Advertisement

ಹೈಕಮಾಂಡ್‌ ಅಂಗಳಕ್ಕೆ ಕೈ ಪಟ್ಟಿ

11:46 PM Nov 15, 2019 | Lakshmi GovindaRaju |

ಬೆಂಗಳೂರು: ಉಪ ಚುನಾವಣೆಗೆ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್‌ ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ನಾಯಕರ ನಡುವಿನ ಹಗ್ಗ ಜಗ್ಗಾಟದಿಂದ ಹೈಕಮಾಂಡ್‌ ಅಂಗಳ ತಲುಪಿದೆ. ಶುಕ್ರವಾರ ತಡರಾತ್ರಿವರೆಗೂ ದಿನೇಶ್‌ ಗುಂಡೂರಾವ್‌ ಪಟ್ಟಿಗೆ ಒಪ್ಪಿಗೆ ಪಡೆಯಲು ಕಸರತ್ತು ನಡೆಸಿದ್ದಾರೆ.

Advertisement

ಶಿವಾಜಿನಗರ ಹಾಗೂ ಗೋಕಾಕ್‌ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜ್ಯ ನಾಯಕರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್‌, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮುಖ ದಲ್ಲಿಯೇ ಪಟ್ಟಿ ಅಂತಿಮಗೊಳಿಸಲು ನಿರ್ಧರಿಸಿದ್ದಾರೆ.

ಶಿವಾಜಿನಗರ ಕ್ಷೇತ್ರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್‌ ತಮ್ಮ ಕಡೆಯ ಅಭ್ಯರ್ಥಿಗೆ ಟಿಕೆಟ್‌ ಕೊಡಿಸಲು ಹಠ ಹಿಡಿದು ನಿಂತಿದ್ದಾರೆ. ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ಗೆ ಟಿಕೆಟ್‌ ಕೊಡಿಸಲು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು, ಯಾವುದೇ ಕಾರಣಕ್ಕೂ ರಿಜ್ವಾನ್‌ ಅರ್ಷದ್‌ಗೆ ಟಿಕೆಟ್‌ ನೀಡ ಬಾರದು ಸಲೀಂ ಅಹಮದ್‌ ಅವರಿಗೆ ಟಿಕೆಟ್‌ ನೀಡುವಂತೆ ಒತ್ತಡ ಹೇರಿದ್ದರು.

ಆದರೆ, ರಿಜ್ವಾನ್‌ ಅರ್ಷದ್‌ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಬದಲಿಗೆ ಮಾಜಿ ಸಚಿವ ನಜೀರ್‌ ಅಹಮದ್‌ ಅವರಿಗೆ ಟಿಕೆಟ್‌ ಕೊಡಿಸಲು ಸಿದ್ದರಾಮಯ್ಯ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಬಿಜೆಪಿ ಶರವಣ ಅವರಿಗೆ ಟಿಕೆಟ್‌ ನೀಡಿರುವುದರಿಂದ ಸಲೀಂ ಅಹಮದ್‌ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದ್ದು, ಅವರಿಗೆ ಪರ್ಯಾಯವಾಗಿ ಎಸ್‌.ಎ. ಹುಸೇನ್‌ಗೆ ಟಿಕೆಟ್‌ ಕೊಡಿಸಲು ಹಿರಿಯ ನಾಯಕರು ಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಇಬ್ಬರೂ ನಾಯಕರು ತಾವು ಸೂಚಿಸಿದವರಿಗೆ ಟಿಕೆಟ್‌ ಕೊಡಿಸ ಬೇಕೆಂದು ಪಟ್ಟು ಹಿಡಿದಿರುವುದ ರಿಂದ ಈ ವಿಷಯ ಹೈ ಕಮಾಂಡ್‌ ತೀರ್ಮಾನ ಯಾರ ಪರವಾಗಿರುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.  ಅದೇ ರೀತಿ ಗೋಕಾಕ್‌ ಕ್ಷೇತ್ರದಲ್ಲಿಯೂ ಸತೀಶ್‌ ಜಾರಕಿಹೊಳಿ ತಮ್ಮ ಸಹೋದರ ಲಖನ್‌ ಅವರಿಗೆ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದಿದ್ದು, ಕಾಂಗ್ರೆಸ್‌ ಲಿಂಗಾಯತ ಮುಖಂಡರು ಬಿಜೆಪಿಯ ಪರಾಜಿತ ಅಭ್ಯರ್ಥಿ ಅಶೋಕ್‌ ಪೂಜಾರಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರಿಗೆ ಟಿಕೆಟ್‌ ನೀಡಬೇಕೆಂದು ಒತ್ತಡ ಹೇರುತ್ತಿರುವು ದರಿಂದ ಇಲ್ಲಿಯೂ ಹೈಕಮಾಂಡ್‌ ನಿರ್ಧಾರ ಕುತೂಹಲ ಮೂಡಿಸಿದೆ.

Advertisement

ಉಳಿದಂತೆ ಕಾಗವಾಡ ಕ್ಷೇತ್ರಕ್ಕೆ ಪ್ರಕಾಶ್‌ ಹುಕ್ಕೇರಿ ಸ್ಪರ್ಧೆಗೆ ಹೈ ಕಮಾಂಡ್‌ ಗ್ರೀನ್‌ ಸಿಗ್ನಲ್‌ ನೀಡಿದರೆ, ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ರಾಜು ಕಾಗೆ ಅಥಣಿ ಕ್ಷೇತ್ರದ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಪ್ರಕಾಶ್‌ ಹುಕ್ಕೇರಿಗೆ ಟಿಕೆಟ್‌ ನಿರಾಕರಿಸಿದರೆ, ರಾಜು ಕಾಗೆ ಅವರಿಗೆ ಕಾಗವಾಡ ಟಿಕೆಟ್‌ ನೀಡಿ, ಅಥಣಿ ಕ್ಷೇತ್ರಕ್ಕೆ ಗಜಾನನ ಮನಸೂಳಿ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೊಸಪೇಟೆ (ವಿಜಯನಗರ) ಕ್ಷೇತ್ರಕ್ಕೂ ಕಾಂಗ್ರೆಸ್‌ಗೆ ಸೂಕ್ತ ಅಭ್ಯರ್ಥಿಯ ಸಮಸ್ಯೆ ಎದುರಾಗಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ ಅವರನ್ನು ಕಣಕ್ಕಿಳಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಅವರು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಅವರಿಗೆ ಪರ್ಯಾಯ ಅಭ್ಯರ್ಥಿಯಾಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಮಾಮ್‌ ಅವ ರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆದರೆ, ಈಗಾಗಲೇ ಜೆಡಿಎಸ್‌ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್‌ ನೀಡಿರುವುದರಿಂದ ಕಾಂಗ್ರೆಸ್‌ ಕೂಡ ಅಲ್ಪ ಸಂಖ್ಯಾತ ಸಮುದಾಯ ದವರಿಗೆ ಟಿಕೆಟ್‌ ನೀಡಿದರೆ, ಆನಂದ್‌ ಸಿಂಗ್‌ ಗೆಲುವಿಗೆ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ನಾಯಕ ಅಥವಾ ಕುರುಬ ಸಮುದಾಯದವರಿಗೆ ಟಿಕೆಟ್‌ ನೀಡಬೇಕೆಂದು ಹೊಸಪೇಟೆ ಕ್ಷೇತ್ರದ ಮುಖಂಡರು ಪಕ್ಷದ ನಾಯಕರ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಯಶವಂತಪುರ ಕ್ಷೇತ್ರಕ್ಕೆ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ್‌, ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ಮಾಜಿ ಶಾಸಕ ಕೆ.ಆರ್‌. ಚಂದ್ರಶೇಖರ್‌ ಅವರಿಗೆ ಟಿಕೆಟ್‌ ಘೋಷಣೆಯಾಗುವ ಸಾಧ್ಯತೆ ಇದೆ. ಶುಕ್ರವಾರ ಮಧ್ಯಾಹ್ನ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಜೊತೆ ಮಾತುಕತೆ ನಡೆಸಿದ್ದ ದಿನೇಶ್‌ ಗುಂಡೂರಾವ್‌, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅನುಮತಿಗೆ ಶುಕ್ರವಾರ ತಡರಾತ್ರಿವರೆಗೂ ಒಪ್ಪಿಗೆಗಾಗಿ ಕಾಯ್ದು ಕುಳಿತಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next