Advertisement

ಸ್ಥಾಯಿ ಸಮಿತಿಗೆ ಆಯೋಗ

07:24 AM Jan 03, 2018 | Team Udayavani |

ನವದೆಹಲಿ: ವಿವಾದಾತ್ಮಕ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ವಿಧೇಯಕವನ್ನು ಕೇಂದ್ರ ಸರ್ಕಾರವು ಸಂಸತ್‌ನ ಸ್ಥಾಯಿ ಸಮಿತಿಗೆ ಒಪ್ಪಿಸಲು ನಿರ್ಧರಿಸಿದ ಕಾರಣ, ಮಂಗಳವಾರ 12 ಗಂಟೆ ಕಾಲ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಡಾಕ್ಟರ್‌ಗಳು ಮಧ್ಯಾಹ್ನಕ್ಕೇ ಕೈಬಿಟ್ಟು ಕರ್ತವ್ಯಕ್ಕೆ ಮರಳಿದ್ದಾರೆ. ಇಷ್ಟಾದರೂ ದೇಶಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ
ತಪಾಸಣಾ ವಿಭಾಗ (ಒಪಿಡಿ)ದ ಸೇವೆಯಲ್ಲಿ ಆಂಶಿಕ ವ್ಯತ್ಯಯ ಉಂಟಾಯಿತು.

Advertisement

ಲೋಕಸಭೆಯಲ್ಲಿ ಮಂಗಳವಾರ ಆಯೋಗ ರಚನೆ ವಿಚಾರ ಪ್ರಸ್ತಾಪಗೊಂಡಿತು. ಈ ಬಗ್ಗೆ ಹೇಳಿಕೆ ನೀಡಿದ ಕೇಂದ್ರ ಸಂಸದೀಯ
ವ್ಯವಹಾರಗಳ ಸಚಿವ ಅನಂತ ಕುಮಾರ್‌, “ಪ್ರತಿಪಕ್ಷಗಳು ಮತ್ತು ಎನ್‌ಡಿಎ ಅಂಗಪಕ್ಷಗಳ ಸಲಹೆ ಮೇರೆಗೆ ಕೇಂದ್ರ ಸರ್ಕಾರ
ವಿಧೇಯಕವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸಂಬಂಧಿಸಿದ ಸಂಸತ್‌ನ ಸ್ಥಾಯಿ ಸಮಿತಿಗೆ ಒಪ್ಪಿಸಲು ನಿರ್ಧರಿಸಿದೆ. ಸರ್ಕಾರವೂ ಅದೇ ಅಭಿಪ್ರಾಯ ಹೊಂದಿದೆ’ ಎಂದರು. ಅದಕ್ಕೆ ಪೂರಕವಾಗಿ ಹೇಳಿಕೆ ನೀಡಿದ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಮಾಸಾಂತ್ಯಕ್ಕೆ ಆರಂಭವಾಗಲಿರುವ ಬಜೆಟ್‌ ಅಧಿವೇಶನದ ಒಳಗಾಗಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿದರು. ಸಾಮಾನ್ಯವಾಗಿ ಸ್ಥಾಯಿ ಸಮಿತಿಗಳಿಗೆ ವಿಧೇಯಕವನ್ನು ಒಪ್ಪಿಸಿದರೆ ಮೂರು ತಿಂಗಳ ಗಡುವು ನೀಡಿ ವರದಿ ನೀಡಲು ಸೂಚಿಸಲಾಗುತ್ತದೆ. ಆದರೆ ಈ ವಿಚಾರಕ್ಕೆ ಮಾತ್ರ ಕೇವಲ ಮೂರು ವಾರಗಳ ಅವಕಾಶ ನೀಡಲಾಗಿದೆ.

ರಾಜ್ಯಸಭೆಯಲ್ಲಿ ಮಂಡನೆ: ಈ ನಡುವೆ ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ವಿಧೇಯಕವನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರ ಮತ್ತು ವೃತ್ತಿಯನ್ನು ಮತ್ತಷ್ಟು ಉತ್ತಮಪಡಿಸಲೆಂದೇ ಸರ್ಕಾರ ಇಂಥ ಕ್ರಮ ಕೈಗೊಂಡಿದೆ ಎಂದು ಸಮರ್ಥಿಸಿದ್ದಾರೆ.

ಆಂಶಿಕವಾಗಿ ತೊಂದರೆ: ಸರ್ಕಾರ ಘೋಷಣೆ ಮಾಡುವುದಕ್ಕಿಂತ ಮೊದಲು ಬೆಳಗ್ಗೆ 6 ಗಂಟೆಯಿಂದ ಡಾಕ್ಟರ್‌ಗಳು ಮುಷ್ಕರ ಆರಂಭಿಸಿದ್ದರು. ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದರು. ತುರ್ತು ಚಿಕಿತ್ಸೆ ಮತ್ತು
ಟ್ರಾಮಾ ವಿಭಾಗಗಳು ನಿಯಮಿತವಾಗಿ ಕಾರ್ಯವೆಸಗಿದವು. 

ಸಾರ್ವಜನಿಕರ ಆಕ್ರೋಶ: ದೇಶದ ಹಲವು ಭಾಗಗಳಲ್ಲಿ ವೈದ್ಯರ ಮುಷ್ಕರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮುಷ್ಕರದ ನಿರ್ಧಾರ ವೈದ್ಯ ಸಮುದಾಯದ ಬೇಜವಾಬ್ದಾರಿ ಕ್ರಮ ಎಂದು ವೃದ್ಧರೊಬ್ಬರು ತಿರುವನಂತಪುರದಲ್ಲಿ 
ಟೀಕಿಸಿದ್ದರು.

Advertisement

ಸರ್ಕಾರದ ಕ್ರಮ ಸರಿಯಾದದ್ದು: ಡಾ.ದೇವಿ ಶೆಟ್ಟಿ: ಖಾಸಗಿ ವೈದ್ಯರು ಆಯೋಗ ರಚನೆ ಕ್ರಮ ವಿರೋಧಿಸಿ ಮುಷ್ಕರ ನಡೆಸಿದ್ದರೆ, ಖ್ಯಾತ ಹೃದ್ರೋಗ ತಜ್ಞ, ಕನ್ನಡಿಗ ಡಾ.ದೇವಿ ಶೆಟ್ಟಿ ಕೇಂದ್ರದ ಕ್ರಮ ಸಮರ್ಥಿಸಿದ್ದಾರೆ. ಆದರೆ ಆಯುರ್ವೇದ ಡಾಕ್ಟರ್‌ಗಳಿಗೆ ಅಲೋಪತಿ ಪದ್ಧತಿಯಲ್ಲಿ ಔಷಧ ನೀಡಲು ಅವಕಾಶ ಕೊಡುವ ಪ್ರಸ್ತಾಪದ ಬಗ್ಗೆ ಹೆಚ್ಚಿನ ಸ್ಪಷ್ಟನೆ ಅಗತ್ಯವಿದೆ ಎಂದಿದ್ದಾರೆ. “ಆಯುರ್ವೇದ ವೈದ್ಯರು ಯಾವ ರೀತಿಯ ಔಷಧವನ್ನು ಯಾವಾಗ ಕೊಡಬೇಕು ಎಂಬುದರ ಬಗ್ಗೆ ವಿಧೇಯಕದಲ್ಲಿ ಸ್ಪಷ್ಟಪಡಿಸಬೇಕು. ದೂರದ ಪ್ರದೇಶಗಳಲ್ಲಿ ವಿಶೇಷವಾಗಿ ಸಣ್ಣ ಕ್ಲಿನಿಕ್‌ಗಳಲ್ಲಿ ಇರುವ ಡಾಕ್ಟರ್‌ಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ರೀತಿ ನಿರ್ಧಾರ ಕೈಗೊಂಡಿದ್ದಿರಬಹುದು. ಅದಕ್ಕೆ ಮಾತ್ರ ಸರ್ಕಾರದಿಂದ ಸ್ಪಷ್ಟನೆ ಬಯಸುತ್ತೇನೆ’ ಎಂದು ಹೇಳಿದ್ದಾರೆ.

ನಿರ್ಧಾರ ಖಂಡಿಸಿ ದೇಶದೆಲ್ಲೆಡೆ ಆಕ್ರೋಶ 
ಕರ್ನಾಟಕವೂ ಸೇರಿ ದೇಶದ ಹಲವು ಕಡೆ ಸರ್ಕಾರದ ನಿರ್ಧಾರ ಖಂಡಿಸಿ ವೈದ್ಯರು ಪ್ರತಿಭಟನೆ ನಡೆಸಿದರು. ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕ ಕಡೆಗಳಲ್ಲಿ ಒಪಿಡಿಗಾಗಿ ಪರದಾಡಿದ್ದು ಕಂಡುಬಂತು. ಲೋಕಸಭೆಯಲ್ಲಿ ವಿಧೇಯಕವನ್ನು ಸ್ಥಾಯಿ ಸಮಿತಿಗೆ ನೀಡುವ ನಿರ್ಧಾರ ತಿಳಿಯುತ್ತಿದ್ದಂತೆ ಆಕ್ರೋಶದ ತೀವ್ರತೆ ಕಡಿಮೆ ಆಗಿದೆ.

ಸಂಸತ್‌ನ ಸ್ಥಾಯಿ ಸಮಿತಿಗೆ ವಿಧೇಯಕವನ್ನು ಒಪ್ಪಿಸಲಾಗಿದೆ. ಹೀಗಾಗಿ ಮುಷ್ಕರವನ್ನು ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಸಮಿತಿ ಸದಸ್ಯರು ವಿವಾದಾತ್ಮಕ ಅಂಶಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ.
 ● ಡಾ.ಕೆ.ಕೆ.ಅಗರ್ವಾಲ್‌, ಐಎಂಎ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next