Advertisement

ಆಲಿಸು ಬಾ ಮೌನಗಳ ರಾಗ!

11:25 AM Apr 22, 2017 | |

ಏನ್‌ ಬೇಕೋ ಕೇಳು. ಹಣ ಬೇಕಾ? ಸೈಟ್‌ ಬೇಕಾ? ಕಾರ್‌ ಬೇಕಾ? ಕೇಳು … ಅದ್ಯಾವುದೂ ಅವನಿಗೆ ಬೇಡ. ಏಕೆಂದರೆ, ದುಡ್ಡು ಅವನಿಗೆ ಬರೀ ಪೇಪರ್ರಿಗೆ ಸಮಾನ, ಸೈಟು ಎಂದರೆ ಬರೀ ಮಣ್ಣು ಮತ್ತು ಕಾರು ಎಂದರೆ ತಗಡಿನ ತುಂಡುಗಳು … ಹಾಗಿರುವಾಗ ಅವನು ಅವನ್ನೆಲ್ಲಾ ಇಟ್ಟುಕೊಂಡು ಏನು ತಾನೇ ಮಾಡಬೇಕು? ಅವನು ಅದ್ಯಾವುದನ್ನೂ ಕೇಳುವುದಿಲ್ಲ. ಕೇಳುವುದು ನೆಮ್ಮದಿ ಮಾತ್ರ. ಆದರೆ, ನೆಮ್ಮದಿ ಕೊಡುವುದಿರಲಿ, ಸ್ವತಃ ಅವನಿಗೇ ನೆಮ್ಮದಿಯಿಲ್ಲ.

Advertisement

ಆಗ ನೆಮ್ಮದಿ ಕೇಳಿದವನೇ, ಆ ನೆಮ್ಮದಿ ಕಂಡುಕೊಳ್ಳುವುದು ಹೇಗೆ ಎಂಬುದನ್ನೂ ಹೇಳುವ ಮೂಲಕ ಕಣ್ತೆರೆಸುತ್ತಾನೆ. ಆದರೆ, ಕಣ್ಣು ತೆರೆದವನಿಗೆ ದೃಷ್ಟಿ ಮಾತ್ರ ಇರುತ್ತದೆ. ದೂರದೃಷ್ಟಿ ಇರುವುದಿಲ್ಲ. ಬಹುಶಃ ದೂರದೃಷ್ಟಿಯೂ ಇದ್ದುಬಿಟ್ಟಿದ್ದರೆ, ಆ ದುರ್ಘ‌ಟನೆಯನ್ನು ತಪ್ಪಿಸಬಹುದಿತ್ತೇನೋ? “ರಾಗ’ ಒಂದು ಕಣ್ತೆರಸುವ ಕಥೆ ಎಂದರೆ ತಪ್ಪಿಲ್ಲ. ಅಷ್ಟೇ ಅಲ್ಲ, ಮನುಷ್ಯನಿಗೆ ದೃಷ್ಟಿ ಇದ್ದರಷ್ಟೇ ಸಾಲದು, ದೂರದೃಷ್ಟಿ ಬಹಳ ಮುಖ್ಯ ಎಂದು ಸಾರುವ ಚಿತ್ರವಿದು.

ಆ ದೂರದೃಷ್ಟಿ ಇಲ್ಲದಿದ್ದರೆ, ಏನೆಲ್ಲಾ ಆಗುತ್ತದೆ ಎಂದು ಅರ್ಥ ಮಾಡಿಸುವ ಚಿತ್ರವೂ ಹೌದು. ಆ ಕಥೆಯನ್ನು ಅಂಧರ ಮೂಲಕ ನಿರೂಪಿಸುವ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕ ಪಿ.ಸಿ. ಶೇಖರ್‌. ಇಲ್ಲಿ ನಾಯಕ, ನಾಯಕಿ ಇಬ್ಬರೂ ಅಂಧರು. ಅವನು ಬಡವನಾದರೆ, ಆಕೆ ಶ್ರೀಮಂತೆ. ಆತ ಸಂತೋಷ ಮತ್ತು ನೆಮ್ಮದಿಯಲ್ಲಿ ಶ್ರೀಮಂತ. ಆಕೆ ಅವೆರೆಡೂ ವಿಷಯಗಳಲ್ಲಿ ಕಡುಬಡವಿ. ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಅವರಿಬ್ಬರೂ ಭೇಟಿಯಾಗುತ್ತಾರೆ.

ಕ್ರಮೇಣ ಅವರಿಬ್ಬರ ನಡುವೆ ಪರಿಚಯವಾಗುತ್ತದೆ. ಆ ಪರಿಚಯ ಸ್ನೇಹಕ್ಕೆ ತಿರುಗಿ, ಅದು ಪ್ರೀತಿಯಾಗುವಷ್ಟರಲ್ಲಿ ಎಂದಿನಂತೆ ಮೇಲು-ಕೀಳು, ಬಡವ-ಶ್ರೀಮಂತ ಎಂಬ ಕಟ್ಟುಪಾಡುಗಳು ಅಡ್ಡ ಬರುತ್ತವೆ. ದೈಹಿಕವಾಗಿ ಕುರುಡರಾಗಿರುವ ಇವರು, ಮಾನಸಿಕವಾಗಿ ಕುರುಡರಾಗಿರುವವರಿಗೆ ದೃಷ್ಟಿ ಬರಿಸುವುದರ ಜೊತೆಗೆ ಕಣ್ತೆರೆಸುವುದೇ ಈ ಚಿತ್ರದ ಕಥೆ. ಇಲ್ಲಿ ಶೇಖರ್‌ ಅವರ ಉದ್ದೇಶ, ಆಶಯ, ಕಾಳಜಿ ಎಲ್ಲವೂ ಮೆಚ್ಚತಕ್ಕದ್ದೇ. ಪ್ರೀತಿ ಕುರುಡಾದರೆ ಪರವಾಗಿಲ್ಲ,

ಪ್ರೀತಿಸುವವರು ಕುರುಡರಾದರೆ ಪರವಾಗಿಲ್ಲ, ಆ ಪ್ರೀತಿಗೆ ಸಮಾಜ ಕುರುಡಾಗಬಾರದು ಎಂಬ ಸಂದೇಶವನ್ನು ಹೇಳುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ ಶೇಖರ್‌. ಆ ಕುರುಡಾದ ಸಮಾಜದ ಕಣ್ತೆರೆಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಆ ಪ್ರಯತ್ನಕ್ಕೆ ಭೇಷ್‌ ಎನ್ನಲೇಬೇಕು. ಆದರೆ, ಒಂದೊಳ್ಳೆಯ ಸ್ವಸ್ಥ ಸಮಾಜವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಅವರು ಸಾಕಷ್ಟು ಎಡವಿದ್ದಾರೆ.  ಪ್ರಮುಖವಾಗಿ ಚಿತ್ರದ ದ್ವಿತೀಯಾರ್ಧದಲ್ಲಿ ಒಂದಿಷ್ಟು ಗೊಂದಲಗಳಿವೆ.

Advertisement

ಅಲ್ಲಿ ಪದೇಪದೇ ಅದೇ ವಿಷಯಗಳು ರಿಪೀಟ್‌ ಆಗುತ್ತಲೇ ಇರುತ್ತವೆ. ಹಾಗಾಗಿ ಕಥೆ ಮುಂದುವರೆಯುವುದಿಲ್ಲ. ಒಂದು ಹಂತದಲ್ಲಿ ಕಥೆ ಮುಂದುವರೆದರೂ, ಇನ್ನೂ ಏನೋ ಬೇಕಾಗಿತ್ತು ಎಂದನಿಸುವಲ್ಲಿ ಮುಕ್ತಾಯವಾಗುತ್ತದೆ. ಆ ಮಟ್ಟಿಗೆ “ರಾಗ’ ಎಲ್ಲವೂ ಇದ್ದೂ, ಇನ್ನೂ ಏನೇನೋ ಬೇಕು ಎನ್ನುವಂತಹ ಪ್ರಯತ್ನವಾಗಿಬಿಡುತ್ತದೆ. ಚಿತ್ರದ ಒಂದು ಪ್ಲಸ್‌ ಎಂದರೆ, ಶೇಖರ್‌ ಸುಮ್ಮನೆ ಏನೇನೋ ಮಾಡೋಕೆ ಹೋಗಿಲ್ಲ.

ಕೇವಲ ನಾಲ್ಕೈದು ಲೊಕೇಶನ್‌ಗಳನ್ನಿಟ್ಟುಕೊಂಡು, ಕೆಲವೇ ಪಾತ್ರಗಳನ್ನಿಟುಕೊಂಡು ಕಥೆ ಕಟ್ಟಿಕೊಡುವ ಪ್ರಯತ್ನವನ್ನು ಅವರು ಮಾಡುತ್ತಾರೆ. ಚಿತ್ರದ ಕಾಲಘಟ್ಟವನ್ನು ಸಹ ಅವರು ನಿಖರವಾಗಿ ಹೇಳುವುದಕ್ಕೆ ಹೋಗುವುದಿಲ್ಲ. ಚಿತ್ರದಲ್ಲಿ ಗೋಡೆಗಳ ಮೇಲೆ “ಒಂದು ಮುತ್ತಿನ ಕಥೆ’ ಪೋಸ್ಟರ್‌ ಕಾಣುವುದರಿಂದ ಇದು 80ರ ದಶಕದ ಕೊನೆಯಿರಬಹುದು ಎಂದು ಅಂದಾಜು ಮಾಡಬಹುದು. ಆದರೆ, ಚಿತ್ರವಿಚಿತ್ರ ವೇಷಭೂಷಣಗಳು, ಹ್ಯಾಟುಗಳು, ಕಾರು, ಪರಿಸರ ಇವೆಲ್ಲಾ ನೋಡಿದರೆ, ಸ್ವಾತಂತ್ರ್ಯಪೂರ್ವ ಕಥೆ ಇರಬಹುದು ಎಂದನಿಸಬಹುದು.

ಈ ವಿಷಯದಲ್ಲಿ ಶೇಖರ್‌ ಅವರು ಇನ್ನಷ್ಟು ಹೋಮ್‌ವರ್ಕ್‌ ಮಾಡುವ ಅವಶ್ಯಕತೆ ಖಂಡಿತಾ ಇತ್ತು. ಇನ್ನು ಚಿತ್ರದ ಸಂಭಾಷಣೆಗಳು ಚೆನ್ನಾಗಿವೆಯಾದರೂ, ಪುಸ್ತಕದಲ್ಲಿರುವ ಅಣಿಮುತ್ತುಗಳನ್ನೆಲ್ಲಾ ಹುಡುಕಿಹುಡಿಕಿ ಹೇಳಿಸಲಾಗಿದೆ ಎನ್ನುವಷ್ಟು ಇಲ್ಲಿ ಸಂಭಾಷಣೆಗಳನ್ನು ಹೇರಲಾಗಿದೆ. ಆರಂಭದಲ್ಲಿ ಖುಷಿಕೊಡುವ ಸಂಭಾಷಣೆಗಳು, ನಂತರ ಪಾಠದ ತರಹ ಕೇಳಿದರೆ ಆಶ್ಚರ್ಯವಿಲ್ಲ. ಇಂಥ ಹಲವು ವಿಷಯಗಳ ಬಗ್ಗೆ ಶೇಖರ್‌ ಇನ್ನಷ್ಟು ಗಮನ ಕೊಡಬೇಕಿತ್ತು. ಕಥೆಗೆ ಕೊಡುವ ಒತ್ತನ್ನು, ಇಂತಹ ಸೂಕ್ಷ್ಮ ವಿಷಯಗಳಿಗೂ ಕೊಟ್ಟಿದ್ದರೆ, ಚಿತ್ರ ಇನ್ನಷ್ಟು ಚೆನ್ನಾಗಿರುತಿತ್ತು.

ಚಿತ್ರದಲ್ಲಿ ಈ ತರಹದ ಕೆಲವು ಮೈನಸ್‌ಗಳು ಕಂಡರೂ, ನಾಲ್ಕು ಪ್ರಮುಖ ಪ್ಲಸ್‌ಗಳಿವೆ. ಅಭಿನಯ, ಛಾಯಾಗ್ರಹಣ, ಕಲಾ ನಿರ್ದೇಶನ ಮತ್ತು ಸಂಗೀತಕ್ಕೆ ಈ ಚಿತ್ರವನ್ನು ಎತ್ತುವ ಶಕ್ತಿ ಇದೆ. ಮಿತ್ರ ಮತ್ತು ಭಾಮ ಈ ಚಿತ್ರದ ಎರಡು ಕಣ್ಣುಗಳು. ಯಾವುದು ಹೆಚ್ಚು, ಯಾವುದು ಕಡಿಮೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲದಷ್ಟು ಎರಡೂ ಮುಖ್ಯವಾಗಿವೆ. ಕೆಲವೊಮ್ಮೆ ಅತಿಯಾಯ್ತು ಎಂದನಿಸಿದರೂ, ಇಬ್ಬರೂ ತಮ¤ಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಬರೀ ಮಿತ್ರ ಮತ್ತು ಭಾಮ ಅಷ್ಟೇ ಅಲ್ಲ, ಅವಿನಾಶ್‌ ಮತ್ತು ರಮೇಶ್‌ ಭಟ್‌ ಅವರಿಗೂ ಸಮನಾದ ಪಾತ್ರಗಳಿವೆ ಮತ್ತು ಇಬ್ಬರೂ ಹಿರಿಯರು ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಇನ್ನು ಕೆನಡಿ ಅವರ ಕಲಾ ನಿರ್ದೇಶನ, ವೈದಿ ಅವರ ಛಾಯಾಗ್ರಹಣ ಮತ್ತು ಅರ್ಜುನ್‌ ಜನ್ಯ ಅವರ ಮಧುರವಾದ ಹಾಡುಗಳು ಸಹ ನಿಮ್ಮ ಗಮನವನ್ನು ಸೆಳೆಯುತ್ತದೆ. ಕೆಲವೊಮ್ಮೆ ಅವರಿಬ್ಬರೇ ಚಿತ್ರದ ಹೀರೋಗಳು ಎನಿಸುವಷ್ಟು ಇಬ್ಬರೂ ಮಹತ್ವದ ಪಾತ್ರ ವಹಿಸಿದ್ದಾರೆ.

ಚಿತ್ರ: ರಾಗ
ನಿರ್ಮಾಣ: ಮಿತ್ರ
ನಿರ್ದೇಶನ: ಪಿ.ಸಿ. ಶೇಖರ್‌
ತಾರಾಗಣ: ಮಿತ್ರ, ಭಾಮ, ಅವಿನಾಶ್‌, ರಮೇಶ್‌ ಭಟ್‌, ಜೈಜಗದೀಶ್‌, ತಬಲಾ ನಾಣಿ ಮುಂತಾದವರು.

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next