Advertisement

ನಗರದ ಒಳರಸ್ತೆಗಳಲ್ಲಿ  ಗುಂಡಿಗಳದ್ದೇ ಸಾಮ್ರಾಜ್ಯ

11:20 AM Jun 17, 2018 | Team Udayavani |

ಮಹಾನಗರ: ಮಂಗಳೂರು ಸ್ಮಾರ್ಟ್‌ ಸಿಟಿಯಾಗಲು ಆಯ್ಕೆಗೊಂಡರೂ ಇಲ್ಲಿನ ಮೂಲಸೌಕರ್ಯ ಅಗತ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸ್ಥಳೀಯಾಡಳಿತ, ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂಬುದಕ್ಕೆ ನಗರದ ಒಳರಸ್ತೆಗಳೇ ಸಾಕ್ಷಿ. ಮಳೆಗಾಲ ಆರಂಭವಾಗಿ ಕೆಲವೇ ದಿನಗಳಾಗಿವೆ. ಆದರೆ ನಗರದಿಂದ ಒಳರಸ್ತೆಗಳ ಮೂಲಕ ಸಾಗಿದರೆ ಮಳೆಗಾಲ ಆರಂಭವಾಗಿ ಅದೆಷ್ಟೋ ತಿಂಗಳುಗಳಾಗಿವೆ ಎನ್ನುವ ಯೋಚನೆ ನಮ್ಮಲ್ಲಿ ಬಾರದೆ ಇರದು. ಏಕೆಂದರೆ ಬಹುತೇಕ ಒಳರಸ್ತೆಗಳು ಗುಂಡಿ ಬಿದ್ದಿವೆ.

Advertisement

ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿದು ಗುಂಡಿಗಳು ಉದ್ಭವಿಸಿದೆ. ಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡವಂತಾಗಿದೆ. ಈ ಬಗ್ಗೆ ಜನ ಪ್ರತಿನಿಧಿಗಳಲ್ಲಿ ಅಲವತ್ತುಗೊಂಡರೆ ಮಳೆಗಾಲದಲ್ಲಿ ಇದೆಲ್ಲ ಸಹಜ ಎನ್ನುವ ಉದ್ಧಟತನದ ಉತ್ತರ ಸಿಗುತ್ತದೆ. ಇದರಿಂದ ಜನಸಾಮಾನ್ಯರು ತಮ್ಮ ಸಮಸ್ಯೆಗಳ ಕುರಿತಂತೆ ಯಾರಲ್ಲಿ ದೂರು ನೀಡುವುದು ಎಂದು ತಿಳಿಯದೆ ಅಸಹಾಯಕರಾಗಿದ್ದಾರೆ.

ಕುದ್ರೋಳಿ, ಬೋಳಾರ, ಮಠದ ಕಣಿ, ಇನ್ಫೋಸಿಸ್‌, ಮರೋಳಿ, ಕಂಕನಾಡಿ ಬಸ್‌ ನಿಲ್ದಾಣ, ಮಂಗಳಾದೇವಿಯ, ಬಿಜೈ, ಬೋಂದೆಲ್‌ ಸೇರಿದಂತೆ ನಗರದ ಬಹುತೇಕ ಒಳರಸ್ತೆಗಳು ಗುಂಡಿಗಳಿಂದ ಆವೃತಗೊಂಡಿವೆ.

ಕಾಮಗಾರಿಯಿಂದಲೇ ಗುಂಡಿ
ಮಳೆಗಾಲ ಆರಂಭವಾಗುತ್ತಿದ್ದಂತೆ ಬಹುತೇಕ ರಾಷ್ಟ್ರೀಯ ಹೆದ್ದಾರಿ, ಮುಖ್ಯ ರಸ್ತೆಗಳು ಮಾತ್ರವಲ್ಲ ಸರ್ವೀಸ್‌ ರಸ್ತೆಗಳು ಗುಂಡಿಗಳಿಂದ ಆವೃತಗೊಂಡಿವೆ. ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎಂಬುದು ಒಂದುವಾದರೆ, ಮಳೆಗಾಲ ಆರಂಭಕ್ಕೂ ಮುನ್ನ ಸ್ಥಳೀಯಾಡಳಿತ ನಡೆಸಿದ ಕಾಮಗಾರಿಗಳೇ ರಸ್ತೆಗಳಲ್ಲಿ ಗುಂಡಿ ಬೀಳಲು ಮುಖ್ಯ ಕಾರಣ ಎನ್ನುವ ವಾದವೂ ಇದೆ. ಬೋಳಾರ, ಕುದ್ರೋಳಿಯ ಕೆಲವು ಭಾಗಗಳಲ್ಲಿ ಮಳೆಗಾಲಕ್ಕೂ ಮುನ್ನವೇ ಚರಂಡಿ ಸೇರಿದಂತೆ ಇನ್ನಿತರ ಕಾಮಗಾರಿಗಾಗಿ ಮಣ್ಣು ಅಗೆದು ಹಾಕಿದ್ದಾರೆ. ಇದರಿಂದ ನೀರು ಹೋಗಲು ಜಾಗವಿಲ್ಲದೆ ರಸ್ತೆಗಳಲ್ಲಿ ಗುಂಡಿಗಳಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚರಂಡಿಗಳಲ್ಲಿ ಎದ್ದಿದೆ ಪೊದೆಗಳು
ಇನ್ನು ಕೆಲವು ಭಾಗಗಳಲ್ಲಿ ಚರಂಡಿಗಳಲ್ಲಿ ಪೊದೆಗಳೇ ಎದ್ದಿದ್ದು, ಅದನ್ನು ಸ್ವಚ್ಛಗೊಳಿಸಲು ಪಾಲಿಕೆ ವಿಫಲವಾಗಿದೆ. ಚರಂಡಿಗಳ ಹೂಳೆತ್ತುವಿಕೆ, ಸ್ವಚ್ಛಗೊಳಿಸುವುದರಲ್ಲಿ ಪಾಲಿಕೆ ತೋರುತ್ತಿರುವ ನಿರಾಸಕ್ತಿಯಿಂದ ಮಳೆಗಾಲದಲ್ಲಿ ಸಾಮಾನ್ಯ ಜನರು ಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಸುರತ್ಕಲ್‌ನ ತಡಂಬೈಲಿನ ಚರಂಡಿಯನ್ನು ಐದು ವರ್ಷಗಳಿಂದ ಸ್ವತ್ಛಗೊಳಿಸಿಲ್ಲ. ಪ್ರತಿ ವರ್ಷವೂ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ದೂರು ಕೊಟ್ಟರೂ ಕೇಳುವವರೇ ಇಲ್ಲ ಎನ್ನುವುದು ಈ ಭಾಗದ ಜನರ ಅಳಲು.

Advertisement

ಘನವಾಹನಗಳ ಸಂಚಾರದಿಂದ ಇನ್ನಷ್ಟು ಗುಂಡಿ
ಕುದ್ರೋಳಿ, ಬಂದರು ಸೇರಿದಂತೆ ಕೆಲವು ಭಾಗಗಳಲ್ಲಿ ಗುಜರಿ ಸಾಮನು, ಮೀನು ಸೇರಿದಂತೆ ಇತರ ಸಾಮನುಗಳನ್ನು ಕೊಂಡೊಯ್ಯುವ ಲಾರಿಗಳು ಓಡಾಟ ನಡೆಸುವುದರಿಂದ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗುತ್ತಿವೆ. ಅನಿವಾರ್ಯ ಸ್ಥಳಗಳಲ್ಲಿ ಹೊರತುಪಡಿಸಿ ಇನ್ನುಳಿದ ಒಳರಸ್ತೆಗಳಲ್ಲಿ ಘನ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ಬೋಳಾರದ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಚರಂಡಿ ಸ್ವಚ್ಛಗೊಳಿಸುವುದೇ ಸೂಕ್ತ ದಾರಿ
ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ಹರಿಯುವುದು ಸೇರಿದಂತೆ ಬಹುತೇಕ ಸಮಸ್ಯೆಗಳ ಪರಿಹಾರಕ್ಕೆ ಮಳೆಗಾಲ ಆರಂಭವಾಗುವ ಮುನ್ನವೇ ಚರಂಡಿಗಳನ್ನು ಸ್ವಚ್ಛಗೊಳಿಸುವುದೊಂದೆ ಪರಿಹಾರ.
 - ಶಿವರಾಮ್‌
    ಸುರತ್ಕಲ್‌

ಮಳೆ ಬಂದ ಮೇಲೆ ಕಾಮಗಾರಿ ಯೋಚನೆ
ಮಳೆಗಾಲ ಆರಂಭವಾದ ಬಳಿಕ ರಸ್ತೆ, ಚರಂಡಿ ಕಾಮಗಾರಿಗಳನ್ನು ಆರಂಭಿಸುತ್ತಾರೆ. ಇದರಿಂದ ಸ್ಥಳೀಯರು, ವಾಹನ ಸವಾರರು ತೊಂದರೆ ಅನುಭವಿಸುತ್ತಾರೆ. ಯಾವುದೇ ಕಾಮಗಾರಿ ನಡೆಸಬೇಕಾದರೆ ಸೂಕ್ತ ಯೋಜನೆ ರೂಪಿಸಬೇಕು.
 - ಲಕ್ಷ್ಮಮ್ಮ
ಕುದ್ರೋಳಿ ನಿವಾಸಿ

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next