Advertisement

Madanthyar: ಇಲ್ಲಿ ಎಲ್ಲಿಂದ ಹೋದರೂ ಹೊಂಡಕ್ಕೇ ಬೀಳಬೇಕು!

12:58 PM Oct 16, 2024 | Team Udayavani |

ಮಡಂತ್ಯಾರು: ನಿತ್ಯ ಸಾವಿರಾರು ಮಂದಿ ಸಂಚರಿಸುವ, ಸಾವಿರಾರು ವಾಹನಗಳು ಓಡಾಡುವ ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಅಲ್ಲಲ್ಲಿ ಬೃಹತ್‌ ಗಾತ್ರದ ಗುಂಡಿಗಳು ಸೃಷ್ಟಿಯಾಗಿದ್ದು ಇಲ್ಲಿ ವಾಹನ ಚಲಾಯಿಸುವುದೇ ದುಸ್ತರ ಎನಿಸಿದೆ. ಈ ರಸ್ತೆಯ ಕೆಲವು ಭಾಗಗಳಲ್ಲಿ ಪರಿಸ್ಥಿತಿ ಎಷ್ಟೊಂದು ಭಯಾನಕವಾಗಿದೆ ಎಂದರೆ, ಯಾವ

Advertisement

ಕಡೆಯಿಂದ ಹೋದರೂ ರಸ್ತೆ ಗುಂಡಿಗೆ ಬೀಳಲೇಬೇಕು!
ಗುರುವಾಯನಕೆರೆಯಿಂದ ಕುಪ್ಪೆಟ್ಟಿ (ಉರುವಾಲು) ತನಕ ಅಂದಾಜು 13 ಕಿ.ಮೀ. ದೂರದ ರಸ್ತೆಯುದ್ದಕ್ಕೂ 50ಕ್ಕೂ ಹೆಚ್ಚು ಕಡೆಗಳಲ್ಲಿ ಗುಂಡಿಗಳಿವೆ. ಇಲ್ಲಿನ ರಸ್ತೆಯ ಗುಂಡಿಗಳಿಗೆ ದ್ವಿಚಕ್ರ ವಾಹನ ಸವಾರರು ಬಿದ್ದು ಕೈ, ಕಾಲು, ತಲೆಗೆ ಗಂಭೀರವಾದ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ ಹಲವು ನಿದರ್ಶನಗಳಿವೆ.

ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯು ಪುತ್ತೂರು ಮತ್ತು ಬೆಳ್ತಂಗಡಿ ಪಟ್ಟಣಗಳನ್ನು ಬೆಸೆಯುವ ಪ್ರಮುಖ ತಂತುವಾಗಿದೆ. ಮಳೆಗಾಲದ ಸಮಯದಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲದ ಕಾರಣ, ರಸ್ತೆಯಲ್ಲೇ ನೀರು ಹರಿದು ಹೋಗುತ್ತದೆ. ಈ ಕಾರಣದಿಂದ ರಸ್ತೆಯಲ್ಲಿ ಗುಂಡಿ ಸೃಷ್ಟಿ ಆಗಿದೆ. ಸಾವಿ ರಾರು ವಾಹನಗಳು ಓಡಾಡುವುದರಿಂದ ದಿನದಿಂದ ದಿನಕ್ಕೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು,ವಾಹನ ಸವಾರರ ಸಂಕಟ ಮೂಕ ರೋದನವೆನಿಸಿದೆ.

ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯವಾಗಿ ಮಾಡಬೇಕು, ಪ್ರಾಣಗಳನ್ನು ಉಳಿಸಬೇಕು ಎನ್ನುವ ಆಗ್ರಹವನ್ನು ಜನರು ಮಂಡಿಸುತ್ತಿದ್ದಾರೆ.

Advertisement

ಹಲವು ಸಂಪರ್ಕ ರಸ್ತೆಗಳ ಜೋಡಣೆ
ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ಗ್ರಾಮೀಣ ಭಾಗದಿಂದಲೂ ಸಂಪರ್ಕವಿದೆ. ಹಿಂದಿನ ಸರಕಾರ ಹಾಗೂ ಈಗಿನ ಸರಕಾರದ ಅವಧಿಯಲ್ಲಿ ರಸ್ತೆಗೆ ಮರು ಡಾಮರೀಕರಣ, ಚರಂಡಿ ರಿಪೇರಿ ಮೊದಲಾದ ಯಾವ ಕಾಮಗಾರಿಯೂ ನಡೆದಿಲ್ಲ. ಹೀಗಾಗಿ ರಸ್ತೆ ಈ ಪರಿಯಲ್ಲಿ ಕೆಟ್ಟು ಹೋಗಲು ಕಾರಣವಾಗಿದೆ. ಹೊಂಡ-ಗುಂಡಿಗಳಿಂದ ಕೂಡಿ ಪ್ರಯಾಣಿಕರಿಗೆ ಪ್ರಾಣ ಸಂಕಟವಾಗಿದೆ.

ಎಲ್ಲೆಲ್ಲಿ ಅಪಾಯಕಾರಿ ಸ್ಥಿತಿ?
ಈ ರಸ್ತೆಯು ಬೆಳ್ತಂಗಡಿ ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಬರುತ್ತದೆ. ಎರಡು ಪಟ್ಟಣಗಳನ್ನು ಸೇರಿಸುವ ರಸ್ತೆಯಲ್ಲಿ 20 ಕಿ.ಮೀ. ಉದ್ದಕ್ಕೆ ಸರಿಯಾಗಿರುವ ಒಂದರ್ಧ ಕಿ.ಮೀ. ರಸ್ತೆ ಕೂಡಾ ಕಾಣುವುದಿಲ್ಲ.

ಗುರುವಾಯನಕೆರೆ ಪೇಟೆಯಿಂದ ಆರಂಭಗೊಂಡು 1.ಕಿ.ಮೀ. ದೂರದವರೆಗಿನ ಪಣೆಜಾಲು ತನಕವೇ ರಸ್ತೆಯಲ್ಲಿ ಹತ್ತಾರು ಬೃಹತ್‌ ಗುಂಡಿಗಳಿವೆ ಇಡ್ಯ, ರೇಷ್ಮೆ ರೋಡ್‌, ಗೇರುಕಟ್ಟೆ, ಪರಪ್ಪು, ನಾಳ, ಜಾರಿಗೆಬೈಲು, ಗೋವಿಂದೂರು, ಯಂತ್ರಡ್ಕ, ಮಾವಿನಕಟ್ಟೆ, ಹಲೇಜಿ ಮತ್ತು ಕುಪ್ಪೆಟ್ಟಿ ಪೇಟೆಯ ಮುಖ್ಯ ಭಾಗದಲ್ಲಿರುವ ರಸ್ತೆ ಗುಂಡಿಗಳನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಕೆಲವರು ತಪ್ಪಿಸಲು ಹೋಗಿ ಅಪಘಾತಕ್ಕೆ ಒಳಗಾಗಿದ್ದಾರೆ.

– ಇತ್ತೀಚೆಗೆ ಕೆಲವು ಭಾಗದಲ್ಲಿ ಚರಂಡಿ ರಿಪೇರಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಆದರೆ ಅದನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಚರಂಡಿಯ ಹಸಿ ಮಣ್ಣನ್ನು ರಸ್ತೆಯ ಪಕ್ಕದಲ್ಲಿ ಹಾಕಿದ ಪರಿಣಾಮ ಮಳೆಗೆ ಹರಿದು ಮತ್ತಷ್ಟು ಸಮಸ್ಯೆಯಾಗಿದೆ.

ಚರಂಡಿಗೆ ಬಿದ್ದ ವಾಹನ
ಯಂತ್ರಡ್ಕ ಸಮೀಪ ತಿರುವಿನಲ್ಲಿ ರಸ್ತೆಯ ತುಂಬಾ ಕಿರಿದಾಗಿದೆ, ರಸ್ತೆ ಬದಿಯೂ ಕುಸಿದಿದೆ. ಹೀಗಾಗಿ ಇತ್ತೀಚೆಗೆ ಇಲ್ಲಿ ಘನ ವಾಹನವೊಂದು ಚರಂಡಿಗೆ ಬಿದ್ದಿತ್ತು. ಈ ಭಾಗದಲ್ಲಿ ರಸ್ತೆ ಇನ್ನಷ್ಟು ಕುಸಿದು ಬೀಳುವ ಅಪಾಯವಿದ್ದರೂ ಸಂಬಂಧಿಸಿದ ಇಲಾಖೆಯವರು ಯಾವುದೇ ರೀತಿಯ ಸೂಚನೆ ಫಲಕ ಅಥವಾ ಅಪಾಯ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ.

ಖಾಸಗಿಯವರಿಂದ ಚರಂಡಿಗೆ ಕಲ್ಲು!
ಕೆಲವು ಕಡೆ ಸ್ಥಳೀಯರು ಪಂಚಾಯತ್‌ ಮತ್ತು ಲೋಕೋಪಯೋಗಿ ಇಲಾಖೆಯ ನಿಯಮ ಪಾಲಿಸದೆ ರಸ್ತೆಯ ಪಕ್ಕದಲ್ಲಿ ಮನೆ, ಅಂಗಡಿ ಹಾಗೂ ವಸತಿ ಕಟ್ಟಡ ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ ರಸ್ತೆ ಚರಂಡಿಯನ್ನೇ ಮುಚ್ಚಲಾಗುತ್ತದೆ. ಕೆಲವು ಕಡೆ ಸಣ್ಣ ಗಾತ್ರದ ಮೋರಿಯಿಂದಾಗಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇನ್ನು ಕೆಲವು ಕಡೆ ದೊಡ್ಡ ಗಾತ್ರದ ಕಲ್ಲುಗಳನ್ನು, ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಹಾಳಾದ ಸಿಮೆಂಟ್‌, ಟೈಲ್ಸ್‌ ತುಂಡುಗಳನ್ನು ಗೋಣಿ ಚೀಲದಲ್ಲಿ ತುಂಬಿ ರಸ್ತೆ ಗುಂಡಿಗೆ ಹಾಕುತ್ತಾರೆ. ಇದು ಕೂಡಾ ಸಣ್ಣ ವಾಹನಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

-ಕೆ.ಎನ್‌. ಗೌಡ, ಗೇರುಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next