Advertisement

ಕಳಚಿತು ಅವಧೂತ ಪರಂಪರೆಯ ಕೊಂಡಿ |ನಡೆದಾಡುವ ಭಗವಂತ ಇನ್ನಿಲ್ಲ

12:39 PM Aug 16, 2021 | Team Udayavani |

*ರಾಘವೇಂದ್ರ ಬೆಟ್ಟಕೊಪ್ಪ

Advertisement

ಶಿರಸಿ : ಗುರುಗಳೇ, ಸಮಸ್ಯೆ ಆಗಿದೆ, ಏನು ಮಾಡಬೇಕು ಎಂದು ನೋವಿನ ಭಾರ ಹೊತ್ತು ಬಂದಿದ್ದ ಭಕ್ತ ಶಿಷ್ಯರಿಗೆ ಮೊದ್ಲು ಊಟ ಮಾಡ್ರಾ, ಕಡಿಗೆ ನೋಡನ ಎಂದು ಸಾಂತ್ವನ ಹೇಳುತ್ತ, ಶಿಷ್ಯ ಊಟ ಮುಗಿಸಿ ದೇವರ ಎದುರು ವಾಪಸ್ ಬರುವ ತನಕವೂ ಕುಳಿತು ಸಮಸ್ಯೆ ಕೇಳ ಪರಿಹಾರ ಹೇಳುತ್ತಿದ್ದ ಮಾತೃ ಹೃದಯಿ ಸ್ವಾಮೀಜಿ ಇನ್ನಿಲ್ಲ.

ಮೂಲತಃ ಶಿರಸಿ ಜಾಗನಳ್ಳಿ ಕುಟುಂಬದ ಸಿದ್ದಾಪುರ ತಾಲೂಕಿನ ತಟ್ಟೀಕೈನಲ್ಲಿ ಹುಟ್ಟಿ ಬೆಳೆದು, ಎಳೆಯ ವಯಸ್ಸಿನಲ್ಲೇ ಸೇವೆಗೆ ಹೋಗಿದ್ದ ಶ್ರೀ ಸಹಜಾನಂದ ಅವಧೂತರಲ್ಲಿ ದೀಕ್ಷೆಯನ್ನೂ ಪಡೆದು, ಕೊಳಗಿಬೀಸ್ ಬಳಿಕ 1973ರ ನಂತರ ದೀವಗಿಯಲ್ಲಿ ಆಶ್ರಮ ಕಟ್ಟಿದ ಶ್ರೀಗಳು ನಂಬಿ ಬಂದ ಶಿಷ್ಯರಿಗೆ ಭರವಸೆಯ ಶಕ್ತಿ ಆಗಿದ್ದರು. ಶ್ರೀರಾಮಾನಂದ ಅವಧೂತರು ಕೊನೇ ಕ್ಷಣದ ತನಕ ಇಷ್ಟದ ಹಾಗೂ ಆರಾಧ್ಯದೈವ ಹನುಮಂತನ ಆರಾಧನೆಯಲ್ಲೇ ಬದುಕು ನಡೆಸಿದವರು, ಸಿದ್ಧಿಗಳಿಸಿದವರು.

ಗುರುವು ಆಡಿದ ಮಾತಿನಂತೇ ಆಗುತ್ತಿದ್ದ, ಅವರು ಸೂಚಿಸಿದ್ದ ಮಾರ್ಗದಲ್ಲೇ ಪರಿಹಾರವೂ ಆಗುತ್ತಿದ್ದದ್ದನ್ನು ಕಂಡ ಶಿಷ್ಯರು ಈಗ ಅಕ್ಷರಶಃ ಅನಾಥರಾಗಿದ್ದಾರೆ. ದೃಷ್ಟಿ ದೋಷ, ವಾಗ್ದೋಷ, ಕೊಟ್ಟಿಗೆಗೆ ಹಿಡಿದ ಕೀಳು ಇನ್ನಾವುದೇ ದೋಷ, ತಾಪತ್ರಯ ಸಮಸ್ಯೆಗಳಿಗೂ ಅಕ್ಷತೆ ಕಾಳಿನ ಮೂಲಕ ಸಮಸ್ಯೆ ಬಿಡಿಸಿ ಉತ್ತರ ಹೇಳುತ್ತಿದ್ದ ಅವಧೂತರು ತಪಸ್ಸಿನ ಮೂಲಕ ನಡೆದಾಡುವ ಭಗವಂತ ಎಂದೇ ಪ್ರಸಿದ್ಧಿ ಆದವರು. ತೆಂಗಿನ ಮರದಿಂದ ಕಾಯಿಯನ್ನು ಕೈಯ್ಯಲ್ಲಿ ಕಿತ್ತು ನೆಲಕ್ಕೆ ತಾಗಿಸದೇ ಅಂತ್ರಗಾಯಿ ಮಾಡಿಕೊಂಡು ಹೋಗಿ ಅವಧೂತರಿಂದ ಮಂತ್ರಿಸಿ ವಾಪಸ್ ಮನೆಗೆ ಕೋಳಿಗೋ, ದೇವರ ಪೀಠದಲ್ಲೋ ಇಡುತ್ತಿದ್ದದ್ದೂ ಶಿರಸಿ ಸೀಮೆಯಲ್ಲಿ ಸಾಮಾನ್ಯವಾಗಿತ್ತು. ಇಂತಹ ಸಣ್ಣ ಸಣ್ಣ ಕಾರಣಗಳಿಂದಲೂ ಶಿಷ್ಯರ ಮನೆ ಮನಗಳಲ್ಲೂ ನಿಂತವರು. ಅಪಾರ ತಪಸ್ಸನ್ನೂ ಸಾಧಿಸುವ ಮೂಲಕ ಆಧ್ಯಾತ್ಮದ ಪರಾಕಾಷ್ಠೆ ತಲುಪಿದ್ದ ಶ್ರೀಗಳು ಸಹಜವಾಗಿ ಸರಳವಾಗಿಯೂ ಬದುಕುವ, ನಡೆದುಕೊಳ್ಳುವ ಗುಣ ಸಂಪಾದಿಸಿದವರು.

ಇದನ್ನೂ ಓದಿ : ಮಡಿಕೇರಿಯ ವರ್ತಕರೊಬ್ಬರ ಕಣ್ಣೀರಿನ ಕತೆ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಯೇ ದಾರಿ !?

Advertisement

ನಾಟಕ ಅದರಲ್ಲೂ ಯಕ್ಷಗಾನ ಪ್ರಿಯರಾಗಿದ್ದ ಅವಧೂತರು ದೀವಗಿಯಲ್ಲಿ ವರ್ಷಕ್ಕೆ ಹತ್ತಾರು ಯಕ್ಷಗಾನ ಮಾಡಿಸುತ್ತಿದ್ದರು. ‘ಒಂದ್ ಆಟ ನೋಡವಲಾ’ ಎಂದರೆ ಕಲಾವಿದರೇ ಸ್ವಯಂ ಪ್ರೀತಿಯಿಂದ ಬಂದ ಕುಣಿದು ಹೋಗುತ್ತಿದ್ದರು. ಮಂಗಳ ಪದ್ಯವನ್ನು ಶ್ರೀದೇವರ ಎದುರೂ ಹಾಡಿಸುತ್ತಿದ್ದ ಶ್ರೀರಾಮಾನಂದ ಅವರು ಕೊನೆಗೆ ಅವರೇ ನೀನೇ ಕಲಿ ಹನುಮ ಪದ್ಯವನ್ನೂ ಹಾಡಿಸಿ ಕೇಳುತ್ತಿದ್ದರು. ರಾಮ ನಾಮ ಸಂಕೀರ್ತನೆ ಎಂದರೆ ಇಷ್ಟದಿಂದ ಕೇಳುತ್ತಿದ್ದ ಶ್ರೀಗಳು ಯಕ್ಷಗಾನ ಆರಂಭಕ್ಕೆ ಹತ್ತು ನಿಮಿಷ ಇದ್ದಾಗಲೇ ಬಂದು ಕುಳಿತು ಮುಗಿಯುವ ತನಕ ನೋಡುತ್ತಿದ್ದರು. ಕಲಾವಿದರಿಗೆ ಮಂತ್ರಾಕ್ಷತೆ ನೀಡಿ, ಅವರಿಗೆ ಊಟ ಆದ ಬಳಿಕವೇ ವಿಶ್ರಾಂತಿಗೂ ತೆರಳುತ್ತಿದ್ದವರು.

ನಾರಾಯಣ ಹೆಗಡೆ ಮತ್ತು  ಲಕ್ಷ್ಮಿ ಹೆಗಡೆ ದಂಪತಿಯ ಪುತ್ರರಾಗಿದ್ದ ಅವಧೂತರು ಪೂರ್ವಾಶ್ರಮದದಲ್ಲಿ ರಾಮಚಂದ್ರ ಹೆಗಡೆ ಎಂದೇ ಗುರುತಾಗಿದ್ದ ಶ್ರೀರಾಮಾನಂದ ಅವದೂತರು ರಥ ಸಪ್ತಮಿ ದಿನದಂದು ಜನಿಸಿದ್ದರು. ಚಿಕ್ಕಂದಿನಲ್ಲೇ ತಾಯಿ ಕಳೆದುಕೊಂಡಿದ್ದ ಅವರು ಪ್ರಾಥಮಿಕ ಶಿಕ್ಷಣವನ್ನು 1 ರಿಂದ 4 ನೇ ತರಗತಿ ತನಕ  ಸರಕುಳಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದರು. ಆ ವಯಸ್ಸಿನಲ್ಲಿಯೂ, ಪಠ್ಯ ಪುಸ್ತಕಗಳಿಗಿಂತ ಹೆಚ್ಚಾಗಿ ಭಗವದ್ಗೀತೆ, ಯೋಗವಾಸಿಷ್ಠ ಇತ್ಯಾದಿಗಳನ್ನು ಓದುವುದರಲ್ಲಿ ಮತ್ತು ಯಕ್ಷಗಾನ, ಭಜನೆ ಮತ್ತು ಕೀರ್ತನೆಗಳಿಂದ ಪ್ರಭಾವಿತರಾಗಿದ್ದರು.  5 ಮತ್ತು 6 ನೇ ತರಗತಿಯನ್ನು ಕಲ್ಕುಣಿ ಶಾಲೆಯಲ್ಲಿ ಮುಗಿಸಿದರು. ಶೀಗೇಹಳ್ಳಿಯಲ್ಲಿ ವೇದಗಳ ಅಧ್ಯಯನವನ್ನು ಆರಂಭಿಸಿದರು. ತಂದೆ ಸದ್ಗುರು ಶ್ರೀಧರರ ಪ್ರಭಾವಕ್ಕೆ ಒಳಗಾಗಿ ಸಹಜಾನಂದ ಅವಧೂತರಾದರು. ಅವಧೂತರಾದ ತಂದೆಯ ಮಾರ್ಗದರ್ಶನ ಮತ್ತು ಪ್ರಭಾವದ ಅಡಿಯಲ್ಲಿ ಬೆಳೆಯುತ್ತಿದ್ದ ಅವರು ಪರಿಪೂರ್ಣ ನಡವಳಿಕೆಯ ಮೂರ್ತರೂಪವಾಗಿದ್ದರು. ಕಾಶಿಯಲ್ಲಿ ಹನ್ನೆರಡು ವರ್ಷ ಘೋರ ತಪಸ್ಸು ಮಾಡಿದ ಸಹಜಾನಂದರು ನಂತರ ತಾಲ್ಲೂಕಿನ ಕೊಳಗಿಬೀಸಿ ಬಂದು ನೆಲಸಿದರು. ದೇವಸ್ಥಾನ ಮತ್ತು ಮಠವನ್ನು ಸ್ಥಾಪಿಸಿದರು.

16 ನೇ ವಯಸ್ಸಿನಲ್ಲಿ ಈ ಆಧ್ಯಾತ್ಮಿಕ ಜವಬ್ದಾರಿಯ ಸನ್ಯಾಸ ಸ್ವೀಕರಿಸಿದ್ದ ಅವಧೂತರು, ಗೋಕರ್ಣದ ಬಳಿಯ ಗುಹೆಯಲ್ಲಿ ವಾಸಿಸುತ್ತಿದ್ದರು. ಪ್ರತಿದಿನ ಒಮ್ಮೆ, ಅವರು ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಮಾರುತಿಯನ್ನು ಕಂಬದಲ್ಲಿ ಪೂಜಿಸುತ್ತಿದ್ದರು. ಕನಸಿನಲ್ಲಿ ಸ್ಫೂರ್ತಿ ಪಡೆದ ಭಕ್ತರೊಬ್ಬರು ದೀವಗಿ  ಮಲ್ಲಿಕಾರ್ಜುನ ದೇವಸ್ಥಾನದ ಪಕ್ಕದಲ್ಲಿ ಭೂಮಿಯನ್ನು ದಾನ ಮಾಡಿದರು. ಅಲ್ಲಿ, ಒಂದು ಆಶ್ರಮವನ್ನು ಸ್ಥಾಪಿಸಿದರು ಮತ್ತು ಸದ್ಗುರು ಶ್ರೀ ಶ್ರೀಧರ ಸ್ವಾಮೀಜಿ ಪಾದುಕೆಗಳನ್ನು ಪೀಠಗಳಲ್ಲಿ ಇರಿಸಲಾಯಿತು. ಸುಮಾರು 1973-74 ರಲ್ಲಿ, ವೀರ ಮಾರುತಿ ಮಂದಿರ ವನ್ನು ಸ್ಥಾಪಿಸಲಾಯಿತು.

ಅದೇ ಭಕ್ತರ ಕೇಂದ್ರವಾಗಿತ್ತು. ಎಷ್ಟೋ ಸಂಕೀರ್ಣ ಸಮಸ್ಯೆಗೆ ದೀವಗಿ ಒಂದು ಆಧ್ಯಾತ್ಮಿಕ, ಧಾರ್ಮಿಕ ಉತ್ತರದ ನೆಲೆಯೂ ಆಗಿತ್ತು. ಹೃಯದ ಸಂಬಂಧಿ ಸಮಸ್ಯೆ ಉಂಟಾದಾಗಲೂ ಎದೆಗುಂದದೇ ಶ್ರೀಗಳು ತಮ್ಮ ದಿನಚರಿ ಬಿಟ್ಟಿರಲಿಲ್ಲ. ಗಾಲಿ ಖುರ್ಚಿಯ ಮೇಲೆ ಕುಳಿತೂ ಜೀವನೋತ್ಸಾಹದಲ್ಲಿ ಇರುತ್ತಿದ್ದ ಶ್ರೀಗಳು ಶಿಷ್ಯರ ಮನೆಗಳಿಗೆ ಬರುತ್ತೇನೆ ಎಂದರೆ ಎಂಥ ದೈಹಿಕ ನೋವು, ಕಷ್ಟ ಇದ್ದರೂ, ರಸ್ತೆ ಸರಿ ಇಲ್ಲದೇ ಇದ್ದರೂ ತೆರಳುತ್ತಿದ್ದರು. ಅವರ ಶಿಷ್ಯ ಪ್ರೀತಿಗೆ ಇವುಗಳು ಸಾಕ್ಷಿಯಾಗುತ್ತಿದ್ದವು.  ಶ್ರೀರಾಮಾನಂದ ಅವಧೂತರು ಎಲ್ಲ ಮಠಾಧೀಶರ ಜೊತೆ ಅನ್ಯೋನ್ಯ ಸಂಬಂಧ ಇಟ್ಟುಕೊಂಡು ಪ್ರಚಾರ ಬಯಸದೇ ಆಧ್ಯಾತ್ಮಿಕ ಸಾಧನೆಯ ಮೂಲಕವೇ ಶಿಷ್ಯರ ಸಮೂಹ ಕಟ್ಟಿಕೊಂಡವರು. ಅವರಿಲ್ಲದೇ ಶಿಷ್ಯರು ಅಕ್ಷರಶಃ ಅನಾಥರಾಗಿದ್ದಾರೆ.

ಇದನ್ನೂ ಓದಿ : ಲಾರ್ಡ್ಸ್ ಪಿಚ್ ನಿನ್ನ ಮನೆಯ ಹಿತ್ತಲಲ್ಲ: ಆ್ಯಂಡರ್ಸನ್ ವಿರುದ್ಧ ರೇಗಿದ ವಿರಾಟ್

Advertisement

Udayavani is now on Telegram. Click here to join our channel and stay updated with the latest news.

Next