Advertisement

Mahalaya: ಪಿತೃಋಣ ವಿಮೋಚನೆಯ ಮಹಾಲಯ

12:15 AM Sep 30, 2023 | Team Udayavani |

ವ್ಯಕ್ತಿಯೊಬ್ಬನು ಸಮಾಜದಲ್ಲಿ ಜನಿಸಿದಾರಭ್ಯ ಪಂಚ ಮಹಾಋಣಗಳನ್ನು ಹೊತ್ತೇ ಬರುತ್ತಾನೆ. ದೇವಯಜ್ಞ (ದೇವಪೂಜೆ), ಪಿತೃಯಜ್ಞ (ಪಿತೃಕರ್ಮಗಳು), ಋಷಿ ಯಜ್ಞ (ಬ್ರಹ್ಮಯಜ್ಞ), ವೇದೋಕ್ತ ಋಷಿಗಳಿಗೆ ಗೌರವ) ನೃಯಜ್ಞ ( ಹಸಿದವರಿಗೆ ಆಹಾರ ನೀಡುವುದು) ಮತ್ತು ಭೂತಯಜ್ಞ (ಪ್ರಾಣಿಗಳಿಗೆ ಆಹಾರವನ್ನೀಯುವುದು) ಇವೇ ಆ ಪಂಚ ಮಹಾಋಣಗಳು ಅಥವಾ ಪಂಚ ಮಹಾಯಜ್ಞಗಳು. ಋಣ ಪರಿಹಾರಕ್ಕೆ ವ್ಯಕ್ತಿ ಆ ಎಲ್ಲ ಯಜ್ಞಗಳನ್ನು ಮಾಡುವುದು ಶ್ರೇಯಸ್ಕರ. ಅದರಲ್ಲೂ ದೇವ ಋಣ, ಪಿತೃ ಋಣ ಮತ್ತು ಋಷಿ ಋಣ ಇವು ಋಣತ್ರಯಗಳೆನಿಸಿವೆ. ಋಗ್ವೇದ, ತೈತ್ತಿರೀಯ ಸಂಹಿತೆ ಮತ್ತು ಶತಪಥಬ್ರಾಹಣದಲ್ಲಿ ಈ ಬಗ್ಗೆ ಉಲ್ಲೇಖವಿದೆ.

Advertisement

ಗರ್ಭದಾನದಿಂದ ಅಂತ್ಯೇಷ್ಠಿಯವರೆಗೆ ಒಬ್ಬ ಮನುಷ್ಯ ಷೋಡಶ ಸಂಸ್ಕಾರಗಳ ಘಟ್ಟವನ್ನು ದಾಟಿ ಬರುವುದು ಹಿಂ ದೂ ಧರ್ಮ ಸಂಸ್ಕೃ ತಿಯ ಅಪೂರ್ವ ಪದ್ಧತಿ ಪರಂಪರೆ. ಅಂತ್ಯೇಷ್ಠಿಯ ಲ್ಲಿ ವ್ಯಕ್ತಿಯ ಮರಣೋತ್ತರ ವಿಧಿವಿಧಾನಗಳು ಆತನ ಮಕ್ಕಳಿಂದ ನೆರವೇರಿಸಲ್ಪಡುತ್ತವೆ. ಈ ಮೂಲಕ ತನ್ನ ತಂದೆಯ ಋಣವನ್ನು ಮಕ್ಕಳು ತೀರಿಸಬೇಕು. ಮಾಸಿಕ ಶ್ರಾದ್ಧ, ವರ್ಷಾಂತಿಕ ಶ್ರಾದ್ಧ, ಇತ್ಯಾದಿ ಶ್ರಾದ್ಧ ತರ್ಪಣಾದಿಗಳನ್ನು ಮಾಡುವುದರ ಜತೆಗೆ ಪ್ರತೀ ವರ್ಷ ವಾರ್ಷಿಕ ಶ್ರಾದ್ಧವನ್ನು ಮಾಡಬೇಕೆಂದಿದೆ. ಇದು ಪಿತೃಗಳನ್ನು ಸಂವತ್ಸರದಲ್ಲೊಮ್ಮೆ ನೆನಪಿಸಿಕೊಳ್ಳುವ ದಿವಸ. ಅಂದು ನಮ್ಮ ಪೂರ್ವಜರಿಗೂ ಶ್ರಾದ್ಧ ತರ್ಪಣ, ದಾನಾದಿಗಳನ್ನು ನೀಡಬೇಕು. ಅಂತಹ ಒಂದು ಪಕ್ಷವನ್ನೇ ಅಂದರೆ 15 ದಿನಗಳುಳ್ಳ ಅವಧಿಯನ್ನು ಪಿತೃಗಳಿಗಾಗಿಯೇ ನಮ್ಮ ಪ್ರಾಚೀನರು ಮೀಸಲಿಟ್ಟಿದ್ದಾರೆ. ಅದು ಪಿತೃ ಪಕ್ಷ. ಭಾದ್ರಪದ ಮಾಸ ಕೃಷ್ಣ ಪಕ್ಷ, ಪಿತೃ ಪಕ್ಷ. ಅಪರ ಪಕ್ಷ. ಆ ಪಕ್ಷದ ಕೊನೆಯ ದಿನ ಮಹಾಲಯ ಅಮಾವಾಸ್ಯೆ ಅಥವಾ ಪಿತೃಪಕ್ಷ ಅಮಾವಾಸ್ಯೆ. ನವರಾತ್ರಿ ಹಬ್ಬವೂ ಮಹಾಲಯದ ಮರುದಿನವೇ ಆರಂಭ.

ಪಿತೃಲೋಕ: ಸಂಸ್ಕೃತ ಶಬ್ದ ಪಿತೃ ಪಿತ ಏಕವಚನ, ಪಿತರಃ ಬಹುವಚನೀಯ. ಪಿತ ಅಂದರೆ ತಂದೆ. ಪಿತರಃ, ನಮ್ಮ ಎಲ್ಲ ಪೂರ್ವ ಜರ ಪರಂಪರೆ. ಪಿತೃಲೋಕದಲ್ಲಿರು ವವರು. ಸಾಂವತ್ಸರಿಕ ಶ್ರಾದ್ಧದಲ್ಲಿ ಮೂರು ತಲೆಮಾರು, ತಂದೆ, ಅಜ್ಜ, ಮುತ್ತಜ್ಜ ಇವರಿಗೆ ಪಿಂಡ ಪ್ರಧಾನ ಮಾಡುವುದು ವಿಧಿ. ಪಿತೃಗಳು ಶ್ರಾದ್ಧಾದಿ ತರ್ಪಣ ಗಳನ್ನು ಕಾಯುತ್ತಿರುತ್ತಾರೆ ಎಂದು ನಂಬಿಕೆ. ಆ ದಿನ ಗಳಂದು ಪಿತೃಗಳು ಪಶುಪಕ್ಷಿ ರೂಪದಲ್ಲೋ ಅಥವಾ ಬ್ರಾಹ್ಮಣ ರೂಪಿಯಾಗಿಯೋ ಬಂದು ಆಹಾರವನ್ನು ಸ್ವೀಕರಿಸುತ್ತಾರೆ. ಪಿತೃಗಳಿಗೆ ಶ್ರಾದ್ಧ, ತರ್ಪಣಾದಿಗಳನ್ನು ನೀಡದಿದ್ದರೆ, ಹೇಗೆ ಮುಂದಿನ ಪದವಿಯನ್ನು ಗಳಿಸಲಾರರು ಎಂಬ ಅರ್ಜುನನ ವಿಷಾದ ಭಗವದ್ಗೀ ತೆಯಲ್ಲಿ ಉಲ್ಲೇಖಗೊಂಡಿದೆ. –

ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ
ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ ||

– ವರ್ಣ ಸಾಂಕರ್ಯವು ಕುಲಘಾತಕರನ್ನು ಮತ್ತು ಕುಲವನ್ನೂ ನರಕಕ್ಕೆ ಕೊಂಡೊಯ್ಯುತ್ತದೆ. ಲುಪ್ತವಾದ ಪಿಂಡ ಮತ್ತು ತರ್ಪಣಾದಿಗಳಿಂದ ಅರ್ಥಾತ್‌ ಶ್ರಾದ್ಧ ಮತ್ತು ಪಿತೃ ತರ್ಪಣಗಳಿಂದ ವಂಚಿತರಾದ ಇವರ ಪಿತೃಗಳು ಕೂಡ ಅಧೋಗತಿಯನ್ನು ಪಡೆಯುತ್ತಾರೆ.

Advertisement

ಜೀವಾತ್ಮನು ಶರೀರವನ್ನು ತ್ಯಜಿಸಿದ ಬಳಿಕ ದೇವಯಾನ (ಬ್ರಹ್ಮಲೋಕ) ಅಥವಾ ಪಿತೃಯಾನ (ಚಂದ್ರಲೋಕ)ದಲ್ಲಿ ಸಂಚರಿಸುತ್ತಾನೆ ಎಂದು ಉಪನಿಷದ್‌ ಮತ್ತು ಭಗವದ್ಗೀತೆಯಲ್ಲಿ ತಿಳಿಸಿದೆ. ಪಿತೃಲೋಕದಲ್ಲಿ ಗತಿಸಿಹೋದ ನಮ್ಮ ಪೂರ್ವಜರು ನೆಲೆಸುತ್ತಾರೆ ಎಂದು ಹೇಳುತ್ತದೆ ಋಗ್ವೇದ. ಅದು ಪಿತೃಯಾನದಲ್ಲಿರುವ ಒಂದು ತಂಗುದಾಣ ಎಂದು ಬೃಹದಾರಣ್ಯಕ ಉಪನಿಷತ್‌ ಉಲ್ಲೇಖ.

ಪಿತೃಪಕ್ಷ: ಹೆಸರೇ ತಿಳಿಸುವಂತೆ ಒಂದು ಪಕ್ಷವೇ ಪಿತೃ ಗಳಿಗೆ ಮೀಸಲು. ಪಿತೃಪಕ್ಷ. ಭಾದ್ರಪದ ಕೃಷ್ಣ ಪಕ್ಷದಲ್ಲಿ ಬರುವುದು ಅಥವಾ ಮಹಾಲಯ ಪಕ್ಷ ಎಂದೂ ಕರೆಯುವುದಿದೆ. ಈ ದಿನಗಳಲ್ಲಿ ಪೂರ್ವಿಕರಿಗೆ ಶ್ರಾದ್ಧ, ತರ್ಪಣ, ದಾನದಿಂದ ತೃಪ್ತಿಯಾಗುತ್ತದೆ. ಸಮಸ್ತ ಕುಲವನ್ನು ಹರಸುತ್ತಾರೆ. ಪಿತೃ ಪಕ್ಷದಲ್ಲಿ ಅನ್ನದಾನದ ಮಹತ್ವವನ್ನು ಮಹಾ ಭಾರತದಲ್ಲಿ ಕರ್ಣನ ಕಥೆಯೊಂದು ಪುರಸ್ಕರಿ ಸುತ್ತದೆ. ಕರ್ಣ ದೇಹಾಂತ ಗೊಂಡು ಪರಲೋಕಕಕ್ಕೆ ಹೋದಾಗ ಆತನಿಗೆ ಉಣ್ಣಲು ತಿನ್ನಲು ಆಹಾರವೇ ದೊರಕ ಲಿಲ್ಲವಂತೆ. ಆದರೆ ಬೆಳ್ಳಿ, ಚಿನ್ನ ಹೇರಳವಾಗಿ ಸಿಕ್ಕಿತು. ಕಾರಣ ಕರ್ಣ ತನ್ನ ಜೀವಿತ ಕಾಲದಲ್ಲಿ ಅಪಾರ ಸುವರ್ಣ, ರಜತವನ್ನು ದಾನವಾಗಿ ನೀಡಿದ್ದ. ಆಹಾರ ಸಿಗದಿದ್ದಾಗ ಕರ್ಣ ಯಮನಲ್ಲಿ ಪ್ರಾರ್ಥಿಸಿದ. ಆಗ ಯಮನು ಮಹಾಲಯ ಪಕ್ಷದಲ್ಲಿ ಕರ್ಣನನ್ನು ಭೂಮಿಗೆ ಕಳಿಸಿ ಕೊಟ್ಟನು. ಆ ಅವಧಿಯಲ್ಲಿ ಕರ್ಣ ಹಸಿದವರಿಗೆ ಅನ್ನದಾನವನ್ನು ಮಾಡಿ ಮರಳಿ ಪರಲೋಕಕ್ಕೆ ತೆರಳಿದನಂತೆ. ಪಿತೃ ಪಕ್ಷದಲ್ಲಿ ಮಾಡಿದ ಅನ್ನದಾನ ಗತಿಸಿಹೋದ ಸಮಸ್ತ ಪಿತೃ ಗಣಕ್ಕೆ ಸಲ್ಲುತ್ತದೆ. ಶ್ರಾದ್ಧ, ತರ್ಪಣ ಮತ್ತು ಪಿಂಡದಾನ ಮಹಾಲಯ ಶ್ರಾದ್ಧದ ವೈಶಿಷ್ಟ್ಯ.

ಆನ್ಪೋಟಯಂತಿ ಪಿತರಃ ಪ್ರನೃತ್ಯಂತಿ ಪಿತಾಮಹಃ
ವೈಷ್ಣವೋ ಅಸ್ಮತುಲೇ ಜಾತಃ ಸ ನಃ ಸಂತಾರಯಿಷ್ಯತಿ ||

– ಕೃಷ್ಣಾಮೃತಮಹಾರ್ಣವದ ಉಕ್ತಿಯಂತೆ, ವಿಷ್ಣು ಭಕ್ತನು ಹುಟ್ಟಿದಾಗ, ಆ ವಂಶದ ಸಮಸ್ತ ಪಿತೃಗಳು ಕುಣಿ ಯುತ್ತಾರೆ. ಈತ ನಮ್ಮೆಲ್ಲರನ್ನೂ ಬಂಧ ಮುಕ್ತಗೊಳಿಸುವನು ಎಂದು ಅವರ ಆನಂದಕ್ಕೆ ಕಾರಣ. ದೇವಪಿತೃ ಕಾರ್ಯಾ ಭ್ಯಾಂ ನ ಪ್ರಮದಿತವ್ಯಂ ಎಂಬ ಶ್ರುತಿಯ ನುಡಿಯಂತೆ ವಿಧಿಬದ್ಧವಾಗಿ ಪಿತೃ ಕರ್ಮ ಗಳನ್ನು ನಡೆಸುವುದೂ ಮುಖ್ಯ. ದೇವ ಕಾರ್ಯಕ್ಕಿಂತಲೂ ಪಿತೃಕಾರ್ಯವು ಮುಖ್ಯ.

ಮಹಾಲಯ: ಮಹಾ ಅಂದರೆ ಶ್ರೇಷ್ಠ ಅಥವಾ ದೊಡ್ಡದಾದ. ಲಯ – ನಾಶ. ದೇವ ದಾನವರ ನಡುವೆ ನಡೆದ ಘೋರ ಯುದ್ಧದಲ್ಲಿ ಅಪಾರ ಸಂಖ್ಯೆಯಲ್ಲಿ, ದೇವತೆಗಳು ಋಷಿಗಳು ದಾನವರ ಕೈಯಿಂದ ಮಡಿದರು. ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ಅವಧಿಯಲ್ಲಿ ಈ ಯುದ್ಧ ನಡೆದಿತ್ತು ಎಂದು ಒಂದು ಕಥೆ. ಮಹಾನಾಶ. ಮಹಾಲಯ! ದೇವತೆಗಳು ಮತ್ತು ಋಷಿಗಳು ಬೇರಾರೂ ಅಲ್ಲ, ನಮ್ಮ ಪೂರ್ವಜರೇ.

ಗೋದಾನ – ಸೇವೆ: ಗೋವು ಸಮಸ್ತ ಮಾನವರಿಗೂ ತಾಯಿ, ವೃಷಭ ತಂದೆ. ಪಿತೃಪಕ್ಷದಲ್ಲಿ ಗತಿಸಿಹೋದ ನಮ್ಮ ಪೂರ್ವಜರನ್ನು ಸ್ಮರಿಸಿದಂತೆಯೇ ಜೀವಂತ ಮಾತಾ ಪಿತೃಗಳಾದ ನಮ್ಮ ಗೋವುಗಳ ದಾನ, ಸೇವೆಯನ್ನು ಮಾಡಿ ಋಣ ಸಂದಾಯವನ್ನು ಮಾಡುವ ಚಿಂತನೆ. ಪಿಂಡ ಪ್ರದಾನ, ತರ್ಪಣದಂತೆಯೇ ಪಿತೃ ಪಕ್ಷದಲ್ಲಿ ಗೋದಾನ, ಸೇವೆಯೂ ಅತ್ಯಂತ ಫ‌ಲಪ್ರದ ಹಾಗೂ ಪುಣ್ಯಪ್ರದ.

ಜಲಂಚಾರು ರಘುಪತಿ ತಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next