Advertisement

ಮಡಿಕೇರಿ: ವಿಶ್ವ ಜನಸಂಖ್ಯಾ ದಿನಾಚರಣೆ

02:30 AM Jul 14, 2017 | Harsha Rao |

ಮಡಿಕೇರಿ: ಜನಸಂಖ್ಯೆ ಹೆಚ್ಚಳದಿಂದ ಹಲವು ಸಮಸ್ಯೆಗಳು ಉಂಟಾಗಲಿದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವುದು ಅಗತ್ಯ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್‌ ಅವರು ಅಭಿಪ್ರಾಯಪಟ್ಟರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಮತ್ತು ಸೇವಾ ಪ್ರಾಧಿಕಾರ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಜಿಲ್ಲಾ ಆಸ್ಪತ್ರೆ, ಸರಕಾರಿ ಪದವಿ ಪೂರ್ವ ಕಾಲೇಜು, ಗ್ರೀನ್‌ಡಾಟ್‌ ಟ್ರಸ್ಟ್‌ ಹಾಗೂ ರೋಟರಿ ಕ್ಲಬ್‌ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಹಿಂದೆ ನಾವಿಬ್ಬರು-ನಮಗಿಬ್ಬರು, ಇಂದು ನಾವಿಬ್ಬರು-ನಮಗೊಬ್ಬರು ಎನ್ನುವಂತಾಗಿದೆ. ಕೊಡಗಿನಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿದೆ.  ಇದರಿಂದಾಗಿ ಮೂರು ವಿಧಾನಸಭಾ ಕ್ಷೇತ್ರಗಳು, ಈಗ ಎರಡು ವಿಧಾನಸಭಾ ಕ್ಷೇತ್ರಗಳಾಗಿವೆ. ಆದ್ದರಿಂದ ಜನಸಂಖ್ಯೆ ಗಿಂತ ಭೂ ವಿಸ್ತೀರ್ಣದ ಮೇಲೆ ವಿಧಾನಸಭಾ ಕ್ಷೇತ್ರ ನಿರ್ಧರಿಸುವುದು ಅಗತ್ಯ ಎಂದು ಶಾಸಕರು ಅಭಿಪ್ರಾಯಪಟ್ಟರು.  

ಪ್ರಪಂಚದಲ್ಲಿ ಚೀನಾ, ಭಾರತ ದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ನಿಯಂತ್ರಣ ಮಾಡಿ ಆರ್ಥಿಕ ಸಬಲೀಕರಣವಾಗಬೇಕು. ಜೊತೆಗೆ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸ ಬೇಕು ಎಂದು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‌ ಕುಮಾರ್‌ ಮಾತನಾಡಿ, ಜನಸಂಖ್ಯೆ ಸ್ಫೋಟವನ್ನು ನಿಯಂತ್ರಣ ಮಾಡಿ ಸ್ವಸ್ಥ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಅವರು ಕರೆ ನೀಡಿದರು. 
ಪ್ರಾಧ್ಯಾಪಕರಾದ ಡಾ| ಕೆ.ಸಿ. ದಯಾನಂದ ಅವರು ಮಾತನಾಡಿ, ಜನಸಂಖ್ಯೆ ಸ್ಫೋಟವನ್ನು ದೇಶದಲ್ಲಿ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸುವ ನಿಟ್ಟಿ ನಲ್ಲಿ ಕಾರ್ಯಕ್ರಮ ರೂಪಿಸುವುದು ಅತ್ಯಗತ್ಯ. ಆ ದಿಸೆಯಲ್ಲಿ ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಎಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.   

Advertisement

ದೇಶದಲ್ಲಿ ಪ್ರತೀ ವರ್ಷ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೆಚ್ಚಳವಾಗುತ್ತದೆ. ಜನಸಂಖ್ಯೆ ಸ್ಫೋಟದಿಂದ ಪ್ರತಿಯೊಬ್ಬರ ಜೀವನ ಮಟ್ಟ ಕುಸಿಯಲಿದೆ. ಪರಿಸರ ಅಸಮತೋಲನ, ಶಿಕ್ಷಣ, ಆಹಾರ ಕೊರತೆ ಉಂಟಾಗಲಿದೆ. ಮಿತಿಮೀರಿದ ಜನಸಂಖ್ಯೆಯಿಂದ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಶೇ. 60ರಷ್ಟು ಜನಸಂಖ್ಯೆ ಏಷ್ಯಾ ಖಂಡದಲ್ಲಿದೆ. ವಿಶ್ವಕ್ಕೆ ಹೋಲಿಸಿದಾಗ ಭಾರತದ ಜನಸಂಖ್ಯೆ 17.8ರಷ್ಟು ಇದೆ. ಚೀನಾ ಭೂ ವಿಸ್ತೀರ್ಣಕ್ಕೆ ಹೋಲಿಸಿದರೆ ದೇಶದ ಜನಸಂಖ್ಯೆ ಹೆಚ್ಚಳ ಎಂಬುದನ್ನು ಮನಗಾಣಬೇಕಿದೆ ಎಂದರು.

ಲಿಂಗತಾರತಮ್ಯ ಹೋಗಲಾಡಿಸುವುದು, ಜನ ಸಂಖ್ಯೆ ಸ್ಫೋಟದ ಬಗ್ಗೆ ಜಾಗೃತಿ ಮೂಡಿಸುವುದು, ಪ್ರತಿಯೊಬ್ಬರ ತಲಾ ಆದಾಯ ಹೆಚ್ಚಿಸುವುದು ಮತ್ತಿತರವನ್ನು ಮಾಡಬೇಕಿದೆ. 2001ರಿಂದ 2011ರ ವರೆಗೆ ದೇಶದಲ್ಲಿ ಸುಮಾರು 18 ಕೋಟಿ ಜನಸಂಖ್ಯೆ ಹೆಚ್ಚಳವಾಗಿದೆ. ಕೊಡಗು ಜಿಲ್ಲೆಯಲ್ಲಿ 2001ರಲ್ಲಿ 5.48 ಲಕ್ಷ ಜನಸಂಖ್ಯೆ ಇತ್ತು, 2011 ರಲ್ಲೂ ಸಹ 5.54 ಲಕ್ಷ ಜನಸಂಖ್ಯೆ ಇದೆ. ಜಿಲ್ಲೆಯ ಜನಸಂಖ್ಯೆ ಹಾಗೂ ಲಿಂಗಾನುಪಾತದಲ್ಲಿ ಸಮತೋಲನ ಕಾಯ್ದುಕೊಂಡಿದೆ ಎಂದು ಕೆ.ಸಿ. ದಯಾನಂದ ಮಾಹಿತಿ ನೀಡಿದರು.       

ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಮಾತನಾಡಿ, ಜನಸಂಖ್ಯೆ ಸ್ಫೋಟದಿಂದ ಆಹಾರ, ಕುಡಿ ಯುವ ನೀರಿನ ಕೊರತೆ ಉಂಟಾಗಲಿದೆ. ಹಾಗೆಯೇ ಮೂಲಭೂತ ಸೌಲಭ್ಯಗಳು ಕಡಿಮೆಯಾಗಲಿವೆ ಎಂದು ಹೇಳಿದರು. 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ಒ.ಆರ್‌. ಶ್ರೀರಂಗಪ್ಪ ಅವರು ಮಾತನಾಡಿ ವಿಶ್ವದಲ್ಲಿ 700 ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದು, ಜನಸಂಖ್ಯೆ ಸ್ಫೋಟದಿಂದ ಉಂಟಾಗುವ ಪರಿಣಾಮ ಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಅಗತ್ಯ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ವೇಕ್ಷಣಾಧಿಕಾರಿ ಡಾ| ಶಿವಕುಮಾರ್‌, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|  ಶಿವಕುಮಾರ್‌, ಉಪನ್ಯಾಸಕ ಸಿದ್ದರಾಜು ಬೆಳ್ಳಯ್ಯ, ತಾಲೂಕು ವೈದ್ಯಾಧಿಕಾರಿ ಡಾ| ರವಿಕುಮಾರ್‌ ಇತರರು ಇದ್ದರು. ಕುಟುಂಬ ಕಲ್ಯಾಣಾಧಿಕಾರಿ ಡಾ| ಆಶಾ ಸ್ವಾಗತಿಸಿದರು, ಕಿರಣ್‌ ನಿರೂಪಿಸಿ, ವಂದಿಸಿದರು.

ಜಾಗೃತಿ ಜಾಥಾ
ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ನಗರದ ಜೂನಿಯರ್‌ ಕಾಲೇಜು ಆವರಣದಲ್ಲಿ ಜಾಥಾಗೆ ಜಿಲ್ಲಾ ಮತ್ತು ಸೆಷನ್‌ ನ್ಯಾಯಾಧೀಶರಾದ ಮಾಸ್ಟರ್‌ ಆರ್‌.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಅವರು ಚಾಲನೆ ನೀಡಿದರು.  
ಬಳಿಕ ಮಾತನಾಡಿದ ಅವರು ಜನಸಂಖ್ಯೆ ಸ್ಫೋಟ ದಿಂದ ಬಡತನ, ನಿರುದ್ಯೋಗ, ಜೀವನ ಮಟ್ಟ ಕುಸಿತ ಹೀಗೆ ನಾನಾ ಸಮಸ್ಯೆಗಳು ತಲೆದೋರಲಿವೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಯೋಜನೆ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು. 

ಅಪರ ಜಿಲ್ಲಾ ಮತ್ತು ಸೆಷನ್‌ ನ್ಯಾಯಾಧೀಶರಾದ ಡಿ. ಪವನೇಶ್‌, ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಸೆಲ್ವಕುಮಾರ್‌, ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಹನುಮಂತಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಓ.ಆರ್‌. ಶ್ರೀರಂಗಪ್ಪ, ಡಾ| ಆಶಾ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಇತರರು ಹಾಜರಿದ್ದರು. 

ಜಾಥಾ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಹೊರಟು ನಗರದ ಪ್ರಮುಖ ಬೀದಿಗಳ ಮೂಲಕ ಕಾವೇರಿ ಕಲಾಕ್ಷೇತ್ರವನ್ನು ತಲುಪಿತು. ಜಾಥದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಕಿರಿಯ ಆರೋಗ್ಯ ಮಹಿಳಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next