Advertisement

ಸಂಚಾರಿಯ ತುಂಟತನ…

06:00 AM Aug 03, 2018 | |

” ಈ ಚಿತ್ರ ಬೇರೆ ಲೋಕಕ್ಕೆ ಕರೆದೊಯ್ಯುತ್ತೆ…’

Advertisement

ಸಂಚಾರಿ ವಿಜಯ್‌ ತುಂಬಾ ವಿಶ್ವಾಸದಿಂದ ಹೇಳಿಕೊಂಡರು. ಅವರು ಹಾಗೆ ಹೇಳಿಕೊಂಡಿದ್ದು ತಮ್ಮ “ಪಾದರಸ’ ಚಿತ್ರದ ಬಗ್ಗೆ. ಆಗಸ್ಟ್‌ 10 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಹೇಳಿಕೊಳ್ಳಲೆಂದೇ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಮೊದಲಿಗೆ ಮಾತಿಗಿಳಿದ ಸಂಚಾರಿ ವಿಜಯ್‌, “ಇಲ್ಲಿ ಪೋಲಿತನವಿದೆ, ತುಂಟತನವಿದೆ. ಇವೆಲ್ಲದರ ಜೊತೆಗೊಂದು ಒಳ್ಳೆಯ ಸಂದೇಶವೂ ಇದೆ. ನನಗೆ ಸಿಕ್ಕ ಮೊದಲ ಪಕ್ಕಾ ಕಮರ್ಷಿಯಲ್‌ ಸಿನಿಮಾ ಇದು. ಹಾಸ್ಯ ಹೆಚ್ಚಾಗಿದೆ, ಡಬ್ಬಲ್‌ ಮೀನಿಂಗ್‌ ಛಾಯೆ ಇದೆಯಾದರೂ, ಎಲ್ಲೂ ಅಸಹ್ಯ ಹುಟ್ಟಿಸುವುದಿಲ್ಲ. ಫೈಟ್‌ ಬಿಟ್ಟರೆ ಇಲ್ಲಿ ಅಪ್ಪಟ ಮನರಂಜನೆಗೆ ಮೋಸವಿಲ್ಲ. ವಿನಾಕಾರಣ ಹೊಡೆದಾಟವನ್ನು ತುರುಕುವುದು ಬೇಡ ಎಂಬ ಕಾರಣಕ್ಕೆ ಅದರ ಗೋಜಿಗೆ ಹೋಗಿಲ್ಲ. ಸಮಾಜದಲ್ಲಿ ಎಲ್ಲರಲ್ಲೂ ಒಳ್ಳೆಯದು, ಕೆಟ್ಟದ್ದು ಇರುತ್ತೆ. ಆದರೆ, ಕೆಟ್ಟ ಗುಣ ತೋರಿಸಿಕೊಳ್ಳದೆ, ಒಳ್ಳೆಯ ಗುಣವನ್ನಷ್ಟೇ ತೋರಿಸುತ್ತಾರೆ. ಆದರೆ, ಅದು ಗೊತ್ತಾಗಲ್ಲ. ಜೊತೆಯಲ್ಲಿದ್ದುಕೊಂಡೇ, ಯಾಮಾರಿಸೋ ವ್ಯಕ್ತಿಗಳಿಂದ ಹೇಗೆಲ್ಲಾ ಇರಬೇಕು ಎಂಬ ಸಾರಾಂಶ ಈ ಚಿತ್ರದಲ್ಲಿದೆ. ಚಿತ್ರ ನೋಡಿದಾಗ, ಯಾರನ್ನ ಹೇಗೆ ನಂಬಬೇಕು ಎಂಬ ಪ್ರಶ್ನೆ ಕಾಡುವುದಂತೂ ನಿಜ. ಇಲ್ಲಿ ಹೊಸತನದ ನಿರೂಪಣೆ ಜೊತೆಗೆ ಕಚಗುಳಿ ಇಡುವ ಸಂಭಾಷಣೆಗಳೂ ಇವೆ. ಮೊದಲರ್ಧ ಒಂದು ರೀತಿಯ ಜರ್ನಿ ಇದ್ದರೆ, ದ್ವಿತಿಯಾರ್ಧ ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುತ್ತದೆ’ ಎಂಬುದು ಸಂಚಾರಿ ವಿಜಯ್‌ ಮಾತು.

ನಿರ್ದೇಶಕ ಹೃಷಿಕೇಶ್‌ ಜಂಬಗಿ ಅವರಿಗೆ ಇದು ಮೊದಲ ಚಿತ್ರ. ವಾಸ್ತವತೆಯ ಚಿತ್ರಣವನ್ನು ಕಟ್ಟಿಕೊಟ್ಟಿರುವ ಖುಷಿ ಅವರದು. ಇಲ್ಲಿ ಕಥೆಗೆ ತಕ್ಕ ಮಾತುಗಳಿವೆ, ಅದರಲ್ಲಿ ಪೋಲಿತನವಿದೆ ನಿಜ. ಹಾಗಂತ ಎಲ್ಲೂ ಅಶ್ಲೀಲ ಎನಿಸುವುದಿಲ್ಲ. ಆ ಮಾತುಗಳ ಹಿಂದೆ ಸತ್ಯಾಂಶವೂ ಇರಲಿದೆ. ಸೋಮರಸ, ರಾಮರಸ ಸೇರಿದಂತೆ ನವರಸಗಳೆಲ್ಲವೂ ಸೇರಿ ಈ “ಪಾದರಸ’ ಆಗಿದೆ’ ಎನ್ನುತ್ತಾರೆ ನಿರ್ದೇಶಕರು.

ನಿರ್ಮಾಪಕ ಕೃಷ್ಣ ರೇವಣ್‌ಕರ್‌ ಅವರಿಗೆ ಒಂದೊಳ್ಳೆಯ ಚಿತ್ರ ಮಾಡಿರುವ ತೃಪ್ತಿ ಇದೆ. ನಿರ್ದೇಶಕರು ಕಥೆ ಹೇಳಿದಂತೆಯೇ ಚಿತ್ರ ಮಾಡಿರುವುದರಿಂದ, ಅವರಿಗೆ ಎಲ್ಲೂ ಇದು ಹೊಸ ನಿರ್ದೇಶಕನ ಸಿನಿಮಾ ಅಂತ ಅನಿಸಿಲ್ಲವಂತೆ. ಒಂದು ಶುದ್ಧ ಮನಸ್ಸಿನಿಂದ ಮಾಡಿರುವ “ಪಾದರಸ’ ನವರಸಗಳನ್ನು ಮೀರಿಸುವಂಥದ್ದು ಎನ್ನುತ್ತಾರೆ ನಿರ್ಮಾಪಕರು.

ಇನ್ನು, ಚಿತ್ರದ ನಾಯಕಿ ವೈಷ್ಣವಿಗೆ ಈ ಚಿತ್ರ ಹೊಸ ಇಮೇಜ್‌ ತಂದುಕೊಡುವ ನಂಬಿಕೆ ಇದೆಯಂತೆ. ಅವರಿಲ್ಲಿ ಮುಗ್ಧ ಹುಡುಗಿಯಾಗಿ, ಅಪ್ಪ,ಅಮ್ಮನ ಮೇಲೆ ಭಕ್ತಿ ತೋರುವಂತಹ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಮತ್ತೂಬ್ಬ ನಾಯಕಿ ಮನಸ್ವಿನಿಗೆ ಇಲ್ಲೊಂದು ಹೊಸ ಪಾತ್ರ ಸಿಕ್ಕಿದ್ದು, ಅವರಿಗೂ ಚಿತ್ರ ಗುರುತಿಸಿಕೊಳ್ಳುವಂತೆ ಮಾಡಲಿದೆ ಎಂಬ ನಂಬಿಕೆ. ಛಾಯಾಗ್ರಾಹಕ ಎಂ.ಬಿ.ಅಳ್ಳಿಕಟ್ಟೆ ಚಿತ್ರ ಮೂಡಿಬಂದ ಬಗ್ಗೆ ಹೇಳಿಕೊಂಡರು. ಸಹ ನಿರ್ಮಾಪಕ ಪ್ರಕಾಶ್‌, ಕಲಾವಿದ ಅಬ್ಸಲ್‌ ಇತರರು ಮಾತನಾಡಿದರು. ಎ.ಟಿ.ರವೀಶ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next