Advertisement

ಸ್ಟೀಲ್‌ ಬ್ರಿಡ್ಜ್ ವಿರುದ್ಧ ಲೋಕಾಕ್ಕೆ ದೂರು: ಸಂಸದ 

11:55 AM Feb 14, 2017 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ಸರ್ಕಾರ ನಿರ್ಮಿಸಲು ನಿರ್ಧರಿಸಿರುವ ವಿವಾದಾತ್ಮಕ ಸ್ಟೀಲ್‌ ಬ್ರಿಡ್ಜ್ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ ಹೊರಹೊಮ್ಮುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ. 

Advertisement

“ಸ್ಟೀಲ್‌ಬ್ರಿಡ್ಜ್ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾದಾಗ ಸಂಸದನಾಗಿ, ಬೆಂಗಳೂರು ನಿವಾಸಿಯಾಗಿ ನಾನು ಮೊದಲೇ ವಿರೋಧಿಸಿದ್ದೆ. ಉತ್ತರ ಪ್ರದೇಶದ ಚುನಾವಣೆಗೆ ಹಣ ಹೊಂದಿಸಿಕೊಳ್ಳುವ ಉದ್ದೇಶದಿಂದ ಸ್ಟೀಲ್‌ ಬ್ರಿಡ್ಜ್ ನಿರ್ಮಾಣಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದೆ. ಅದೀಗ ಗೋವಿಂದರಾಜು ಡೈರಿಯಲ್ಲಿ ದಾಖಲಾದ ಮಾಹಿತಿಯಿಂದ ಬಯಲಾಗಿದೆ,” ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಸ್ಟೀಲ್‌ ಬ್ರಿಡ್ಜ್ ನಿರ್ಮಾಣದ ಹಿಂದಿನ ಉದ್ದೇಶ, ನೂರಾರು ಮರಗಳನ್ನು ಕಡಿಯುವುದರಿಂದ ಪರಿಸರಕ್ಕೆ ಆಗುವ ಹಾನಿ, ಅವೈಜ್ಞಾನಿಕ ಯೋಜನೆ ಮುಂತಾದವುಗಳ ಬಗ್ಗೆ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ನ ಹಸಿರು ನ್ಯಾಯಪೀಠದ ಮುಂದೆ ಹೋರಾಡಿದ್ದನ್ನು, ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದ್ದನ್ನು ಇದೇ ಸಂದರ್ಭದಲ್ಲಿ ರಾಜೀವ್‌ ಚಂದ್ರಶೇಖರ್‌ ಪ್ರಸ್ತಾಪಿಸಿದ್ದಾರೆ. 

“ಸ್ಟೀಲ್‌ ಫ್ಲೈಓವರ್‌ಬೇಡ ಎಂಬ ನಾಗರಿಕರ ಧ್ವನಿಗೆ ಬೆಂಬಲ ಸೂಚಿಸಿದ ಮೊದಲ ವ್ಯಕ್ತಿ ನಾನೇ. ಸ್ಟೀಲ್‌ ಫ್ಲೈಓವರ್‌ ನಿರ್ಮಿಸಲು ಹಣ ಪಡೆದಿದ್ದಾರೆ ಎಂದು ಹಿಂದೆ ಆರೋಪಿಸಿದ್ದೆ. ಇದೀಗ ಬಿ.ಎಸ್‌. ಯಡಿಯೂರಪ್ಪ ಬಹಿರಂಗಪಡಿಸಿದ್ದು, ತಮ್ಮ ಆರೋಪಕ್ಕೆ ಪುಷ್ಟಿ ಸಿಕ್ಕಿದೆ,” ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next