ಆ16) ಮಧ್ಯಾಹ್ನ ನಡೆಯಿತು.

ಪುರಸಭೆ ಸದಸ್ಯರಾದ ಪ್ರಲ್ಹಾದ ಸಣ್ಣಕ್ಕಿ, ರವಿ ಜವಳಗಿ ಮಾತನಾಡಿ ರಬಕವಿ-ಜಾಂಬೋಟಿ ರಾಜ್ಯಹೆದ್ದಾರಿಯಲ್ಲಿ ಬವಸವೃತ್ತದಿಂದ ಢವಳೇಶ್ವರ ರಸ್ತೆಯ ದ್ವಾರ ಬಾಗಿಲುವರೆಗಿನ ಕೇವಲ 775 ಮೀಟರ್‌ನಷ್ಟಿರುವ ಕಾಮಗಾರಿಗೆ ಒರೊಬ್ಬರಿ 6 ಕೋಟಿ 25 ಲಕ್ಷ ಖರ್ಚು ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ಆಮೆಗತಿಯಯಲ್ಲಿದ್ದ ಕಾಮಗಾರಿಯನ್ನು ಗುತ್ತಿಗೆದಾರರು ಮನಬಂದಂತೆ ಅವೈಜ್ಞಾನಿಕವಾಗಿ ಮಾಡಿದ್ದಾರೆ. ಕಳೆದ ತಿಂಗಳು ಪುರಸಭೆಯಿಂದ ರಸ್ತೆಯ ಪೂರ್ವಭಾಗದಲ್ಲಿನ ಅತಿಕ್ರಮಣ ಅಂಗಡಿಗಳನ್ನು ತೆರವುಗೊಳಿಸಿ ಚರಂಡಿ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಪಶ್ಚೀಮ ಭಾಗದಲ್ಲಿನ ಅಂಗಡಿಗಳನ್ನು ತೆರವುಗೊಳಿಸಿ, ಚರಂಡಿ ಪುಟಪಾತ್, ರಸ್ತೆಯ ಮಧ್ಯದಲ್ಲಿ ವಿಭಜಕ(ಡಿವೈಡರ್) ನಿರ್ಮಿಸಬೇಕು. ಅಲ್ಲಿಯವರೆಗೆ ಕಾಮಗಾರಿಯನ್ನು ನಿಲ್ಲಿಸಬೇಕು. ಇದು ಪಟ್ಟಣದ ಅಭಿವೃದ್ದಿ ಮತ್ತು ಭವಿಷ್ಯದ ಟ್ರಾಫೀಕ್ ಸಮಸ್ಯೆಯ ನಿವಾರಣೆಗಾಗಿ ಉಭಯ ಪಕ್ಷಗಳ ಸದಸ್ಯರ ಒಗ್ಗಟ್ಟಿನ ಆಗ್ರಹವಾಗಿದೆ ಎಂದು ಗುತ್ತಿಗೆದಾರರು ಮತ್ತು ಲೋಕೋಪಯೋಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮಾತನಾಡಿ ಪುರಸಭೆಯ ಎರಡು ಪಕ್ಷಗಳ ಸದಸ್ಯರು ಒಗ್ಗಟ್ಟಾಗಿ ರಸ್ತೆ ಅಗಲೀಕರಣವಾಗಲಿ ಎಂಬ ಉದ್ದೇಶದಿಂದ ಪೂರ್ವಭಾಗದಲ್ಲಿನ ಆಸ್ತಿಗಳನ್ನು ಅಳತೆ ಮಾಡಿ, ಅತಿಕ್ರಮಣ ಜಾಗೆಗಳನ್ನು ತೆರವುಗೊಳಿಸಲಾಗಿದೆ. ಅದರಂತೆ ಪಶ್ಚೀಮ ಭಾಗದಲ್ಲಿನ ಆಸ್ತಿಗಳನ್ನು ಸರ್ವೇ ಮಾಡಲು ನಗರ ಭೂಮಾಪನ ಅಧಿಕಾರಿಗಳಿಗೆ ತಿಳಿಸಲಾಗಿದೆ. ಎರಡು ಭಾಗದಲ್ಲಿ ಚರಂಡಿ ನಿರ್ಮಾಣ ಮತ್ತು ಪುಟ್‌ಪಾತ್ ನಿರ್ಮಿಸಿದ ನಂತರವೇ ಡಾಂಬರೀಕರಣ ಮಾಡಲು ಸದಸ್ಯರು ಹೇಳಿದ್ದರು ಸಹ, ಗುತ್ತಿಗೆದಾರರು ಕಾಮಗಾರಿಯನ್ನು ಪ್ರಾರಂಭಿಸಿದ ಕಾರಣ ಇಂದು ಸದಸ್ಯರೊಂದಿಗೆ ಬಂದು ಕಾಮಗಾರಿಯನ್ನು ನಿಲ್ಲಿಸಲು ತಿಳಿಸಿದ್ದೇವೆ ಎಂದರು.

Advertisement

ಪುರಸಭೆ ಸದಸ್ಯ ಬಸವರಾಜ ಚಮಕೇರಿ ಮಾತನಾಡಿ ಪಶ್ಚೀಮ ಭಾಗದಲ್ಲಿನ ಅತಿಕ್ರಮಣ ಅಂಗಡಿಗಳ ತೆರವು ನಂತರ ಚರಂಡಿ, ಪುಟ್‌ಪಾತ ನಿರ್ಮಿಸಿ, ಡಾಂಬರೀಕರಣ ಮಾಡಲು ಹೇಳಿ, ಗುರುವಾರವೇ ಲೋಕೋಪಯೋಗಿ ಅಧಿಕಾರಿಗಳಿಗೆ, ಡಿಸಿಯವರಿಗೆ ತಿಳಿಸಲಾಗಿದೆ. ಡಿಸಿ ಅವರು ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚಿಸಿ ಕಾಮಗಾರಿಯನ್ನು ನಿಲ್ಲಿಸಲು ತಿಳಿಸಿದ್ದಾರೆ. ಆದರೆ ಡಿಸಿ ಆದೇಶವನ್ನೇ ಗಾಳಿಗೆ ತೂರಿದ ಗುತ್ತಿಗೆದಾರರು, ಲೋಕೋಪಯೋಗಿ ಅಧಿಕಾರಿಗಳು ಶುಕ್ರವಾರವು ಡಾಂಬರೀಕರಣ ಪ್ರಾರಂಭಿಸಿದ್ದರಿಂದ ಪುರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಸೇರಿ ಕಾಮಗಾರಿಯನ್ನು ನಿಲ್ಲಿಸಿದ್ದೇವೆ ಎಂದರು.

ಪುರಸಭೆಯ ಸದಸ್ಯರಾದ ಶೇಖರ ಅಂಗಡಿ, ಬಸವರಾಜ ಹಿಟ್ಟಿನಮಠ, ಬಿಜೆಪಿ ಮುಖಂಡರಾದ ಶಿವಾನಂದ ಅಂಗಡಿ, ಪುಂಡಲೀಕ ಗಡೇಕಾರ, ಮಾಂತು ಮೇಟಿ, ಶಿವಾನಂದ ಹುಣಶ್ಯಾಳ, ಜೆಡಿಎಸ್ ಮುಖಂಡ ನಿಂಗಪ್ಪ ಬಾಳಿಕಾಯಿ, ಕಾಂಗ್ರೆಸ್ ಮುಖಂಡರಾದ ನಾನಾ ಜೋಷಿ, ವಿನೋದ ಸಿಂಪಿ, ಶ್ರೀಮಂತ ಹುಣಶ್ಯಾಳ, ಪುರಸಭೆಯ ಕಿರಿಯ ಅಭಿಯಂತರ ಎಸ್.ಎಂ.ಕಲಬುರ್ಗಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next