Advertisement

ಲಿಂಗಾಯತ ಧರ್ಮಕ್ಕೆ ಬೇಕಿದೆ ಸ್ವತಂತ್ರ ಸ್ಥಾನಮಾನ 

01:21 PM Aug 02, 2017 | |

ದಾವಣಗೆರೆ: ಮಹಾನ್‌ ದಾರ್ಶನಿಕ ಬಸವಣ್ಣನವರೇ ಧರ್ಮಗುರು, ವಚನಗಳೇ ಧರ್ಮಗ್ರಂಥ, ಕನ್ನಡವೇ ಧರ್ಮಭಾಷೆ, ಬಸವಕಲ್ಯಾಣವೇ ಧರ್ಮಕೇಂದ್ರ. ಹಾಗಾಗಿ ಬಸವಣ್ಣನವರ ಅನುಯಾಯಿಗಳು ಒಪ್ಪುವ, ಅಪ್ಪುವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು ಎಂದು ದಾವಣಗೆರೆ ಸರಸ್ವತಿ ಬಡಾವಣೆಯಲ್ಲಿರುವ ಬಸವ ಬಳಗದ ಪದಾಧಿಕಾರಿಗಳು ಒಕ್ಕೊರಲಿನಿಂದ ಒತ್ತಾಯಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬಸವ ಬಳಗದ ಉಪಾಧ್ಯಕ್ಷ ಹುಚ್ಚಪ್ಪ ಮಾಸ್ತರ್‌, ಲಿಂಗ ಧರಿಸಿದವರು ಲಿಂಗಾಯತರು. ವೀರಶೈವ-ಲಿಂಗಾಯತ ಒಂದಲ್ಲ. ಹಾಗಾಗಲು ಸಾಧ್ಯವೇ ಇಲ್ಲ. ಬಸವಣ್ಣನವರೇ ನಮ್ಮ ಧರ್ಮಗುರು, ಅವರ ವಚನಗಳೇ ಧರ್ಮಗ್ರಂಥ. ಹಾಗಾಗಿ ನಮಗೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕು. ಬೇರೆಯವರು ಏನಾದರೂ ಹೇಳಿಕೊಳ್ಳಲಿ, ಅವರಿಗೂ ಸ್ವತಂತ್ರ ಧರ್ಮದ ಸ್ಥಾನಮಾನ ಕೊಡಲಿ ಬೇಡ ಎನ್ನುವುದಿಲ್ಲ. ನಮ್ಮದು ಲಿಂಗಾಯತ ಧರ್ಮ. ಹಾಗಾಗಿ ನಮಗೆ ಸ್ವತಂತ್ರ ಧರ್ಮದ ಸ್ಥಾನಮಾನ ಕೊಡಬೇಕು ಎಂದು ಕೋರಿದರು. 

12ನೇ ಶತಮಾನದಲ್ಲಿ ಕನ್ನಡದಲ್ಲಿ ಲಿಂಗಾಯತ ಧರ್ಮ ಉದಯವಾಯಿತು. ನಾವೆಲ್ಲರೂ ಬಸವಣ್ಣನವರನ್ನೇ ನಮ್ಮ ಧರ್ಮಗುರುಗಳಾಗಿ ಸ್ವೀಕರಿಸಿದ್ದೇವೆ. ಯಾವುದೇ ಧರ್ಮ, ಜಾತಿಯವರೇ ಆಗಿರಲಿ ಲಿಂಗಧಾರಿಗಳಾದಲ್ಲಿ ಸ್ವಾಗತಿಸುತ್ತೇವೆ. ನಮ್ಮಲ್ಲಿನ 30-40 ಒಳಪಂಗಡಗಳು ಇದ್ದರೂ ಲಿಂಗ ಧರಿಸಿದವರೆಲ್ಲ ಲಿಂಗಾಯತರು. ಬಸವಧರ್ಮದವರು. ನಮ್ಮ ಲಿಂಗಾಯತ ಧರ್ಮವನ್ನ ಸ್ವತಂತ್ರ ಧರ್ಮವನ್ನಾಗಿ ಮಾಡಬೇಕು ಎಂಬುದು ಬಸವಬಳಗದ ಆಗ್ರಹ ಎಂದು ತಿಳಿಸಿದರು.

1882ರಲ್ಲಿಯೇ ಬ್ರಿಟಷ್‌ ಅಧಿಕಾರಿ ಸ್ಟೀಲ್‌ ಎಂಬ ಅಧಿಕಾರಿ ವೀರಶೈವ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದರು. 2,08,325 ದಷ್ಟು ಸಂಸ್ಕೃತ ಶ್ಲೋಕಗಳನ್ನು ಕೊಟ್ಟು ಅವುಗಳ ಆಧಾರದಲ್ಲಿ ಸ್ವತಂತ್ರ ಧರ್ಮಧ ಸ್ಥಾನಮಾನ ಕೇಳಲಾಗಿತ್ತು. ಆಗ ಬ್ರಿಟಿಷ್‌ ಅಧಿಕಾರಿ ಸ್ಟೀಲ್‌ ಕೇಳಿದ್ದ ಮತ ಸ್ಥಾಪನೆ ಕಾಲ, ಮತ ಸ್ಥಾಪಕರು ಯಾರು, ಧಾರ್ಮಿಕ ಆಚರಣೆ ಏನು, ಗುರು-ವಿರಕ್ತರ ವ್ಯತ್ಯಾಸ, ಮಠಪತಿ ಕೆಲಸವೇನು, ಗಣಚಾರಿ ಎಂದರೇನು… ಎಂಬ ಆರು ಪ್ರಶ್ನೆಗಳಿಗೆ ಈವರೆಗೆ ಯಾರೂ ಉತ್ತರಿಸಿಯೇ ಇಲ್ಲ ಎಂದು ತಿಳಿಸಿದರು. 

ವೀರಶೈವ-ಲಿಂಗಾಯತ ಒಂದೇ ಎಂದು ಹೇಳುವ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ವೀರಶೈವರು-ಲಿಂಗಾಯತರು ಒಂದು ಅಲ್ಲವೇ ಅಲ್ಲ. ವೀರಶೈವರು-ಲಿಂಗಾಯತರು ಒಂದೇ ಎನ್ನುವುದಾದರೆ ಧರ್ಮಗುರುಗಳು ಎಂಬುದಕ್ಕೆ ಸಂಬಂಧಿತರು ಉತ್ತರ ನೀಡಬೇಕು. ಈ ಹಿಂದೆಯೂ ಪ್ರತ್ಯೇಕ ವೀರಶೈವ ಧರ್ಮದ
ಸ್ಥಾನಮಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು ಎಂದು ತಿಳಿಸಿದರು. ಬಸವಬಳಗದ ವಿ. ಸಿದ್ದರಾಮ ಶರಣರು, ಎಚ್‌.ಎಂ. ಸ್ವಾಮಿ, ದೇವಿಗೆರೆ ವೀರಭದ್ರಪ್ಪ, ಅಶೋಕ್‌ ಬಣಕಾರ್‌, ಟಿ.ಎಸ್‌. ಜಯರುದ್ರೇಶ್‌, ಅಜ್ಜಂಪುರಶೆಟ್ರಾ ಷಡಕ್ಷರಿ, ವೀಣಾ ಮಂಜುನಾಥ್‌, ಸುಮಂಗಲ, ಗಾಯತ್ರಿ, ನಿರ್ಮಲಮ್ಮ, ಲತಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next