Advertisement

ರಾಗಂ ತಾನಂ “ಪಲ್ಲವಿ’

03:15 PM Jan 03, 2018 | |

ಹಿನ್ನೆಲೆ ಗಾಯಕಿ, ರಂಗಭೂಮಿ ಕಲಾವಿದೆ, ಕಂಠದಾನ ಕಲಾವಿದೆ, ಕಿರುತೆರೆ ಕಲಾವಿದೆ ಹೀಗೆ ಇನ್ನೂ ಹಲವು ಬಿರುದಾವಳಿಗಳು ಸಲ್ಲುವ ವ್ಯಕ್ತಿ ಎಂ.ಡಿ ಪಲ್ಲವಿ. ಯಾವುದೋ ಒಂದಕ್ಕೇ ಅಂಟಿಕೊಳ್ಳದೆ ತಮ್ಮ ಬದುಕಿನ ಹಾದಿಯಲ್ಲಿ ಎದುರಾದ ಸದಾವಕಾಶಗಳನ್ನು ಅಳೆದು ತೂಗಿ ಸ್ವೀಕರಿಸುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅವರದು ಬಹುಮುಖ ಪ್ರತಿಭೆ. ಸುಮಾರು 17 ವರ್ಷಗಳ ಹಿಂದೆ ಬಿಡುಗಡೆಯಾದ “ಮಾಯಾಮೃಗ’ಧಾರಾವಾಹಿಯಲ್ಲಿನ ಅವರ ಅಭಿನಯ ಈಗಲೂ ಯಾರೂ ಮರೆತಿಲ್ಲ. ಅನಂತ್‌ನಾಗ್‌ ಅಭಿನಯದ “ಗರ್ವ’ ಧಾರಾವಾಹಿಯಲ್ಲೂ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ರಾಷ್ಟ್ರಪ್ರಶಸ್ತಿ ಪಡೆದಿದ್ದ ಇಂಗ್ಲಿಷ್‌ ಚಿತ್ರ “ಸ್ಟಂಬಲ್‌’ದ ಮೂಲಕ ಹಿರಿತೆರೆಯಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. “ಕರಿಯ’ ಚಿತ್ರದ “ನೋಡವ್ವಾ ಕ್ವಾಟೆ ಲಿಂಗವೇ’ ಹಾಡಿನ ಗಾಯನಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಈಗಲೂ ಸುಗಮ ಸಂಗೀತ ಎಂದರೆ ಕಣ್ಮುಂದೆ ಬರುವ ಚಿತ್ರವೇ ಪಲ್ಲವಿ ಅವರದ್ದು. ಖ್ಯಾತ ಸಂಗೀತ ನಿರ್ದೇಶಕ, ಡ್ರಮ್‌ ಕಲಾವಿದ ಅರಣ್‌ ಇವರ ಪತಿ. ಸದ್ಯ ಪಲ್ಲವಿಯವರು ಸಂಗೀತ ಸಂಯೋಜಿಸಿ, ಅಭಿನಯಿಸಿರುವ ನಾಟಕ “ತಾಯವ್ವ’ ಸದ್ದು ಮಾಡುತ್ತಿದೆ. 


-“ಮಾಯಾಮೃಗ’ ಧಾರಾವಾಹಿಯಿಂದ ಜನಪ್ರಿಯರಾದವರು ನೀವು. ಬಹಳ ದಿನಗಳಾದವು ನಮ್ಮನ್ನು ತೆರೆ ಮೇಲೆ ನೋಡಿ. ಧಾರಾವಾಹಿಯಲ್ಲಿ ನಟಿಸಬಾರದು ಅಂತೇನಾದರೂ ತೀರ್ಮಾನ ಮಾಡಿದ್ದೀರಾ? 

“ಮಾಯಾಮೃಗ’ ನನಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ನಾನು ಧಾರಾವಾಹಿಗಳಲ್ಲಿ ನಟಿಸಿದ್ದ ಕಾಲವೇ ಬೇರೆ. ಇವತ್ತಿನ ಕಾಲವೇ ಬೇರೆ. ಧಾರಾವಾಹಿಗೂ ಒಂದು ಬರವಣಿಗೆ ಅಂತ ಇರುತ್ತದೆ. ನಾನು ಅಭಿನಯಿಸುವಾಗ ಆ ಬರವಣಿಗೆಯಲ್ಲಿ ಸತ್ವ ಇತ್ತು, ಗಟ್ಟಿತನ ಇತ್ತು. ಅದಕ್ಕಾಗಿಯೇ ಖಷಿಯಿಂದ ಧಾರಾವಾಹಿಗಳಲ್ಲಿ ಅಭಿನಯಿಸಿದೆ. ಈಗಿನ ಧಾರಾವಾಹಿಗಳ ಬರವಣಿಗೆ ತೀರಾ ಕಳಪೆಯಾಗಿದೆ. ಸತ್ವರಹಿತವಾಗಿದೆ. ಬರೀ ದ್ವೇಷ, ಅಸೂಯೆಗಳೇ ಧಾರಾವಾಹಿ ಬರವಣಿಗೆಯ ಮೂಲವಾಗಿದೆ. ಆದ್ದರಿಂದ ನಾನು ಧಾರಾವಾಹಿಗಳಿಂದ ದೂರ ಇದ್ದೇನೆ. ಮಾಯಾಮೃಗದಂಥ ಧಾರಾವಾಹಿ ಸಿಕ್ಕರೆ ಖಂಡಿತ ಮತ್ತೆ ಅಭಿನಯಿಸುತ್ತೇನೆ. 

Advertisement

-ನಿಮ್ಮ ರಂಗಭೂಮಿ ನಂಟಿನ ಬಗ್ಗೆ ಹೇಳಿ?
ಚಿಕ್ಕ ವಯಸ್ಸಿನಿಂದಲೂ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ರಂಗಭೂಮಿ ನನಗೆ ಸಂಗೀತದಷ್ಟೇ ಮುಖ್ಯ. ರಂಗಭೂಮಿಯ ಬರವಣಿಗೆ ಗುಣಮಟ್ಟ ಯಾವತ್ತೂ ಬದಲಾಗಿಲ್ಲ. ಆದ್ದರಿಂದ ಒಳ್ಳೆಯ ನಾಟಕಗಳಲ್ಲಿ ಅಭಿನಯಿಸಲು ಕರೆ ಬಂದಾಗಲೆಲ್ಲಾ ಒಪ್ಪಿಕೊಳ್ಳುತ್ತೇನೆ.

-ಕರ್ನಾಟಕದ ಪ್ರಮುಖ ಗಾಯಕಿ ನೀವು. ಸಂಗೀತ ಕ್ಷೇತ್ರದಲ್ಲಿ ಹೆಸರನ್ನೂ ಗಳಿಸಿದ್ದೀರಿ. ಆದರೂ ಹಿನ್ನಲೆ ಗಾಯನದ ಅವಕಾಶಗಳು ಏಕೆ ಕಡಿಮೆ?
ಸಿನಿಮಾ ಹಿನ್ನೆಲೆ ಗಾಯನ ಎಂಬುದು ಕಮರ್ಷಿಯಲ್‌ ಪ್ರಪಂಚ. ಯಾವ ಗಾಯಕ/ಗಾಯಕಿ(ಬಾಲಿವುಡ್‌ ಅಥವಾ ಮತ್ಯಾರೋ) ಧ್ವನಿ ಮಾರುಕಟ್ಟೆಯಲ್ಲಿ ಒಳ್ಳೆಯ ಹಣಕ್ಕೆ ಮಾರಾಟವಾಗುತ್ತದೆಯೋ ಅವರಿಂದಲೇ ನಿರ್ಮಾಪಕರು ಹಾಡಿಸುತ್ತಾರೆ. ಒಮ್ಮೆ ಆ ಗಾಯಕ/ಗಾಯಕಿಯ ಧ್ವನಿಯ ಮಾರುಕಟ್ಟೆ ಬಿದ್ದರೆ ಮತ್ತೂಬ್ಬ ಗಾಯಕನ ಬಳಿ ಹೋಗುತ್ತಾರೆ. ನಾನು ಆ ಕಮರ್ಷಿಯಲ್‌ ಪ್ರಪಂಚದ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ. ಅವಕಾಶ ಸಿಕ್ಕಾಗ ಅದನ್ನು ಚೆನ್ನಾಗಿಯೇ ಬಳಸಿಕೊಂಡಿದ್ದೇನೆ. ಅವಕಾಶದ ಹಿಂದೆ ನಾನು ಯಾವತ್ತೂ ಹೋಗಿಲ್ಲ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ಹಿನ್ನೆಲೆ ಗಾಯಕಿಯೇ ಆಗಬೇಕೆಂದಿಲ್ಲ. 

-ಖ್ಯಾತ ಗಾಯಕ ಸಂಗೀತ ಸಂಯೋಜಕ ಸಿ. ಅಶ್ವಥ್‌ ಅವರ ತಂಡದಲ್ಲಿ ಇದ್ದ ಅನುಭವದ ಬಗ್ಗೆ ಹೇಳಿ?
ಅವರ ತಂಡದಲ್ಲಿ ಕೆಲಸ ಮಾಡಿದ್ದ ದಿನಗಳು ನನ್ನ ಜೀವನದ ಒಳ್ಳೆಯ ದಿನಗಳು. ಪ್ರತಿಕ್ಷಣವೂ ನೆನೆಸಿಕೊಳ್ಳಬೇಕು ಆ ದಿನಗಳನ್ನು. ಅವರು ಉತ್ತಮ ಸಂಗೀತ ಸಂಯೋಜಕರಷ್ಟೇ ಅಲ್ಲ. ಬಹಳ ಒಳ್ಳೆಯ ವ್ಯಕ್ತಿ ಕೂಡ ಹೌದು. ಒಂದು ಕ್ಷಣವೂ ಅವರು ಸೈಲೆಂಟ್‌ ಆಗಿ ಕೂರುತ್ತಲೇ ಇರುತ್ತಿರಲಿಲ್ಲ. ಪಾದರಸದಂತೆ ಚಟುವಟಿಕೆಯಿಂದ ಇರುತ್ತಿದ್ದ ವ್ಯಕ್ತಿ ಅವರು. 

– ಅಶ್ವಥ್‌ ಅವರ ನಾಯಕತ್ವದಲ್ಲಿ “ಕನ್ನಡವೇ ಸತ್ಯ’ ಕಾರ್ಯಕ್ರಮ ಭಾರಿ ಯಶಸ್ಸು ಪಡೆದ ಕಾರ್ಯಕ್ರಮವಾಗಿತ್ತು. ಅವರ ನಿಧನದ ನಂತರ ಆ ರೀತಿಯ ಪ್ರಯತ್ನಗಳು ನಡೆಯಲೇ ಇಲ್ವಲ್ಲಾ? 
ಪ್ರತಿಯೊಬ್ಬ ಕಲಾವಿದನಿಗೂ ಬೇರೆ ಬೇರೆ ಕನಸುಗಳಿರುತ್ತವೆ. ಕಲಾವಿದನಾಗಿ ಆಶ್ವಥ್‌ ಅವರಿಗೆ ದೊಡ್ಡ ದೊಡ್ಡ ಕನಸುಗಳು ಇದ್ದವು. ಅವುಗಳಲ್ಲಿ “ಕನ್ನಡವೇ ಸತ್ಯ’ ಒಂದು. ಲಕ್ಷಾಂತರ ಜನರನ್ನು ಅರಮನೆ ಮೈದಾನದಲ್ಲಿ ಸೇರಿಸಿ ಕಾರ್ಯಕ್ರಮ ನೀಡುವುದು ಅವರ ದೊಡ್ಡ ಕನಸಾಗಿತ್ತು. ಸಾಕಷ್ಟು ಶ್ರಮ ವಹಿಸಿ ಆ ಕಾರ್ಯಕ್ರಮವನ್ನು ರೂಪಿಸಿ, ಅದನ್ನು ಯಶಸ್ವಿಯಾಗಿಸಿದರು ಕೂಡ. ಆದರೆ ಅಂಥದ್ದೇ ಕನಸು ಬೇರೆಯವರಿಗೂ ಇರಬೇಕೆಂದಿಲ್ಲ. ಆದರೆ ಖಂಡಿತವಾಗಿಯೂ ಎಲ್ಲಾ ಕಲಾವಿದರೂ ನಮ್ಮ ನಮ್ಮ ಗುರಿಯೆಡೆಗೆ ಸಾಗುತ್ತಿದ್ದೇವೆ. 

Advertisement

– ನಿಮ್ಮ “ತಾಯವ್ವ’ ನಾಟಕ ಅಪರೂಪದ ಪ್ರಯತ್ನವಾಗಿತ್ತು. ಅದರ ಬಗ್ಗೆ ಹೇಳುತ್ತೀರಾ?
ಕೇಂದ್ರ ಸರ್ಕಾರ ಕೈಮಗ್ಗ ಸೇರಿ ಹಲವಾರು ಹ್ಯಾಂಡ್‌ಮೇಡ್‌ ವಸ್ತುಗಳ ಮೇಲೆ ಶೇ. 12ರಷ್ಟು ತೆರಿಗೆ ವಿಧಿಸಿರುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ಹೋರಾಟಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡುವ ನಿಟ್ಟಿನಲ್ಲಿ ರಂಗಕರ್ಮಿ ಪ್ರಸನ್ನ ಅವರು “ತಾಯವ್ವ’ ನಾಟಕ ರಚಿಸಿದರು. ನನಗೆ ಹಾಡುಗಳನ್ನು ಸಂಯೋಜಿಸಿ, ತಾಯವ್ವನ ಪಾತ್ರ ನಿರ್ವಹಿಸುವಂತೆ ಕೇಳಿದರು. ಪ್ರಸನ್ನ  ನಮ್ಮ ದೇಶದ ಅತ್ಯುತ್ತಮ ರಂಗಕರ್ಮಿಗಳಲ್ಲಿ ಒಬ್ಬರು. ಅವರ ಜೊತೆ ನಾನು ಯಾವತ್ತೂ ಕೆಲಸ ಮಾಡಿರಲಿಲ್ಲ. ಅವರ ಜೊತೆ ಕೆಲಸ ಮಾಡುವ ಕಾರಣಕ್ಕಾಗಿಯೇ ನಾನಿದನ್ನು ಒಪ್ಪಿಕೊಂಡೆ. ಹಾಗಾಗಿ ಹೋರಾಟದ ಭಾಗವೂ ಆದೆ. ಇದು ಸಂಗೀತಮಯ ನಾಟಕ. ಕಷ್ಟ, ಸುಖ, ನೋವು ಎಲ್ಲವನ್ನೂ ಸಂಗೀತದ ಮೂಲಕವೇ ಹೇಳುವಂಥ ರಚನೆ. ಈ ನಾಟಕದುದ್ದಕ್ಕೂ ನಾನು ಹಾಡುತ್ತಲೇ ಅಭಿನಯಿಸಿದ್ದೇನೆ. ನನ್ನ ರಂಗಭೂಮಿ ಜೀವನದಲ್ಲಿ ಇದು ವಿಭಿನ್ನ ಪ್ರಯತ್ನ. ಹಾಗೆ ನೋಡಿದರೆ ತಾಯವ್ವ ನಾಟಕವನ್ನು ರಂಗಕರ್ಮಿ ಪ್ರಸನ್ನ ಅವರು  1978-79ರಲ್ಲಿಯೇ “ಸಮುದಾಯ’ ರಂಗತಂಡದಿಂದ ಪ್ರಸ್ತುತ ಪಡಿಸಿದ್ದರು. ಅದು ರಷ್ಯಾದ ಬರಹಗಾರ ಮಾಕ್ಸಿಮ್‌ ಗಾರ್ಕಿ “ಮದರ್‌’ ಕಾದಂಬರಿಯಿಂದ ಪ್ರೇರಣೆ ಪಡೆದ ರಚನೆ. ಈಗ ಮೂಲ ನಾಟಕದಲ್ಲಿ ಮತ್ತಷ್ಟು ಬದಲಾವಣೆ ಮಾಡಿ, ಕೈಮಗ್ಗದ ಮೇಲೆ ಜಿಎಸ್‌ಟಿ ವಿಧಿಸಿದ್ದನ್ನು ವಿರೋಧಿಸುವ ಹೋರಾಟಕ್ಕೆ ಬಳಸಿಕೊಂಡಿದ್ದಾರೆ. 

-ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಯೋಚನೆ ಏನಾದರೂ ಇದೆಯಾ?
ಸದ್ಯದಲ್ಲೇ ಒಂದು ಚಲನಚಿತ್ರ ನಿರ್ದೇಶಿಸಲಿದ್ದೇನೆ. ಅದರ ಚಿತ್ರಕಥೆ ಬರೆಯುವುದರಲ್ಲಿ ತೊಡಗಿದ್ದೇನೆ. 

-ಬಿಡುವಿನ ಸಮಯದಲ್ಲಿ ಏನು ಮಾಡ್ತೀರಾ?
ಬಿಡುವಿನ ಸಮಯ ಅಂತ ಸಿಗುವುದೇ ಇಲ್ಲ. ಏಕೆಂದರೆ ಎಲ್ಲಾ ಸಮಯದಲ್ಲೂ ಸಂಗೀತಾಭ್ಯಾಸ ನಡೆಯುತ್ತಲೇ ಇರುತ್ತದೆ. ಸಂಗೀತಗಾರರು ಎಷ್ಟೇ ಎತ್ತರಕ್ಕೆ ಹೋದರೂ ಸಂಗೀತಾಭ್ಯಾಸ ನಿಲ್ಲಿಸುವಂತಿಲ್ಲ. ಮನೆಯಲ್ಲಿರುವಾಗ ಹಾಡುತ್ತಾ ಇರ್ತೇನೆ. ಗಟ್ಟಿಯಾಗಿ ಹಾಡಿಕೊಳ್ಳಲು ಅವಕಾಶ ಇಲ್ಲದಿರುವಾಗ ಮನಸ್ಸಲ್ಲೇ ಯಾವುದಾದರೂ ರಾಗದ ಲೆಕ್ಕಾಚಾರ ನಡೆದಿರುತ್ತದೆ. ಚಿಕ್ಕವಯಸ್ಸಿನಲ್ಲಿ 3 ರಿಂದ 4 ಗಂಟೆಗಳ ಕಾಲ ಕಠಿಣ ಅಭ್ಯಾಸ ಮಾಡುತ್ತಿದ್ದೆ. ಈಗ ಅಷ್ಟೊಂದು ಸಮಯ ಸಿಗುವುದಿಲ್ಲ.

-ಹೆಣ್ಣು ಮಕ್ಕಳು ಸವಾಲು ಮೀರಿ ಮುನ್ನಡೆಯಲು ನಿಮ್ಮ ಸಂದೇಶ ಏನು?
ಹೆಣ್ಣು ಮಕ್ಕಳಿಗೆ ಎಲ್ಲಾ ಕ್ಷೇತ್ರದಲ್ಲೂ ತೊಡಕುಗಳು ಇರುತ್ತವೆ. ಅದಕ್ಕೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರಬೇಕು. ಆಗ ಯಾವುದಾದರೂ ಒಂದು ಬಾಗಿಲು ನಮಗಾಗಿ ತೆರೆದುಕೊಳ್ಳುತ್ತದೆ. ಛಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದು ತಿಳಿದಿರಬೇಕು. ನನ್ನ ಕೈಲಿ ಇಷ್ಟೇ ಆಗುವುದು ಎಂದು ಕೆಲಸದಿಂದ ಹಿಂದೆ ಸರಿದರೆ ಏನೂ ಸಾಧಿಸಲು ಸಾಧ್ಯವಿಲ್ಲ.

-ನಿಮ್ಮ ಊಟ, ತಿಂಡಿ ಹೇಗಿರುತ್ತದೆ?
ನಾನು ಅಡುಗೆ ಮಾಡಲ್ಲ. ಆದರೆ ನನಗೆ ಇಂಥದ್ದೇ ಅಡುಗೆ ಬೇಕು ಅಂತೇನೂ ಇಲ್ಲ. ಏನು ಕೊಟ್ಟರೂ ತಿನ್ನುತ್ತೇನೆ. ಬೆಳಗ್ಗೆ ತಿಂಡಿಗೆ ಬ್ರೆಡ್‌ ಕೊಟ್ಟರೂ ತಕರಾರು ಮಾಡದೇ ತಿನ್ನುತ್ತೇನೆ. ಆಗ್ಗಾಗ್ಗೆ ಹೊರದೇಶ, ಹೊರರಾಜ್ಯಗಳಿಗೆ ಪ್ರವಾಸ ಮಾಡುವುದರಿಂದ ಎಲ್ಲಾ ಬಗೆಯ, ಶೈಲಿಯ ಆಹಾರ ಪದ್ಧತಿಗಳಿಗೂ ನಾನು ಒಗ್ಗಿ ಹೋಗಿದ್ದೇನೆ. 

-ಮನೆಯಲ್ಲಿ ಸಹಕಾರ ಹೇಗಿದೆ? 
ನನ್ನ ಪತಿ ಕೂಡ ಕಲಾವಿದರೇ. ನನ್ನ ತವರು ಮನೆ ಮತ್ತು ಪತಿಯ ಮನೆಯಲ್ಲಿ ಸದಾ ಕಲಾಮಯ ವಾತಾವರಣವೇ ಇರುತ್ತದೆ. ನನ್ನ ಸಾಧನೆಗೆ ಎರಡೂ ಮನೆಯಿಂದ ಪ್ರೋತ್ಸಾಹ ಮತ್ತು ಸಹಕಾರ ಸಿಗುತ್ತದೆ. ಎಲ್ಲರೂ ನನ್ನ ಬ್ಯುಸಿ ಶೆಡ್ನೂಲ್‌ನ ಅರ್ಥ ಮಾಡಿಕೊಳ್ಳುತ್ತಾರೆ. 

ಸುಗಮ  ಸಂಗೀತಕ್ಕೆ ಈಗಲೂ ಮುಂಚಿನಷ್ಟು ಕೇಳುಗರು ಇದ್ದಾರಾ ಅಂತ ಕೆಲವರು ಕೇಳುತ್ತಾರೆ. ಒಳ್ಳೆಯ ಕವಿತೆಗಳನ್ನು ಕೇಳುವವರು ಎಲ್ಲಾ ಕಾಲದಲ್ಲೂ ಇರುತ್ತಾರೆ ಎಂಬುದು ನನ್ನ ನಂಬಿಕೆ. ನಾನು ನೀಡುವ ಕಾರ್ಯಕ್ರಮಗಳಲ್ಲಿ ಬಹಳಷ್ಟು ಜನರು ಅವರಿಷ್ಟದ ಕವಿತೆಗಳನ್ನು ರಿಕ್ವೆಸ್ಟ್‌ ಮಾಡಿ ಹಾಡಿಸುತ್ತಾರೆ. ನನ್ನ ಜೊತೆ ಅವರೂ ಹಾಡ್ತಾರೆ. ಅದನ್ನು ನೋಡಿದಾಗ ತುಂಬಾ ಖುಷಿಯಾಗುತ್ತೆ.

ಇವತ್ತಿನ ಗಾಯಕರಿಗೆ ವೇದಿಕೆಗಳು ಸಾಕಷ್ಟಿವೆ. ಆದರೆ ಕಲಿಕೆ ಕಡಿಮೆಯಾಗಿದೆ. ಸಾಧನೆಗೆ ಹೆಚ್ಚಿನ ಸಮಯ ಅವರು ನೀಡುತ್ತಿಲ್ಲ.

ನನಗೆ ಇಂಥದ್ದೇ ಅಡುಗೆ ಬೇಕು ಅಂತೇನೂ ಇಲ್ಲ. ಏನು ಕೊಟ್ಟರೂ ತಿನ್ನುತ್ತೇನೆ. ಬೆಳಗ್ಗೆ ತಿಂಡಿಗೆ ಬ್ರೆಡ್‌ ಕೊಟ್ಟರೂ ತಕರಾರು ಮಾಡದೇ ತಿನ್ನುತ್ತೇನೆ. 

ಚೇತನ. ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next